ದೀಪಾವಳಿ ವಿಶೇಷ ಅಭಿಯಾನ: ಸಣ್ಣ ವ್ಯಾಪಾರಿಗಳಿಗಾಗಿ ವೋಕಲ್ ಫಾರ್ ಲೋಕಲ್
ಹುಬ್ಬಳ್ಳಿ, ಅಕ್ಟೋಬರ್ 18 : ಅಜ್ಞಾನವನ್ನು ಹೋಗಲಾಡಿಸಿ ಜ್ಞಾನದ ಜ್ಯೋತಿ ಬೆಳಗುವ, ಕತ್ತಲೆಯಿಂದ ಬೆಳಕಿನೆಡೆಗೆ ನಡೆಸುವ ಶಕ್ತಿ ಹೊಂದಿರುವ ದೀಪಾವಳಿ. ಹೆಸರೇ ಹೇಳುವಂತೆ ದೀಪಗಳ ಹಬ್ಬ. ಮನೆಯ ಮುಂದೆ ಮತ್ತು ದೇವರಗುಡಿನಲ್ಲಿ ಹಚ್ಚುವ ದೀಪಕ್ಕೆ ಬಹಳಷ್ಟು ಅರ್ಥವನ್ನು ನಮ್ಮ ಹಿರಿಯರು ಕಂಡುಕೊಂಡಿದ್ದಾರೆ. ದೀಪಾವಳಿಯಂದು ಹಚ್ಚುವ ದೀಪವು ಮನೆ-ಮನವನ್ನು ಬೆಳಗುವುದಲ್ಲದೆ, ಮನದ ಅಂಧಕಾರವನ್ನು ಸಹ ಹೊಡೆದೋಡಿಸುತ್ತದೆ.
ಹಬ್ಬ-ಹರಿದಿನಗಳಲ್ಲಿ ಕ್ಯಾಂಡಲ್ ಬದಲಿಗೆ ಮಣ್ಣಿನಿಂದ ಮಾಡಿದ ಹಣತೆಗಳಿಗೆ ಬಹಳ ಪ್ರಾಮುಖ್ಯತೆ ಇದೆ. ಸಾಂಪ್ರದಾಯಿಕ ಹಣತೆಗಳು ಅಂಗೈಯಾಕಾರದಷ್ಟರ ಗಾತ್ರದಲ್ಲಿ ಲಭ್ಯ. ಹಣತೆಗಳಿಗೆ ಎಣ್ಣೆ ಅಥವಾ ತುಪ್ಪವನ್ನು ತುಂಬಿ ಹತ್ತಿ ಬತ್ತಿಯನ್ನಿಟ್ಟು ದೇವರ ಉಪಸ್ಥಿತಿಯನ್ನು ಕಾಣುತ್ತೇವೆ.
ಅದೇ ಕಲ್ಪನೆಯಲ್ಲಿ ಮನೆಯ ಸುತ್ತಲೂ, ಮೂಲೆ ಮೂಲೆಗಳಲ್ಲಿ ಹಣತೆಗಳನ್ನು ಹಚ್ಚಿ ಬೆಳಗಿಸಲಾಗುತ್ತದೆ. ದೀಪಾವಳಿಯ ಆ ಸಂಜೆ ದೀಪಗಳನ್ನು ಹಚ್ಚಿ ಶಿವ ಸಮೇತನಾಗಿ ಪಾರ್ವತಿಯನ್ನು ಮನೆಗೆ ಆಹ್ವಾನಿಸಿಕೊಳ್ಳುತ್ತೇವೆ ಎಂಬ ನಂಬಿಕೆ ಜನರದ್ದು. ಹಣತೆಗಳಿಂದ ಮೂಡುವ ಬೆಳಕಿನ ಚಿತ್ತಾರ ಮತ್ತು ಅದರಿಂದ ಹೊರಸೂಸುವ ಬೆಳಕನ್ನು ನೋಡುವುದೇ ಚೆಂದ.

ದೀಪಾವಳಿಗೆ ವಾಣಿಜ್ಯ ನಗರಿ ಜನರ ಭರ್ಜರಿ ಪ್ಲಾನ್
ಆಧುನಿಕತೆಯ ಭರದಲ್ಲಿ ಈಗ ಮಣ್ಣಿನ ಹಣತೆಯ ಬದಲಾಗಿ ವಿದ್ಯುತ್ ಹಣತೆಗಳು ಎಲ್ಲೆಲ್ಲಿಯೂ ರಾರಾಜಿಸುತ್ತಿವೆ. ಇದರಿಂದ ಮಣ್ಣಿನಿಂದ ತಾಯಾರು ಮಾಡಿರುವ ಹಣತೆಗಳು ತಮ್ಮ ಕಳೆಯನ್ನು ಕಳೆದುಕೊಳ್ಳುತ್ತಿವೆ. ಅಲ್ಲದೇ ಇದನ್ನೇ ನಂಬಿ ಬದುಕುವ ಜನರ ಸ್ಥಿತಿ ಕೂಡ ಬೀದಿಗೆ ಬಿದ್ದಿದೆ. ಇದನ್ನು ಅರಿತ ಹುಬ್ಬಳ್ಳಿಯ ಜನ ಬೆಳಕಿನ ಹಬ್ಬ ದೀಪಾವಳಿಗೆ ವಿಶೇಷವಾಗಿ ಸಜ್ಜಾಗುತ್ತಿದ್ದಾರೆ. ಕೊರೊನಾ ಕಾರಣದಿಂದ ಕಳೆದ ಎರಡು-ಮೂರು ವರ್ಷಗಳಿಂದ ದೀಪಾವಳಿ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಈ ಬಾರಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲು ವಾಣಿಜ್ಯ ನಗರಿಯ ಜನರು ಭರ್ಜರಿ ಪ್ಲಾನ್ ಮಾಡಿಕೊಂಡಿದ್ದಾರೆ.

'let’s go local for vocal' ಅಭಿಯಾನ
ದೀಪಾವಳಿಯ ಮೂರು ದಿನದ ಸಂಭ್ರಮಾಚರಣೆಗೆ ಜನ ನಗರದ ಮಾರುಕಟ್ಟೆಗಳಲ್ಲಿ ಭರ್ಜರಿ ಖರೀದಿ ಮಾಡುತ್ತಿದ್ದು, ಇದೇ ವೇಳೆಯಲ್ಲಿ ನಗರದಲ್ಲಿ ' let's go Vocal For Local' ಅಭಿಯಾನ ಜೋರಾಗಿದೆ. ಕಾಂಗ್ರೆಸ್ ಮುಖಂಡ ರಜತ್ ಉಳ್ಳಾಗಡ್ಡಿಮಠ ನೇತೃತ್ವದಲ್ಲಿ ರಜತ್ ಉಳ್ಳಾಗಡ್ಡಿಮಠ ಫೌಂಡೇಶನ್ ಮೂಲಕ ' let's go Vocal For Local' ಅಭಿಯಾನ ಆರಂಭವಾಗಿದ್ದು, ಮೊದಲೇ ಬೆಲೆ ಏರಿಕೆ, ನೋಟ್ ಬ್ಯಾನ್, ಜಿಎಸ್ಟಿ , ಕೊರೊನಾ, ಲಾಕ್ಡೌನ್ ಹೊಡೆತಗಳಿಂದ ಮಧ್ಯಮ ಮತ್ತು ಸಣ್ಣ ಉದ್ಯಮಗಳು ದೊಡ್ಡ ಸಂಕಷ್ಟವನ್ನು ಅನುಭವಿಸುತ್ತಿವೆ. ಈ ಕಾರಣದಿಂದ ಈ ದೀಪಾವಳಿಯಲ್ಲಿ ಸ್ಥಳೀಯ ಮಾರಾಟಗಾರರಿಂದ ಹಬ್ಬದ ವಸ್ತುಗಳ ಖರೀದಿಸಿ ಸ್ಥಳೀಯ ಮಾರಾಟಗಾರರ ಜೀವನದಲ್ಲಿ ಖುಷಿಯ ದೀಪ ಬೆಳಗಿಸೋಣ ಎನ್ನುವುದು ಈ ಅಭಿಯಾನದ ಉದ್ದೇಶವಾಗಿದೆ.

ಸಣ್ಣ ವ್ಯಾಪಾರಿಗಳಿಗಾಗಿ ವೋಕಲ್ ಫಾರ್ ಲೋಕಲ್
ದೊಡ್ಡ ದೊಡ್ಡ ಅಂಗಡಿಗಳಿಗೆ ಹೋಗಿ ಖರೀದಿ ಮಾಡುವ ಬದಲು ನಿಮ್ಮ ಮನೆಯ ಹತ್ತಿರ ಇವರ ಅಂಗಡಿಗೆ ಹೋಗಿ ಹೊಸ ಬಟ್ಟೆ, ದೀಪ, ಆಕಾಶ್ ಬುಟ್ಟಿ, ಹಣ್ಣುಗಳು, ಹೂಗಳು, ತರಕಾರಿಗಳು ಖರೀದಿಸಿ. ಆನ್ಲೈನ್ ಅಥವಾ ಸೂಪರ್ ರ್ಮಾರ್ಕೆಟ್ ಬದಲಿಗೆ ಸ್ಥಳೀಯ ದಿನಸಿ ಅಂಗಡಿಗಳಲ್ಲಿ ದಿನಸಿ ವಸ್ತುಗಳನ್ನು ಖರೀದಿಸಿ. ಅದರಲ್ಲೂ ದೀಪಾವಳಿ ಹಬ್ಬಕ್ಕೆ ಮೆರಗು ನೀಡುವ ಹಣತೆ ಸೇರಿದಂತೆ ಇನ್ನಿತರ ವಸ್ತುಗಳನ್ನು ಸ್ಥಳೀಯವಾಗಿಯೇ ಖರೀದಿಸಿ. ಈ ವೇಳೆ ಸಣ್ಣ ವ್ಯಾಪಾರಿಗಳಿಗೆ ನಿಮ್ಮ ಸಹಾಯದ ಅಗತ್ಯವಿದೆ ಎಂದು ವೋಕಲ್ ಫಾರ್ ಲೋಕಲ್ ಅಭಿಯಾನದ ರಜತ್ ಉಳ್ಳಾಗಡ್ಡಿಮಠ ಫೌಂಡೇಶನ್ ತಂಡ ಮನವಿ ಮಾಡಿಕೊಂಡಿದ್ದಾರೆ.

ಕಾಂಗ್ರೆಸ್ ಮುಖಂಡ ರಜತ್ ಉಳ್ಳಾಗಡ್ಡಿಮಠ ಮನವಿ
ಈ ಬಗ್ಗೆ ಮಾತನಾಡಿರುವ ರಜತ್ ಉಳ್ಳಾಗಡ್ಡಿಮಠ, " ಮಲ್ಟಿ ನ್ಯಾಷನಲ್ ಕಂಪನಿಗಳು, ಮಾಲ್ಗಳು ಲಾಕ್ಡೌನ್ ಸೇರಿದಂತೆ ಯಾವುದೇ ಆರ್ಥಿಕ ಹೊಡೆತ ಇದ್ದರೂ ಬದುಕುತ್ತವೆ. ಆದರೆ ಸಣ್ಣ ವ್ಯಾಪಾರಿಗಳು ಸಂಕಷ್ಟಕ್ಕೆ ಒಳಗಾಗಿ ತುತ್ತಿನ ಚೀಲಕ್ಕೂ ಪರದಾಡುತ್ತಿದ್ದಾರೆ. ಹೀಗಾಗಿ ಅಕ್ಕಪಕ್ಕದ ಕಿರಾಣಿ ಅಂಗಡಿಗಳಿಗೆ ಹೋಗಿ ವ್ಯಾಪಾರ ಮಾಡಿ. ಇದರಿಂದ ಅವರ ಬದುಕಿಗೆ ಸಹಾಯ ಆಗುತ್ತದೆ. ಇದರಿಂದ ಭಾರತೀಯ ಸಂಸ್ಕೃತಿ ಸಂಪ್ರದಾಯ ಉಳಿಯುದಲ್ಲದೆ ಜೊತೆಗೆ ಮೊದಲೇ ಕಂಗೆಟ್ಟಿರುವ ಬಡ ಮಣ್ಣಿನ ಹಣತೆಗಳನ್ನೇ ನಂಬಿ ಬದುಕುತ್ತಿರುವ ಕುಟುಂಬದಲ್ಲಿ ದೀಪಾವಳಿ ಬೆಳಕು ತರಲಿದೆ," ಎಂದು ತಿಳಿಸಿದ್ದಾರೆ.












Click it and Unblock the Notifications