ವಿದ್ಯಾಕಾಶಿ ಧಾರವಾಡದಲ್ಲಿ ಸ್ಥಾಪನೆಯಾಗಲಿರುವ ಫಾರೆನ್ಸಿಕ್ ಕ್ಯಾಂಪಸ್ನ ವಿಶೇಷತೆ ಏನು?
ಧಾರವಾಡ, ಜನವರಿ, 23: ವಿದ್ಯಾಕಾಶಿ, ಸಾಹಿತಿಗಳ ನಾಡು ಹೀಗೆ ಹಲವು ಹೆಸರುಗಳಿಂದ ಗುರುತಿಸಲ್ಪಡುವ ಧಾರವಾಡದಲ್ಲಿ ಕರ್ನಾಟಕ ವಿಶ್ವವಿದ್ಯಾಲಯ, ಕಾನೂನು ವಿಶ್ವವಿದ್ಯಾಲಯ, ಕೃಷಿ ವಿಶ್ವವಿದ್ಯಾಲಯಗಳಿವೆ. ಜೊತೆಗೆ ಐಐಟಿ ಹಾಗೂ ಐಐಐಟಿ ಕೂಡ ಬಂದಿವೆ. ಈಗ ಮತ್ತೊಂದು ವಿಶ್ವವಿದ್ಯಾಲಯ ಧಾರವಾಡಕ್ಕೆ ಬರಲು ಭರ್ಜರಿ ಸಿದ್ಧತೆ ನಡೆದಿದ್ದು, ಆದಷ್ಟು ಬೇಗ ಇದಕ್ಕೆ ಭೂಮಿ ಪೂಜೆ ಕೂಡ ನೆರವೇರಲಿದೆ. ಫಾರೆನ್ಸಿಕ್ ಯುನಿವರ್ಸಿಟಿ ಕ್ಯಾಂಪಸ್ ಇದೀಗ ಧಾರವಾಡದಲ್ಲಿ ಆರಂಭವಾಗಲಿದೆ. ಗುಜರಾತ್ನಲ್ಲಿ ಫಾರೆನ್ಸಿಕ್ ಯುನಿವರ್ಸಿಟಿ ಇದೆ. ಇದರ ಕ್ಯಾಂಪಸ್ ಇದೇ ಮೊದಲು ಬಾರಿಗೆ ದಕ್ಷಿಣ ಭಾರತದಲ್ಲಿ ಆರಂಭ ಆಗುತ್ತಿದೆ.
ಫಾರೆನ್ಸಿಕ್ ಯುನಿವರ್ಸಿಟಿ ಧಾರವಾಡದಲ್ಲಿ ನಿರ್ಮಾಣ ಆಗುತ್ತಿರುವುದೇ ಮತ್ತೊಂದು ವಿಶೇಷವಾಗಿದೆ. ಇನ್ನು ಫಾರೆನ್ಸಿಕ್ ಕ್ಯಾಂಪಸ್ಗಾಗಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಕರ್ನಾಟಕ ವಿಶ್ವವಿದ್ಯಾಲಯ ಕ್ಯಾಂಪಸ್ನಲ್ಲಿ 800 ಹೆಕ್ಟೇರ್ ವಿಸ್ತಾರವಾದ ಪ್ರದೇಶವಿದೆ. ಹೀಗಾಗಿ ಫಾರೆನ್ಸಿಕ್ ಕ್ಯಾಂಪಸ್ ಇಲ್ಲಿ ಮಾಡಬೇಕೋ ಅಥವಾ ಕೃಷಿ ವಿವಿಯಲ್ಲಿ ಮಾಡಬೇಕೋ ಎಂಬುದರ ಬಗ್ಗೆ ಚರ್ಚೆ ನಡೆದಿವೆ.
ಜನವರಿ 28ಕ್ಕೆ ಅಮಿತ್ ಶಾ ಆಗಮನ
ಅಲ್ಲದೇ ಇದೇ ಜನವರಿ 28ಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಧಾರವಾಡಕ್ಕೆ ಆಗಮಿಸಲಿದ್ದು, ಅವರು ನೂತನವಾಗಿ ಆರಂಭವಾಗುತ್ತಿರುವ ಫಾರೆನ್ಸಿಕ್ ವಿಶ್ವವಿದ್ಯಾಲಯ ಕ್ಯಾಂಪಸ್ ಕಟ್ಟಡದ ಶಂಕುಸ್ಥಾಪನೆ ಮಾಡಿಸಲು ಅಧಿಕಾರಿಗಳು ಮುಂದಾಗಿದ್ದಾರೆ. ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಪ್ರಯತ್ನದಿಂದ ಫಾರೆನ್ಸಿಕ್ ಕ್ಯಾಂಪಸ್ ಧಾರವಾಡಕ್ಕೆ ಬಂದಿದೆ. ಸದ್ಯ ಇಡೀ ದೇಶದಲ್ಲಿ ಕೇವಲ 7 ವಿವಿಗಳಿದ್ದು, ಅದರ ಸಾಲಿಗೆ ಧಾರವಾಡ ಕೂಡ ಸೇರ್ಪಡೆ ಆಗಲಿದೆ.

ರಾಜ್ಯಕ್ಕೆ ದೊಡ್ಡ ಲಾಭ ಆಗಲಿದೆ
ಇನ್ನು ಈ ಫಾರೆನ್ಸಿಕ್ ವಿಶ್ವವಿದ್ಯಾಲಯ ಇಲ್ಲಿ ನಿರ್ಮಾಣ ಆಗುವುದರಿಂದ ನಮ್ಮ ರಾಜ್ಯಕ್ಕೆ ದೊಡ್ಡ ಲಾಭ ಆಗಲಿದೆ. ಅಪರಾಧ ಜಗತ್ತಿನ ಬಗ್ಗೆ ಮಾಹಿತಿ ಕಲೆ ಹಾಕಲು ಇದು ಸಹಾಯ ಆಗಲಿದೆ. ಪುಣೆ, ತ್ರಿಪುರಾ, ಸೇರಿ ಹಲವು ಕಡೆ ಈ ಕ್ಯಾಂಪಸ್ಗಳಿದ್ದು, ಫಾರೆನ್ಸಿಕ್ ವಿವಿ ಧಾರವಾಡಕ್ಕೆ ಬಂದರೆ ಕ್ರೈಂ ಬೇಗ ಪತ್ತೆ ಹಚ್ಚಲು ಸಹಾಯ ಆಗುತ್ತದೆ. ನಮ್ಮ ರಾಜ್ಯದ ಯುವಕರಿಗೆ ಅಪರಾಧ ಪ್ರಕರಣಗಳನ್ನು ಹೇಗೆ ಬೆನ್ನತ್ತಬೇಕು ಎನ್ನುವ ಬಗ್ಗೆ ಅಧ್ಯಯನ ಮಾಡಲು ಸಹಾಯ ಆಗುತ್ತದೆ. ಪೊಲೀಸ್ ಇಲಾಖೆ, ಕಾನೂನು ತಜ್ಞರಿಗೆ ಕ್ಯಾಂಪಸ್ ಹೆಚ್ಚು ಸಹಕಾರಿ ಆಗಲಿದ್ದು, ನಮ್ಮ ರಾಜ್ಯದ ಮನೋವಿಜ್ಞಾನ ಶಾಸ್ತ್ರ, ಅಪರಾಧ ಶಾಸ್ತ್ರ, ಬಯೋ ಟೆಕ್ನಾಲಜಿ, ಸೈಕಾಲಜಿ ಹಾಗೂ ಭೌತಶಾಸ್ತ್ರ ವಿಭಾಗದ ವಿದ್ಯಾರ್ಥಿಗಳಿಗೂ ಇದು ಅನುಕೂಲವಾಗಲಿದೆ.

ಒಟ್ಟಿನಲ್ಲಿ ಕ್ಯಾಂಪಸ್ ನಿರ್ಮಾಣವಾಗುವುದರಿಂದ ಧಾರವಾಡದ ಹೆಸರು ಮತ್ತಷ್ಟು ಉತ್ತುಂಗಕ್ಕೆ ಏರಲಿದೆ. ಅಲ್ಲದೇ ನಮ್ಮ ರಾಜ್ಯದ ಸಾವಿರಾರು ವಿದ್ಯಾರ್ಥಿಗಳಿಗೂ ಅಪರಾಧ ಜಗತ್ತಿನ ಅಧ್ಯಯನಕ್ಕೂ ಒಂದು ಒಳ್ಳೆಯ ವೇದಿಕೆ ಸಿಕ್ಕಂತಾಗುತ್ತದೆ. ಸದ್ಯ ಎರಡು ಕಡೆ ಕ್ಯಾಂಪಸ್ಗಾಗಿ ಜಾಗದ ಹುಡುಕಾಟ ನಡೆದಿದ್ದು, ಎಲ್ಲಿ ಇದು ಫೈನಲ್ ಆಗುತ್ತದೆ ಅನ್ನುವುದನ್ನು ಕಾದು ನೋಡಬೇಕಿದೆ ಎಂದು ಕುಲಪತಿ ಪ್ರೊ.ಪ್ರಮೋದ ಗಾಯಿ ಹೇಳಿದರು.












Click it and Unblock the Notifications