ಧಾರವಾಡ; ಜನದಟ್ಟಣೆ ಪ್ರದೇಶದಲ್ಲಿ ಮಾಸ್ಕ್ ಹಂಚಿದ ಡಿಸಿ
ಧಾರವಾಡ, ಏಪ್ರಿಲ್ 19; ಧಾರವಾಡ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಜನರು ಸುರಕ್ಷಿತವಾಗಿರಲು, ಆರೋಗ್ಯ ರಕ್ಷಣಾ ಕ್ರಮಗಳನ್ನು ಅನುಸರಿಸುವುವಂತೆ ಜಾಗೃತಿ ಮೂಡಿಸಲು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಹಾಗೂ ನಗರ ಪೊಲೀಸ್ ಆಯುಕ್ತ ಲಾಬೂರಾಮ್ ಜನದಟ್ಟಣೆ ಪ್ರದೇಶಗಳಲ್ಲಿ ಸಂಚರಿಸದರು, ಮಾಸ್ಕ್ ಧರಿಸದವರಿಗೆ ಎಚ್ಚರಿಕೆ ನೀಡಿ ಉಚಿತವಾಗಿ ಮಾಸ್ಕ್ ನೀಡಿದರು.
ಸೋಮವಾರ ಧಾರವಾಡ ನಗರದ ವಿವೇಕಾನಂದ ವೃತ್ತದಿಂದ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಹಾಗೂ ಪೊಲೀಸ್ ಆಯುಕ್ತ ಲಾಬೂರಾಮ್ ಕಾಲ್ನಡಿಗೆಯಲ್ಲಿ ಸ್ಟೇಶನರಿ ಶಾಪ್, ಕಿರಾಣಿ ಅಂಗಡಿ, ಹೋಟೆಲ್, ಬಟ್ಟೆ ಅಂಗಡಿ ಸಲೂನ್ ಶಾಪ್, ಜ್ಯುವೆಲರಿ ಶಾಪ್, ಮಾಂಸದ ಅಂಗಡಿ ಸೇರಿದಂತೆ ವಿವಿಧ ಅಂಗಡಿಗಳಿಗೆ ಭೇಟಿ ನೀಡಿದರು.
ಅಂಗಡಿಗಳಲ್ಲಿ ಸ್ಯಾನಿಟೈಜರ್ ಇಡಲು ಮತ್ತು ಸಾಮಾಜಿಕ ಅಂತರದೊಂದಿಗೆ ವ್ಯಾಪಾರ ಮಾಡುವಂತೆ ತಿಳಿಸಿದರು. ಅಂಗಡಿಗೆ ಬರುವ ಪ್ರತಿಯೊಬ್ಬ ಗ್ರಾಹಕರು ಮಾಸ್ಕ್ ಧರಿಸಿರುವಂತೆ ಎಚ್ಚರಿಕೆ ವಹಿಸುವುದು ಅಂಗಡಿ ಮಾಲೀಕರ ಜವಾಬ್ದಾರಿ, ನಿಯಮ ಉಲ್ಲಂಘಿಸಿದಲ್ಲಿ ಅಂಗಡಿ ಸೀಜ್ ಮಾಡಲಾಗುವುದು ಎಂದು ಎಚ್ಚರಿಸಿದರು.

ಬೀದಿ ಬದಿ ವ್ಯಾಪಾರಿಗಳಿಗೆ ಉಚಿತವಾಗಿ ಮಾಸ್ಕ್ ವಿತರಿಸಿದ ಜಿಲ್ಲಾಧಿಕಾರಿಗಳು ಮಾತನಾಡಿ, "ಗ್ರಾಮೀಣ ಭಾಗದಿಂದ ವಿವಿಧ ಕಾರಣಗಳಿಂದಾಗಿ ಜನರು ನಗರದ ಮಾರುಕಟ್ಟೆ ಪ್ರದೇಶಕ್ಕೆ ಬರುತ್ತಾರೆ. ಅವರಿಗೂ ಮಾಸ್ಕ್ ಧಾರಣೆ ಮಹತ್ವ ತಿಳಿಸಿ, ಜಾಗೃತಿ ಮೂಡಿಸಲು ಬಂದಿದ್ದೇನೆ" ಎಂದರು.
ಪೊಲೀಸ್ ಆಯುಕ್ತ ಲಾಬೂರಾಮ್ ಮಾತನಾಡಿ, "ಇಂದಿನ ಮಾಸ್ಕ್ ಅಭಿಯಾನದಲ್ಲಿ ಶೇ.90 ರಷ್ಟು ಜನ ಮಾಸ್ಕ್ ಧರಿಸಿರುವುದು ಕಾಣುತ್ತಿದೆ. ಸಾಮಾಜಿಕ ಅಂತರ, ಸ್ಯಾನಿಟೈಜರ್ ಬಗ್ಗೆ ಇನ್ನಷ್ಟು ಅರಿವು ಮೂಡಿಸುವ ಅಗತ್ಯವಿದೆ" ಎಂದು ಹೇಳಿದರು.
ಕೋವಿಡ್ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಸ್ಥಳದಲ್ಲಿಯೇ ಕ್ರಮ ಕೈಗೊಳ್ಳುವಂತೆ ಪೊಲೀಸ್ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.
ಭಾನುವಾರದ ವರದಿ ಅನ್ವಯ ಧಾರವಾಡದಲ್ಲಿ 265 ಹೊಸ ಕೋವಿಡ್ ಪ್ರಕರಣ ದಾಖಲಾಗಿದೆ. ಜಿಲ್ಲೆಯಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 25,085. ಸಕ್ರಿಯ ಪ್ರಕರಣಗಳು 1,347.












Click it and Unblock the Notifications