ರಕ್ಷಿತಾ ಕೊಲೆ : ಶಾಸಕ ಸಂಜಯ ಪಾಟೀಲ ವಿರುದ್ಧ ಆಂತರಿಕ ತನಿಖೆ
ಹುಬ್ಬಳ್ಳಿ, ಮಾರ್ಚ್ 28 : ರಕ್ಷಿತಾ ಜೈನ್ ಕೊಲೆ ಪ್ರಕರಣದಲ್ಲಿ ಬೆಳಗಾವಿ ಗ್ರಾಮೀಣ ಶಾಸಕ ಸಂಜಯ ಪಾಟೀಲ ಅವರ ಹೆಸರು ಕೇಳಿಬರುತ್ತಿದೆ. 'ಸಂಜಯ ಪಾಟೀಲರ ಪಾತ್ರದ ಕುರಿತು ಪಕ್ಷ ಆಂತರಿಕ ತನಿಖೆ ನಡೆಸಲಿದೆ' ಎಂದು ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಭಾನುವಾರ ಮಾತನಾಡಿದ ಪ್ರಹ್ಲಾದ್ ಜೋಶಿ ಅವರು, 'ರಕ್ಷಿತಾ ಜೈನ್ ಕೊಲೆ ಪ್ರಕರಣದಲ್ಲಿ ಶಾಸಕ ಸಂಜಯ ಪಾಟೀಲ ಅವರ ವಿರುದ್ಧ ಆರೋಪ ಕೇಳಿಬಂದಿದೆ. ಅವರ ಬಳಿ ಈ ಬಗ್ಗೆ ವಿವರಣೆ ಕೇಳಲಾಗಿದೆ. ನಾನು ರಕ್ಷಿತಾ ಜೊತೆ ಕೇವಲ ವಾಟ್ಸ್ಪ್ ಮತ್ತು ಫೇಸ್ಬುಕ್ ಮೂಲಕ ಚಾಟಿಂಗ್ ಮಾಡುತ್ತಿದ್ದೆ' ಎಂದು ಹೇಳಿದ್ದಾರೆ. [ರಕ್ಷಿತಾ ಜೈನ್ ಕೊಲೆ : ಆರೋಪಿ ಬಂಧನ]
'ರಕ್ಷಿತಾ ಅವರೊಂದಿಗೆ ಯಾವುದೇ ರೀತಿಯಲ್ಲಿ ಅನೈತಿಕ ಸಂಬಂಧ ಹೊಂದಿರಲಿಲ್ಲ. ಈ ಕುರಿತು ಯಾವುದೇ ತನಿಖೆಗೂ ಸಿದ್ಧವಾಗಿದ್ದೇನೆ ಎಂದು ಸಂಜಯ ಪಾಟೀಲ ಅವರು ತಿಳಿಸಿದ್ದಾರೆ. ಈ ಬಗ್ಗೆ ಪಕ್ಷದ ಆಂತರಿಕ ತನಿಖೆ ನಡೆಸಿ, ವರದಿಯನ್ನು ಪಕ್ಷದ ಹೈಕಮಾಂಡ್ಗೆ ತಲುಪಿಸಲಾಗುವುದು' ಎಂದು ಜೋಶಿ ತಿಳಿಸಿದ್ದಾರೆ.

ಶಾಸಕರ ಸ್ಪಷ್ಟನೆ : 'ಮೈಸೂರಿನ ರಕ್ಷಿತಾ ಜೈನ್ ಅವರ ಕೊಲೆಗೂ ನನಗೂ ಸಂಬಂಧವಿಲ್ಲ' ಎಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಬಿಜೆಪಿ ಶಾಸಕ ಸಂಜಯ ಪಾಟೀಲ ಅವರು ಸ್ಪಷ್ಟಪಡಿಸಿದ್ದಾರೆ. ಹತ್ಯೆ ಏಕೆ ನಡೆದಿದೆ ಎಂಬುದನ್ನು ಆರೋಪಿ ಹೇಳಿದ್ದಾನೆ. ರಾಜಕೀಯವಾಗಿ ನನ್ನ ವಿರುದ್ಧ ಸಂಚು ರೂಪಿಸಿ ಪ್ರಕರಣದಲ್ಲಿ ನನ್ನ ಹೆಸರು ಎಳೆದು ತರಲಾಗುತ್ತಿದೆ' ಎಂದು ಶಾಸಕರು ಸ್ಪಷ್ಟನೆ ನೀಡಿದ್ದಾರೆ.
'ನನಗೆ ರಕ್ಷಿತಾ ಅವರ ಪರಿಚಯವಿತ್ತು. ನಮ್ಮ ನಡುವೆ ಫೋನ್ ಸಂಭಾಷಣೆ ಮತ್ತು ಚಾಟಿಂಗ್ ನಡೆದಿದೆ. ರಕ್ಷಿತಾ ಕಾಣೆಯಾದಾಗ ಅವರ ತಂದೆ ನನಗೆ ಪೋನ್ ಮಾಡಿದ್ದರು. ನಾನು ಮೈಸೂರು ಪೊಲೀಸರಿಗೆ ಕರೆ ಮಾಡಿ, ಹುಡುಕಿಕೊಂಡುವಂತೆ ಮನವಿ ಮಾಡಿದ್ದೆ' ಎಂದು ಶಾಸಕರು ಹೇಳಿದ್ದಾರೆ.
ಆರೋಪಿ ಬಂಧನ : ಮೈಸೂರಿನ ರಾಮಕೃಷ್ಣ ನಗರದ ನಿವಾಸಿ ರಕ್ಷಿತಾ ಅವರು ಮಾರ್ಚ್ 11ರಂದು ಕಾಣೆಯಾಗಿದ್ದರು. ಚನ್ನಪಟ್ಟಣ ಬಳಿ ಅವರ ಶವ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ರಕ್ಷಿತಾಗೆ ಬೆಳಗಾವಿಯ ರಾಜಕಾರಣಿ ಜೊತೆ ಫೇಸ್ಬುಕ್ನಲ್ಲಿ ಸಂಬಂಧವಿತ್ತು ಎಂಬ ಸುದ್ದಿ ಹಬ್ಬಿತ್ತು. ಇದರ ಕುರಿತು ಶಾಸಕರು ಸ್ಪಷ್ಟನೆ ಕೊಟ್ಟಿದ್ದಾರೆ.
ರಕ್ಷಿತಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಗೆ ಡ್ರೈವಿಂಗ್ ಹೇಳಿಕೊಡುತ್ತಿದ್ದ ಎಂ.ಸಿ.ಸುನೀಲ್ ಅಲಿಯಾಸ್ ಅರ್ಜುನ (28)ನನ್ನು ಪೊಲೀಸರು ಬಂಧಿಸಿದ್ದಾರೆ. ಮೂಲತಃ ಚನ್ನಪಟ್ಟಣ ತಾಲೂಕು ಮೆಣಸಿಗನಹಳ್ಳಿ ಗ್ರಾಮದ ನಿವಾಸಿ ಅರ್ಜುನ ಮೈಸೂರಿನ ಕುವೆಂಪುನಗರದ ಡ್ರೈವಿಂಗ್ ಸ್ಕೂಲ್ನಲ್ಲಿ ತರಬೇತುದಾರನಾಗಿದ್ದ.












Click it and Unblock the Notifications