ಧಾರವಾಡ; ಆಗಸದಲ್ಲಿ ಮೂಡಿತು ಮತದಾನ ಮಾಡಿ ಎಂಬ ಸಂದೇಶ
ಧಾರವಾಡ, ಮೇ 07; ಕರ್ನಾಟಕ ವಿಧಾನಸಭೆ ಚುನಾವಣೆಗೆ ಮತದಾನ ಮೇ 10ರ ಬುಧವಾರ ಬೆಳಗ್ಗೆ 7 ರಿಂದ ಸಂಜೆ 6 ಗಂಟೆಯ ತನಕ ನಡೆಯಲಿದೆ. ಹೆಚ್ಚಿನ ಪ್ರಮಾಣದ ಮತದಾನ ಆಗಬೇಕು ಎಂದು ಚುನಾವಣಾ ಆಯೋಗ, ಜಿಲ್ಲಾಡಳಿತಗಳು ಹಲವು ಕಾರ್ಯಕ್ರಮ ನಡೆಸುತ್ತಿವೆ. ಪ್ಯಾರಾಗ್ಲೈಡಿಂಗ್ ಮೂಲಕ ಆಗಸದಲ್ಲಿಯೂ ಮತದಾನ ಜಾಗೃತಿ ಮೂಡಿಸಲಾಯಿತು.
ಧಾರವಾಡದ ಕೆಸಿಡಿ ಆವರಣದಲ್ಲಿ ಮತದಾನ ಜಾಗೃತಿಗಾಗಿ ಹಮ್ಮಿಕೊಂಡಿದ್ದ ಪ್ಯಾರಾಗ್ಲೈಡಿಂಗ್ಗೆ ಜಿಲ್ಲಾ ಸ್ವೀಪ್ ನೊಡಲ್ ಅಧಿಕಾರಿ ಹಾಗೂ ಜಿಲ್ಲಾ ಪಂಚಾಯತಿ ಸಿಇಓ ಟಿ. ಕೆ. ಸ್ವರೂಪ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, "ಸಶಕ್ತ, ಸದೃಡ ಪ್ರಜಾಪ್ರಭುತ್ವ ರೂಪಿಸಲು ಮುಕ್ತ ಚುನಾವಣೆಗಳು ಅಗತ್ಯ. ಪ್ರತಿ ಮತದಾರ ತಪ್ಪದೇ ಮತ ಚಲಾಯಿಸಿ ಉತ್ತಮ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಿದರೆ ಮಾತ್ರ ಅಭಿವೃದ್ಧಿ ಸಾಧ್ಯ. ಮೇ.10 ರಂದು ಎಲ್ಲ ಅರ್ಹ ಮತದಾರರು ತಮ್ಮ ಹಕ್ಕನ್ನು ತಪ್ಪದೇ ಚಲಾಯಿಸಬೇಕು" ಎಂದು ಕರೆ ನೀಡಿದರು.
"ಪ್ರತಿ 5 ವರ್ಷಕೊಮ್ಮೆ ನಡೆಯುವ ಸಾರ್ವತ್ರಿಕ ಚುನಾವಣೆಗಳು ಅಭಿವೃದ್ಧಿ, ಬದಲಾವಣೆಯ ಅಸ್ತ್ರಗಳಾಗಬೇಕು. ಪ್ರಜೆಗಳ ಮತದಾನದ ಹಕ್ಕು ಉತ್ತಮ ನಾಯಕತ್ವ ಬೆಳೆಸುತ್ತದೆ" ಎಂದು ಟಿ. ಕೆ. ಸ್ವರೂಪ ಹೇಳಿದರು.
ವಿವಿಧ ಕಾರ್ಯಕ್ರಮಗಳು; ಧಾರವಾಡ ಜಿಲ್ಲೆಯಲ್ಲಿ ಮತದಾನ ಪ್ರಮಾಣ ಹೆಚ್ಚಳಕ್ಕೆ ವಿನೂತನ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಜನರಲ್ಲಿ ನಿರಂತರವಾಗಿ ಮತದಾನ ಜಾಗೃತಿ ಮೂಡಿಸಲಾಗುತ್ತಿದೆ. ವಯೋವೃದ್ದರಿಗೆ, ವಿಕಲಚೇತನರಿಗೆ ಮತದಾನ ಮಾಡಲು ಅವರ ಮನೆಗೆ ಹೋಗಿ ನಿಯಮಾವಳಿ ಅನ್ವಯ ಮತ ಪಡೆಯಲಾಗಿದೆ.

ಮೇ 10ರಂದು ಮತದಾನಕ್ಕಾಗಿ ಮತಗಟ್ಟೆಗಳಿಗೆ ಬರುವ ವಿಕಲಚೇತನರಿಗೆ, ವೃದ್ದರಿಗೆ ವೀಲ್ ಚೇರ್, ಇತರ ಸಹಾಯ ಬೇಕಾದಲ್ಲಿ ವಿಎಚ್ಎ ಆ್ಯಪ್ ಮೂಲಕ ಮನವಿ ಮಾಡಬಹುದು. ಧಾರವಾಡ ಜಿಲ್ಲೆಯಲ್ಲಿ ನವಲಗುಂದ, ಕುಂದಗೋಳ, ಧಾರವಾಡ, ಹುಬ್ಬಳ್ಳಿ-ಧಾರವಾಡ ಪೂರ್ವ, ಹುಬ್ಬಳ್ಳಿ-ಧಾರವಾಡ ಕೇಂದ್ರ, ಹುಬ್ಬಳ್ಳಿ-ಧಾರವಾಡ ಪಶ್ಚಿಮ ಮತ್ತು ಕಲಘಟಗಿ ವಿಧಾನಸಭಾ ಕ್ಷೇತ್ರಗಳಿವೆ.
ಜಿಲ್ಲೆಯಲ್ಲಿ 7,65,160 ಪುರುಷ, 7,57,831 ಮಹಿಳಾ ಮತದಾರರು ಮತ್ತು 89 ಇತರೆ ಮತದಾರರು ಸೇರಿ ಒಟ್ಟು 15,23,080 ಮತದಾರರು ಈ ಬಾರಿ ಹಕ್ಕು ಚಲಾಯಿಸಲಿದ್ದಾರೆ. ಇದರಲ್ಲಿ 31,934 ಯುವ ಮತದಾರರು ಪ್ರಥಮ ಬಾರಿಗೆ ಮತದಾನ ಮಾಡಲಿದ್ದಾರೆ. ಮತದಾನಕ್ಕಾಗಿ 1,642 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ ಮತ್ತು ಚುನಾವಣಾ ಕರ್ತವ್ಯಕ್ಕಾಗಿ 8,319 ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಅಗತ್ಯ ತರಬೇತಿ ನೀಡಿ ನಿಯೋಜಿಸಲಾಗಿದೆ.
ಮತದಾನ ಕೊನೆಗೊಳ್ಳುವ ಪೂರ್ವದ 48 ಗಂಟೆ ಅವಧಿ ಅಂದರೆ ಮೇ 8ರ ಸೋಮಾರ ಸಂಜೆ 6 ಗಂಟೆಯಿಂದ ಬಹಿರಂಗ ಪ್ರಚಾರ ಅಂತ್ಯಗೊಳ್ಳುತ್ತದೆ. ಬಹಿರಂಗ ಪ್ರಚಾರ ಮುಗಿದ ಬಳಿಕ ಆಯಾ ಮತಕ್ಷೇತ್ರದ ಮತದಾರರಲ್ಲದ ರಾಜಕೀಯ ಪಕ್ಷದ ಮುಖಂಡರು, ಕಾರ್ಯಕರ್ತರು, ಪ್ರಚಾರಕರು ಆ ಮತಕ್ಷೇತ್ರದಲ್ಲಿ ಇರುವಂತಿಲ್ಲ.
ಧಾರವಾಡ ಜಿಲ್ಲೆಯ ಒಟ್ಟು 1,642 ಮತಗಟ್ಟೆಗಳ ಪೈಕಿ 824 ಮತಗಟ್ಟೆಗಳಿಗೆ ವೆಬ್ಕಾಸ್ಟಿಂಗ್ ವ್ಯವಸ್ಥೆ ಮಾಡಲಾಗಿದೆ ಮತ್ತು 175 ಮತಗಟ್ಟೆಗಳಿಗೆ ಮೈಕ್ರೋ ಆಬ್ಸರ್ವರ್ಗಳನ್ನು ನಿಯೋಜಿಸಲಾಗಿದೆ. ಮೇ 10ರಂದು ಮತದಾನ ಪೂರ್ಣಗೊಂಡ ನಂತರ ವಿದ್ಯುನ್ಮಾನ ಮತಯಂತ್ರಗಳನ್ನು ಹಾಗೂ ಮಹತ್ವದ ದಾಖಲೆಗಳನ್ನು ಪೊಲೀಸ್ ಭದ್ರತೆಯೊಂದಿಗೆ ಮತ ಎಣಿಕೆ ಕೇಂದ್ರವಾದ ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿನ ಭದ್ರತಾ ಕೊಠಡಿಯಲ್ಲಿ ಶೇಖರಿಸಿಡಲಾಗುತ್ತದೆ. ಮತ ಎಣಿಕೆ ಸಹ ಅಲ್ಲಿಯೇ ನಡೆಯಲಿದೆ.
ಮೇ.10ರ ಬುಧವಾರ ಮತದಾನ ಮಾಡಲು ಅನುಕೂಲವಾಗುವಂತೆ ಆಯಾ ಮತಕ್ಷೇತ್ರಗಳ ವ್ಯಾಪ್ತಿಯಲ್ಲಿನ ಎಲ್ಲಾ ಕೇಂದ್ರ ಹಾಗೂ ರಾಜ್ಯ ಸರ್ಕಾರಿ ಕಚೇರಿಗಳಿಗೆ, ಶಾಲಾ, ಕಾಲೇಜುಗಳಿಗೆ, ವಿವಿಧ ಸಂಘ ಸಂಸ್ಥೆಗಳಿಗೆ ಮತ್ತು ಅನುದಾನಿತ, ಅನುದಾನ ರಹಿತ ಶಿಕ್ಷಣ ಸಂಸ್ಥೆಗಳು ಒಳಗೊಂಡಂತೆ ಖಾಸಗಿ ಸಂಸ್ಥೆಗಳಿಗೆ ತುರ್ತು ಸೇವೆಗಳನ್ನು ಹೊರತುಪಡಿಸಿ ಸರ್ಕಾರವು ಸಾರ್ವತ್ರಿಕ ರಜೆಯನ್ನು ಘೋಷಣೆ ಮಾಡಿದೆ.












Click it and Unblock the Notifications