ಧಾರವಾಡ ಜಿಲ್ಲೆಯ ಹಲವು ಗ್ರಾಮ ಪಂಚಾಯ್ತಿಗಳಲ್ಲಿ ಖಾಲಿ ಇರುವ ಸ್ಥಾನಗಳಿಗೆ ಜುಲೈ 23ರಂದು ಉಪಚುನಾವಣೆ
ಧಾರವಾಡ, ಜುಲೈ, 06: ರಾಜ್ಯ ಚುನಾವಣಾ ಆಯೋಗದ ನಿರ್ದೇಶನದಂತೆ ಧಾರವಾಡ ಜಿಲ್ಲೆಯ ವಿವಿಧ ಗ್ರಾಮ ಪಂಚಾಯ್ತಿಗಳಲ್ಲಿ ವಿವಿಧ ಕಾರಣಗಳಿಂದ ತೆರವಾಗಿರುವ ಸದಸ್ಯ ಸ್ಥಾನಗಳಿಗೆ ಜುಲೈ 23 ರಂದು ಉಪಚುನಾವಣೆ ನಡೆಸಲು ವೇಳಾಪಟ್ಟಿಯನ್ನು ಜಿಲ್ಲಾ ಚುನಾವಣಾಧಿಕಾರಿಗಳಾದ ಗುರುದತ್ತ ಹೆಗಡೆ ಅವರು ಪ್ರಕಟಿಸಿದ್ದಾರೆ.
ಉಪ ಚುನಾವಣಾ ವೇಳಾ ಪಟ್ಟಿಯಲ್ಲಿ ವಿವಿಧ ಕಾರಣಗಳಿಂದ ತೆರವಾದ ಗ್ರಾಮ ಪಂಚಾಯತ್ ಸದಸ್ಯ ಸ್ಥಾನಗಳಿಗೆ ಅನ್ವಯಿಸುವ ಮೀಸಲಾತಿಯನ್ನು ನಿಗದಿಪಡಿಸಲಾಗಿದೆ. ಚುನಾವಣೆಗೆ ನಾಮಪತ್ರ ಸಲ್ಲಿಕೆಯು ಜುಲೈ 6 ರಿಂದ ಆರಂಭವಾಗಿದ್ದು, ಜುಲೈ 12ರಂದು ಕೊನೆಯ ದಿನ ಆಗಿರುತ್ತದೆ. ಜುಲೈ 13 ರಂದು ನಾಮಪತ್ರಗಳ ಪರಿಶೀಲನೆ ಮತ್ತು ಉಮೇದುವಾರಿಕೆ ಹಿಂಪಡೆಯಲು ಜುಲೈ 15 ಕೊನೆಯ ದಿನವಾಗಿದೆ.

ಅವಶ್ಯವಿದ್ದಲ್ಲಿ ಜುಲೈ 23ರಂದು ಬೆಳಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮತದಾನ ನಡೆಯಲಿದೆ. ಮರು ಮತದಾನ ಅಗತ್ಯವಾದರೆ ಜುಲೈ 25ರಂದು ಜರುಗಲಿದೆ. ಮತಗಳ ಎಣಿಕೆಯು ಆಯಾ ತಾಲೂಕು ಕೇಂದ್ರದಲ್ಲಿ ಜುಲೈ 26ರಂದು ಬೆಳಗ್ಗೆ 8 ಗಂಟೆಗೆ ನಡೆಯುತ್ತದೆ. ಮತ್ತು ಜುಲೈ 26ರೊಳಗೆ ಗ್ರಾಮ ಪಂಚಾಯತ್ ಉಪಚುನಾವಣೆ ಪ್ರಕ್ರಿಯೆಯನ್ನು ಮುಕ್ತಾಯಗೊಳಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿಗಳು ಆಗಿರುವ ಜಿಲ್ಲಾ ಚುನಾವಣಾಧಿಕಾರಿ ಗುರುದತ್ತ ಹೆಗಡೆ ಅವರು ತಿಳಿಸಿದ್ದಾರೆ.
ಕಲಘಟಗಿ ತಾಲೂಕಿನ ಮುಕ್ಕಲ ಗ್ರಾಮ ಪಂಚಾಯತಿಯ ಮುಕ್ಕಲ (2) ಗ್ರಾಮದ ಒಂದು (ಸಾಮಾನ್ಯ ಮಹಿಳೆ) ಸ್ಥಾನಕ್ಕೆ, ಹಿರೇಹೊನ್ನಳ್ಳಿ ಗ್ರಾಮ ಪಂಚಾಯಿತಿಯ ಹಿರೇಹೊನ್ನಳ್ಳಿ (3) ಗ್ರಾಮದ ಒಂದು (ಅನುಸೂಚಿತ ಪಂಗಡ ಮಹಿಳೆ) ಸ್ಥಾನಕ್ಕೆ, ಬೀರವಳ್ಳಿ ಗ್ರಾಮ ಪಂಚಾಯಿತಿಯ ಬೀರವಳ್ಳಿ(1) ಗ್ರಾಮದ ಒಂದು (ಅನುಸೂಚಿತ ಜಾತಿ) ಸ್ಥಾನಕ್ಕೆ ಹಾಗೂ ಕುಂದಗೋಳ ತಾಲೂಕಿನ ಬು.ತರ್ಲಗಟ್ಟ ಗ್ರಾಮ ಪಂಚಾಯಿತಿಯ ನೆಲೆಗುಡ್ಡ ಗ್ರಾಮದ ಒಂದು (ಹಿಂದುಳಿದ ಅ ವರ್ಗ ಮಹಿಳೆ) ಸ್ಥಾನಕ್ಕೆ ಚುನಾವಣೆ ನಡೆಯಲಿದೆ.
ಹಾಗೆಯೇ ಕಮಡೊಳ್ಳಿ ಗ್ರಾಮ ಪಂಚಾಯತಿಯ ಕಮಡೊಳ್ಳಿ(4) ಗ್ರಾಮದ ಒಂದು (ಹಿಂದುಳಿದ ಅ ವರ್ಗ) ಸ್ಥಾನಕ್ಕೆ ಹಾಗೂ ಧಾರವಾಡ ತಾಲೂಕಿನ ಕೊಟಬಾಗಿ ಗ್ರಾಮ ಪಂಚಾಯಿತಿಯ ಕೊಟಬಾಗಿ(1) ಗ್ರಾಮದ ಎರಡು (ಹಿಂದುಳಿದ ಅ ವರ್ಗ ಮತ್ತು ಅನುಸೂಚಿತ ಪಂಗಡ ಮಹಿಳೆ) 2 ಸ್ಥಾನಕ್ಕೆ, ಜೀರಿಗವಾಡ ಗ್ರಾಮದ ಒಂದು (ಹಿಂದುಳಿದ ಅ ವರ್ಗ ಮಹಿಳೆ) ಸ್ಥಾನಕ್ಕೆ, ಕೋಟುರ ಗ್ರಾಮ ಪಂಚಾಯಿತಿಯ ಕೋಟುರು(1) ಗ್ರಾಮದ ಒಂದು (ಸಾಮಾನ್ಯ) ಸ್ಥಾನಕ್ಕೆ ಚುನವಾಣೆ ನಡೆಯಲಿದೆ.
ನವಲಗುಂದ ತಾಲೂಕಿನ ಯಮನೂರು ಗ್ರಾಮ ಪಂಚಾಯಿತಿಯ ಅರೇಕುರಹಟ್ಟಿ (1) ಗ್ರಾಮದ ಕ್ಷೇತ್ರ 1ರಲ್ಲಿ ಎರಡು (ಸಾಮಾನ್ಯ ಮಹಿಳೆ-1, ಸಾಮಾನ್ಯ -1) ಸ್ಥಾನಕ್ಕೆ, ಕ್ಷೇತ್ರ 2 ರಲ್ಲಿ ಎರಡು (ಪ.ಜಾ. ಮಹಿಳೆ-1, ಹಿಂದುಳಿದ ಅ ಪ್ರವರ್ಗ-1) ಸ್ಥಾನಕ್ಕೆ, ಕ್ಷೇತ್ರ 3ರಲ್ಲಿ ನಾಲ್ಕು (ಹಿಂದುಳಿದ ಬ ಪ್ರವರ್ಗ ಮಹಿಳೆ-1, ಹಿಂದುಳಿದ ಅ. ಪ್ರವರ್ಗ-1, ಸಾಮಾನ್ಯ ಮಹಿಳೆ-1, ಸಾಮಾನ್ಯ-1) ಸ್ಥಾನಗಳಿಗೆ ಉಪಚುನಾವಣೆಗಳು ನಡೆಯಲಿವೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.












Click it and Unblock the Notifications