ಚಂದ್ರು ಕಾರು ಪತ್ತೆ ಹಚ್ಚಿದ್ದು ನಾವು, ಪೊಲೀಸರು ಮಾಡಿದ್ದೇನು: ಬಿಜೆಪಿ ಕಾರ್ಯಕರ್ತರ ಪ್ರಶ್ನೆ
ದಾವಣಗೆರೆ, ನವೆಂಬರ್, 05: ಶಾಸಕ ರೇಣುಕಾಚಾರ್ಯರ ಸಹೋದರ ಎಂ.ಪಿ.ರಮೇಶ್ ಅವರ ಪುತ್ರ ಚಂದ್ರಶೇಖರ್ ಸಾವು ಪ್ರಕರಣ ದಿನಕ್ಕೊಂದು ಟ್ವಿಸ್ಟ್ ಪಡೆಯುತ್ತಿದೆ. ರಾಜಕೀಯ ದ್ವೇಷ, ತ್ರಿಕೋನ ಪ್ರೇಮಕಥೆ, ಕೈಕಾಲು ಕಟ್ಟಿ ಹಾಕಿ ಕೊಲೆ, ಅಪಘಾತ ಸೇರಿದಂತೆ ವಿವಿಧ ವಿಚಾರಗಳು ಬೆಳಕಿಗೆ ಬರುತ್ತಿವೆ. ಸಾಯುವ ಮುನ್ನ ಚಂದ್ರಶೇಖರ್ಗೆ ಪದೇ ಪದೇ ಫೋನ್ ಕರೆ ಬಂದಿವೆ ಎನ್ನಲಾಗಿದೆ. ಆದರೆ ಆ ನಂಬರ್ ಯಾವುದು? ಚಂದ್ರಶೇಖರ್ ಜೊತೆಗಿದ್ದ ಕಿರಣ್ ಜೊತೆಗಿನ ಸ್ನೇಹ ಕುರಿತಾಗಿಯೂ ತನಿಖೆ ಮುಂದುವರಿದಿದೆ. ಫೊರೆನ್ಸಿಕ್ ವರದಿ ಹಾಗೂ ಮರಣೋತ್ತರ ಪರೀಕ್ಷಾ ವರದಿ ಬಳಿಕವಷ್ಟೇ ಅಪಘಾತವೋ, ಕೊಲೆಯೋ ಎಂಬುದು ಸ್ಪಷ್ಟವಾಗಿ ಗೊತ್ತಾಗಲಿದೆ. ಹಾಗೂ ಮತ್ತೊಂದೆಡೆ ಕಾರ್ಯಕರ್ತರು ಡ್ರೋನ್ ಮೂಲಕ ಚಂದ್ರು ಕಾರನ್ನು ಪತ್ತೆ ಹಚ್ಚಿದ್ದು ನಾವು, ಪೊಲೀಸರು ಏನು ಮಾಡಿದರು? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ನೇತೃತ್ವದಲ್ಲಿ ಮೂರು ತಂಡಗಳು ತನಿಖೆ ನಡೆಸುತ್ತಿವೆ. ಈಗಾಗಲೇ ಚಂದ್ರಶೇಖರ್ ಬಳಸುತ್ತಿದ್ದ ಮೊಬೈಲ್ ಪತ್ತೆಯಾಗಿದೆ. ಇನ್ನು ಮೊಬೈಲ್ನಲ್ಲಿನ ಎಲ್ಲಾ ದತ್ತಾಂಶಗಳನ್ನು ಕಲೆ ಹಾಕಲಾಗುತ್ತಿದೆ. ವೈಯಕ್ತಿಕ ದ್ವೇಷ ಇತ್ತಾ ಎಂಬ ಕುರಿತು ತನಿಖೆ ನಡೆಸಲಾಗುತ್ತಿದೆ. ಮರಣೋತ್ತರ ಪರೀಕ್ಷೆ ವರದಿ ಮುಗಿದಿದೆ. ಎಫ್ಎಸ್ಎಲ್ ವರದಿ ಇನ್ನೆರಡು ದಿನಗಳಲ್ಲಿ ಪೊಲೀಸರ ಕೈಸೇರಲಿದ್ದು, ಆಗ ತನಿಖೆಗೆ ಮತ್ತಷ್ಟು ಸಹಕಾರವಾಗಲಿದೆ.
ಚಂದ್ರು ಸಾವಿನ ತನಿಖೆ ಸರಿಯಾಗಿ ನಡೆಯುತ್ತಿಲ್ಲ: ಪೊಲೀಸರ ವಿರುದ್ಧ ರೇಣುಕಾಚಾರ್ಯ ಆಕ್ರೋಶ
ಕಾರು ಪತ್ತೆಯಾದ ಸ್ಥಳದಲ್ಲಿ ಮಾಹಿತಿ ಸಂಗ್ರಹ
ಟವರ್ ಡಂಪ್, ಮೊಬೈಲ್ ಕರೆ ಹಿಸ್ಟರಿ ಸೇರಿದಂತೆ ಕಿರಣ್ನನ್ನು ತೀವ್ರ ವಿಚಾರಣೆಗೊಳಪಡಿಸಲಾಗುತ್ತಿದೆ. ದಾವಣಗೆರೆ, ಹುಬ್ಬಳ್ಳಿಯ ವಿಧಿವಿಜ್ಞಾನ ಪ್ರಯೋಗಾಲಯದ ಸಿಬ್ಬಂದಿ ಸಾಕ್ಷ್ಯ ಕಲೆಹಾಕಿದ್ದಾರೆ. ಕಾರು ಪತ್ತೆಯಾದ ಸ್ಥಳದಲ್ಲಿ ಮಾಹಿತಿ ಕಲೆ ಹಾಕುವ ಕೆಲಸ ನಡೆದಿದೆ. ಚಂದ್ರು ಜೊತೆಗಿದ್ದವರ ಸ್ನೇಹಿತರ ವಿಚಾರಣೆಯೂ ತೀವ್ರಗೊಳ್ಳುತ್ತಿದ್ದು, ಪ್ರಕರಣ ಕ್ಷಣಕ್ಷಣಕ್ಕೂ ಹೊಸ ತಿರುವು ಪಡೆಯುತ್ತಿದೆ. ಕೊಲೆಯೋ, ಅಪಘಾತವೋ ಎಂಬ ಸ್ಪಷ್ಟ ವಿಚಾರ ಇದುವರೆಗೆ ಗೊತ್ತಾಗಿಲ್ಲ. ರೇಣುಕಾಚಾರ್ಯರ ಕುಟುಂಬದವರು ಇದೊಂದು ವ್ಯವಸ್ಥಿತ ಕೊಲೆ. ಇದರ ಹಿಂದಿರುವ ಆರೋಪಿಗಳನ್ನು ಪತ್ತೆ ಹಚ್ಚಬೇಕು ಎಂಬ ಒತ್ತಾಯವನ್ನು ಮಾಡುತ್ತಲೇ ಇದ್ದಾರೆ.
ಕಾರಿನ ಸೀಟಿನ ಹಿಂದೆ ಚಂದ್ರು ಹೋಗಿ ಹೇಗೆ ಬಿದ್ದ? ಆತನ ಕೈಕಾಲು ಕಟ್ಟಿ ಹಾಕಿ ಕೊಂದು ಹಾಕಲಾಗಿದೆ. ಇದೊಂದು ಪೂರ್ವ ನಿಯೋಜಿತ ಕೃತ್ಯ, ಇಷ್ಟೊಂದು ಸಾಕ್ಷ್ಯಗಳು ಇದ್ದರೂ ಪೊಲೀಸರು ಯಾಕೆ ಸಮರ್ಪಕವಾಗಿ ತನಿಖೆ ನಡೆಸುತ್ತಿಲ್ಲ? ಕಾರು ಅಷ್ಟು ವೇಗವಾಗಿ ಗುದ್ದಿದ್ದರೆ ಈ ರೀತಿಯಾಗಿ ಇರುತ್ತಿತ್ತಾ? ಎಂಬ ವಿಚಾರದ ಬಗ್ಗೆ ಪೊಲೀಸ್ ಇಲಾಖೆ ಸ್ಪಷ್ಟವಾಗಿ ಹೇಳುತ್ತಿಲ್ಲ ಎಂದು ರೇಣುಕಾಚಾರ್ಯರ ಕುಟುಂಬದವರು ದೂರುತ್ತಲೇ ಇದ್ದಾರೆ.
ಕಾರು ಮತ್ತು ಚಂದ್ರು ಶವ ಪತ್ತೆ ಹಚ್ಚಿದ್ದು ನಾವು
ಹೊನ್ನಾಳಿ ಶಾಸಕ ರೇಣುಕಾಚಾರ್ಯ ತಮ್ಮನ ಮಗ ಚಂದ್ರಶೇಖರ್ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಹೊನ್ನಾಳಿಯಲ್ಲಿ ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾರು ವೇಗವಾಗಿ ಬಂದು ಸೇತುವೆಗೆ ಗುದ್ದಿದೆ ಎಂದು ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಅಲೋಕ್ ಕುಮಾರ್ ಅವರು ನೀಡಿರುವ ಹೇಳಿಕೆ ಗೊಂದಲ ಮೂಡಿಸಿದೆ. ಕಾರು, ಚಂದ್ರಶೇಖರ್ ಪತ್ತೆ ಹಚ್ಚಿದ್ದು ನಾವು. ನಾಲ್ಕು ದಿನಗಳಾದರೂ ಯಾಕೆ ಪತ್ತೆ ಹಚ್ಚಲಿಲ್ಲ. ನಾವೇ ಡ್ರೋನ್ ಮೂಲಕ ಕಾರು ಮತ್ತು ಚಂದ್ರಶೇಖರ್ ಶವವನ್ನು ಪತ್ತೆ ಮಾಡಿದ್ದೆವು. ಹಾಗಿದ್ದರೆ ಪೊಲೀಸರು ಏನು ಮಾಡುತ್ತಿದ್ದರು? ಎಂದು ಪ್ರಶ್ನಿಸಿದ್ದಾರೆ.
ಚಂದ್ರು ಮೊಬೈಲ್ ಪತ್ತೆ, ಹಲವು ಮಾಹಿತಿ ಸಿಕ್ಕಿದೆ: ಆರಗ ಜ್ಞಾನೇಂದ್ರ
ಶಾಸಕರ ನಿವಾಸದಲ್ಲಿ ಕಾರ್ಯಕರ್ತರ ದಂಡು
ಹೊನ್ನಾಳಿಯ ರೇಣುಕಾಚಾರ್ಯ ನಿವಾಸದಲ್ಲಿ ಜಮಾಯಿಸಿದ ಕಾರ್ಯಕರ್ತರು, ಇದು ಪೂರ್ವನಿಯೋಜಿತ ಕೊಲೆ. ಸರಿಯಾಗಿ ತನಿಖೆ ನಡೆಸದಿದ್ದರೆ ಹೋರಾಟ ಶುರು ಮಾಡಬೇಕಾಗುತ್ತದೆ. ಪೋಲಿಸರು ಸರಿಯಾದ ಹಂತದಲ್ಲಿ ಆರೋಪಿಗಳನ್ನು ಪತ್ತೆ ಮಾಡುತ್ತಿಲ್ಲ. ತನಿಖೆಯೂ ಸರಿಯಾದ ದಾರಿಯಲ್ಲಿ ಆಗುತ್ತಿಲ್ಲ. ಬೆಳೆಯುತ್ತಿದ್ದಂತಹ ಹುಡುಗ ಚಂದ್ರಶೇಖರ್ನನ್ನು ಕೊಂದಿರುವ ಆರೋಪಿಗಳನ್ನು ಬಿಡಬಾರದು. ಪಕ್ಷ, ಸರ್ಕಾರ ನಮಗೆ ಮುಖ್ಯವಲ್ಲ, ಚಂದ್ರಶೇಖರ್ ಸಾವಿಗೆ ನ್ಯಾಯ ಬೇಕು ಅಷ್ಟೇ ಎಂದು ಬಿಜೆಪಿ ಕಾರ್ಯಕರ್ತರ ಒತ್ತಾಯವಾಗಿದೆ.
ಮಹಿಳೆಯರಿಗೆ ಶಾಸಕರಿಂದ ನಮಸ್ಕಾರ
ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯರಿಗೆ ವಿವಿಧ ಗ್ರಾಮಗಳಿಂದ ಬಂದಿದ್ದ ಮಹಿಳೆಯರು ಊಟವನ್ನು ತಿನ್ನಿಸಿದರು. ಹೊನ್ನಾಳಿ ತಾಲೂಕಿನ ಮಾದೇಹಳ್ಳಿ ಗ್ರಾಮದ ಮಹಿಳೆಯರು ರೇಣುಕಾಚಾರ್ಯರ ನಿವಾಸಕ್ಕೆ ಆಗಮಿಸಿ, ಧೈರ್ಯ ತುಂಬುವ ಪ್ರಯತ್ನವನ್ನು ಮಾಡಿದರು. ಶಾಸಕರು ಹಾಗೂ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ವಿವಿಧ ಗ್ರಾಮದ ಮುಖಂಡರು ನಿಮ್ಮೊಂದಿಗೆ ನಾವಿದ್ದೇವೆ, ಸಮಾಧಾನ ಮಾಡಿಕೊಳ್ಳಿ ಎಂದು ಹೇಳಿದರು. ಶಾಸಕರಿಗಾಗಿ ಇಡ್ಲಿ, ಪಡ್ಡು, ರೊಟ್ಟಿ, ಗಿಣ್ಣ ಮಾಡಿಕೊಂಡು ಬಂದಿದ್ದ ಮಹಿಳೆಯರು ತುತ್ತು ತಿನ್ನಿಸಿದರು. ತುತ್ತು ತಿಂದು ಮಹಿಳೆಯರಿಗೆ ಶಾಸಕ ರೇಣುಕಾಚಾರ್ಯ ನಮಸ್ಕರಿಸಿದರು.