ಅಗಲಿದ ಕಿರಿಯ ಮಿತ್ರನಿಗೆ ದೇವೇಗೌಡರ ಭಾವಪೂರ್ಣ ನುಡಿ ನಮನ
Recommended Video

ದುಬೈ, ನವೆಂಬರ್ 12: ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲೆಂದು ದುಬೈಗೆ ತೆರಳಿರುವ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ದೇವೇಗೌಡ ಅವರು ಅಲ್ಲಿಂದಲೇ ಅಗಲಿದ ತಮ್ಮ ರಾಜಕೀಯ ಕಿರಿಯ ಮಿತ್ರನಿಗಾಗಿ ಭಾವಪೂರ್ಣ ಶ್ರದ್ಧಾಂಜಲಿಯನ್ನು ಕಳುಹಿಸಿದ್ದಾರೆ.
ಅನಂತ್ ಕುಮಾರ್ ಅವರಿಗೆ ಶ್ರದ್ಧಾಂಜಲಿ ನುಡಿಯನ್ನು ಆಡಿ ಅದರ ವಿಡಿಯೋ ಸಂದೇಶವನ್ನು ಕಳುಹಿಸಿರುವ ದೇವೇಗೌಡ ಅವರು, ಅನಂತ್ ಕುಮಾರ್ ಅವರನ್ನು ರಾಜಕೀಯ ಮುತ್ಸದ್ಧಿ ಎಂದು ಕರೆದಿದ್ದಾರೆ.
ತಾವು ದುಬೈಗೆ ಬರುವ ಮುಂಚೆ ಅನಂತ್ ಕುಮಾರ್ ಅವರನ್ನು ಭೇಟಿ ಮಾಡುವ ಇಚ್ಛೆ ವ್ಯಕ್ತಪಡಿಸಿದ್ದೆ ಆದರೆ ಅವರು ತೀವ್ರ ನಿಗಾ ಘಟಕದಲ್ಲಿ ಇದ್ದ ಕಾರಣ ಅದು ಸಾಧ್ಯವಾಗಿರಲಿಲ್ಲ, ಅಲ್ಲದೆ ಅವರು ನಮ್ಮಿಂದ ತಮ್ಮ ಆರೋಗ್ಯದ ಗುಟ್ಟನ್ನು ಬಿಟ್ಟುಕೊಟ್ಟಿರಲಿಲ್ಲ ಎಂದು ಖೇದ ವ್ಯಕ್ತಪಡಿಸಿದ್ದಾರೆ.

ನಾನು ಪ್ರಧಾನಿ ಆಗಿದ್ದಾಗ ಅವರು ಮೊದಲ ಬಾರಿ ಗೆದ್ದಿದ್ದರು
'ನಾನು ಪ್ರಧಾನಿ ಆಗಿದ್ದಾಗ ಅನಂತ್ಕುಮಾರ್ ಮೊದಲ ಬಾರಿಗೆ ಸಂಸತ್ ಪ್ರವೇಶಿಸಿದ್ದರು. ಅವರು ಅಡ್ವಾಣಿ ಅವರ ನೆಚ್ಚಿನ ಶಿಷ್ಯರಾಗಿದ್ದರು, ಅಡ್ವಾಣಿ ಅವರು ಬಿಜೆಪಿ ಕಟ್ಟುವ ಯಾತ್ರೆಯಲ್ಲಿ ಅನಂತ್ ಅವರೂ ಸೇರಿಕೊಂಡಿದ್ದರು ಎಂದು ದೇವೇಗೌಡರು ಹಳೆಯ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

ಕೇಂದ್ರದಲ್ಲಿ ಕರ್ನಾಟಕದ ದನಿ ಆಗಿದ್ದರು
ಹಲವು ಬಾರಿ ಸಚಿವರಾಗಿದ್ದ ಅವರು ಪ್ರತಿಬಾರಿ ತಮ್ಮ ಕರ್ತವ್ಯವನ್ನು ಸ್ವಲ್ಪವೂ ಚ್ಯುತಿ ಬಾರದಂತೆ ನಿರ್ವಹಿಸಿದ್ದಾರೆ. ಕರ್ನಾಟಕದ ಅಭಿವೃದ್ಧಿಗೆ ಸಾಕಷ್ಟು ಕಾಣಿಕೆ ನೀಡಿದ್ದಾರೆ. ಕೇಂದ್ರ ಸರ್ಕಾರದಲ್ಲಿ ಅವರು ಕರ್ನಾಟಕದ ದನಿ ಆಗಿದ್ದರು. ಅವರ ಸಾವು ರಾಜ್ಯಕ್ಕೆ ನಷ್ಟ ತಂದಿದೆ ಎಂದು ಅವರು ಹೇಳಿದರು.

ಅವರ ಅಗಲಿಕೆ ಬಹು ದುಃಖ ತಂದಿದೆ
ಅಟಲ್ ಬಿಹಾರಿ ವಾಜಪೇಯಿ ಅವಧಿಯಲ್ಲಿ ಹಾಗೂ ಈಗ ನರೇಂದ್ರ ಮೋದಿ ಅವರ ಅವಧಿಯಲ್ಲಿ ಹಲವು ಖಾತೆಗಳನ್ನು ಅವರು ಯಶಸ್ವಿಯಾಗಿ ನಿಭಾಯಿಸಿದ್ದಾರೆ. ಅವರಿಗಿನ್ನೂ ಅಂತಹಾ ವಯಸ್ಸೇನು ಅಲ್ಲ ಆದರೆ ಅವರ ಅಗಲಿಕೆ ನನಗೆ ಬಹಳ ದುಃಖ ಉಂಟುಮಾಡಿದೆ ಎಂದು ದೇವೇಗೌಡರು ಬೇಸರ ವ್ಯಕ್ತಪಡಿಸಿದ್ದಾರೆ.

ಅಂತಿಮ ದರ್ಶನ ಪಡೆಯಲಾಗದ್ದಕ್ಕೆ ಬೇಸರ
ದುಬೈಗೆ ಕಾರ್ಯಕ್ರಮವೊಂದರ ನಿಮಿತ್ತ ಬಂದಿರುವ ನನಗೆ ಇಂದು ಅವರ ಅಂತಿಮ ದರ್ಶನ ಪಡೆಯಲು ಆಗುತ್ತಿಲ್ಲ ಇದು ಅತೀವ ಬೇಸರ ಮೂಡಿಸಿದೆ. ಆದರೆ ಅವರ ಅಗಲಿಕೆಯಿಂದ ಆಗಿರುವ ನೋವನ್ನು ಭರಿಸಿಕೊಳ್ಳಲು ಅನಂತ್ ಕುಮಾರ್ ಕುಟುಂಬಕ್ಕೆ ದೇವರು ಶಕ್ತಿ ನೀಡಲಿ ಎಂದು ದೇವೇಗೌಡ ಅವರು ವಿಡಿಯೋದಲ್ಲಿ ಹೇಳಿದ್ದಾರೆ.












Click it and Unblock the Notifications