ಗದಗ-ಯಲವಿಗಿ ರೈಲ್ವೆ ಯೋಜನೆಗೆ ರಾಜ್ಯ ಸರ್ಕಾರದಿಂದ 600 ಕೋಟಿ: ಸಿಎಂ ಭರವಸೆ
ಗದಗ, ನವೆಂಬರ್, 08: ಗದಗ ಯಲವಿಗಿ ರೈಲ್ವೆ ಯೋಜನೆ ಅನುಷ್ಠಾನಗೊಳಿಸಲು ತೀರ್ಮಾನಿಸಲಾಗಿದ್ದು, ಈ ಯೋಜನೆಗೆ ರಾಜ್ಯ ಸರ್ಕಾರದಿಂದ 600 ಕೋಟಿ ರೂಪಾಯಿ ನೀಡಲಾಗುವುದು. ಈ ರೈಲು ಶಿರಹಟ್ಟಿಯ ಮೂಲಕ ಸಾಗುವ ಬಗ್ಗೆ ಪೂರಕ ಪ್ರಯತ್ನಗಳನ್ನು ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗದಗದಲ್ಲಿ ಹೇಳಿದರು.
ಗದಗ ಜಿಲ್ಲೆಯ ಶಿರಹಟ್ಟಿಯಲ್ಲಿ ಆಯೋಜಿಸಲಾಗಿದ್ದ ಭಾರತೀಯ ಜನತಾ ಪಕ್ಷ ಜನಸಂಕಲ್ಪ ಯಾತ್ರೆಯಲ್ಲಿ ಅವರು ಭಾಗವಹಿಸಿ ಮಾತನಾಡಿದರು. ಜಿಲ್ಲೆಯಲ್ಲಿ ಜಾಲವಾಡಗಿ ನೀರಾವರಿ ಯೋಜನೆಗೆ ಚಾಲನೆ ಹಾಗೂ ತಮಗೊಂಡ ಯೊಜನೆಗಳಿಗೆ ಶೀಘ್ರದಲ್ಲಿ ಮಂಜೂರಾತಿ ನೀಡಲಾಗುವುದು. ಶಿರಹಟ್ಟಿ ಮುಂಡರಗಿ ಕ್ಷೇತ್ರವನ್ನು ಪ್ರವಾಸೋದ್ಯಮದ ಗಮ್ಯವಾಗಿಸಲು ಕ್ರಮ ತೆಗೆದುಕೊಳ್ಳಲಾಗುವುದು. ಇನ್ನು ಲಮಾಣಿ ತಾಂಡಾಗಳನ್ನು ಕಂದಾಯ ಗ್ರಾಮಗಳಾಗಿ ಒಂದು ತಿಂಗಳಲ್ಲಿ ಮಾಡಲಾಗುವುದು. ತಾಂಡಾದ ಪ್ರತಿಯೊಂದು ಮನೆಗೂ ಹಕ್ಕುಪತ್ರಗಳನ್ನು ಒಂದು ತಿಂಗಳಿನಲ್ಲಿ ತಲುಪಿಸಲಾಗುವುದು. ಅವರ ಬೇಡಿಕೆಯನ್ನು ಈಡೇರಿಸುವುದು ಸರ್ಕಾರ ಬದ್ಧತೆಯಾಗಿದೆ. ಶಿರಹಟ್ಟಿಯಲ್ಲಿ ಕನಕದಾಸರ ಸಭಾಭವನ ನಿರ್ಮಾಣಕ್ಕೆ ಬೇಡಿಕೆ ಬಂದಿದೆ. ಇದಕ್ಕಾಗಿ ಒಂದು ಕೋಟಿ ರೂಪಾಯಿ ಶೀಘ್ರವೇ ಬಿಡುಗಡೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.
ಸತೀಶ್ ಜಾರಕಿಹೊಳಿ ಅರೆ ಬರೆ ಓದಿದ ವ್ಯಕ್ತಿ ಎಂದ ಸಿಎಂ ಬೊಮ್ಮಾಯಿ
209 ಕೋಟಿ ರೂ. ಪರಿಹಾರ ಬಿಡುಗಡೆ
ಗದಗ ಜಿಲ್ಲೆಗೆ 1.20 ಲಕ್ಷ ರೈತರಿಗೆ ಮಳೆಯಿಂದ ಹಾನಿಗೊಳಗಾದ ಬೆಳೆಗಳಿಗೆ 209 ಕೋಟಿ ರೂಪಾಯಿ ಪರಿಹಾರ ಬಿಡುಗಡೆ ಆಗಿದೆ. ಗದಗ ಜಿಲ್ಲೆಗೆ 97 ಕೋಟಿ ರೂಪಾಯಿ ಬೆಳೆ ವಿಮೆ ಬಂದಿದೆ. 9 ಕೋಟಿ ರೂಪಾಯಿಗಳ ರೈತ ವಿದ್ಯಾನಿಧಿಯನ್ನು ಈ ಜಿಲ್ಲೆಯ ಮಕ್ಕಳಿಗೆ ನೀಡಲಾಗಿದೆ. ಪಿಎಂ ಕಿಸಾನ್ ಯೋಜನೆಯಡಿ 159 ಕೋಟಿ ರೂಪಾಯಿಗೆ ಜಿಲ್ಲೆಗೆ ಬಂದಿದೆ. ಈ ಮೂಲಕ ರೈತಾಪಿ ವರ್ಗವನ್ನು ಬಲಿಷ್ಟಗೊಳಿಸಲು ಎಲ್ಲ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.
ರೈತರ ಮಕ್ಕಳಿಗೆ ವಿದ್ಯಾನಿಧಿ ಯೋಜನೆ ಜಾರಿ
ನಮ್ಮ ನಾಯಕ ಯಡಿಯೂರಪ್ಪ ಅವರು ಸಂಧ್ಯಾಸುರಕ್ಷಾ, ಮಕ್ಕಳಿಗೆ ಸೈಕಲ್, ಭಾಗ್ಯ ಲಕ್ಷ್ಮೀ ಯೊಜನೆ, ರೈತರಿಗೆ 10 ಎಚ್ಪಿ ಉಚಿತ ವಿದ್ಯುತ್, ಕಿಸಾನ್ ಸಮ್ಮಾನ್ ಯೋಜನೆಗಳ ಮೂಲಕ ರಾಜ್ಯ ಸರ್ಕಾರದಿಂದ 4,000 ರೂಪಾಯಿ ಸೇರಿ, ಒಟ್ಟು 10,000 ರೂಪಾಯಿ ನೀಡಿದ್ದಾರೆ. ರೈತರ ಮಕ್ಕಳಿಗೆ ವಿದ್ಯಾನಿಧಿ ಯೋಜನೆ ಜಾರಿ ತಂದಿದ್ದಾರೆ. ಇದರಿಂದ 10.16 ಲಕ್ಷ ಮಕ್ಕಳಿಗೆ ಪ್ರಯೋಜನ ಸಹಾಯ ಆಗಿದೆ. ಕೃಷಿ ಕೂಲಿ ಕಾರ್ಮಿಕರು, ನೇಕಾರರು, ಮೀನುಗಾರರು, ಟ್ಯಾಕ್ಸಿ, ಆಟೋ ಚಾಲಕರ ಮಕ್ಕಳಿಗೂ ಈ ಯೋಜನೆಯನ್ನು ವಿಸ್ತರಣೆ ಮಾಡಲಾಗಿದೆ. ರೈತ ಯಶಸ್ವಿ ಯೋಜನೆ ಪ್ರಾರಂಭಿಸಲಾಗಿದ್ದು, ಇದಕ್ಕಾಗಿ 500 ಕೋಟಿ ರೂಪಾಯಿ ಇಡಲಾಗಿದೆ. ರೈತಶಕ್ತಿ, ಡೀಸೆಲ್ ಯೋಜನೆಯಿಂದ 28 ಲಕ್ಷ ರೈತರಿಗೆ ಅನುಕೂಲವಾಗಿದೆ ಎಂದರು.
ಎಸ್ಸಿ, ಎಸ್ಟಿ ಮೀಸಲಾತಿ ಹೆಚ್ಚಿಸಲು ಕ್ರಮ
ಹಿಂದುಳಿದ ವರ್ಗದವರ ವಿದ್ಯಾರ್ಥಿಗಳ ವಸತಿನಿಲಯ ವೇತನವನ್ನು ಹೆಚ್ಚಿಸಲಾಗಿದೆ. 50 ಕನಕದಾಸ ಹಾಸ್ಟೆಲ್ಗಳು, 100 ಅಂಬೇಡ್ಕರ್ ವಿದ್ಯಾರ್ಥಿ ನಿಲಯ ನಿರ್ಮಾಣ ಮಾಡಲಾಗುತ್ತಿದೆ. ಎಸ್ಸಿ, ಎಸ್ಟಿ ಮೀಸಲಾತಿ ಹೆಚ್ಚಿಸುವ ದಿಟ್ಟ ಕ್ರಮವನ್ನು ನಮ್ಮ ಸರ್ಕಾರ ತೆಗೆದುಕೊಂಡಿದೆ. ಸಮಾಜವನ್ನು ಎತ್ತಿಹಿಡಿಯುವ ಕೆಲಸವನ್ನು ಬದ್ಧತೆಯಿಂದ ಮಾಡಲಾಗಿದೆ ಎಂದರು.
ಉದ್ಯೋಗ ಕಲ್ಪಿಸುವ ಯೋಜನೆಗೆ ಶ್ರಮ
ರಾಜ್ಯದ ಸಮಗ್ರ ಅಭಿವೃದ್ದಿಗಾಗಿ ಪ್ರತಿ ಗ್ರಾಮದಲ್ಲಿ ಸ್ತ್ರೀ ಸಾಮರ್ಥ್ಯ ಯೋಜನೆಯಡಿ, ತಲಾ 2 ಸಂಘಕ್ಕೆ 5 ಲಕ್ಷ ರೂಪಾಯಿ ನೀಡಲಾಗುವುದು. ಅದೇ ರೀತಿ ಸ್ವಾಮಿ ವಿವೇಕಾನಂದ ಯುವ ಶಕ್ತಿ ಯೋಜನೆಯಡಿ ಪ್ರತಿ ಗ್ರಾಮದ ತಲಾ 2 ಸಂಘಕ್ಕೆ 5 ಲಕ್ಷ ರೂಪಾಯಿ ನೀಡಲಾಗುವುದು. ಇದರಿಂದ 5 ಲಕ್ಷ ಮಹಿಳೆಯರು ಹಾಗೂ 5 ಲಕ್ಷ ಯುವಕರಿಗೆ ಉದ್ಯೋಗ ಕಲ್ಪಿಸುವ ಯೋಜನೆ ಕಲ್ಪಿಸಿದಂತಾಗುತ್ತದೆ. ಸರ್ಕಾರದ ಅಭಿವೃದ್ಧಿ ಯೋಜನೆಗಳಲ್ಲಿ ಜನರನ್ನು ಪಾಲುದಾರರನ್ನಾಗಿ ಮಾಡುವ ಗುರಿ ನಮ್ಮದಾಗಿದೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಚಿವರಾದ ಗೋವಿಂದ ಕಾರಜೋಳ, ಸಿ.ಸಿ.ಪಾಟೀಲ್, ಬಿ.ಸಿ.ಪಾಟೀಲ್, ಶ್ರೀ ರಾಮುಲು, ಸಂಸದ ಶಿವಕುಮಾರ್ ಉದಾಸಿ ಸೇರಿದಂತೆ ಮತ್ತಿತರು ಉಪಸ್ಥಿತರಿದ್ದರು.