ಗುಡೇನಕಟ್ಟಿ; ಅಲ್ಲಾಪುರ ಕೆರೆ ಅಭಿವೃದ್ಧಿ ಹೆಸರಿನಲ್ಲಿ ಸರ್ಕಾರದ ಹಣ ದುಂದುವೆಚ್ಚ
ಹುಬ್ಬಳ್ಳಿ, ಸೆಪ್ಟೆಂಬರ್, 19; ರಾಜ್ಯ ಸರ್ಕಾರ ಸ್ವಾತಂತ್ರ್ಯ ಅಮೃತ ಮಹೋತ್ಸವ ಸಂಭ್ರಮದ ಅಂಗವಾಗಿ ಅಮೃತ ಸರೋವರ ಯೋಜನೆ ಮೂಲಕ ಕೆರೆಗಳ ಪುನಶ್ಚೇತನಕ್ಕೆ ಪ್ರತಿ ಕೆರೆಗೆ 39 ಲಕ್ಷ ರೂಪಾಯಿ ಬಿಡುಗಡೆ ಮಾಡಿದೆ. ಆದರೆ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಗುಡೇನಕಟ್ಟಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಅಲ್ಲಾಪುರ ಕೆರೆ ಅಭಿವೃದ್ಧಿಗೊಳಿಸದೇ, 26 ಲಕ್ಷ ರೂಪಾಯಿ ಸಾಮಗ್ರಿ ವೆಚ್ಚ ಹಾಕಲಾಗಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.
ಕೆರೆಗಳು ಅಭಿವೃದ್ಧಿಗೊಂಡರೆ ಅಂತರ್ಜಲ ಮಟ್ಟ ಹೆಚ್ಚಿ ರೈತರಿಗೆ-ಸಾರ್ವಜನಿಕರಿಗೆ ಅನುಕೂಲವಾಗುತ್ತದೆ. ಈ ದೃಷ್ಟಿಕೋನದಿಂದ ಮುಖ್ಯಮಂತ್ರಿಗಳ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಅಮೃತ ಸರೋವರ ಯೋಜನೆಯ ಅನುದಾನ ದುಂದುವೆಚ್ಚ ಆಗುತ್ತಿದೆ ಎನ್ನುವ ಆರೋಪ ಕೇಳಿಬರುತ್ತಿದೆ. ಆಗಸ್ಟ್ 15ರಂದು ಕಾಮಗಾರಿಗಳನ್ನು ಪೂರ್ಣಗೊಳಿಸಿ ಅಲ್ಲಿ ಧ್ವಜಾರೋಹಣ ಮಾಡಬೇಕು ಎಂಬುದು ಮುಖ್ಯಮಂತ್ರಿಗಳ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆಯ ಕನಸಾಗಿತ್ತು. ಅದರಂತೆ ಈಗಾಗಲೇ ಈ ಗ್ರಾಮದಲ್ಲಿ ಅರ್ಧ ಕೆಲಸ ಮಾಡಿದ್ದು, ಎನ್ಎಂಆರ್ನಲ್ಲಿ ಕೂಲಿ ಮೊತ್ತ 1,49,247 ರೂಪಾಯಿ ಖರ್ಚು ಆಗಿದೆ ಎಂದು ಹಾಕಲಾಗಿದೆ.
ಬೇಕಾಬಿಟ್ಟಿಯಾಗಿ ಸರ್ಕಾರದ ಹಣ ಪೋಲು
ಸಾಮಗ್ರಿಗಳ ಮೊತ್ತ 26 ಲಕ್ಷ ರೂಪಾಯಿಗಳನ್ನು ಹಾಕಿದ್ದಾರೆ. ಆದರೆ ನಿಯಮಗಳನ್ನು ಗಾಳಿಗೆ ತೂರಿ ಮನಬಂದಂತೆ ಹಣದ ಖರ್ಚು ಹಾಕಿರುವುದು ಬೆಳಕಿಗೆ ಬಂದಿದೆ. ಕುಂದಗೋಳ ತಾಲೂಕು ಪಂಚಾಯತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ. ಮಹೇಶ ಕುರಿಯವರು ಈಗಾಗಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಟಿಎಇ ಅವರಿಗೆ ಈ ವಿಷಯ ಕುರಿತು ಉತ್ತರ ನೀಡುವಂತೆ ಪತ್ರ ಬರೆಯಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಪಿಆರ್ಇಡಿ ಸಹಾಯಕ ಅಧಿಕಾರಿ ಎಸ್.ಆರ್. ವೀರಕರ ಅವರು ಮಾತನಾಡಿ, ಈ ವಿಷಯ ಕುರಿತು ಯಾವುದೇ ಮಾಹಿತಿ ನಮ್ಮ ಬಳಿ ಇಲ್ಲ ಎಂದು ಜಾರಿಕೊಳ್ಳುವ ಯತ್ನ ನಡೆಸಿದ್ದಾರೆ. ಗ್ರಾಮ ಪಂಚಾಯತಿ ಅಧ್ಯಕ್ಷ ಚಿದಾನಂದ ಕುಸುಗಲ್ ಅವರ ಗಮನಕ್ಕೆ ತರದೇ ಪಿಡಿಓ ಹಾಗೂ ಎನ್ಆರ್ಜಿ ತಾಂತ್ರಿಕ ಸಹಾಯಕ ಅಧಿಕಾರಿಗಳು ಈ ರೀತಿ ಖರ್ಚು ಹಾಕಿದ್ದಾರೆ ಎನ್ನುವ ಆರೋಪಗಳು ಕೇಳಿಬರುತ್ತಿವೆ. ಸರ್ಕಾರ ಅಂತರ್ಜಲ ಮಟ್ಟ ವೃದ್ಧಿಸಲು ಅಮೃತ ಯೋಜನೆಯಡಿ ಕೆರೆಗಳ ಅಭಿವೃದ್ಧಿಗೆ ಸಾವಿರಾರು ಕೋಟಿ ರೂಪಾಯಿ ಹಣ ಬಿಡುಗಡೆ ಮಾಡಿದೆ. ಇದು ಎಷ್ಟರ ಮಟ್ಟಿಗೆ ಸದುಪಯೋಗ ಆಗುತ್ತಿದೆ ಎಂಬುದು ಅಲ್ಲಿನ ಜನರ ಪ್ರಶ್ನೆ ಆಗಿದೆ.
ಇದರಲ್ಲಿನ ಸ್ಥಳೀಯ ಜನಪ್ರತಿನಿಧಿಗಳು, ಗ್ರಾಮ ಪಂಚಾಯತಿ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳ ಕೈವಾಡ ಇದೆಯೆಂಬ ಶಂಕೆಗಳು ವ್ಯಕ್ತವಾಗುತ್ತಿವೆ. ಆದ್ದರಿಂದ ಈಗಾಗಲೇ ಗ್ರಾಮ ಪಂಚಾಯತಿ ಸದಸ್ಯರಾದ ಚಿದಾನಂದ ಪೂಜಾರ ನೇತೃತ್ವದಲ್ಲಿ ಧಾರವಾಡ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಾದ ಡಾ.ಸುರೇಶ್ ಇಟ್ನಾಳ ಅವರಿಗೆ ದೂರು ನೀಡಿದ್ದಾರೆ.
ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡ ಗ್ರಾಮಸ್ಥರು
ಇನ್ನು ಯಾವುದೇ ರೀತಿಯ ಕಾಮಗಾರಿ ಅಂದಾಜು ಪತ್ರ ತಯಾರಿಲ್ಲ. ಯಾವುದೇ ಕಾಮಗಾರಿ ಪರವಾನಿಗೆ ಇಲ್ಲ. ಏಕಾಏಕಿ ಕಾಮಗಾರಿ ನಡೆಸಲು ಇಂಜಿನಿಯರ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ತಾಲೂಕು ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು ಏಕೆ ಮುಂದಾಗಿದ್ದಾರೆ? ಎಂದು ಗ್ರಾಮಸ್ಥರು ಅಧಿಕಾರಿಗಳನ್ನು ಪ್ರಶ್ನೆ ಮಾಡಿದ್ದಾರೆ.












Click it and Unblock the Notifications