ಸಿಎಂಗೆ ಹೇಳಿ ನಿಮ್ಮನ್ನು ಮಂತ್ರಿ ಮಾಡುತ್ತೇನೆ: ತುಂಬಿದ ಸಭೆಯಲ್ಲೇ ಮಾತುಕೊಟ್ಟ ಪ್ರಹ್ಲಾದ್ ಜೋಶಿ
ಧಾರವಾಡ, ಸೆಪ್ಟೆಂಬರ್ 14: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹೇಳಿ ನಿಮ್ಮನ್ನು ಮಂತ್ರಿ ಮಾಡಿಸುತ್ತೇನೆ ಎಂದು ನವಲಗುಂದ ವಿಧಾನಸಭಾ ಕ್ಷೇತ್ರದ ಶಾಸಕ ಎನ್.ಎಚ್ ಕೋನರೆಡ್ಡಿ ಅವರಿಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತುಂಬಿದ ಸಭೆಯಲ್ಲಿ ಭರವಸೆ ನೀಡಿದ್ದಾರೆ. ಧಾರವಾಡದಲ್ಲಿ ನಡೆದ ದಿಶಾ ಸಭೆಯಲ್ಲಿ ಇಬ್ಬರ ಮಧ್ಯೆ ಮಾತಿನ ಸಮರ ಜೋರಾಗಿದ್ದು, ಈ ವೇಳೆ ಪ್ರಹ್ಲಾದ್ ಜೋಶಿ ಶಾಸಕರನ್ನು ಮಂತ್ರಿ ಮಾಡಿಸುವ ಭರವಸೆ ನೀಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆಗೆ ನಮ್ಮ ದೋಸ್ತಿ ಚೆನ್ನಾಗಿದ್ದು ನಿಮ್ಮನ್ನು ಮಂತ್ರಿ ಮಾಡಿ ಎಂದು ಅವರಿಗೆ ಹೇಳುತ್ತೇನೆ. ದಿಶಾ ಸಭೆಯಲ್ಲಿ ನಿಮ್ಮನ್ನು ಬಹಳ ಸಮರ್ಥನೆ ಮಾಡಿಕೊಂಡಿದ್ದಾರೆ. ಹೀಗಾಗಿ ಇವರನ್ನು ಮಂತ್ರಿ ಮಾಡಿ ಎಂದು ಹೇಳುತ್ತೇನೆ ಎಂದ ಪ್ರಹ್ಲಾದ್ ಜೋಶಿ ಅವರಿಗೆ ಹಾಸ್ಯದಲ್ಲಿಯೇ ತಿರುಗೇಟು ನೀಡಿದ ಶಾಸಕ ಕೋನರೆಡ್ಡಿ, ನಮಗೆ ಬಹಳ ಗೌರವ ಇದೆ ಹೀಗಾಗಿ ಮಹದಾಯಿ ಕಳಸಾ- ಬಂಡೂರಿ ನಾಲಾ ಯೋಜನೆ ಮಾಡಿಬಿಡಿ ಎಂದಿದ್ದಾರೆ.

ಶಾಸಕ ಮನವಿಗೆ ವ್ಯಂಗ್ಯವಾಗಿ ಉತ್ತರಿಸಿದ ಕೇಂದ್ರ ಸಚಿವರು ನೀವು ಮಾಡದೇ ಇರುವ ಕೆಲಸವನ್ನು ನಾವು ಮಾಡುತ್ತೇವೆ ಎಂದಿದ್ದು, ಇಬ್ಬರ ಮಧ್ಯೆ ಕೆಲ ಕಾಲ ಗಂಭೀರ ಚರ್ಚೆ ನಡೆದಿದೆ. ಕೆಲವು ರೈತರಿಗೆ ಬೆಳೆ ಪರಿಹಾರ ಬಂದಿದೆ. ಇನ್ನೂ ಕೆಲವು ರೈತರಿಗೆ ಯಾವುದೇ ಪರಿಹಾರ ಬಂದಿಲ್ಲ, ತಹಶೀಲ್ದಾರ್ ಅವರು ಭೇಟಿ ರೈತರನ್ನು ಭೇಟಿಯಾಗುತ್ತಿಲ್ಲ. ನಾವೇನು ಬ್ರಿಟೀಷ್ ಜಮಾನದಲ್ಲಿ ಇದೆವಾ? ಜನರಿಗೆ ಸಿಗದಿದ್ದ ಮೇಲೆ ಅಧಿಕಾರಿಗಳು ಇರುವುದು ಯಾಕೆ? ಎಂದು ಪ್ರಹ್ಲಾದ್ ಜೋಶಿ ತರಾಗೆ ತೆಗೆದುಕೊಂಡಿದ್ದಾರೆ.
ಕೇಂದ್ರ ಸಚಿವರ ಮಾತಿನ ಮಧ್ಯ ಪ್ರವೇಶಿಸಿದ ಶಾಸಕ ಕೋನರೆಡ್ಡಿ ಯಾವ ತಹಶೀಲ್ದಾರ್ ಕಚೇರಿಯಲ್ಲಿ ಇರಲಿಲ್ಲ ಹೇಳಿ ಎಂದಿದ್ದಾರೆ. ಈ ವೇಳೆ ಬಿಜೆಪಿ ನಾಯಕರು ತಹಶೀಲ್ದಾರ್ ಸರಿಯಾಗಿ ಸಿಗುತ್ತಿಲ್ಲ ಎಂದು ಸಮರ್ಥಿಸಿಕೊಂಡಾಗ ನಾವು ಸ್ವಚ್ಛ ಆಡಳಿತ ಮಾಡಲೆಂದೇ ಕುಳಿತಿದ್ದೇವೆ. ನಾವೇನು ಕಾಲಹರಣ ಮಾಡುತ್ತಿಲ್ಲ. ನಮ್ಮ ಸರ್ಕಾರ ವಿಫಲವಾಗಿಲ್ಲ ಅಧಿಕಾರಿಗಳು ಯಾರು ಸಿಕ್ಕಿಲ್ಲ ಹೇಳಿ ಎಂದು ಶಾಸಕ ಕೋನರೆಡ್ಡಿ ಅಧಿಕಾರಿಗಳ ಮೇಲೆ ಗರಂ ಆದರು.

ಈ ವೇಳೆ ನೀವು ಟೆಂನ್ಷನ್ ಮಾಡಿಕೊಳ್ಳಬೇಡಿ ಎಂದು ಮಾತಿನಲ್ಲೇ ತಿವಿದ ಪ್ರಹ್ಲಾದ್ ಜೋಶಿ, ನಮ್ಮ ಸರ್ಕಾರ ನಿಮ್ಮ ಸರ್ಕಾರ ಎಂದು ಈ ವೇದಿಕೆ ಮೇಲೆ ಮಾತನಾಡುವುದು ಬೇಡ. ಈ ಸಭೆಯನ್ನು ರಾಜಕೀಯಕ್ಕೆ ಬಳಸುವುದು ಬೇಡ. ಯಾವುದೇ ಸರ್ಕಾರ ಇದ್ದರೂ ಜನರಿಗೆ ಸೌಲಭ್ಯ ಸಿಗಬೇಕು ಎಂದರು. ಒಟ್ಟಾರೆ ಈ ಬಾರಿ ಧಾರವಾಡ ದಿಶಾ ಸಭೆಯಲ್ಲಿ ಕೇಂದ್ರ ಸಚಿವರು ಹಾಗೂ ಸ್ಥಳೀಯ ಶಾಸಕರ ಮಾತಿನ ಜಟಾಪಟಿ ಜೋರಾಗಿತ್ತು.












Click it and Unblock the Notifications