ಹುಬ್ಬಳ್ಳಿ: ಪದ್ದಣ್ಣ ಕೊಲೆ ಹಿಂದೆ ಇಂಜಿನಿಯರ್ ಅಂಜಲಿ
ಹುಬ್ಬಳ್ಳಿ, ಮೇ 25: ಕಾರವಾರ ಜಿಲ್ಲೆಯ ಮುಂಡಗೋಡ ತಾಲೂಕು ಬೆಣಚಿ ಗ್ರಾಮದ ಗುತ್ತಿಗೆದಾರ ಪದ್ಮಣ್ಣ ಏಗಪ್ಪನವರ ಕೊಲೆ ಪ್ರಕರಣದ ಜಾಡನ್ನು ಪತ್ತೆಹಚ್ಚಿದ ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರು ಮೂವರನ್ನು ಮಂಗಳವಾರ ಸಂಜೆ ಬಂಧಿಸಿದ್ದಾರೆ.
ಗುತ್ತಿಗೆದಾರ ಪದ್ಮಣ್ಣ ಮೇ 11 ರಂದು ರಾಷ್ಟ್ರೀಯ ಹೆದ್ದಾರಿ ಎನ್ಎಚ್4 ರ ನೂಲ್ವಿ ಕ್ರಾಸ್ ಬಳಿ ಶವವಾಗಿ ಪತ್ತೆಯಾಗಿದ್ದ. ಈ ಪ್ರಕರಣದ ಹಿಂದೆ ಬಿದ್ದಿದ್ದ ಪೊಲೀಸರು ಮುಂಡಗೋಡ ಪಂಚಾಯತ್ ರಾಜ್ ಇಲಾಖೆಯ ಉಪವಿಭಾಗದ ಕಿರಿಯ ಇಂಜಿನಿಯರ್ ಹುಬ್ಬಳ್ಳಿ ನಿವಾಸಿ ಅಂಜಲಿ ಹನುಮಂತಗೌಡ ಪಾಟೀಲ, ಈಕೆಯ ಸಹೋದರರಾದ ಶಂಭುಲಿಂಗ ಹನುಮಂತಗೌಡ ಪಾಟೀಲ ಮತ್ತು ರೋಹಿತ ಹನುಮಂತಗೌಡ ಪಾಟೀಲ ಎಂಬುವರನ್ನು ಬಂಧಿಸಿದ್ದಾರೆ.

ಪ್ರಕರಣದ ವಿವರ:
ಗುತ್ತಿಗೆದಾರನಾಗಿದ್ದ ಪದ್ಮಣ್ಣನಿಗೆ ಅಂಜಲಿ ಪರಿಚಯವಿದ್ದಳು. ಅಂಜಲಿಗೆ ವಿವಿಧ ರೀತಿಯಲ್ಲಿ ಕಾಡುತ್ತಿದ್ದ ಪದ್ಮಣ್ಣ ಚಿಕ್ಕಪುಟ್ಟ ಕಾರಣಕ್ಕೆ ಜಗಳ ತೆಗೆಯುತ್ತಿದ್ದ. ಸರಕಾರದ ಕಾಮಗಾರಿಗಳನ್ನು ಸರಿಯಾಗಿ ಮಾಡಿಸಿಲ್ಲ ಎಂದು ದೂರುತ್ತಿದ್ದ ಪದ್ಮಣ್ಣ ಇತ್ತೀಚೆಗೆ ಕೆಲವೊಂದು ಸಂಘಟನೆಗಳು ಮತ್ತು ತನ್ನ ಸಂಗಡಿಗರೊಂದಿಗೆ ಪ್ರತಿಭಟನೆಯನ್ನೂ ಕೂಡ ಮಾಡಿದ್ದ. ಈ ಬಗ್ಗೆ ಮನನೊಂದಿದ್ದ ಅಂಜಲಿ ಪದ್ಮಣ್ಣನ ಕೊಲೆ ಮಾಡಲು ಸಂಚು ರೂಪಿಸುತ್ತಿದ್ದಳು.
ಮೇ.11 ರಂದು ಅಂಜಲಿಗೆ ಕರೆ ಮಾಡಿದ್ದ ಪದ್ಮಣ್ಣ ಧರ್ಮಸ್ಥಳಕ್ಕೆ ಹೋಗುತ್ತಿದ್ದೇನೆ ನೀನೂ ಬರಬೇಕು ಎಂದು ಹೇಳಿದ್ದಾನೆ. ಈ ಅವಕಾಶಕ್ಕೆ ಕಾಯುತ್ತಿದ್ದ ಅಂಜಲಿ ತನ್ನ ಮಾರುತಿ ಆಲ್ಟೋ ಕಾರಿನಲ್ಲಿ ಪದ್ಮಣ್ಣನನ್ನು ಜೊತೆಗೆ ಕರೆದೊಯ್ದಿದ್ದಾಳೆ. ಮೊದಲೇ ತನ್ನ ಸಹೋದರರಿಗೆ ಈ ವಿಷಯ ತಿಳಿಸಿದ್ದ ಅಂಜಲಿ ನೂಲ್ವಿ ಕ್ರಾಸ್ ಬಳಿ ಬರಲು ಹೇಳಿದ್ದಾಳೆ. [ಹುಬ್ಬಳ್ಳಿ: ವಾಟರ್ ಸಪ್ಲೈ ಅಲರ್ಟ್ ಬಂದ್, ತಪ್ಪು ಯಾರದ್ದು?]

ನೂಲ್ವಿ ಕ್ರಾಸ್ ಬಳಿ ಕಾರು ನಿಲ್ಲಿಸಿದ ಅಂಜಲಿ ಮೊದಲೇ ನಿರ್ಧರಿಸಿದಂತೆ ತನ್ನ ಸಹೋದರರನ್ನು ಕರೆದಿದ್ದಾಳೆ. ಕೂಡಲೇ ಕಾರಿನೊಳಗೆ ನುಗ್ಗಿದ ಅಂಜಲಿ ಸಹೋದರರಾದ ಶಂಭುಲಿಂಗ ಮತ್ತು ರೋಹಿತ್ ಪದ್ಮಣ್ಣನಿಗೆ ತನ್ನ ಅಕ್ಕನಿಗೆ ತೊಂದರೆ ಕೊಡುತ್ತೀಯಾ ಎಂದು ಜಗಳ ತೆಗೆದಿದ್ದಾರೆ. ನಂತರ ಆತನ ತಲೆಗೆ ದೊಡ್ಡ ಕಲ್ಲಿನಿಂದ ಜಜ್ಜಿದ್ದಾರೆ. ಮೂರ್ಛೆ ಹೋದ ಪದ್ಮಣ್ಣನನ್ನು ಹತ್ತಿರದ ಹೊಲವೊಂದರಲ್ಲಿ ಎತ್ತಿಕೊಂಡ ಹೋಗಿ ವಿಷ ಕುಡಿಸಿದ್ದಾರೆ.

ಪದ್ಮಣ್ಣ ಮೃತಪಟ್ಟಿದ್ದನ್ನು ಖಚಿತಪಡಿಸಿಕೊಂಡು ಅಲ್ಲಿಂದ ಅವನ ಮೂರು ಮೊಬೈಲ್ ನಲ್ಲಿ ಎರಡನ್ನು ಹಾಗೂ ಚಪ್ಪಲಿ, ವಿಷದ ಬಾಟಲಿ, ಕೊಲೆ ಮಾಡಲು ಬಳಸಿದ ಕಲ್ಲು ಇವೆಲ್ಲವನ್ನೂ ತೆಗೆದುಕೊಂಡು ಹೋಗಿ ಸುಳ್ಳದ ರಸ್ತೆಯಲ್ಲಿ ಎಸೆದಿದ್ದಾರೆ. ನಂತರ ತಮ್ಮ ರಕ್ತಸಿಕ್ಕ ಬಟ್ಟೆಗಳನ್ನು ಅಲ್ಲಿಯೇ ಸುಟ್ಟು ಎರಡು ಮೊಬೈಲ್ ಗಳನ್ನು ಕಲ್ಲಿನಿಂದ ಜಜ್ಜಿ ಪುಡಿ ಮಾಡಿದ್ದಾರೆ.[ಪಿಸ್ತೂಲ್ ಮಾರಾಟ: ವಿಜಯಪುರದ ಶಿಕ್ಷಕ ಹುಬ್ಬಳ್ಳಿ ಪೊಲೀಸರ ಬಲೆಗೆ]

ಪ್ರಕರಣದ ಪತ್ತೆಯಾಗಿದ್ದು ಹೀಗೆ:'
ಕೊಲೆಗೀಡಾದ ಪದ್ಮಣ್ಣನು ಹುಬ್ಬಳ್ಳಿ ಶಾಂತಿನಗರ ನಿವಾಸಿ ಕೊಲೆ ಆರೋಪಿ ಅಂಜಲಿಗೆ ತನ್ನ ಮೂರು ಮೊಬೈಲ್ ಗಳಲ್ಲಿ ಒಂದರಿಂದ ಕರೆ ಮಾಡುತ್ತಿದ್ದ. ಆ ನಂಬರ್ ನಿಂದ ಕೇವಲ ಅಂಜಲಿಗೆ ಮಾತ್ರ ಕರೆ ಮಾಡುತ್ತಿದ್ದ. ಪದ್ಮಣ್ಣ ಮತ್ತು ಇಂಜಿನಿಯರ್ ಅಂಜಲಿ ಎಲ್ಲ ಬಗೆಯಲ್ಲೂ ಒಂದಾಗಿದ್ದರು. ಆದರೆ ಚಿಕ್ಕ ಭಿನ್ನಾಭಿಪ್ರಾಯ ಕೊಲೆಯಲ್ಲಿ ಅಂತ್ಯವಾಯಿತು.[ಇನಿಯನಿಗಾಗಿ ಗಂಡ ಮಕ್ಕಳ ದಿಕ್ಕರಿಸಿದಳೆ]
ಪದ್ದಣ್ಣನ ಮೊಬೈಲ್ ಜಾಡು ಹಿಡಿದ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.












Click it and Unblock the Notifications