Karnataka Budget 2023 Expectations: ಧಾರವಾಡ ಜಿಲ್ಲೆಯ ನಿರೀಕ್ಷೆಗಳೇನು?
ಫೆಬ್ರವರಿ 10ರಂದು ವಿಧಾನಮಂಡಲ ಅಧಿವೇಶನ ಆರಂಭವಾಗಲಿದ್ದು, ಫೆಬ್ರವರಿ 17ರಂದು ರಾಜ್ಯ ಬಜೆಟ್ ಮಂಡನೆ ಆಗಲಿದೆ. ಕರ್ನಾಟಕ ಬಜೆಟ್ 2023ರ ಮೇಲಿನ ಧಾರವಾಡ ಜಿಲ್ಲೆಯ ಜನತೆಯ ಉದ್ಯಮ ಕ್ಷೇತ್ರದ ನಿರೀಕ್ಷೆಗಳೇನು ಎನ್ನುವುದು ಇಲ್ಲಿದೆ.
ಚುನಾವಣಾ ವರ್ಷದ ಹೊಸ್ತಿಲಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಡಿಸುತ್ತಿರುವ 2023-24ನೇ ಸಾಲಿನ ಬಜೆಟ್ ಬಗ್ಗೆ ಹುಬ್ಬಳ್ಳಿ ಧಾರವಾಡ ಸೇರಿದಂತೆ ಜಿಲ್ಲೆಯ ಕೈಗಾರಿಕೋದ್ಯಮಿಗಳಲ್ಲಿ ಬಹಳಷ್ಟು ನಿರೀಕ್ಷೆಗಳು ಗರಿಗೆದರಿವೆ.
ಚುನಾವಣೆ ನೆಪ ಒಂದೆಡೆಯಾದರೆ ಸಿಎಂ ಬೊಮ್ಮಾಯಿ ಅವರು ಹುಟ್ಟಿ- ಬೆಳೆದಿದ್ದು ಹುಬ್ಬಳ್ಳಿಯಲ್ಲಿ ಎನ್ನುವುದು ಇನ್ನೊಂದು ಕಾರಣ. ಹೀಗಾಗಿ ಅವರು ಮಂಡಿಸುತ್ತಿರುವ ಎರಡನೇ ಬಜೆಟ್ನಲ್ಲಿ ಹೆಚ್ಚಿನ ಆದ್ಯತೆ ಜಿಲ್ಲೆಗೆ ದೊರೆಯಬಹುದು ಎನ್ನುವ ನಿರೀಕ್ಷೆ ಜಿಲ್ಲೆಯ ಜನತೆಯದ್ದಾಗಿದೆ.
ರಾಜ್ಯದ ಎರಡನೇ ಅತಿದೊಡ್ಡ ಮಹಾನಗರವಾಗಿರುವ ಹುಬ್ಬಳ್ಳಿಯು ಕೈಗಾರಿಕೆ ಸ್ಥಾಪನೆಗೆ ಪ್ರಶಸ್ತ ಸ್ಥಳವಾಗಿದೆ. ರಸ್ತೆ ಮಾರ್ಗ, ರೈಲು ಹಾಗೂ ವೈಮಾನಿಕ ಸಂಪರ್ಕ ಉತ್ತಮವಾಗಿದೆ. ಮಾನವ ಸಂಪನ್ಮೂಲ, ಹವಾಗುಣ, ನೀರು, ವಿದ್ಯುತ್ ಸೇರಿದಂತೆ ಎಲ್ಲ ಮೂಲಸೌಕರ್ಯಗಳು ಲಭ್ಯವಿದೆ. ಇವುಗಳನ್ನು ಸಮರ್ಥವಾಗಿ ಬಳಸಿಕೊಳ್ಳುವ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸಬೇಕಿದೆ. ಅದಕ್ಕಾಗಿ ಹೊಸ ಹೊಸ ಉದ್ಯಮಗಳನ್ನು ಇಲ್ಲಿ ಸ್ಥಾಪಿಸಬೇಕಾಗಿದೆ ಎಂದು ಸ್ಥಳೀಯ ಉದ್ಯಮಿಗಳು ಹೇಳಿದ್ದಾರೆ.

ಹೊಸ ಹೊಸ ಉದ್ಯಮಗಳು ಸ್ಥಾಪನೆಯಾದರೆ ಸ್ಥಳೀಯವಾಗಿ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತವೆ. ಜನರು ಆರ್ಥಿಕವಾಗಿ ಸಬಲರಾಗಲಿದ್ದಾರೆ. ಜಿಲ್ಲೆಯು ಅಭಿವೃದ್ಧಿ ಪಥದಲ್ಲಿ ಸಾಗಲಿದೆ ಎನ್ನುವುದು ಅವರ ಆಶಯವಾಗಿದೆ.
ಬಜೆಟ್ನಲ್ಲಿ ಅವಳಿ ನಗರದ ಉದ್ಯಮಿಗಳ ಬೇಡಿಕೆ ಏನು?
* ಪ್ರಸ್ತುತ ಭೂಮಿ ಬೆಲೆ ಗಗನಕ್ಕೆ ಏರಿರುವುದರಿಂದ ಅತಿಸಣ್ಣ, ಸಣ್ಣ ಉದ್ಯಮಗಳನ್ನು ಸ್ಥಾಪಿಸಲು ಉದ್ಯಮಿಗಳಿಗೆ ಸಾಧ್ಯವಾಗುತ್ತಿಲ್ಲ. ವಿಶೇಷವಾಗಿ ಹೊಸದಾಗಿ ಉದ್ಯಮ ಆರಂಭಿಸಬೇಕು ಎನ್ನುವವರಿಗೆ ಕಷ್ಟವಾಗುತ್ತಿದೆ. ಇಂತಹವರ ಅನುಕೂಲಕ್ಕಾಗಿ ಕೈಗಾರಿಕಾ ಪ್ರದೇಶದಲ್ಲಿ ಒಂದು ಎಕರೆಯವರೆಗೆ ನಿವೇಶನವನ್ನು ರಿಯಾಯಿತಿ ದರದಲ್ಲಿ ಬಾಡಿಗೆ ಕೊಡುವ ಯೋಜನೆ ರೂಪಿಸಬೇಕು.
* ಮಾಹಿತಿ ತಂತ್ರಜ್ಞಾನ ಪಾರ್ಕ್ ಮಾದರಿಯಲ್ಲಿ ಸುಮಾರು 2,000ದಿಂದ 3,000 ಚದರ ಅಡಿವರೆಗಿನ ಪ್ರದೇಶಗಳನ್ನು ಗುರುತಿಸಿ, ಸಣ್ಣ ಸಣ್ಣ ಉತ್ಪಾದನಾ ಘಟಕಗಳಿಗೆ ಬಹು ಉಪಯೋಗಿ ಬಳಕೆದಾರರ ಮಳಿಗೆಗಳ ಕಟ್ಟಡ ನಿರ್ಮಿಸಬೇಕು. ಈ ಕಟ್ಟಡದಲ್ಲಿರುವ ಸ್ಥಳವನ್ನು 5 ಅಥವಾ 10 ವರ್ಷಗಳ ಬಾಡಿಗೆ/ ಗುತ್ತಿಗೆ ಆಧಾರದ ಮೇಲೆ ಉತ್ಪಾದನಾ ಘಟಕಗಳಿಗೆ ನೀಡಬೇಕು. ವಿಶೇಷವಾಗಿ ಸ್ಟಾರ್ಟ್ಅಪ್ಗಳಿಗೆ ಇಲ್ಲಿ ಸ್ಥಳಾವಕಾಶ ಕಲ್ಪಿಸಬೇಕು.
* ಜಿಲ್ಲೆಯ ಕೈಗಾರಿಕಾ ಪ್ರದೇಶದಲ್ಲಿ ಬಹುತೇಕ ಸ್ಥಳ ತುಂಬಿ ಹೋಗಿದೆ. ದೊಡ್ಡ ಉದ್ಯಮಿಗಳು ಕೈಗಾರಿಕೆಗಳ ಸ್ಥಾಪನೆಗೆ ಮುಂದೆ ಬಂದರೆ ಅವರಿಗೆ ಸ್ಥಳಾವಕಾಶವೇ ಇಲ್ಲ. ಆದ್ದರಿಂದ ಹುಬ್ಬಳ್ಳಿಯಿಂದ ಬೆಳಗಾವಿ, ಹಾವೇರಿ ಹಾಗೂ ಗದಗ ಹೋಗುವ ಮಾರ್ಗದಲ್ಲಿ ಕೈಗಾರಿಕಾ ಪ್ರದೇಶ ಗುರುತಿಸಿ ಅಭಿವೃದ್ಧಿ ಪಡಿಸಬೇಕು.
* ಕೈಗಾರಿಕಾ ಪ್ರದೇಶಗಳಲ್ಲಿರುವ ನಿವೇಶನಗಳ ಆಸ್ತಿ ತೆರಿಗೆ, ನೋಂದಣಿ ಶುಲ್ಕ ದರದಲ್ಲಿ ರಿಯಾಯಿತಿ ನೀಡಬೇಕು.
* ಎಂಎಸ್ಎಂಇ ಕೈಗಾರಿಕೆಗಳಿಗೆ ಶೇ 6ರ ಬಡ್ಡಿದರದಲ್ಲಿ ₹ 10 ಕೋಟಿವರೆಗೆ ನೆರವು ನೀಡಬೇಕು.
* ಸೌರ್ ವಿದ್ಯುತ್ ಪಾರ್ಕ್, ಡಿಫೆನ್ಸ್ ಉಪಕರಣಗಳ ತಯಾರಿಕಾ ಕಂಪನಿಗಳ ಪಾರ್ಕ್, ಕೃಷಿ ಉಪಕರಣಗಳ ತಯಾರಿಕಾ ಪಾರ್ಕ್ (ಅಗ್ರಿ ಪಾರ್ಕ್), ಜವಳಿ ಪಾರ್ಕ್, ಟ್ರಕ್ ಟರ್ಮಿನಲ್ (ನಗರ ಪ್ರವೇಶಿಸುವ ದ್ವಾರದ ಬಳಿ 5- 10 ಎಕರೆ), ನಿರ್ಮಿಸಬೇಕು
* ರಫ್ತಿಗೆ ಅನುಕೂಲವಾಗಲು ಉತ್ತರ ಕನ್ನಡ ಜಿಲ್ಲೆಯ ಬೇಲೆಕೇರಿ ಬಂದರನ್ನು ಅಭಿವೃದ್ಧಿಪಡಿಸಬೇಕು. ಇದರ ಜೊತೆ ಇನ್ನೂ ಅನೇಕ ಬೇಡಿಕೆಗಳ ಪಟ್ಟಿಯನ್ನು ಜಿಲ್ಲೆಯ ಉದ್ಯಮಿಗಳ ಜೊತೆ ಸೇರಿಕೊಂಡು ಸಿದ್ಧಪಡಿಸಿದ್ದೇವೆ. ಸದ್ಯದಲ್ಲಿಯೇ ಮುಖ್ಯಮಂತ್ರಿ ಅವರಿಗೆ ಸಲ್ಲಿಸಲಿದ್ದೇವೆ ಎಂದು ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ವಿನಯ ಜವಳಿ ತಿಳಿಸಿದರು.












Click it and Unblock the Notifications