Lakkundi Utsava 2023 : ಲಕ್ಕುಂಡಿ ಉತ್ಸವ 2023; ಫೆ.10ರಂದು ಮುಖ್ಯಮಂತ್ರಿಗಳಿಂದ ಚಾಲನೆ
2023ನೇ ಸಾಲಿನ ಲಕ್ಕುಂಡಿ ಉತ್ಸವವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಫೆಬ್ರವರಿ 10ರಂದು ಉದ್ಘಾಟನೆ ಮಾಡಲಿದ್ದಾರೆ.
ಗದಗ, ಫೆಬ್ರವರಿ 07; ಲಕ್ಕುಂಡಿ ಉತ್ಸವ 2023 ಫೆಬ್ರವರಿ 10 ರಿಂದ 12ರ ತನಕ ಮೂರು ದಿನಗಳ ಕಾಲ ನಡೆಯಲಿದೆ. ಈಗಾಗಲೇ ಉತ್ಸವದ ಲಾಂಛನ ಬಿಡುಗಡೆ ಮಾಡಲಾಗಿದೆ. ಸರ್ಕಾರ ಉತ್ಸವಕ್ಕಾಗಿ 1 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ.
ಫೆಬ್ರುವರಿ 10ರಂದು ಲಕ್ಕುಂಡಿ ಉತ್ಸವವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಲಿದ್ದಾರೆ. ಉತ್ಸವದ ಯಶಸ್ವಿಗಾಗಿ ಎಲ್ಲಾ ಸಿದ್ದತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ಲೋಕೊಪಯೋಗಿ ಇಲಾಖೆ, ಜಿಲ್ಲಾ ಉಸ್ತುವಾರಿ ಸಚಿವ ಸಿ. ಸಿ. ಪಾಟೀಲ ಹೇಳಿದ್ದಾರೆ.
ಮೂರು ದಿನಗಳ ಕಾಲ ನಡೆಯುವ ಲಕ್ಕುಂಡಿ ಉತ್ಸವದ ಯಶಸ್ವಿಗಾಗಿ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಗುತ್ತಿದೆ. ಫೆಬ್ರವರಿ 10ರಂದು ಲಕ್ಕುಂಡಿ ಸರಕಾರಿ ಮಾದರಿ ಪ್ರೌಢ ಶಾಲೆಯಲ್ಲಿ ಬೆಳಗ್ಗೆ 10ಗಂಟೆಗೆ ರಾಜ್ಯದ ವಿವಿಧ ಜಿಲ್ಲೆ ಹಾಗೂ ಸ್ಥಳೀಯ ಕಲಾತಂಡಗಳಿಂದ 25ಕ್ಕೂ ಹೆಚ್ಚು ಕಲಾ ಪ್ರಕಾರಗಳ ಜಾನಪದ ಕಲಾವಾಹಿನಿಗಳ ಮೆರವಣಿಗೆ ಮೂಲಕ ಲಕ್ಕುಂಡಿ ಉತ್ಸವ ಪ್ರಾರಂಭವಾಗಲಿದೆ.
ಅಂದು ಸಂಜೆ 6 ಗಂಟೆಗೆ ದಾನಚಿಂತಾಮಣಿ ಅತ್ತಿಮಬ್ಬೆ ಪ್ರಧಾನ ವೇದಿಕೆಯಲ್ಲಿ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಲಕ್ಕುಂಡಿ ಉತ್ಸವ 2023ಕ್ಕೆ ಚಾಲನೆ ನೀಡಲಿದ್ದಾರೆ. ವಿವಿಧ ಗೋಷ್ಠಿ, ಸಾಂಸ್ಕೃತಿ ಕಾರ್ಯಕ್ರಮಗಳು ನಡೆಯಲಿದ್ದು, ಹಲವಾರು ಸಚಿವರು, ಶಾಸಕರು ಉತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ.

ವಿಶೇಷ ಲೇಸರ್ ಶೋ
ಲಕ್ಕುಂಡಿ ಉತ್ಸವ 2023ರ ಅಂಗವಾಗಿ ಬಿ. ಎಚ್. ಪಾಟೀಲ ಪ್ರೌಢಶಾಲೆ ಆವರಣದಲ್ಲಿ ವಿವಿಧ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಬೆಳಗ್ಗೆ 10 ಗಂಟೆಗೆ ಇದಕ್ಕೆ ಚಾಲನೆ ಸಿಗಲಿದೆ, ಕುಸ್ತಿ ಸ್ಪರ್ಧೆಗೆ ಲಕ್ಕುಂಡಿಯ ಅಂತರಾಷ್ಟ್ರೀಯ ಕುಸ್ತಿ ಪಟು ಕು. ಪ್ರೇಮಾ ಹುಚ್ಚಣ್ಣವರ, ಕಬಡ್ಡಿ ಸ್ಪರ್ಧೆಗೆ ಅರ್ಜುನ ಪ್ರಶಸ್ತಿ ಪುರಸ್ಕೃತ ಅಂತರಾಷ್ಟ್ರೀಯ ಕಬಡ್ಡಿ ಕ್ರೀಡಾ ಪಟು ಡಾ. ಸಿ.ಹೊನ್ನಪ್ಪಗೌಡ ಚಾಲನೆ ನೀಡಲಿದ್ದಾರೆ.
ಕುಸ್ತಿ, ಕಬಡ್ಡಿ, ಮಲ್ಲಕಂಬ, ಯೋಗ, ಚಿತ್ರಕಲಾ ಸ್ಪರ್ಧೆ, ಬೋಟಿಂಗ್, ಮಹಿಳೆಯರಿಗಾಗಿ ರಂಗೋಲಿ ಸ್ಪರ್ಧೆ, ಅಡುಗೆ ಸ್ಪರ್ಧೆ ಏರ್ಪಡಿಸಲಾಗಿದೆ. ಸಿರಿಧಾನ್ಯಗಳ ಮಹತ್ವ ಸಾರುವ ಉದ್ದೇಶದಿಂದ ಪಾರಂಪರಿಕ ನಡಿಗೆಯನ್ನು ಹಮ್ಮಿಕೊಳ್ಳಲಾಗಿದೆ. ಮಧ್ಯಾಹ್ನ 3 ಗಂಟೆಯಿಂದ ಪ್ರಧಾನ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಲಕ್ಕುಂಡಿಯ ಐತಿಹಾಸಿಕ ಹಾಗೂ ಪಾರಂಪರಿಕ ಹಿನ್ನೆಲೆಯನ್ನು ಗಮನದಲ್ಲಿರಿಸಿಕೊಂಡು ವಿಶೇಷ ಲೇಸರ್ ಶೋ ಪ್ರದರ್ಶನ ಆಯೋಜನೆ ಮಾಡಲಾಗಿದೆ.

ವೀರ ರಾಣಿ ಕಿತ್ತೂರ ಚನ್ನಮ್ಮ ನಾಟಕ
ಬಿ. ಎಚ್. ಪಾಟೀಲ ಪ್ರೌಢಶಾಲೆಯ ಆವರಣದಲ್ಲಿ ಫೆಬ್ರವರಿ 10ರಂದು ರಾತ್ರಿ 9 ಗಂಟೆಯಿಂದ ವೀರರಾಣಿ ಕಿತ್ತೂರು ಚೆನ್ನಮ್ಮ ನಾಟಕ ಪ್ರದರ್ಶನ ನಡೆಯಲಿದೆ. ಧಾರವಾಡದ ರಂಗಾಯಣ ತಂಡದಿಂದ ರಚಿಸಲಾದ ಈ ನಾಟಕವು ರಾಣಿ ಚೆನ್ನಮ್ಮಳ ಸಾಹಸ, ಯುದ್ಧ ಕಲೆ ಹಾಗೂ ಸ್ವಾತಂತ್ರ್ಯ ಹೋರಾಟದ ವಿವಿಧ ಹಂತಗಳನ್ನು ತೆರೆದಿಡಲಿದೆ. ಸ್ವಾತಂತ್ರ್ಯದ ಕಹಳೆ ಊದುವಲ್ಲಿ ಚೆನ್ನಮ್ಮನ ಸಾಹಸ ಗಾಥೆ ಬಿಂಬಿಸುವ ನಾಟಕ ಪ್ರದರ್ಶನದಲ್ಲಿ 250ಕ್ಕೂ ಹೆಚ್ಚು ಕಲಾವಿದರು ಸಜೀವ ಆನೆ, ಕುದುರೆ, ಒಂಟೆಗಳೊಂದಿಗೆ ಅಭಿನಯಿಸಲಿದ್ದಾರೆ.

ಲಕ್ಕುಂಡಿ ಉತ್ಸವದ ಗೋಷ್ಠಿಗಳು
ಲಕ್ಕುಂಡಿ ಉತ್ಸವದಲ್ಲಿ ಪ್ರಮುಖವಾಗಿ 4 ಗೋಷ್ಠಿಗಳನ್ನು ಹಮ್ಮಿಕೊಳ್ಳಲಾಗಿದೆ. ಫೆಬ್ರವರಿ 11 ರಂದು 10 ಗಂಟೆಗೆ ಲಕ್ಕುಂಡಿಯ ಇತಿಹಾಸ ಕುರಿತು ವಿಚಾರ ಗೋಷ್ಠಿ ನಡೆಯಲಿದೆ. ಕನ್ನಡ ಪ್ರಭ ದಿನಪತ್ರಿಕೆಯ ಸ್ಥಾನಿಕ ಸಂಪಾದಕರಾದ ಮಲ್ಲಿಕಾರ್ಜುನ ಸಿದ್ಧಣ್ಣವರ ಗೋಷ್ಠಿ ಉದ್ಘಾಟಿಸಿ ಮಾತನಾಡುವರು. ಫೆ.12 ರಂದು ಕೃಷಿ ಗೋಷ್ಠಿ ನಡೆಯಲಿದೆ.
ಲಕ್ಕುಂಡಿ ಉತ್ಸವಕ್ಕೆ ಜನರನ್ನು ಕರೆತರಲು ಉಚಿತ ಸಾರಿಗೆ ವ್ಯವಸ್ಥೆಯನ್ನು ಗದಗ ನಗರದಿಂದ ಮಾಡಲಾಗಿದೆ. ಕೆಎಸ್ಆರ್ಟಿಸಿಯ 10 ಬಸ್ಗಳು ಗದಗ ಹೊಸ ಹಾಗೂ ಹಳೆಯ ಬಸ ನಿಲ್ದಾಣಗಳಿಂದ ನಿರಂತರವಾಗಿ ಸಂಚಾರ ನಡೆಸಲಿವೆ.

ಸಮಾರೋಪ ಸಮಾರಂಭದ ಮಾಹಿತಿ
ಫೆಬ್ರವರಿ 12ರ ಸಂಜೆ 5.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹಾಗೂ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಭಾಗವಹಿಸಲಿದ್ದಾರೆ. ಸಚಿವ ಬಿ. ಸಿ. ಪಾಟೀಲ, ಗೋವಿಂದ ಕಾರಜೋಳ, ಬಿ. ಶ್ರೀರಾಮುಲು, ಬೈರತಿ ಬಸವರಾಜ ಪಾಲ್ಗೊಳ್ಳಲಿದ್ದಾರೆ. ವಿಶ್ವವಾಣಿ ದಿನಪತ್ರಿಕೆ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ಸಮಾರೋಪ ನುಡಿಗಳನ್ನಾಡುವರು.
ಲಕ್ಕುಂಡಿ ಉತ್ಸವಕ್ಕೆ ಆಗಮಿಸುವ ಕಲಾವಿದರು, ಅತಿಥಿಗಳು ಹಾಗೂ ಸಾರ್ವಜನಿಕರೆಲ್ಲರಿಗೂ ಬೆಳಗಿನ ಉಪಹಾರ, ಮಧ್ಯಾಹ್ನ ಹಾಗೂ ರಾತ್ರಿ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ. ಸಾರ್ವಜನಿಕರು ಉತ್ಸವದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಲು ಸಚಿವ ಸಿ. ಸಿ. ಪಾಟೀಲ ಕರೆ ನೀಡಿದ್ದಾರೆ.












Click it and Unblock the Notifications