'ಸಿದ್ದರಾಮಯ್ಯ ಅವರ ಸಮಾಜದ ದೇವರ ಜಾಗವನ್ನೇ ವಕ್ಫ್ ಎಂದು ನಮೂದಿಸಿದ್ದಾರೆ'
ಧಾರವಾಡ, ಅಕ್ಟೋಬರ್ 31: ಈ ಹಿಂದೆ ಸಚಿವ ಜಮೀರ್ ಅಹ್ಮದ್ ಧಾರವಾಡದಲ್ಲಿ ವಕ್ಫ್ ಬಗ್ಗೆ ಸಭೆ ಕರೆದಿದ್ದರು. ಆಗ ನಾನು ಕೂಡ ಆ ಸಭೆಗೆ ಹೋಗಿದ್ದೆ. ಅವರು ಏನು ಹೇಳ್ತಾರೆ ಅಂತಾ ನೋಡಲು ನಾನು ಸಭೆಗೆ ಹೋಗಿದ್ದೆ. ಇದರ ನಂತರ ಇಡಿ ರಾಜ್ಯದ ಜನರಿಗೆ ಒಂದು ರೀತಿ ಆಘಾತ ಕೊಡುವ ಬೆಳವಣಿಗೆ ಆಗಿವೆ ಎಂದು ವಿಪಕ್ಷ ಉಪನಾಯಕ ಅರವಿಂದ ಬೆಲ್ಲದ್ ಹೇಳಿದರು.
ಧಾರವಾಡ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಪಕ್ಕದ ಉಪ್ಪಿನ ಬೆಟಗೇರಿಯಲ್ಲಿ ವಕ್ಫ್ ಹೆಸರು ಬಂದಿದ್ದು, ಧಾರವಾಡದ ಸ್ಮಶಾನ ಕೂಡ 1995ರಲ್ಲಿ ವಕ್ಫ್ ಆಕ್ಟ್ ಮಾಡಿದ್ದ ವೇಳೆ ವಕ್ಫ್ ಆಸ್ತಿ ಎಂದು ಮಾಡಿಕೊಂಡಿದ್ದಾರೆ. ಅಲ್ಲಿ ಎಸ್ಸಿ ಎಸ್ಟಿ ಅವರಿಗೆ ಜಾಗ ಕಡಿಮೆ ಆಗಿದೆ. ಧಾರವಾಡ ಜಿಲ್ಲೆಯಲ್ಲಿ 500 ಏಕರೆ ಆಸ್ತಿ ವಕ್ಫ್ ಹೆಸರು ಆಗಿದೆ ಎಂದು ಕೇಳಿದ್ದೇನೆ. ಇದರ ಜೊತೆಗೆ ಆಳಂದದಲ್ಲಿ ಕುರುಬ ಸಮಾಜದ ಬಿರೇಶ್ವರ ದೇವಸ್ಥಾನ ವಕ್ಫ್ ಆಸ್ತಿ ಎಂದು ಬರೆದುಕೊಂಡಿದ್ದಾರೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕುರುಬ ಸಮಾಜದಿಂದಲೇ ಬಂದವರು ಅವರೇ ಇದಕ್ಕೆ ಉತ್ತರ ಕೊಡಬೇಕು. ಅವರು ಯಾವ ಸಮಾಜದಲ್ಲಿ ಹುಟ್ಟಿ ಮುಂದೆ ಬಂದಿದ್ದಾರೋ ಅದೇ ಸಮಾಜಕ್ಕೆ ಅವರು ಕೊಡುಗೆ ಕೊಡಬೇಕು. ಕೇವಲ ಮುಸ್ಲಿಂ ಸಮಾಜಕ್ಕೆ ಬದ್ಧತೆ ತೊರಿಸಿದರೆ ನಡೆಯಲ್ಲ. ಸಿದ್ದರಾಮಯ್ಯ ಹಾಲು ಮತದವರು, ಅವರ ಸಮಾಜದ ದೇವರ ಜಾಗವನ್ನೇ ವಕ್ಫ್ ಎಂದು ನಮೂದಿಸಿದ್ದಾರೆ ಇದರ ಬಗ್ಗೆ ಜನಜಾಗೃತಿ ಆಗುವ ಅವಶ್ಯಕತೆ ಇದೆ. ಇದು ಆಗಲಿಲ್ಲ ಎಂದರೆ ಭೂಮಿ ಹೊಡೆಯುವ ಕೆಲಸ ಆಗಲಿದೆ ಎಂದು ಆರೋಪಿಸಿದರು.
ರೈತರ ಆಸ್ತಿ ಹೇಗೆ ವಕ್ಫ್ ಆಸ್ತಿ ಆಗುತ್ತದೆ ಎನ್ನುವುದು ನನಗೆ ಗೊತ್ತಿಲ್ಲ. ವಕ್ಫ್ ಎಂದರೆ ಅದು ಟ್ರಸ್ಟ ಇದ್ದ ಹಾಗೇ, ಈ ರೀತಿ ಯಾರಾದರೂ ದಾನ ಮಾಡಿರುವುದನ್ನು ವಕ್ಫ್ ಎಂದು ಮಾಡುವ ಕೆಲಸ ನಡೆದಿದೆ. 1947ರ ನಂತರ ಮುಸ್ಲಿಂ ಸಮಾಜ ಭಾರತ ಬಿಟ್ಟು ಪಾಕಿಸ್ತಾನಕ್ಕೆ ಹೋದರು. ಅವರ ಆಸ್ತಿ ಸರ್ಕಾರ ಕಾಯ್ದೆ ಮಾಡಿ ವಕ್ಫ್ ಮೂಲಕ ತೆಗೆದುಕೊಂಡಿತ್ತು ಎಂದರು.

ಇನ್ನು ಧಾರವಾಡ ಜಿಲ್ಲೆಯ ಬೇಟಗೇರಿ ಹೊಲಕ್ಕೆ ಹಾಗೂ ಪಾಕಿಸ್ತಾನಕ್ಕೆ ಏನು ಸಂಬಂಧ. ಧಾರವಾಡ ಸ್ಮಶಾನಕ್ಕೆ ಹಾಗೂ ವಕ್ಫ್ ಆಸ್ತಿಗೆ ಏನು ಸಂಬಂಧ ಅಲ್ಲಿರುವುದು ಸರ್ಕಾರಿ ಜಾಗ ಮಾತ್ರ. ಸಂಪೂರ್ಣವಾಗಿ ವಕ್ಫ್ ಜಿಹಾದ್ ನಮ್ಮ ರಾಜ್ಯದಲ್ಲಿ ನಡೆದಿದೆ ಇದರ ಬಗ್ಗೆ ನಾವು ಬಿಜೆಪಿ ಹೋರಾಟ ಮಾಡುತ್ತೇವೆ ಎಂದರು.
ಇನ್ನು ರಮೇಶ್ ಜಾರಕಿಹೋಳಿ ಹಾಗೂ ಬಸನಗೌಡ ಪಾಟೀಲ್ ಯತ್ನಾಳ್ ಉಪಚುನಾವಣೆ ಪ್ರಚಾರಕ್ಕೆ ಬರಲ್ಲ ಎಂದು ಹೇಳಿಕೆ ನೀಡಿರುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಆ ಬಗ್ಗೆ ನಾನು ಪ್ರತಿಕ್ರಿಯೆ ಕೊಡಲ್ಲ, ಅದು ಪಕ್ಷ ಆಂತರಿಕ ವಿಚಾರ ಆಗಿದೆ. ಅಲ್ಲೇ ಅದನ್ನು ಬಗೆಹರಿಸುತ್ತೇವೆ ಎಂದು ಹೇಳಿದರು.












Click it and Unblock the Notifications