ವಿಡಿಯೋ; ಉಪ ಚುನಾವಣೆ ಬಗ್ಗೆ ಯಡಿಯೂರಪ್ಪ ಮಾತು
ದಾವಣಗೆರೆ, ಅಕ್ಟೋಬರ್ 24; "ರಾಜ್ಯದಲ್ಲಿ ನಡೆಯುತ್ತಿರುವ ಎರಡೂ ಉಪಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಗಳು ದೊಡ್ಡ ಅಂತರದಲ್ಲಿ ಜಯಭೇರಿ ಬಾರಿಸಲಿದ್ದಾರೆ. ಮೋದಿಯವರ ಪಕ್ಷಕ್ಕೆ ಸಂಪೂರ್ಣ ಬೆಂಬಲ ನೀಡಬೇಕೆಂಬ ತೀರ್ಮಾನ ಮಾಡಿದ್ದಾರೆ" ಎಂದು ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಹೇಳಿದರು.
ದಾವಣಗೆರೆಯಲ್ಲಿ ನಡೆದಿದ್ದ ಬಿಜೆಪಿ ಕಾರ್ಯಕಾರಿಣಿಯಲ್ಲಿ ಮಾತನಾಡುವ ವೇಳೆ ಯಡಿಯೂರಪ್ಪ, "ಲೋಕಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮುಖ ನೋಡಿಕೊಂಡು ಜನರು ಮತ ನೀಡುತ್ತಾರೆ. ಆದರೆ ರಾಜ್ಯದಲ್ಲಿ ಅಷ್ಟು ಸುಲಭವಲ್ಲ" ಎಂಬ ಮಾತು ಹೇಳಿದ್ದರು.
ಈ ಹೇಳಿಕೆ ಸಾಕಷ್ಟು ಚರ್ಚೆಗೂ ಕಾರಣವಾಗಿತ್ತು. ಆದರೆ ಭಾನುವಾರ ದಾವಣಗೆರೆಯಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಯಡಿಯೂರಪ್ಪ, "ಮೋದಿ ಅವರ ಪಕ್ಷಕ್ಕೆ ಬೆಂಬಲ ನೀಡಲು ಜನರು ತೀರ್ಮಾನಿಸಿದ್ದಾರೆ" ಎಂದು ಹೇಳುವ ಮೂಲಕ ಮತ್ತೊಮ್ಮೆ ಕುತೂಹಲ ಮೂಡಿಸಿದ್ದಾರೆ.

"ಹಾನಗಲ್ ಹಾಗೂ ಸಿಂಧಗಿ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯಭೇರಿ ಬಾರಿಸಲಿದ್ದಾರೆ. ದೊಡ್ಡ ಅಂತರದಲ್ಲಿ ಗೆಲ್ಲುತ್ತೇವೆ. ಎಲ್ಲಾ ಮುಖಂಡರು ಅಲ್ಲೇ ಇದ್ದು, ಪ್ರಚಾರ ನಡೆಸುತ್ತಿದ್ದಾರೆ. ದೊಡ್ಡ ದೊಡ್ಡ ಸಭೆಗಳು ಈಗಾಗಲೇ ನಡೆದಿವೆ. ಗೆಲುವು ನಿಶ್ಚಿತ" ಎಂದು ವಿಶ್ವಾಸ ವ್ಯಕ್ತಪಡಿಸಿದರು.
"ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ವಿರೋಧ ಪಕ್ಷದವರು ಅಪಪ್ರಚಾರ ನಡೆಸುತ್ತಿದ್ದಾರೆ. ಇದಕ್ಕೆ ಕವಡೆ ಕಾಸಿನ ಬೆಲೆ ಇರೋದಿಲ್ಲ. ಚುನಾವಣೆ ವೇಳೆ ವಿರೋಧ ಪಕ್ಷಗಳು ಅಪಪ್ರಚಾರ ಮಾಡುವುದು ಸ್ವಾಭಾವಿಕ. ಇದಕ್ಕೆಲ್ಲಾ ತಲೆಕೆಡಿಸಿಕೊಳ್ಳದೇ ನಮ್ಮ ಕೆಲಸ ನಾವು ಮಾಡುತ್ತೇವೆ" ಎಂದರು.
ಬುರುಡೆ ಸರ್ಕಾರ ಎಂಬ ಸಿದ್ದರಾಮಯ್ಯ ಆರೋಪಕ್ಕೆ ಪ್ರತಿಕ್ರಿಯಿಸಿದ ಯಡಿಯೂರಪ್ಪ, "ಸಿದ್ದರಾಮಯ್ಯನವರು ಏನು ಬೇಕಾದರೂ ಮಾತನಾಡಬಹುದು. ಚುನಾವಣೆಯ ಫಲಿತಾಂಶ ಬಂದ ಮೇಲೆ ಗೊತ್ತಾಗುತ್ತದೆ" ಎಂದು ತಿರುಗೇಟು ನೀಡಿದರು.
ಉಪ ಚುನಾವಣೆಯ ಪ್ರಚಾರಕ್ಕೆ ಹೋಗಿದ್ದ ಯಡಿಯೂರಪ್ಪ ಶನಿವಾರ ರಾತ್ರಿ ದಾವಣಗೆರೆಯ ಜಿಎಂಐಟಿಗೆ ಆಗಮಿಸಿ ವಾಸ್ತವ್ಯ ಹೂಡಿದ್ದರು. ಸಂಸದ ಜಿ. ಎಂ. ಸಿದ್ದೇಶ್ವರ್ ಜೊತೆ ಚುನಾವಣೆಯಲ್ಲಿನ ಕಾರ್ಯತಂತ್ರದ ಬಗ್ಗೆ ಯಡಿಯೂರಪ್ಪ ಚರ್ಚೆ ನಡೆಸಿದ್ದಾರೆ.
ಬಾರದ ಬೊಮ್ಮಾಯಿ; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಹ ಶನಿವಾರ ರಾತ್ರಿ 9 ಗಂಟೆಗೆ ಜಿಎಂಐಟಿಗೆ ಬರುತ್ತಾರೆ. ವಾಸ್ತವ್ಯ ಹೂಡುತ್ತಾರೆ ಎಂಬ ಮಾಹಿತಿ ಇತ್ತು. ಸಿಎಂ ಆಗಮನದ ಹಿನ್ನೆಲೆಯಲ್ಲಿ ಎಲ್ಲಾ ರೀತಿಯ ಸಿದ್ಧತೆಯನ್ನು ಪೊಲೀಸರು ಮಾಡಿಕೊಂಡಿದ್ದರು.
ಆದರೆ ಉಪ ಚುನಾವಣೆ ಪ್ರಚಾರ ಮುಗಿಯುವುದು ತಡವಾದ ಕಾರಣ ಸಿಎಂ ಆಗಮಿಸಲಿಲ್ಲ. ಯಡಿಯೂರಪ್ಪ ಬರುತ್ತಾರೆ ಎಂಬ ಕಾರಣಕ್ಕೆ ಸಿಎಂ ಬರುವವರಿದ್ದರೋ ಅಥವಾ ಚುನಾವಣೆಯಲ್ಲಿ ಗೆಲುವಿಗೆ ಕಾರ್ಯತಂತ್ರ ರೂಪಿಸಲು ಬರುವವರಿದ್ದರೋ ಗೊತ್ತಿಲ್ಲ.












Click it and Unblock the Notifications