ಧಾರವಾಡದಲ್ಲಿ ಮಚ್ಚಿನೇಟಿಗೆ ಮಾಳಾಪುರ ಮಂಜುನಾಥ ಬಲಿ
ಧಾರವಾಡ, ಆಗಸ್ಟ್, 10: ಧಾರವಾಡ ನಗರದ ಮಾಳಾಪುರ ಬಳಿ ಮಂಗಳವಾರ ರಾತ್ರಿ ವ್ಯಕ್ತಿಯೊಬ್ಬರನ್ನು ಮಾರಕಾಸ್ತ್ರಗಳಿಂದ ಹತ್ಯೆ ಮಾಡಲಾಗಿದೆ.
ಧಾರವಾಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ಎಸ್ ಡಿಎ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಮಾಳಾಪುರದ ಮಂಜುನಾಥ ಪಂಥರ (34) ಹತ್ಯೆಯಾದವರು. ಪಾನಶಾಪ್ ಬಳಿ ನಿಂತಿದ್ದಾಗ ಬೈಕ್ ನಲ್ಲಿ ಬಂದ ನಾಲ್ವರು ತಲೆಗೆ ಮಚ್ಚು ಬೀಸಿ ಹತ್ಯೆ ಮಾಡಿ, ಪರಾರಿಯಾಗಿದ್ದಾರೆ. [ಹುಬ್ಬಳ್ಳಿ ಪೊಲೀಸರ ಬಲೆಗೆ ಬಿದ್ದ ಕೊಲೆ ಆರೋಪಿಗಳು]

ಮಂಜುನಾಥನ ತಂದೆ ಸರ್ಕಾರಿ ಸೇವೆಯಲ್ಲಿರುವಾಗಲೇ ಮರಣ ಹೊಂದಿದ್ದರು. ಆದ್ದರಿಂದ ಮಂಜುನಾಥನಿಗೆ ಅನುಕಂಪದ ಆಧಾರದ ಮೇಲೆ ಮೂರು ವರ್ಷಗಳ ಹಿಂದೆ ಸರಕಾರಿ ನೌಕರಿ ಸಿಕ್ಕಿತ್ತು. ಜತೆಗೆ ಕೆಲಸ ಮಾಡುತ್ತಿದ್ದ ಕವಿತಾ ಬಳಗಾನೂರ ಎಂಬುವವರನ್ನು ಆತ ಪ್ರೀತಿಸಿ, ಮದುವೆಯಾಗಿದ್ದ.
ಮಂಜುನಾಥನ ಕೊಲೆಗೆ ಪ್ರೇಮವಿವಾಹ ಕಾರಣವೋ ಅಥವಾ ವೈಯಕ್ತಿಕ ದ್ವೇಷ ಕಾರಣವೋ ಎಂಬುದನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.[ಯೋಗೇಶಗೌಡ ಕೊಲೆ ಪ್ರಕರಣ : ಮತ್ತೊಬ್ಬ ಆರೋಪಿ ಬಂಧನ]
ವಿದ್ಯಾನಗರಿ ಎಂದೇ ಕರೆಯಿಸಿಕೊಳ್ಳುವ ಧಾರವಾಡದಲ್ಲಿ ಇತ್ತೀಚೆಗೆ ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೇಶಗೌಡ ಎಂಬಾತನ ಕೊಲೆ ನಡೆದಿತ್ತು. ಈಗ ಮತ್ತೊಂದು ಕೊಲೆ ಆಗಿರುವುದು ನಾಗರಿಕರಲ್ಲಿ ಆತಂಕ ಮೂಡಿಸಿದೆ. ಘಟನೆ ಕುರಿತು ಧಾರವಾಡ ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗಾಯಾಳು ಸಾವು : ಹುಬ್ಬಳ್ಳಿ ಸಮೀಪದ ವರೂರು ಬಳಿ ದುರ್ಗಾಂಬಾ ಬಸ್ ಗೆ ಇತ್ತೀಚೆಗೆ ಬೆಂಕಿ ಹೊತ್ತಿಕೊಂಡಾಗ ಗಾಯಗೊಂಡಿದ್ದ ನೇತ್ರಾ ಪ್ರಶಾಂತ ಶೆಟ್ಟಿ (29) ಚಿಕಿತ್ಸೆಗೆ ಸ್ಪಂದಿಸದೆ ಬೆಳಗಾವಿ ಕೆಎಲ್ಇ ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ.
ನವನಗರ ನಿವಾಸಿಯಾಗಿದ್ದ ನೇತ್ರಾ, ಧಾರವಾಡದ ಪ್ರಕಾಶ ಮರದ ಅವರ ಪುತ್ರಿ. ಇತ್ತೀಚೆಗೆ ಬಸ್ ದುರಂತದಲ್ಲಿ ಸುನೀಲ ಮಾನೆ ಮೃತಪಟ್ಟಿದ್ದರು. ಇದೀಗ ನೇತ್ರಾ ಸೇರಿ ಒಟ್ಟು ಐವರು ಬಸ್ ದುರಂತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ.












Click it and Unblock the Notifications