ಧಾರವಾಡ: ಕೊರೊನಾ ಪ್ರಕರಣ ದೃಢ, ಸ್ವಚ್ಛತಾ ಕಾರ್ಯ
ಧಾರವಾಡ, ಮಾರ್ಚ್ 22 : ಧಾರವಾಡ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬರಿಗೆ ಕೊರೊನಾ ಸೋಂಕು ತಗುಲಿರುವುದು ಖಚಿತವಾಗಿದೆ. ಹುಬ್ಬಳ್ಳಿ-ಧಾರವಾಡ ಅವಳಿ ನಗರದ ನೈರ್ಮಲ್ಯ ಕಾರ್ಯವನ್ನು ಮಹಾನಗರ ಪಾಲಿಕೆ ಕೈಗೆತ್ತಿಕೊಂಡಿದೆ.
ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ನಗರ ನೈರ್ಮಲ್ಯ ಕಾರ್ಯವನ್ನು ಧಾರವಾಡದ ಹೊಸ ಯಲ್ಲಾಪುರ ಸೇರಿದಂತೆ ಅವಳಿನಗರದ ವಿವಿಧ ಸ್ಥಳಗಳಲ್ಲಿ ನಡೆಸಿತು. ಸೋಡಿಯಂ ಹೈಪೋ ಕ್ಲೋರೈಡ್ ಯುಕ್ತ ರಸಾಯನಿಕ ಮಿಶ್ರಿತ ನೀರಿನಿಂದ ಶುಚಿಗೊಳಿಸಲಾಯಿತು.
ಧಾರವಾಡದ ಹೊಸಯಲ್ಲಾಪುರ, ಕೋಳಿಕೆರೆ, ಜಿಲ್ಲಾ ಆಸ್ಪತ್ರೆ, ಬಸ್ ನಿಲ್ದಾಣ, ಹುಬ್ಬಳ್ಳಿಯ ಕಿಮ್ಸ್, ಚಿಟಗುಪ್ಪಿ ಆಸ್ಪತ್ರೆ, ಗಣೇಶಪೇಟೆ, ಮೀನು ಮಾರುಕಟ್ಟೆ, ಕಾಯಿಪಲ್ಯ ಮಾರುಕಟ್ಟೆ, ಸಿಬಿಟಿ, ಬಸ್ ನಿಲ್ದಾಣಗಳು ಮೊದಲಾದ ಜನನಿಬಿಡ ಸ್ಥಳಗಳನ್ನು ಶುಚಿಗೊಳಿಸುವ ಕಾರ್ಯ ನಡೆಯಿತು.

ಧಾರವಾಡ ನಗರದ ನುಗ್ಗಿಕೇರಿ, ಕೆಲಗೇರಿ ಹಾಗೂ ಕೃಷಿ ವಿವಿ ಬಳಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪೊಲೀಸ್ ಇಲಾಖೆಯ ಸಿಬ್ಬಂದಿ ಸರದಿ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಮಹಾನಗರಪಾಲಿಕೆ ಆಯುಕ್ತ ಡಾ.ಸುರೇಶ್ ಇಟ್ನಾಳ, ಜಂಟಿ ಆಯುಕ್ತ ಅಜೀಜ್ ದೇಸಾಯಿ, ಪರಿಸರ ಅಭಿಯಂತರ ವಿಜಯಕುಮಾರ್ ಮತ್ತಿತರ ಅಧಿಕಾರಿಗಳು, ಸಿಬ್ಬಂದಿ ಬೆಳಿಗ್ಗೆಯಿಂದಲೂ ನಿರಂತರವಾಗಿ ಭೇಟಿ ನೀಡಿ ಆಗಮಿಸುವ ವಾಹನಗಳಿಗೆ ಸೋಡಿಯಂ ಹೈಪೋ ಕ್ಲೋರೈಡ್ ಸಿಂಪಡಣೆ ಮಾಡುತ್ತಿದ್ದಾರೆ.
ಆಸ್ಟ್ರೇಲಿಯಾ, ದುಬೈ, ಮಸ್ಕತ್ ಹಾಗೂ ಗೋವಾ ಮೂಲಕ ಧಾರವಾಡ ನಗರಕ್ಕೆ ಆಗಮಿಸಿದ್ದ ಓರ್ವ ವ್ಯಕ್ತಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ವಿದೇಶ ಪ್ರವಾಸದಿಂದ ಆಗಮಿಸಿದ್ದ ವ್ಯಕ್ತಿ 12-03-2020 ರಂದು ಧಾರವಾಡ ನಗರಕ್ಕೆ ಆಗಮಿಸಿದ್ದರು.

ಕೊರೊನಾ ಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ18-03-2020 ರಂದು ಅವರು ಖಾಸಗಿ ಆಸ್ಪತ್ರೆಯೊಂದಕ್ಕೆ ಚಿಕಿತ್ಸೆಗಾಗಿ ದಾಖಲಾಗಿದ್ದರು. ಗಂಟಲು ಮತ್ತು ಮೂಗಿನ ದ್ರವದ ಮಾದರಿಯನ್ನು ತಪಾಸಣೆಗಾಗಿ ಶಿವಮೊಗ್ಗಕ್ಕೆ ಕಳಿಸಲಾಗಿತ್ತು. ವರದಿ ಪಾಸಿಟಿವ್ ಎಂದು ಬಂದಿದೆ.
ವ್ಯಕ್ತಿಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಈಗಾಗಲೇ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಕರಣ ಕಂಡು ಬಂದ ಸ್ಥಳದ ಸುತ್ತಮುತ್ತ ನಿಯಮಾನುಸಾರ ಸರ್ವೇ ಕಾರ್ಯ ಕೈಗೊಳ್ಳಲಾಗಿದೆ.












Click it and Unblock the Notifications