Breaking; ಕವಿ ಡಾ. ಚೆನ್ನವೀರ ಕಣವಿ ವಿಧಿವಶ
ಧಾರವಾಡ, ಫೆಬ್ರವರಿ 16; ಹಿರಿಯ ಕವಿ ನಾಡೋಜ ಡಾ. ಚೆನ್ನವೀರ ಕಣವಿ ವಿಧಿವಶರಾದರು. ಕೋವಿಡ್ ಸೋಂಕು ತಗುಲಿದ ಬಳಿಕ ಜನವರಿ 14ರಿಂದ ಅವರು ಧಾರವಾಡದ ಎಸ್ಡಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಬುಧವಾರ 93 ವರ್ಷದ ಡಾ. ಚೆನ್ನವೀರ ಕಣವಿ ಚಿಕಿತ್ಸೆ ಫಲಕಾರಿಯಾಗದೇ ಧಾರವವಾಡದ ಎಸ್ಡಿಎಂ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾನುವಾರ ಆಸ್ಪತ್ರೆಗೆ ಭೇಟಿ ನೀಡಿ ಚೆನ್ನವೀರ ಕಣವಿ ಆರೋಗ್ಯ ವಿಚಾರಿಸಿದ್ದರು.
ಕೋವಿಡ್ನಿಂದ ಚೆನ್ನವೀರ ಕಣವಿ ಗುಣಮುಖರಾದರೂ ಉಸಿರಾಟದ ತೊಂದರೆ ಅನುಭವಿಸುತ್ತಿದ್ದರು. ಅವರ ಶ್ವಾಸಕೋಶದ ಸೋಂಕು ಕಡಿಮೆಯಾಗಿಲ್ಲ. ಚಿಕಿತ್ಸೆ ನೀಡುತ್ತಿದ್ದರೂ ಅವರು ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಸೋಮವಾರ ಆಸ್ಪತ್ರೆ ಹೆಲ್ತ್ ಬುಲೆಟಿನ್ ಮೂಲಕ ಮಾಹಿತಿ ನೀಡಿತ್ತು.

ಧಾರವಾಡ ಸಂಸದ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಂಗಳವಾರ ಆಸ್ಪತ್ರೆಗೆ ಭೇಟಿ ನೀಡಿ ಡಾ. ಚೆನ್ನವೀರ ಕಣವಿ ಆರೋಗ್ಯ ವಿಚಾರಿಸಿದ್ದರು. ಬಳಿಕ ಮಾತನಾಡಿದ್ದ ಅವರು, "ಚಂಬೆಳಕಿನ ಕವಿ ನಮಗೆಲ್ಲರಿಗೂ ಬಹಳ ಆತ್ಮೀಯರು ಆತ್ಯಂತ ಮೃದು ಸ್ವಾಭಾವದ ವ್ಯಕ್ತಿ. ಚೆನ್ನವೀರ ಕಣವಿ ಅವರು ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದು, ಆದರೆ ವಯೋ ಸಹಜ ಕಾರಣದಿಂದಾಗಿ ಅವರ ಆರೋಗ್ಯದಲ್ಲಿ ತೀವ್ರ ತರದ ಚೇತರಿಕೆ ಕಾಣುತಿಲ್ಲ" ಎಂದು ಹೇಳಿದ್ದರು.
"ಕೋವಿಡ್ನಿಂದ ಸಂಪೂರ್ಣ ಗುಣಮುಖರಾಗಿರುವ ಅವರು ವಯೋಸಹಜ ಖಾಯಿಲೆಗಳಿಂದ ಬಳಲುತ್ತಿದ್ದಾರೆ. ಎಸ್ಡಿಎಂ ಆಸ್ಪತ್ರೆಯ ತಜ್ಞ ವೈದ್ಯರ ತಂಡ ಡಾ. ನಿರಂಜನ ಕುಮಾರ್ ನೇತೃತ್ವದಲ್ಲಿ ಉತ್ತಮ ಚಿಕಿತ್ಸೆ ನೀಡುತ್ತಿದ್ದು, ಅವರು ಸಂಪೂರ್ಣ ಗುಣಮುಖರಾಗಲು ಎಲ್ಲ ರೀತಿಯ ಪ್ರಯತ್ನವನ್ನು ಮಾಡುತ್ತಿದ್ದಾರೆ" ಎಂದು ತಿಳಿಸಿದ್ದರು.
ಆಸ್ಪತ್ರೆಗೆ ಭೇಟಿ ನೀಡಿದ್ದ ಬಸವರಾಜ ಬೊಮ್ಮಾಯಿ, "ಹೆಸರಾಂತ ಕವಿ, ನಾಡೋಜ ಡಾ. ಚೆನ್ನವೀರ ಕಣವಿ ಅವರಿಗೆ ಉತ್ತಮ ಚಿಕಿತ್ಸೆ ದೊರೆಯುತ್ತಿದೆ. ಸ್ವಲ್ಪಮಟ್ಟಿನ ಚೇತರಿಕೆ ಕಂಡು ಬಂದಿದೆ, ಮುಂದಿನ 3-4 ದಿನಗಳಲ್ಲಿ ಇನ್ನಷ್ಟು ಆರೋಗ್ಯ ಸುಧಾರಿಸುವ ಭರವಸೆ ಇದೆ. ಕಣವಿ ಅವರ ಚಿಂತನೆಗಳು ನಾಡಿಗೆ ಮತ್ತೆ ದೊರೆಯಬೇಕು" ಎಂದು ಆಶಯ ವ್ಯಕ್ತಪಡಿಸಿದ್ದರು.
"ಸರಳ, ಸಜ್ಜನಿಕೆಗೆ ಹೆಸರಾಗಿರುವ ಕಣವಿ ಅವರ ಚಿಂತನೆಗಳಿಂದ ನಾಡಿಗೆ ಮತ್ತೆ ಪ್ರೇರಣೆ ದೊರೆಯುವಂತಾಗಲಿ ಎಂಬ ಆಶಯ, ಭರವಸೆ ಇದೆ. ಅವರ ಕುಟುಂಬದೊಂದಿಗೆ ತಮಗೆ ದೀರ್ಘ ಕಾಲದ ಆತ್ಮೀಯ ಒಡನಾಟ ಇದೆ. ಸರ್ಕಾರದ ವೆಚ್ಚ, ಜಿಲ್ಲಾಧಿಕಾರಿಗಳ ಉಸ್ತುವಾರಿಯಲ್ಲಿ ಎಸ್ಡಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುತ್ತಿದೆ. ಶೀಘ್ರ ಗುಣಮುಖರಾಗಿ, ಚೇತರಿಸಿಕೊಳ್ಳಲಿ" ಎಂದು ಮುಖ್ಯಮಂತ್ರಿಯವರು ಹಾರೈಸಿದ್ದರು.
ಸಮನ್ವಯ ಕವಿ; ಡಾ ಚೆನ್ನವೀರ ಕಣವಿ ಭಾವಜೀವಿ ಎಂದೇ ಖ್ಯಾತಿ ಪಡೆದಿದ್ದರು. ಜೂನ್ 28,1928ರಂದು ಧಾರವಾಡ ಜಿಲ್ಲೆಯ ಹೊಂಬಳದಲ್ಲಿ ಚನ್ನವೀರ ಕಣವಿ ಜನಿಸಿದ್ದರು.
ಕರ್ನಾಟಕ ವಿಶ್ವವಿದ್ಯಾಲಯದಿಂದ ಬಿಎ ಮತ್ತು ಎಂಎ ಪದವಿ ಪಡೆದ ಬಳಿಕ ಕರ್ನಾಟಕ ವಿಶ್ವವಿದ್ಯಾಲಯದ ವ್ಯಾಸಂಗ ಪ್ರಸರಣ ಮತ್ತು ಪ್ರಕಟಣಾ ವಿಭಾಗದ ಕಾರ್ಯದರ್ಶಿಯಾಗಿ, ಪ್ರಸಾರಾಂಗದ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು.
ಡಾ. ಚೆನ್ನವೀರ ಕಣವಿ ಅವರ ಮೊದಲ ಕವಲ ಸಂಕಲನ 'ಕಾವ್ಯಾಕ್ಷಿ' 1949ರಲ್ಲಿ ಬಿಡುಗಡೆಗೊಂಡಿತು. ಭಾವಜೀವಿ, ಆಕಾಶಬುಟ್ಟಿ, ಮಣ್ಣಿನ ಮೆರವಣಿಗೆ, ನೆಲಮುಗಿಲು, ಜೀವಧ್ವನಿ ಮುಂತಾದ ಕವನ ಸಂಕಲನಗಳನ್ನು ಅವರು ರಚಿಸಿದ್ದರು.
ಡಾ. ಚೆನ್ನವೀರ ಕಣವಿ ಸಾಹಿತ್ಯ ಸೇವೆಗಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಅನಕೃ ಪ್ರತಿಷ್ಠಾನ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿಗಳನ್ನು ಪಡೆದಿದ್ದರು. ಹಾಸನದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಹಂಪಿ ವಿಶ್ವವಿದ್ಯಾಲಯ ನಾಡೋಜ ಪಶಸ್ತಿ ನೀಡಿ ಗೌರವಿಸಿತ್ತು. ಕರ್ನಾಟಕ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿತ್ತು.












Click it and Unblock the Notifications