ರಾಮಮಂದಿರ ಕಟ್ಟಿದಾಕ್ಷಣ ದೇಶದ ಜನರಿಗೆ ಮನೆಗಳು ಸಿಗುತ್ತವಾ?: ಮಧು ಬಂಗಾರಪ್ಪ ಪ್ರಶ್ನೆ
ದಾವಣಗೆರೆ, ಡಿಸೆಂಬರ್, 16: ಅಧಿಕಾರವನ್ನು ಒಳ್ಳೆಯ ರೀತಿಯಲ್ಲಿ ಚಲಾಯಿಸಬೇಕು. ಸರ್ಕಾರಕ್ಕೆ ಎಲ್ಲಾ ವರ್ಗದವರಿಗೂ ಸಹಕಾರ ಮಾಡುವ ಯೋಚನೆ ಇರಬೇಕು. ಬಿಜೆಪಿಯವರು ಪರ್ಸಂಟೈಸ್, ಜಾತಿ, ಧರ್ಮದ ಬಗ್ಗೆ ಮಾತನಾಡುತ್ತಾರೆ. ರಾಮಮಂದಿರ ಕಟ್ಟಿದಾಕ್ಷಣ ದೇಶದ ಜನರಿಗೆ ಮನೆ ಸಿಗುತ್ತಾ? ರಾಜ್ಯದ ರೈತರು, ದೇಶದ ರೈತರು ಸಮಸ್ಯೆಯ ಸುಳಿಗೆ ಸಿಲುಕಿದ್ದಾರೆ. ಬಿಜೆಪಿಯವರು ರೈತರ ನೆರವಿಗೆ ನಿಲ್ಲುವ ಕೆಲಸವನ್ನು ಮಾಡುತ್ತಿಲ್ಲ ಎಂದು ಕಾಂಗ್ರೆಸ್ ಒಬಿಸಿ ಘಟಕದ ರಾಜ್ಯಾಧ್ಯಕ್ಷ ಮಧು ಬಂಗಾರಪ್ಪ ದಾವಣಗೆರೆಯಲ್ಲಿ ಆರೋಪಿಸಿದರು.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾರಾಷ್ಟ್ರ, ಗಡಿ, ನೆಲ, ಜಲ, ಹಲಾಲ್ ಕಟ್ ವಿಚಾರದಲ್ಲಿ ಬೇಳೆ ಬೇಯಿಸಿಕೊಳ್ಳಲು ಹಾಗೂ ಸಿದ್ದರಾಮಯ್ಯರ ಬಗ್ಗೆ ಹಗುರವಾಗಿ ಮಾತನಾಡುವ ಬಿಜೆಪಿ ಕೀಳುಮಟ್ಟದ ರಾಜಕಾರಣ ಮಾಡುತ್ತಿದೆ. ರಾಜ್ಯದಲ್ಲಿ ಬದಲಾವಣೆ, ವಿಶ್ವಾಸದ ಗಾಳಿ ಬೀಸುತ್ತಿದೆ. ಮೂರ್ನಾಲ್ಕು ತಿಂಗಳು ಮಾತ್ರ ಕಾಲವಾಕಾಶ ಸಿಗುತ್ತದೆ. ಜನರ ಮನೆಗೆ ಬಾಗಿಲಿಗೆ ಹೋಗಿ ಪಕ್ಷ ಸಂಘಟಿಸುವ ಹೊಣೆಗಾರಿಕೆ ಎಲ್ಲರ ಮೇಲಿದೆ ಎಂದು ಪಕ್ಷದ ಕಾರ್ಯಕರ್ತರಿಗೆ ಕಿವಿಮಾತು ಹೇಳಿದರು.
ಹಿಂದುಳಿದ ವರ್ಗಗಳ ಮತಗಳ ಮೇಲೆ ಕಣ್ಣಿಟ್ಟಿರುವ ರಾಜ್ಯ ಕಾಂಗ್ರೆಸ್ ಒಬಿಸಿ ಘಟಕವು ರಾಜ್ಯ, ಜಿಲ್ಲಾ ಮಟ್ಟದಲ್ಲಿಯೂ ಸಮಾವೇಶ ನಡೆಸಲು ತೀರ್ಮಾನಿಸಿದೆ. ಜನವರಿ 10ರಿಂದ ಈ ಸಮಾವೇಶಗಳು ನಡೆಯಲಿದ್ದು, ಫೆಬ್ರವರಿ ಕೊನೆ ಅಥವಾ ಮಾರ್ಚ್ ಮೊದಲ ವಾರದಲ್ಲಿ ರಾಜ್ಯಮಟ್ಟದ ಹಿಂದುಗಳ ವರ್ಗಗಳ ಬೃಹತ್ ಸಮಾವೇಶ ನಡೆಸಲಾಗುವುದು. ಭಾರತ್ ಜೋಡೊ ಯಾತ್ರೆ ಮುಗಿದ ಕೂಡಲೇ ಈ ಸಮಾವೇಶ ನಡೆಯಲಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಸಮಾವೇಶಕ್ಕೆ ರಾಹುಲ್ ಗಾಂಧಿ ಬರುತ್ತಾರೆ
ಸಮಯಕ್ಕಾಗಿ ಕಾಯಬೇಡಿ, ನೀವು ದಿನಾಂಕ ನಿಗದಿ ಮಾಡಿ ನಾನು ಬರುತ್ತೇನೆ ಎಂಬುದಾಗಿ ರಾಹುಲ್ ಗಾಂಧಿ ಹೇಳಿದ್ದಾರೆ. ಈ ದೊಡ್ಡ ಸಮಾವೇಶ ಆಯೋಜಿಸುವ ಮುನ್ನ ಜಿಲ್ಲಾ ಮಟ್ಟದಲ್ಲಿಯೂ ಒಬಿಸಿ ಸಮಾವೇಶ ನಡೆಸಿ, ವಿಶ್ವಾಸ ಮತ್ತಷ್ಟು ಗಟ್ಟಿಯಾಗಿಸುವ ಪ್ರಯತ್ನವನ್ನು ಮಾಡುತ್ತೇವೆ. ಕಾಂಗ್ರೆಸ್ ಪಕ್ಷಕ್ಕೆ ಒಬಿಸಿ ಮತಗಳು ಹೆಚ್ಚಾಗಿ ಸಿಗುತ್ತಿವೆ. ಶೇಕಡಾ 55ರಷ್ಟು ಒಬಿಸಿ ಮತಗಳಿರುತ್ತವೆ. ಕಾಂಗ್ರೆಸ್ಗೆ ನೂರು ಒಬಿಸಿ ಮತದಲ್ಲಿ ಶೇಕಡಾ 75ರಷ್ಟು ಮತಗಳು ಬರುತ್ತಿದ್ದವು. ಆದರೆ ಈಗ ಬೇರೆ ಬೇರೆ ಕಾರಣದಿಂದ ಕೆಲ ಪ್ರದೇಶಗಳಲ್ಲಿ ಕಡಿಮೆಯಾಗಿದೆ. ಹಾಗಾಗಿ, ಈ ಬಗ್ಗೆ ವಿಶೇಷ ನಿಗಾ ವಹಿಸಲಾಗುವುದು ಎಂದರು.
ಹಿಂದುಳಿದ ವರ್ಗಗಳನ್ನು ಮುಂಚೂಣಿಗೆ ತರುವ ಟಾರ್ಗೆಟ್ ನೀಡಲಾಗಿದೆ. ನಾನು ಅಧಿಕಾರಕ್ಕೆ ಬಂದ ಮೇಲೆ ಅವರ ವಿಶ್ವಾಸ ಗಳಿಸಿಕೊಂಡು ಮುಂದೆ ಹಾಗೆ ಬಿಡುವವನಲ್ಲ. ಜೊತೆಗೆ ಕರೆದುಕೊಂಡು ಹೋಗುತ್ತೇವೆ. ಅವರಿಗೂ ಕಾಂಗ್ರೆಸ್ ಪಕ್ಷ ಅಧಿಕಾರ ನೀಡಲಿದೆ. ಚಿಕ್ಕನಾಯಕನಹಳ್ಳಿಗೆ ಹೋದಾಗ ಮಾಜಿ ಸಿಎಂ ಎಸ್.ಬಂಗಾರಪ್ಪರ ಪರ ನಾವಿದ್ದೆವು. ಅವರು ಸಾಕಷ್ಟು ಒಳ್ಳೆಯ ಕೆಲಸ ಮಾಡಿದ್ದರು. ಈಗ ಸ್ವಲ್ಪ ಕಡಿಮೆಯಾಗಿದೆ ಎಂಬುದು ಸೇರಿದಂತೆ ವಿವಿಧ ವಿಚಾರಗಳ ಬಗ್ಗೆ ಒಂದು ಗಂಟೆ ಕಾಲ ಚರ್ಚೆ ನಡೆಸಿದ್ದೇವೆ. ನಾಯಕರು ಕೊಟ್ಟ ಸಲಹೆಯನ್ನು ಗಂಭೀರವಾಗಿ ಪರಿಗಣಿಸಿದ್ದೇನೆ ಎಂದರು.

ಟಿಕೆಟ್ ಸಲ್ಲಿಕೆ ಬಗ್ಗೆ ಮಧು ಬಂಗಾರಪ್ಪ ಹೇಳಿದ್ದೇನು?
ಮುಂಬರುವ 2023ರ ವಿಧಾನಸಭಾ ಚುನಾವಣೆ ಕಾಂಗ್ರೆಸ್ಗೆ ಅತಿ ಪ್ರಮುಖವಾದದ್ದಾಗಿದೆ. ಕೆಪಿಸಿಸಿಗೆ ಟಿಕೆಟ್ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ. ನಾನೂ ಸೇರಿದಂತೆ ಯಾವ ರೀತಿ ಪಕ್ಷಕ್ಕೋಸ್ಕರ ಕೆಲಸ ಮಾಡುತ್ತೇವೆ ಎಂಬುದನ್ನು ಗಮನಿಸಲಾಗುತ್ತದೆ. ಆಕಾಂಕ್ಷಿಗಳು ಹೆಚ್ಚಿರುವ ಕಡೆಗಳಲ್ಲಿ ಯಾರು ಪಕ್ಷಕ್ಕೆ ಹೆಚ್ಚು ದುಡಿಯುತ್ತಾರೋ, ಗೆಲ್ಲುವ ಸಾಮರ್ಥ್ಯ ಹೊಂದಿದ್ದಾರೋ ಅಂತಹವರಿಗೆ ಟಿಕೆಟ್ ಸಿಗಬಹುದು. ಯಾರಿಗೂ ಅಸಮಾಧಾನವಾಗದಂತೆ, ಸಂಘಟಿತರಾಗಿ ಕಾರ್ಯನಿರ್ವಹಿಸುವಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರು ಸಲಹೆ, ಸೂಚನೆ ನೀಡಿದ್ದಾರೆ. ಇದೇ ಮಾರ್ಗದಲ್ಲಿ ಸಾಗುತ್ತೇವೆ ಎಂದು ಹೇಳಿದರು.

ಬೆಂಗಳೂರಿನಲ್ಲಿ ಕುಳಿತುಕೊಂಡರೆ ಏನು ಆಗಲ್ಲ
ಬೆಂಗಳೂರಿನಲ್ಲಿ ಕೂರುವುದು ತಪ್ಪು. ಜಿಲ್ಲಾ ಕೇಂದ್ರ ಮನೆ ಇದ್ದ ಹಾಗೆ. ಮಾಜಿ ಸಚಿವರು, ಶಾಸಕರು, ಪಕ್ಷದ ದೊಡ್ಡ ಮುಖಂಡರಿದ್ದಾರೆ. ತಂದೆ ಬಂಗಾರಪ್ಪ ಹಾಗೂ ಶಾಮನೂರು ಶಿವಶಂಕರಪ್ಪರು ಆತ್ಮೀಯರಾಗಿದ್ದಾರೆ. ರಾಜ್ಯ ಕಚೇರಿಗಳಲ್ಲಿ ಕುಳಿತುಕೊಂಡರೆ ಏನೂ ಆಗುವುದಿಲ್ಲ. ಪಕ್ಷಕ್ಕೆ ಡ್ಯಾಮೇಜ್ ಆಗದಂತೆ ಕಾರ್ಯ ನಿರ್ವಹಿಸಲಾಗುವುದು. ಅಲ್ಲದೇ ಮಾಜಿ ಶಾಸಕ ವೈ.ಎಸ್.ವಿ ದತ್ತಾ ಕಾಂಗ್ರೆಸ್ ಸೇರ್ಪಡೆ ಆಗಲಿದ್ದಾರೆ. ಅದೇ ರೀತಿ ಪುಟ್ಟಣ್ಣ ಸೇರಿದಂತೆ ಹಲವರು ಕಾಂಗ್ರೆಸ್ಗೆ ಬರುತ್ತಾರೆ. ಆದಷ್ಟು ಬೇಗ ಬಂದರೆ ಒಳ್ಳೆಯದು. ಚುನಾವಣೆಗೆ ಕೆಲ ತಿಂಗಳು ಬಾಕಿ ಇರುವುದರಿಂದ ಈಗಲೇ ಪಕ್ಷ ಸೇರಿದರೆ ಸಂಘಟನೆಗೆ ಮತ್ತಷ್ಟು ಬಲ ಬರುತ್ತದೆ ಎಂದು ಅಭಿಪ್ರಾಯಪಟ್ಟರು.

ದಾವಣಗೆರೆ ರಾಜಕೀಯದ ಬಗ್ಗೆ ಮಧು ಹೇಳಿದ್ದೇನು?
ಮಾಜಿ ಮುಖ್ಯಮಂತ್ರಿ ಹಾಗೂ ನನ್ನ ತಂದೆ ಎಸ್. ಬಂಗಾರಪ್ಪರು ರಾಜಕೀಯ ನಿರ್ಧಾರ ತೆಗೆದುಕೊಳ್ಳುವ ಕೇಂದ್ರ ಬಿಂದು ದಾವಣಗೆರೆ ಆಗಿತ್ತು. ಕೆಸಿಪಿ ಪಕ್ಷ ಕಟ್ಟಿದಾಗ ನಾನು ಸಹ 23 ದಿನಗಳ ಕಾಲ ಇಲ್ಲೇ ಇದ್ದೆ. ಆಗ ನಡೆದ ಸಮಾವೇಶ ಈಗಲೂ ಜನರ ಕಣ್ಮುಂದೆ ಇದೆ. ಅಷ್ಟು ದೊಡ್ಡ ಶಕ್ತಿ ನೀಡಿದ ನೆಲ ಇದು. ನಮ್ಮ ತಂದೆ ಹೆಚ್ಚು ಸಮಯವನ್ನು ಇಲ್ಲಿ ಕಳೆದಿದ್ದರು ಎಂದು ಮಧು ಬಂಗಾರಪ್ಪ ನೆನಪಿಸಿಕೊಂಡರು.
ಬೆಣ್ಣೆದೋಸೆ ಎಷ್ಟು ರುಚಿಯೋ ರಾಜಕೀಯಕ್ಕೂ ಅಷ್ಟೇ ದಾವಣಗೆರೆ ಒಳ್ಳೆಯ ಸ್ಥಳವಾಗಿದೆ. ಬಂಗಾರಪ್ಪರ ಮಗ ಎಂದು ಒಬಿಸಿ ಘಟಕ ಅಧ್ಯಕ್ಷ ಸ್ಥಾನ ನೀಡುವುದು ಬೇಡ ಎಂದಿದ್ದೆ. ಹಿರಿಯರಿಗೆ ಕೊಡಿ ಎಂದು ಮನವಿ ಮಾಡಿದ್ದೆ. ಆದರೂ ರಾಜ್ಯ ನಾಯಕರು, ಹೈಕಮಾಂಡ್ ನನ್ನನ್ನು ನಂಬಿ ಕೊಟ್ಟಿರುವ ಜವಾಬ್ದಾರಿಯನ್ನು ನಿಭಾಯಿಸುತ್ತೇನೆ. ಹಾಗೆಯೇ ಅವರ ಪರವಾಗಿ ಹೆಚ್ಚಾಗಿ ಬರೆದಿದ್ದೀರಿ. ನಮ್ಮ ಬಗ್ಗೆಯೂ ಸ್ವಲ್ಪ ಹೆಚ್ಚಾಗಿ ಬರೆಯಿರಿ ಎಂದು ಮಾಧ್ಯಮದವರ ಬಳಿ ಹಾಸ್ಯ ಚಟಾಕಿ ಹಾರಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಹೆಚ್. ಬಿ. ಮಂಜಪ್ಪ, ಮಾಜಿ ಶಾಸಕ ಡಿ. ಬಿ. ಶಾಂತನಗೌಡ, ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕ ಗಡಿಗುಡಾಳ್ ಮಂಜುನಾಥ್, ಕೆಪಿಸಿಸಿ ವಕ್ತಾರ ಡಿ. ಬಸವರಾಜ್, ಕೆ. ಜಿ. ಶಿವಕುಮಾರ್, ಬಸವಂತಪ್ಪ ಸೇರಿದಂತೆ ಮತ್ತಿತರರು ಹಾಜರಿದ್ದರು.












Click it and Unblock the Notifications