ಎಚ್. ಎಸ್. ವೆಂಕಟೇಶಮೂರ್ತಿಗೆ 'ಧ್ವನಿ ಶ್ರೀರಂಗ' ಅಂತಾರಾಷ್ಟ್ರೀಯ ಪ್ರಶಸ್ತಿ
ದುಬೈ, ಜನವರಿ 13 : 'ಧ್ವನಿ ಶ್ರೀರಂಗ' ಅಂತಾರಾಷ್ಟ್ರೀಯ ರಂಗ ಪ್ರಶಸ್ತಿಗೆ ಕನ್ನಡದ ಹಿರಿಯ ಸಾಹಿತಿ ಡಾ. ಎಚ್. ಎಸ್. ವೆಂಕಟೇಶ ಮೂರ್ತಿ ಆಯ್ಕೆಯಾಗಿದ್ದಾರೆ. ಕಳೆದ 12 ವರ್ಷಗಳಿಂದ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ.
ಧ್ವನಿ ಪ್ರತಿಷ್ಠಾನ ಕನ್ನಡ ರಂಗಭೂಮಿಗೆ ವಿಶೇಷ ಸೇವೆ ಸಲ್ಲಿಸಿದವರನ್ನು ಗುರುತಿಸಿ ಕಳೆದ 12 ವರ್ಷಗಳಿಂದ 'ಧ್ವನಿ ಶ್ರೀರಂಗ' ಅಂತಾರಾಷ್ಟ್ರೀಯ ರಂಗ ಪ್ರಶಸ್ತಿಯನ್ನು ನೀಡುತ್ತಿದೆ. ಎಚ್. ಎಸ್. ವೆಂಕಟೇಶ ಮೂರ್ತಿ ವಿಭಿನ್ನ ನಾಟಕಗಳ ಮುಖಾಂತರ ಕನ್ನಡ ರಂಗಭೂಮಿಗೆ ಹೊಸತನವನ್ನು ಮೂಡಿಸಿದ್ದಾರೆ.
ಆಧುನಿಕ ನಾಟಕಗಳ ಬ್ರಹ್ಮ ಆದ್ಯ ರಂಗಾಚಾರ್ಯರ ನೆನಪಿನಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ಪ್ರಶಸ್ತಿ ದುಬೈಯ ಪ್ರಯಾಣ, ಮೂರುದಿನಗಳ ವಸತಿ ವೆಚ್ಚ ಹಾಗೂ 25 ಸಾವಿರ ನಗದು ಮತ್ತು ಸ್ಮರಣಿಕೆಯನ್ನು ಒಳಗೊಂಡಿದೆ.

14/2/2020ರ ಶುಕ್ರವಾರ ದುಬೈನ ಏಮಿರೇಟ್ಸ್ ಥಿಯೇಟರ್ನಲ್ಲಿ ನಡೆಯಲಿರುವ ಧ್ವನಿ ಪ್ರತಿಷ್ಠಾನದ 35ನೇ ವಾರ್ಷಿಕೋತ್ಸವದಲ್ಲಿ ಎಚ್. ಎಸ್. ವೆಂಕಟೇಶ ಮೂರ್ತಿ ಅವರಿಗೆ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಈ ಹಿಂದೆ 'ಧ್ವನಿ ಶ್ರೀರಂಗ' ಪ್ರಶಸ್ತಿಯನ್ನು ಬಿ. ಜಯಶ್ರೀ, ಟಿ. ಎಸ್. ನಾಗಾಭರಣ, ಶ್ರೀನಿವಾಸ ಕಪ್ಪಣ್ಣ, ಮುಖ್ಯಮಂತ್ರಿ ಚಂದ್ರು, ಸಾಣೆಹಳ್ಳಿ ಪಂಡಿತಾರಾಧ್ಯ ಸ್ವಾಮೀಜಿ, ಡಾ. ಹೆಚ್.ಎಸ್. ಶಿವಪ್ರಕಾಶ್, ಉಮಾಶ್ರೀ, ಗಿರಿಜಾ ಲೋಕೇಶ್ ಮುಂತಾದವರು ಪಡೆದಿದ್ದಾರೆ.












Click it and Unblock the Notifications