ಕುಡಿಯಾಕ್ ತೊಟ್ ನೀರಿಲ್ಲ, ಮುಂದ್ ಕತಿ ಹೆಂಗ್ರೀಪಾ..!
ಹುಬ್ಬಳ್ಳಿ, ಏಪ್ರಿಲ್, 5: ರಣ ಬಿಸಿಲು ಏರುತ್ತಿದೆ. ಅದರೊಂದಿಗೆ ಇಡೀ ರಾಜ್ಯದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಆರಂಭವಾಗಿದೆ. ಹುಬ್ಬಳ್ಳಿ ನಗರವಾಸಿಗಳೂ ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗಾಗಿ ಹಪಹಪಿಸುವ ದಿನಗಳು ದೂರವಿಲ್ಲ.
ನಗರಕ್ಕೆ ಕುಡಿಯುವ ನೀರು ಪೂರೈಸುತ್ತಿದ್ದ ನೀರಸಾಗರ (ಧುಮ್ಮವಾಡ) ಕೆರೆಯು ಈಗಾಗಲೇ ಒಣಗಿದೆ. ನೀರಸಾಗರ ಕೆರೆ ಬರಿದಾಗಿರುವುದರಿಂದ ಮಲಪ್ರಭಾ ನದಿಯಿಂದ ಬರುವ ನೀರನ್ನು ಬಿಡಲಾಗುತ್ತಿದೆ. ಮಲಪ್ರಭಾ ನದಿಯಲ್ಲಿನ ನೀರು ಕೂಡ ಕೇವಲ 15 ದಿನಗಳಿಗಾಗುವಷ್ಟು ಮಾತ್ರವೇ ಇದೆ.[ಉತ್ತರ ಕರ್ನಾಟಕ ಭಾಗಕ್ಕೆ ಮಹಾರಾಷ್ಟ್ರದಿಂದ 4 ಟಿಎಂಸಿ ನೀರು]
ನಾವಂತೂ ಮಲಪ್ರಭಾ ನದಿ ನೀರನ್ನು ನೃಪತುಂಗ ಬೆಟ್ಟದ ನೀರಿನ ಟ್ಯಾಂಕಿನಲ್ಲಿ ಸಂಗ್ರಹಿಸಿ ಅಲ್ಲಿಂದ ನಗರದ ವಿವಿಧ ಬಡಾವಣೆಗಳಲ್ಲಿ ಟ್ಯಾಂಕ್ ಗಳಿಗೆ ನೀರನ್ನು ಪಂಪ್ ಮಾಡುತ್ತೇವೆ. ಅಲ್ಲಿಂದ ಆಯಾ ಬಡಾವಣೆಗಳಿಗೆ ನೀರು ಬಿಡಲಾಗುವುದು. ಇದೇ ರೀತಿ ಕೇವಲ 15 ದಿವಸ ಮಾತ್ರ ನೀರನ್ನು ಬಿಡಬಹುದಾಗದೆ. ನಂತರ ಏನಾಗುತ್ತದೆ ಹೇಳಲು ಸಾಧ್ಯವಿಲ್ಲ ಎಂದು ಹೆಸರು ಹೇಳದ ಜಲಮಂಡಳಿ ಅಧಿಕಾರಿಯೊಬ್ಬರು ಹೇಳುತ್ತಾರೆ. ಹುಬ್ಬಳ್ಳಿ ಮಹಾನಗರದ ಬೇಸಿಗೆ ಪರಿಸ್ಥಿತಿಯನ್ನು ಒಂದು ಸುತ್ತು ಹಾಕಿಕೊಂಡು ಬರೋಣ.... [ಬತ್ತಿದ ಕೃಷ್ಣೆ, ಜಮಖಂಡಿಯಲ್ಲಿ ಹನಿ ನೀರಿಗೂ ತತ್ವಾರ!]

ಟ್ಯಾಂಕರ್ ಮೊರೆ
ಕುಡಿಯುವ ನೀರಿಗೆ ಜನರು ನೀರಿನ ಟ್ಯಾಂಕರ್ ಗಳ ಮೊರೆ ಹೋಗಿದ್ದಾರೆ. 200 ರು, ಗೆ ಸಿಗುತ್ತಿದ್ದ ಟ್ಯಾಂಕರ್ ನೀರಿನ ದರ ಏಕಾಏಕಿ 500 ರೂ. ಗೆ ಏರಿಕೆಯಾಗಿದೆ. ಪೂರೈಕೆಯ ಮೇಲೆ ಜನ ವಿಶ್ವಾಸ ಇಟ್ಟುಕೊಳ್ಳುವಂತೇ ಇಲ್ಲ.

ಕಳಸಾ-ಬಂಡೂರಿ ಹೋರಾಟ
ಕಳಸಾ-ಬಂಡೂರಿ ಹೋರಾಟ ನಮಗೇಕೆ ಎಂದು ಕುಳಿತುಕೊಂಡಿದ್ದ ಹುಬ್ಬಳ್ಳಿ ಜನರಿಗೆ ಇದೀಗ ನಿಧಾನವಾಗಿ ಬಿಸಿ ತಾಗಲು ಆರಂಭಿಸಿದೆ. ನವಲಗುಂದ, ನರಗಂದ ಭಾಗದ ರೈತರ ಹೋರಾಟದ ನಿಜ ಅರಿವು ಇದೀಗ ಆಗುತ್ತಿದೆ.

ಜಲಮಂಡಳಿಯಿಂದಲೇ ನೀರು ಮಾರಾಟ
ನೃಪತುಂಗ ಬೆಟ್ಟದ ನೀರಿನ ಟ್ಯಾಂಕ್ ನಿಂದ ಅಲ್ಲಿನ ನೌಕರರು ಖಾಸಗಿಯವರಿಗೆ 200 ರೂ. ಗೆ ಒಂದು ಟ್ಯಾಂಕರ್ ನೀರು ಕೊಡುತ್ತಾರೆ ಎಂಬ ಆರೋಪ ಮೊದಲಿನಿಂದಲೂ ಕೇಳಿ ಬರುತ್ತಿದೆ. ಈ ಕುರಿತು ಮಾಹಿತಿ ಕೇಳಿದರೆ ಹಳ್ಳಿಗಳಿಗೆ ನೀರು ಪೂರೈಸುವ ಟ್ಯಾಂಕರ್ ಗಳಿಗೆ ನೀರು ನೀಡಲಾಗುತ್ತಿದೆ. ಇದರಲ್ಲಿ ನಮ್ಮದೇನೂ ತಪ್ಪಿಲ್ಲ ಎಂದು ಹೇಳುತ್ತಾರೆ.

ಬೋರವೆಲ್ ಗಳಲ್ಲೂ ನೀರಿಲ್ಲ
ಸಾಮಾನ್ಯವಾಗಿ ಬಡಾವಣೆಗಳಿಗೆ ಜಲಮಂಡಳಿ ನೀರು ಪೂರೈಸುವ ಪೈಪ್ ಲೈನ್ ಗಳಿಂದ ಬೋರವೆಲ್ ಸಂಪರ್ಕ ಕಲ್ಪಿಸಿ ನೀರು ಒದಗಿಸಲಾಗುತ್ತಿತ್ತು. ಈಗ ಬೋರವೆಲ್ ಗಳೂ ಕೂಡ ಅಂತರ್ಜಲವಿಲ್ಲದೇ ಬರಿದಾಗಿವೆ.

ರಾಜಕಾರಣ
ಹುಬ್ಬಳ್ಳಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರಿದ್ದಾರೆ ಮತ್ತು ವಿರೋಧ ಪಕ್ಷದ ನಾಯಕರಿದ್ದಾರೆ. ಇವರು ಕಳಸಾ-ಬಂಡೂರಿ ಯೋಜನೆಗಾಗಿ ಪ್ರಧಾನಿ ಮಧ್ಯಸ್ಥಿಕೆ ವಹಿಸಲು ಮನವೊಲಿಸಿಲ್ಲ ಎಂಬುದು ಸಿದ್ದರಾಮಯ್ಯ ಸರಕಾರದ ಆರೋಪ. ಬಿಜೆಪಿ ಕೋಟೆಯಲ್ಲೇ ಸಮಸ್ಯೆ ಉದ್ಘಬವಾಗಿದ್ದು ಆರೋಪ-ಪ್ರತ್ಯಾರೋಪ ಆರಂಭವಾಗುವುದರಲ್ಲಿ ಅನುಮಾನವಿಲ್ಲ.

ಮುಂದೆ ಹೇಂಗ್ರೀಪಾ...!
ಅಷ್ಟಕ್ಕೂ ಈ ರಾಜಕೀಯದಾಟ ಬಿಟ್ಟಾಗಿ ಮೊದಲು ಹುಬ್ಬಳ್ಳಿಗೆ ನೀರು ಪೂರೈಸುವ ಏನಾದರೂ ತುರ್ತಾಗಿ ವ್ಯವಸ್ಥೆ ಮಾಡಬೇಕೆಂಬುದು ಸಾರ್ವಜನಿಕರ ಆಗ್ರಹವಾಗಿದೆ. ಏಕೆಂದರೆ ಈಗಲೇ ಹಿಂಗಾದ್ರೆ ಮುಂದೆ ಬರುವ ಮೇ ತಿಂಗಳಲ್ಲಿ ಹೆಂಗ್ರೀಪಾ...! ಎಂದು ಛೋಟಾ ಬಾಂಬೆ ಜನರು ತಲೆ ಮೇಲೆ ಕೈಯಿಟ್ಟು ಕುಳಿತುಕೊಳ್ಳುತ್ತಿದ್ದಾರೆ.












Click it and Unblock the Notifications