ಮೋದಿ ಮತ್ತು ಶಾ 'ರಾಹುಕೇತು'ಗಳು, ದೇಶಕ್ಕೆ ಗ್ರಹಣ ಹಿಡಿದಿದ್ದೇ ಇವರಿಂದ
ಧಾರವಾಡ, ಡಿ 26: ಪೌರತ್ವ ಕಾಯ್ದೆ ತಿದ್ದುಪಡಿ ಮಸೂದೆಯ ವಿರುದ್ದ ಬೀದಿಗಿಳಿದಿರುವ ಕಾಂಗ್ರೆಸ್, ಪ್ರಧಾನಿ ಮೋದಿ, ಕೇಂದ್ರ ಗೃಹಸಚಿವ ಅಮಿತ್ ಶಾ ವಿರುದ್ದ ಕಿಡಿಕಾರುತ್ತಿದೆ.
ನಗರದಲ್ಲಿನ ಪ್ರತಿಭಟನಾ ಸಭೆಯಲ್ಲಿ ಮಾತನಾಡುತ್ತಿದ್ದ ಕಾಂಗ್ರೆಸ್ ಮುಖಂಡ, ಮಾಜಿ ಸಂಸದ ವಿ.ಎಸ್.ಉಗ್ರಪ್ಪ, "ಅಮಿತ್ ಶಾ ಮತ್ತು ನರೇಂದ್ರ ಮೋದಿಯವರಿಗೆ ಏನಾದರೂ ಸಂವಿಧಾನದ ಬಗ್ಗೆ ಅರಿವಿದೆಯಾ" ಎಂದು ಪ್ರಶ್ನಿಸಿದ್ದಾರೆ.
"ಮೋದಿ ಮತ್ತು ಅಮಿತ್ ಶಾ, ರಾಹುಕೇತುಗಳು ಇದ್ದಂತೆ. ದೇಶಕ್ಕೆ ಗ್ರಹಣ ಹಿಡಿದಿದ್ದೇ ಇವರಿಬ್ಬರಿಂದ, ಯುವ ಸಮುದಾಯ ಈ ಗ್ರಹಣದಿಂದ ದೇಶಕ್ಕೆ ಮುಕ್ತಿ ಸಿಗಲು, ಹೋರಾಟಕ್ಕೆ ಇಳಿದಿದೆ" ಎಂದು ಉಗ್ರಪ್ಪ ಹೇಳಿದರು.

"ಕಾಂಗ್ರೆಸ್ ಮುಕ್ತ್ ಭಾರತ್ ಮಾಡುತ್ತೇವೆ ಎಂದು ಹೊರಟಿದ್ದ ಈ ಇಬ್ಬರು ಜೋಡಿಗಳಿಗೆ, ದೇಶದ ಮತದಾರ ಸರಿಯಾದ ಪಾಠವನ್ನು ಕಲಿಸುತ್ತಿದ್ದಾನೆ. ಒಂದೊಂದೇ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರ ಕಳೆದುಕೊಳ್ಳುತ್ತಿದೆ" ಎಂದು ಉಗ್ರಪ್ಪ ಲೇವಡಿ ಮಾಡಿದರು.
"ದೇಶದಲ್ಲಿ ಈಗ ಆರಂಭವಾಗಿರುವ ಹೋರಾಟಗಳು ಅಂತ್ಯವಲ್ಲ, ಇದು ಆರಂಭ. ಮೊದಲ ಸ್ವಾತಂತ್ರ್ಯ ಸಂಗ್ರಾಮ ಬ್ರಿಟಿಷರ ವಿರುದ್ದ ನಡೆದಿತ್ತು. ಎರಡನೇ ಸ್ವಾತ್ಯಂತ್ಯ ಸಂಗ್ರಾಮ ಮತೀಯವಾದಿಗಳ ವಿರುದ್ದ ನಡೆಯಲಿದೆ" ಎಂದು ಉಗ್ರಪ್ಪ ಎಚ್ಚರಿಸಿದ್ದಾರೆ.
"ತಮ್ಮನ್ನು ಚಾಯ್ ವಾಲಾ ಎಂದು ಈ ದೇಶದ ಪ್ರಧಾನಿ ಕರೆಸಿಕೊಳ್ಳುತ್ತಾರೆ. ಆದರೆ, ಅವರ ಪಕ್ಷದ ಸಂಸದ, ಪಂಚರ್ ಹಾಕುವವರಿಗೆ ಅವಮಾನ ಮಾಡುತ್ತಾರೆ. ಇವರೆಲ್ಲಾ ಮನುಷ್ಯರಾ" ಎಂದು ಉಗ್ರಪ್ಪ ಪ್ರಶ್ನಿಸಿದ್ದಾರೆ.












Click it and Unblock the Notifications