ನುಗ್ಗೆಕೆರೆ ಕಲ್ಲಂಗಡಿ ಧ್ವಂಸ ಪ್ರಕರಣಕ್ಕೆ ಮುಸ್ಲಿಮರೇ ಪರೋಕ್ಷ ಕಾರಣ: ಅರವಿಂದ್ ಬೆಲ್ಲದ್
ಧಾರವಾಡ, ಏಪ್ರಿಲ್ 12: 'ಧಾರವಾಡ ಜಿಲ್ಲೆಯ ನುಗ್ಗೆಕೆರೆ ಅಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿ ಮುಸ್ಲಿಂ ವ್ಯಾಪಾರಿಯ ಕಲ್ಲಂಗಡಿ ಅಂಗಡಿ ಧ್ವಂಸಕ್ಕೆ ಪರೋಕ್ಷವಾಗಿ ಮುಸ್ಲಿಮರೇ ಕಾರಣ' ಎಂದು ಶಾಸಕ ಅರವಿಂದ್ ಬೆಲ್ಲದ್ ಆರೋಪಿಸಿದ್ದಾರೆ.
ಮಂಗಳವಾರ ಸುದ್ದಿಗೋಷ್ಠಿ ನಡೆ ಮಾತನಾಡಿದ ಅವರು, ಹಿಜಾಬ್ ವಿಷಯದಲ್ಲಿ ಮುಸ್ಲಿಂ ಸಮುದಾಯದವರು ನ್ಯಾಯಾಲಯದ ತೀರ್ಪಿಗೆ ಗೌರವ ನೀಡದಿರುವುದೇ ಈ ಅಹಿತಕರ ಘಟನೆಗೆ ಕಾರಣವಾಗಿದೆ ಎಂದು ದೂಷಿಸಿದ್ದಾರೆ.
ಹಿಜಾಬ್ ವಿಷಯದಲ್ಲಿ ಕೋರ್ಟ್ ಆದೇಶವನ್ನು ಪಾಲಿಸದೇ ತಮ್ಮ ಧರ್ಮೀಯರಿಗೆ ಬಂದ್ ಆಚರಿಸುವಂತೆ ಮುಸ್ಲಿಂ ಸಮುದಾಯ ಕರೆ ನೀಡಿತು. ಈ ಬೆಳವಣಿಗೆ ಮತ್ತೊಂದು ಸಮುದಾಯದ ಆಕ್ರೋಶಕ್ಕೆ ಕಾರಣವಾಗಿತ್ತು. ಅದೇ ಘಟನೆ ಇಂದು ಬೇರೆ ಬೇರೆ ಸ್ವರೂಪ ಪಡೆದುಕೊಳ್ಳುತ್ತಿದೆ ಎಂದು ಅರವಿಂದ್ ಬೆಲ್ಲದ್ ದೂಷಿಸಿದ್ದಾರೆ.

ಸಿ ಟಿ ರವಿ ಹೇಳಿಕೆ ಸಮರ್ಥಿಸಿಕೊಂಡ ಬೆಲ್ಲದ್:
ಧಾರವಾಡದ ನುಗ್ಗೆಕೆರೆ ದೇವಸ್ಥಾನದ ಬಳಿ ನಡೆದಿರುವ ಘಟನೆಯು ಸುಖಾಸುಮ್ಮನೆ ನಡೆದಿರುವುದೇ ಅಲ್ಲ. ಅದು ಕ್ರಿಯೆಗೆ ತಕ್ಕ ಪ್ರತಿಕ್ರಿಯೆ ಆಗಿದೆ. ಹೀಗಾಗಿ ಕ್ರಿಯೆ ನಡೆಯದಂತೆ ಮುಸ್ಲಿಂ ಸಮುದಾಯ ನೋಡಿಕೊಂಡರೆ, ಅದಕ್ಕೆ ಪ್ರತಿಕ್ರಿಯೆ ಆಗದಂತೆ ಇನ್ನೊಂದು ಸಮುದಾಯ ನೋಡಿಕೊಳ್ಳುತ್ತದೆ. ಈ ಕಾರಣ್ಕಕಾಗಿಯೇ ಬಿಜೆಪಿಯ ಸಿ ಟಿ ರವಿ ಹೇಳಿಕೆಯನ್ನು ಅವರು ಸಮರ್ಥಿಸಿಕೊಂಡರು.
ಧಾರವಾಡ ಜಿಲ್ಲೆಯ ನುಗ್ಗೆಕೆರೆ ಆಂಜನೇಯ ದೇವಸ್ಥಾನದ ಬಳಿ ಮುಸ್ಲಿಂ ವ್ಯಾಪಾರಿ ನಬಿಸಾಬ್ ಎಂಬುವವರ ಅಂಗಡಿಯ ಕಲ್ಲಂಗಡಿಯನ್ನು ಒಡೆದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ್ದ ಸಿ.ಟಿ ರವಿ, "ತಲೆ ಒಡೆದಾಗ ಇಲ್ಲದ ಕಾಳಜಿಯು, ಕೆಲವರಿಗೆ ಕಲ್ಲಂಗಡಿ ಒಡೆದಾಗ ಏತಕ್ಕೆ ಬಂತು," ಎಂದು ಪ್ರಶ್ನೆ ಮಾಡಿದ್ದರು.
ಪ್ರಚೋದನೆ ನೀಡುವ ವೇಷ-ಭೂಷಣ:
ಹಿಂದೂ ದೇವಸ್ಥಾನದ ಬಳಿ ಮುಸ್ಲಿಂ ವ್ಯಾಪಾರಸ್ಥರು ವ್ಯಾಪಾರ ಮಾಡುವುದಕ್ಕೆ ಯಾವುದೇ ಅಡ್ಡಿ ಇಲ್ಲ. ಆದರೆ ತಾವೊಬ್ಬ ಮುಸ್ಲಿಂ ಎಂದು ತೋರಿಸಿಕೊಳ್ಳುವ ರೀತಿ ದೇವಸ್ಥಾನದ ಆವರಣದಲ್ಲಿ ಗಡ್ಡ ಬಿಟ್ಟುಕೊಂಡು, ಟೋಪಿ ಧರಿಸಿದರೆ ಕೆಲವೊಮ್ಮೆ ಭಕ್ತರಿಗೆ ಪ್ರಚೋದನೆ ನೀಡುವ ಸಾಧ್ಯತೆ ಇರುತ್ತದೆ. ಈ ಕಾರಣಕ್ಕಾಗಿಯೇ ಮುಸ್ಲಿಂ ಸಮಾಜದ ಮುಖಂಡರು ಇಂತಹ ವಿಚಾರಗಳ ಬಗ್ಗೆ ಚಿಂತನೆ ಮಾಡಿದರೆ ಅಹಿತಕರ ಘಟನೆಗಳು ನಡೆಯುವುದಿಲ್ಲ ಎಂದು ಅರವಿಂದ್ ಬೆಲ್ಲದ್ ಅಭಿಪ್ರಾಯ ವ್ಯಕ್ತಪಡಿಸಿದರು.

ನುಗ್ಗೆಕೆರೆ ಘಟನೆಯು ಸಮರ್ಥನೀಯವಲ್ಲ ಎಂದ ಬೆಲ್ಲದ್:
ಧಾರವಾಡದ ನುಗ್ಗಿಕೇರಿ ದೇವಸ್ಥಾನ ಮುಸ್ಲಿಂ ಅಂಗಡಿ ಮೇಲಿನ ದಾಳಿಯನ್ನು ಸಮರ್ಥನೆ ಮಾಡುತ್ತಿಲ್ಲ. ಈ ರೀತಿ ತಪ್ಪುಗಳು ಆಗದಂತೆ ಎರಡೂ ಸಮಾಜ ಎಚ್ಚರ ವಹಿಸಬೇಕು ಎಂದು ಅರವಿಂದ್ ಬೆಲ್ಲದ ಹೇಳಿದರು. ಈ ರೀತಿಯ ಘಟನೆಗಳು ಮತ್ತೆ ನಡೆಯದಂತೆ ಎಚ್ಚರಿಕೆ ವಹಿಸಲು ಮೂಲ ಸಮಸ್ಯೆಗೆ ಪರಿಹಾರ ಒದಗಿಸಬೇಕು. ಧಾರ್ಮಿಕ ಸಮಸ್ಯೆಗಳಿಗೆ ಸಮಾಜ ಪರಿಹಾರ ಕಂಡುಕೊಳ್ಳಬೇಕೇ ಹೊರತು ಎಲ್ಲ ದೇವಸ್ಥಾನಗಳ ಎದುರು ಪೊಲೀಸ್ ಪಹರೆ ಹಾಕುವುದಕ್ಕೆ ಸಾಧ್ಯವಿಲ್ಲ. ಇನ್ನಾದರೂ ಹಿಂದೂ -ಮುಸ್ಲಿಂ ನಾಯಕರು ಸರಿಯಾದ ಕ್ರಮ ತೆಗೆದುಕೊಳ್ಳಬೇಕು ಎಂದು ಬೆಲ್ಲದ್ ಹೇಳಿದರು.
ಧಾರವಾಡದಲ್ಲಿ ನಡೆದ ಘಟನೆ ಏನು?:
ಕಳೆದ ಶನಿವಾರ ಧಾರವಾಡ ಹೊರವಲಯದಲ್ಲಿ ಇರುವ ನುಗ್ಗೆಕೆರೆ ಆಂಜನೇಯನ ದೇವಸ್ಥಾನಕ್ಕೆ ಸಾವಿರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸಿದ್ದರು. ಈ ವೇಳೆ ದೇವಸ್ಥಾನದ ಬಳಿಯಲ್ಲಿ ಹಿಂದೂಯೇತರ ಅಂಗಡಿಗಳನ್ನು ಹಾಕದಂತೆ 15 ದಿನಗಳ ಹಿಂದೆಯೇ ಶ್ರೀರಾಮ ಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಹಿಂದೂಯೇತರ ಅಂಗಡಿಗಳನ್ನು ಬಂದ್ ಮಾಡಿಸಬೇಕು ಎಂದು ಮನವಿ ನೀಡಿದ್ದರು. ಅದಾಗ್ಯೂ, ಶನಿವಾರ ದೇವಸ್ಥಾನದ ಬಳಿಯಲ್ಲಿ ಹಿಂದೂಯೇತರ ಅಂಗಡಿಗಳನ್ನು ಹಾಕಲಾಗಿತ್ತು. ಇದರಿಂದ ಕೆರಳಿದ ಕೆಲವು ಮಂದಿ ದೇವಸ್ಥಾನದ ಬಳಿ ಹಾಕಲಾಗಿದ್ದ ಹಿಂದೂಯೇತರ ಅಂಗಡಿಗಳಲ್ಲಿನ ಹಣ್ಣು ಮತ್ತು ಕಾಯಿಗಳನ್ನು ರಸ್ತೆಗೆ ಎಸೆದು ಧ್ವಂಸಗೊಳಿಸಿದ್ದರು.












Click it and Unblock the Notifications