'ಕೇಂದ್ರದ ಹಣ ತಲುಪಿಸುವುದಷ್ಟೇ ರಾಜ್ಯದ ಕೆಲಸವಲ್ಲ'
ಹುಬ್ಬಳ್ಳಿ, ಏಪ್ರಿಲ್, 21: ಬರ ಪರಿಹಾರಕ್ಕೆಂದು ಕೇಂದ್ರ ಸರ್ಕಾರ ಹಣ ನೀಡಿದ್ದು ಅದನ್ನು ಜನರಿಗೆ ತಲುಪಿಸುವ ಕೆಲಸವನ್ನು ರಾಜ್ಯ ಸರ್ಕಾರ ಸರಿಯಾಗಿ ಮಾಡಬೇಕಿದೆ ಎಂದು ಸಂಸದ ಪ್ರಹ್ಲಾದ್ ಜೋಶಿ ಸಲಹೆ ನೀಡಿದರು.
ನಗರದ ಬಿಜೆಪಿ ಕಾರ್ಯಾಲಯ 'ಗ್ರಾಮೋದಯದಿಂದ ಭಾರತ ಉದಯ ಕಾರ್ಯಾಗಾರ' ಉದ್ಘಾಟಿಸಿ ಮಾತನಾಡಿದರು. ಕಳೆದ ಎರಡು ವರ್ಷಗಳಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಗ್ರಾಮೀಣ ಜನರಿಗೆ ಮತ್ತು ದೇಶದ ಜನತೆಗೆ ಮಾಡಿದ ಜನಪರ ಯೋಜನೆಗಳನ್ನು ಜನರಿಗೆ ಮನವರಿಕೆ ಮಾಡಿಕೊಟ್ಟು ಅದರ ಸದುಪಯೋಗವನ್ನು ಪ್ರತಿ ರೈತ ಕುಟುಂಬ ಪಡೆಯುವ ಹಾಗಾಗಬೇಕು ಎಂದು ಹೇಳಿದರು.[ಕುಡಿಯುವ ನೀರಿಗೆ 100 ಕೋಟಿ ತುರ್ತು ಹಣ]
ಕೇಂದ್ರ ಸರಕಾರ ರಾಜ್ಯಕ್ಕೆ ಈಗಾಗಲೇ ತನ್ನ ಪಾಲಿನ ಶೇ.68 ರಷ್ಟು ಹಣವನ್ನು ಅಂದರೆ ರೂ.1540 ಕೋಟಿ ರೂ.ನಷ್ಟು ಹಣವನ್ನು ಬಿಡುಗಡೆ ಮಾಡಿದ್ದು ರಾಜ್ಯ ಸರಕಾರ ತನ್ನ ಪಾಲಿನ ಉಳಿದ ಹಣವನ್ನು ನೀಡಿ ರೈತರಿಗೆ ತಲುಪಿಸಬೇಕಾಗಿದೆ. ಆದರೆ ರಾಜ್ಯ ಸರ್ಕಾರ ಕೇಂದ್ರದ ಹಣವನ್ನಷ್ಟೆ ವಿತರಣೆ ಮಾಡುತ್ತಿದೆ ಎಂದರು.[ಬರಪರಿಹಾರ ನಿಧಿಗೆ ಬಿಜೆಪಿ ಸದಸ್ಯರ ತಿಂಗಳ ಸಂಬಳ]
ಏಪ್ರಿಲ್ 14 ರಂದು ಈ ಅಭಿಯಾನವನ್ನು ಕೇಂದ್ರ ಸರಕಾರ ಆರಂಭಿಸಿದ್ದು ಇದು ಏಪ್ರಿಲ್ 24 ರವರೆಗೆ ಮುಂದುವರೆಯಲಿದೆ ಎಂದು ತಿಳಿಸಿದರು.
ರಾಜ್ಯ ಕಾರ್ಯದರ್ಶಿ ಎನ್.ರವಿಕುಮಾರ, ಗ್ರಾಮಾಂತರ ಜಿಲ್ಲಾಧ್ಯಕ್ಷ ಎಮ್.ಆರ್.ಪಾಟೀಲ, ಮಹಾನಗರ ಜಿಲ್ಲಾಧ್ಯಕ್ಷ ಲಿಂಗರಾಜ ಪಾಟೀಲ, ಮಾಜಿ ಶಾಸಕರುಗಳಾದ ಅಶೋಕ ಕಾಟವೆ, ಶಂಕರ ಪಾಟೀಲ ಮುನೇನಕೊಪ್ಪ, ವೀರಭದ್ರಪ್ಪ ಹಾಲಹರವಿ, ಜಿ. ಪಂ. ಸದಸ್ಯರಾದ ಚೈತ್ರಾ ಶಿರೂರ, ರತ್ನಾ ಪಾಟೀಲ, ಶಿವನಗೌಡರ, ದೇಸಾಯಿ, ಮಾಜಿ ಜಿ.ಪಂ. ಅಧ್ಯಕ್ಷ ಟಿ.ಜಿ.ಬಾಲಣ್ಣವರ, ಬಸವರಾಜ ಹೊಸಕಟ್ಟಿ, ರಂಗಾ ಬದ್ದಿ ,ಶಶಿಮೌಳಿ ಕುಲಕರ್ಣಿ, ಸತೀಶ ಶೇಜವಾಡಕರ, ನಾಗೇಶ ಕಲಬುರ್ಗಿ, ಶಿವಾನಂದ ಮುತ್ತಣ್ಣವರ, ಪ್ರಶಾಂತ ಜಾಧವ, ಈರಣ್ಣ ಜಡಿ, ವಿಜಯ ನಾಡಜೋಶಿ, ಗೀತಾ ಮರಲಿಂಗಣ್ಣವರ, ಬಸವರಾಜ ಕುಸುಗಲ್ ಮುಂತಾದವರು ಉಪಸ್ಥಿತರಿದ್ದರು.