ಧಾರವಾಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆ
ಧಾರವಾಡ, ಡಿಸೆಂಬರ್ 25 : 'ಸುಮಾರು 61 ವರ್ಷಗಳ ನಂತರ ಧಾರವಾಡದಲ್ಲಿ ನಡೆಯುತ್ತಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಚ್ಚುಕಟ್ಟಾಗಿ ಸಿದ್ಧಗೊಳ್ಳುತ್ತಿದ್ದು, ಇದೊಂದು ಪವಿತ್ರವಾದ ಸಾಹಿತ್ಯ ಯಾತ್ರೆಯಾಗಿದೆ' ಎಂದು ನಾಡೋಜ ಡಾ. ಚಣ್ಣವೀರ ಕಣವಿ ಹೇಳಿದರು.
ಧಾರವಾಡದ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಭವನದಲ್ಲಿ ಅವರು ಅಖಿಲ ಭಾರತ 84ನೇ ಕನ್ನಡ ಸಾಹಿತ್ಯ ಸಮ್ಮೇಳನದ ಆಹ್ವಾನ ಪತ್ರಿಕೆಯನ್ನು ಬಿಡುಗಡೆ ಮಾಡಿದರು. ಧಾರವಾಡದ ಆರ್.ಎಲ್.ಎಸ್. ಮೈದಾನದಲ್ಲಿ 1952ರ ಮೇ 7, 8 ಮತ್ತು 9 ರಂದು ಅಖಿಲ ಭಾರತ 32 ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಿತ್ತು.
ಧಾರವಾಡ ಸಾಹಿತ್ಯ ಸಮ್ಮೇಳನಕ್ಕೆ 8 ಕೋಟಿ ಅನುದಾನ
'ಎಲ್ಲರೂ ಸೇರಿ ಸಾಹಿತ್ಯ ಹಬ್ಬವನ್ನು ಪ್ರೀತಿಯಿಂದ ಆಚರಿಸೋಣ. ಉತ್ತಮವಾದ ವಿಚಾರಗೋಷ್ಠಿ, ಕವಿಗೋಷ್ಠಿ ಆಯೋಜಿಸಲಾಗಿದೆ. ಸಮ್ಮೇಳನಾಧ್ಯಕ್ಷ ಸರ್ವಾಧ್ಯಕ್ಷರಾಗಿರುವ ನಾಡೋಜ ಚಂದ್ರಶೇಖರ ಕಂಬಾರ ಅವರು ನಮ್ಮೊಳಗಿನ ಪ್ರತಿಭೆ' ಎಂದು ಕರೆ ನೀಡಿದರು.
ಹಿರಿಯ ಸಾಹಿತಿ ಡಾ.ಸಿದ್ದಲಿಂಗ ಪಟ್ಟಣಶಟ್ಟಿ ಅವರು ಮಾತನಾಡಿ, 'ಸಾಹಿತ್ಯ ಸಮ್ಮೇಳನಕ್ಕೆ ಜಿಲ್ಲಾಡಳಿತ ಮತ್ತು ಕನ್ನಡ ಸಾಹಿತ್ಯ ಪರಿಷತ್ ಉತ್ತಮ ರೀತಿಯ ಸಿದ್ಧತೆ ಮಾಡಿಕೊಂಡಿವೆ. ನಗರದ ಸ್ವಚ್ಚತೆಗೆ ಆದ್ಯತೆ ನೀಡಲಾಗಿದೆ' ಎಂದು ಹೇಳಿದರು.
ಚಿತ್ರಗಳು : ಧಾರವಾಡದಲ್ಲಿ ಸಾಹಿತ್ಯ ಜಾತ್ರೆಯ ತಯಾರಿ
ಸಮ್ಮೇಳನದ ಸಂಘಟನೆಯಲ್ಲಿ ಕುಂದುಕೊರತೆಗಳಿರಬಹುದು. ಅವುಗಳನ್ನು ದೊಡ್ಡದು ಮಾಡದೆ ಎಲ್ಲರೂ ಸೇರಿ ಸಮ್ಮೇಳನ ಯಶಸ್ವಿಗೊಳಿಸಬೇಕು. ಪರಸ್ಥಳಗಳಿಂದ ಅನೇಕ ಸಾಹಿತಿಗಳು, ಸಾಹಿತ್ಯ ಆಸಕ್ತರು ಬರುವದರಿಂದ ಅವರಿಗೆ ಉತ್ತಮ ಆತಿಥ್ಯ ನೀಡಿ, ಸಮ್ಮೇಳನವನ್ನು ಸ್ಮರಣೀಯಗೊಳಿಸಬೇಕು ಎಂದು ಕರೆ ನೀಡಲಾಯಿತು.
ಚಿತ್ರಗಳು : ಧಾರವಾಡದಲ್ಲಿ ಸಾಹಿತ್ಯ ಜಾತ್ರೆಯ ತಯಾರಿ
ಧಾರವಾಡ ಜಿಲ್ಲಾಧಿಕಾರಿ ದೀಪಾ ಚೋಳನ್ ಅವರು ಮಾತನಾಡಿ, 'ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಯಾಗಿ ಸಂಘಟಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ನಗರ ಸ್ವಚ್ಚತೆ, ರಸ್ತೆ ದುರಸ್ತಿ, ನಗರ ಅಲಂಕಾರ ಸೇರಿದಂತೆ ವಿವಿಧ ಕಾರ್ಯಗಳನ್ನು ಕೈಗೊಳ್ಳಲಾಗಿದೆ' ಎಂದರು.