ಧಾರವಾಡದಲ್ಲಿ ಹಾಸ್ಟೆಲ್ ಸಿಗದೇ ವಿದ್ಯಾರ್ಥಿಗಳ ಪರದಾಟ, ಪ್ರತಿನಿತ್ಯ ಹೋರಾಟ
ಧಾರವಾಡ, ನವೆಂಬರ್, 22: ವಿದ್ಯಾಕಾಶಿ ಧಾರವಾಡದಲ್ಲಿ ವಸತಿ ಗೃಹಗಳು ಇಲ್ಲದೇ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ. ವಿದ್ಯಾರ್ಥಿಗಳು ವಸತಿ ಗೃಹ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಧಾರವಾಡದಲ್ಲಿ ಕಳೆದ ಕೆಲವು ದಿನಗಳಿಂದ ಹೋರಾಟ ನಡೆಸುತ್ತಿದ್ದಾರೆ.
ಧಾರವಾಡಕ್ಕೆ ಪ್ರತಿವರ್ಷ ಸಾವಿರಾರು ವಿದ್ಯಾರ್ಥಿಗಳು ಬೇರೆ ಬೇರೆ ಜಿಲ್ಲೆಗಳಿಂದ ವಿದ್ಯಾಭ್ಯಾಸಕ್ಕಾಗಿ ಬರುತ್ತಾರೆ. ಹೀಗೆ ಬರುವ ವಿದ್ಯಾರ್ಥಿಗಳ ಪೈಕಿ ಬಹುತೇಕರು ಆರ್ಥಿಕವಾಗಿ ಹಿಂದುಳಿದ ವರ್ಗದ ಕುಟುಂಬದವರೇ ಆಗಿರುತ್ತಾರೆ. ಹೀಗಾಗಿ ವಿವಿಧ ಕಾಲೇಜುಗಳಲ್ಲಿ ಪ್ರವೇಶ ಪಡೆಯುವ ಈ ವಿದ್ಯಾರ್ಥಿಗಳಿಗೆ ಅತ್ಯವಶ್ಯಕವಾಗಿ ಬೇಕಾಗಿರುವುದು ಹಾಸ್ಟೆಲ್ ವ್ಯವಸ್ಥೆ ಆಗಿದೆ. ಆದರೆ ಇದೀಗ ಜಿಲ್ಲೆಯಲ್ಲಿ ಲಭ್ಯವಿರುವ ಹಾಸ್ಟೆಲ್ಗಳು ಭರ್ತಿ ಆಗಿವೆ. ಇದರಿಂದ ದೂರದ ಊರುಗಳಿಂದ ಬಂದಂತಹ ವಿದ್ಯಾರ್ಥಿಗಳು ಪರದಾಡುವಂತೆ ಆಗಿದೆ.
ಮಂಗಳೂರಲ್ಲಿ ನಿಗೂಢ ಸ್ಫೋಟ; ಗೃಹ ಸಚಿವ ವಿಡಿಯೋ ಹೇಳಿಕೆ
ಹೀಗಾಗಿ ಇದೀಗ ವಿದ್ಯಾರ್ಥಿಗಳು ಕಾಲೇಜು ಅಭ್ಯಾಸ ಬಿಟ್ಟು ಸಮಾಜ ಕಲ್ಯಾಣ ಇಲಾಖೆ, ಜಿಲ್ಲಾಧಿಕಾರಿಗಳ ಕಚೇರಿ ಮುಂದೆ, ಹುಬ್ಬಳ್ಳಿ-ಧಾರವಾಡ ಸೇರಿದಂತೆ ವಿವಿಧ ಕಾಲೇಜು ವಿದ್ಯಾರ್ಥಿಗಳು ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಹೋರಾಟ ಮಾಡುತ್ತಲೇ ಇದ್ದಾರೆ.
ಹಾಸ್ಟೆಲ್ಗಳು ಭರ್ತಿ, ವಿದ್ಯಾರ್ಥಿಗಳ ಪರದಾಟ
ಇನ್ನು ಎಲ್ಲ ವಿದ್ಯಾರ್ಥಿಗಳು ಆನ್ಲೈನ್ ಮೂಲಕವೇ ಹಾಸ್ಟೆಲ್ಗಾಗಿ ಅರ್ಜಿ ಸಲ್ಲಿಸುತ್ತಾರೆ. ಆದರೆ ಹಾಸ್ಟೆಲ್ಗಳಲ್ಲಿ ಲಭ್ಯವಿರುವ ಸೀಟ್ಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿಗಳು ಬರುತ್ತವೆ. ಇದರಿಂದ ಅನೇಕ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸಿಗುವುದಿಲ್ಲ. ಇದೇ ಕಾರಣಕ್ಕೆ ಇದೀಗ ಧಾರವಾಡದಲ್ಲಿ ನಿತ್ಯವೂ ಪ್ರತಿಭಟನೆ, ಹೋರಾಟ, ಸಮಾಜ ಕಲ್ಯಾಣ ಇಲಾಖೆ ಹೊರಗಡೆ ಕಾಯುವುದು ನಡೆದಿದೆ. ಹಾಸ್ಟೆಲ್ಗೆ ಅರ್ಜಿ ಹಾಕಿದ ಎಲ್ಲಾ ವಿದ್ಯಾರ್ಥಿಗಳಿಗೂ ಸೀಟ್ ಕೊಡಲೇಬೇಕು ಅಂತಾ ಸರ್ಕಾರ ಸ್ಪಷ್ಟವಾದ ಆದೇಶವನ್ನು ನೀಡಿದೆ. ಆದರೆ ಇದೀಗ ಅರ್ಜಿ ಹಾಕಿದ ಬಹುತೇಕ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸಿಕ್ಕಿಲ್ಲ. ಹೀಗಾಗಿ ಇದೀಗ ವಿದ್ಯಾಭ್ಯಾಸ ಬಿಟ್ಟು ರಸ್ತೆಯಲ್ಲಿ ಹೋರಾಟ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಕಟ್ಟಡಗಳಿಗೆ ಬಾಡಿಗೆ ನೀಡದ ಅಧಿಕಾರಿಗಳು
ಈ ಬಗ್ಗೆ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಅಲ್ಲಾಭಕ್ಷಿ ಹಾಸ್ಟೆಲ್ನಲ್ಲಿ ಲಭ್ಯ ಇರುವ ಸೀಟ್ಗಿಂತ ಆರುಪಟ್ಟು ಹೆಚ್ಚಿನ ಅರ್ಜಿಗಳು ಬಂದಿವೆ. ಹೀಗಾಗಿ ಸಮಸ್ಯೆ ಆಗಿದೆ. ಇದೇ ಕಾರಣಕ್ಕೆ ಇದೀಗ ಬೇರೆ ಕಡೆಗಳಲ್ಲಿ ಕಟ್ಟಡಗಳನ್ನು ನೋಡಲು ಸೂಚಿಸಲಾಗಿದೆ. ಆ ಕಟ್ಟಡಗಳನ್ನು ಬಾಡಿಗೆ ಪಡೆದ ಕೂಡಲೇ ಎಲ್ಲಾ ವಿದ್ಯಾರ್ಥಿಗಳಿಗೂ ಅವಕಾಶ ಕಲ್ಪಿಸಿಕೊಡಲಾಗುವುದು ಎಂದು ಪತ್ರಿಕಾ ಪ್ರಕಟಣೆ ಮೂಲಕ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಇನ್ನು ಈ ಸಮಸ್ಯೆಗೆ ಪ್ರಮುಖ ಕಾರಣ ಎಂದರೆ ಬಾಡಿಗೆ ಕಟ್ಟಡ ಕೊಡಲು ಮಾಲೀಕರು ಒಪ್ಪುತ್ತಿಲ್ಲ. ಸರಿಯಾಗಿ ಬಾಡಿಗೆ ನೀಡದೇ ಇರುವ ಹಿನ್ನೆಲೆಯಲ್ಲಿ ಯಾರು ಕೂಡ ಹಾಸ್ಟೆಲ್ಗಳಿಗೆ ಬಾಡಿಗೆ ಕೊಡಲು ತಯಾರಿಲ್ಲ. ಇದರ ಪರಿಣಾಮ ನೇರವಾಗಿ ವಿದ್ಯಾರ್ಥಿಗಳ ಮೇಲೆ ಆಗುತ್ತಿದೆ. ಒಟ್ಟಿನಲ್ಲಿ ಈ ಸಮಸ್ಯೆಗೆ ಕೂಡಲೇ ಅಧಿಕಾರಿಗಳು ಪರಿಹಾರ ಕಂಡುಕೊಂಡು, ರಸ್ತೆಯಲ್ಲಿ ಹೋರಾಟಕ್ಕೆ ಇಳಿದಿರುವ ವಿದ್ಯಾರ್ಥಿ ಸಮೂಹಕ್ಕೆ ವಿದ್ಯಾಭ್ಯಾಸ ಮಾಡಲು ಅನುಕೂಲ ಮಾಡಿಕೊಡಬೇಕಾಗಿದೆ ಎಂಬುದು ಅಲ್ಲಿನ ಸ್ಥಳೀಯರ ಆಗ್ರಹವಾಗಿದೆ.