ವೀರಾಚಾರಿ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ನೀಡಲು ಆಗ್ರಹ
ದಾವಣಗೆರೆ, ಸೆಪ್ಟೆಂಬರ್ 22: ನ್ಯಾಯಬೆಲೆ ಅಂಗಡಿಯಲ್ಲಿನ ಅಕ್ರಮದ ವಿರುದ್ಧ ಆಹಾರ ಇಲಾಖೆಯ ಅಧಿಕಾರಿಗಳಿಗೆ ದೂರು ನೀಡಿದರೂ ನ್ಯಾಯ ಸಿಗದೆ ಮನನೊಂದು ಸಾಲುಮರ ವೀರಾಚಾರಿ ನೇಣಿಗೆ ಶರಣಾಗಿದ್ದಾರೆ. ಅವರ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಜಿಲ್ಲಾ ವಿಶ್ವಕರ್ಮ ಸಮಾಜದ ಪ್ರಧಾನ ಕಾರ್ಯದರ್ಶಿ ಬಿ. ವಿ. ಶಿವಾನಂದ ಸರಕಾರಕ್ಕೆ ಆಗ್ರಹಿಸಿದ್ದಾರೆ.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹರಿಹರ ತಾಲ್ಲೂಕು ಮಿಟ್ಲಕಟ್ಟೆ ಗ್ರಾಮದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪರಿಸರ ಪ್ರೇಮಿ ವೀರಾಚಾರಿಯವರ ನಿಧನ ತುಂಬಲಾರದ ನಷ್ಟ. ಸಾವಿರಾರು ಗಿಡಗಳನ್ನು ನೆಟ್ಟು ಸಂರಕ್ಷಿಸಿ, ಪರಿಸರಕ್ಕೆ ಅನನ್ಯ ಸೇವೆ ಸಲ್ಲಿಸಿ ಸಮಾಜದ ಪರಿಸರ ಪ್ರೇಮಿ ಎಂದು ಖ್ಯಾತಿಯಾಗಿದ್ದರು. ಈ ಹಿನ್ನೆಲೆಯಲ್ಲಿ ವೀರಾಚಾರಿ ಕುಟುಂಬದ ಸದಸ್ಯರೊಬ್ಬರಿಗೆ ಕೆಲಸ ನೀಡಬೇಕು. ಮಿಟ್ಲಕಟ್ಟೆ ಗ್ರಾಮದ ಮುಖ್ಯರಸ್ತೆಯ ಸರ್ಕಲ್ಗೆ ವೀರಾಚಾರಿಯವರ ಪ್ರತಿಮೆ ಮಾಡಿ ಉದ್ಯಾನವನ ರೀತಿಯಲ್ಲಿ ಅಭಿವೃದ್ಧಿಪಡಿಸಬೇಕು ಎಂದು ಒತ್ತಾಯಿಸಿದರು.
ಮರಗಳನ್ನು ಬೆಳೆಸಿ ನೀರು ಹಾಕಲು ಹಣದ ಕೊರತೆ ಎದುರಾಗಿತ್ತು. ಆಗ ಪತ್ನಿಯ ಮೂಗುತಿ ಮಾರಿ ಅದರಿಂದ ಬಂದ ಹಣದಲ್ಲಿ ಗಿಡಗಳನ್ನು ಬೆಳೆಸಿ ನಿರ್ವಹಣೆ ಮಾಡಿದ್ದಾರೆ. ಈ ಸೇವೆಯು ರಾಜ್ಯಕ್ಕೆ ಮತ್ತು ದೇಶಕ್ಕೆ ಮಾದರಿ. ಇಂತಹ ಮಹಾನ್ ವ್ಯಕ್ತಿಯು ನಮ್ಮ ಸಮಾಜದಲ್ಲಿ ಹುಟ್ಟಿದ್ದು ಈಗ ಕಣ್ಮರೆಯಾಗಿರುವುದು ವಿಪರ್ಯಾಸ. ಅವರ ಕುಟುಂಬ ವರ್ಗಕ್ಕೆ, ಅಭಿಮಾನಿಗಳಿಗೆ ಮತ್ತು ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ ಎಂದರು.

ಮಿಟ್ಲಕಟ್ಟೆ ವೀರಾಚಾರಿ ಅವರು ಗ್ರಾಮದ ನ್ಯಾಯಬೆಲೆ ಅಂಗಡಿಯಲ್ಲಿ ನಡೆಯುತ್ತಿದ್ದ ಅಕ್ರಮವನ್ನು ಕಂಡು ಮಾಲೀಕನ ವಿರುದ್ಧ ಆಹಾರ ಇಲಾಖೆಯ ಅಧಿಕಾರಿಗಳಿಗೆ ದೂರು ನೀಡಿದ್ದರು. ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದ್ದರು. ಆದರೂ ಬೇಡಿಕೆ ಈಡೇರದಿದ್ದಕ್ಕೆ ಇಹಲೋಹ ತ್ಯಜಿಸಿದ್ದಾರೆ. ಆಹಾರ ಇಲಾಖೆಯ ಅಧಿಕಾರಿಗಳಿಗೆ ಅಕ್ರಮ ತಡೆಯುವ ಅಧಿಕಾರ ಇತ್ತು. ಇಲಾಖೆಯ ಅಧಿಕಾರಿಗಳ ಉದಾಸೀನತೆಯಿಂದ ಒಬ್ಬ ಪ್ರತಿಭಾವಂತ ಪರಿಸರ ಪ್ರೇಮಿಯನ್ನು ಕಳೆದುಕೊಂಡಿದ್ದೇವೆ ಎಂದು ದೂರಿದರು.
ಸರ್ಕಾರದ ಪುರಸ್ಕೃತರಿಗೆ ಈ ರೀತಿಯ ಕಾನೂನು ವಂಚನೆಯಾದರೆ ಸಾರ್ವಜನಿಕರ ಗತಿ ಏನು ? ಇದರಿಂದ ಸಾರ್ವಜನಿಕರು ನ್ಯಾಯವನ್ನು ಯಾರಿಂದ ಪಡೆಯಬೇಕೆಂಬ ಪ್ರಶ್ನೆ ಕಾಡುತ್ತದೆ. ಆದ್ದರಿಂದ ಸರ್ಕಾರ, ಜಿಲ್ಲಾಡಳಿತ ಮತ್ತು ಆಹಾರ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಯನ್ನು ನಮ್ಮ ಸಮಾಜ ಖಂಡಿಸುತ್ತದೆ. ಯಾರೇ ಪ್ರಭಾವಿ ವ್ಯಕ್ತಿಗಳಾದರೂ ಸಹ ಅಂಥವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಿ ಅವರನ್ನು ಜಿಲ್ಲೆಯಿಂದ ಗಡಿಪಾರು ಮಾಡಬೇಕು. ಈ ಮೂಲಕ ಇಂತ ಕೃತ್ಯ ಎಸಗುವವರಿಗೆ ಒಂದು ಪಾಠವಾಗಬೇಕು ಎಂದು ಹೇಳಿದರು.












Click it and Unblock the Notifications