ಸಾವಿರಾರು ಎಕರೆ ಅಡಿಕೆ ತೋಟ ಜಲಾವೃತ; ಕಂಗಾಲಾದ ದಾವಣಗೆರೆ ಜಿಲ್ಲೆಯ ಅನ್ನದಾತರು!
ದಾವಣಗೆರೆ, ಸೆಪ್ಟೆಂಬರ್, 05: ಜಿಲ್ಲೆಯಲ್ಲಿ ಮಳೆಯ ಆರ್ಭಟ ಮುಂದುವರೆದಿದ್ದು, ಅಪಾರ ಪ್ರಮಾಣ ಹಾನಿ ಸಂಭವಿಸಿದೆ. ಬೆಳೆಗಳು ಜಲಾವೃತವಾಗಿ ರೈತರು ಕಂಗಾಲಾಗಿದ್ದಾರೆ. ಚನ್ನಗಿರಿ ತಾಲೂಕು ಒಂದರಲ್ಲಿಯೇ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಎಕರೆ ಪ್ರದೇಶ ಜಲಾವೃತವಾಗಿದ್ದು, ಅಡಿಕೆ ಬೆಳೆಗಾರರು ಕಂಗಾಲಾಗಿದ್ದಾರೆ. ಅಡಿಕೆ ಕೊಯ್ಲಿನ ವೇಳೆಯಲ್ಲಿ ಭಾರಿ ಮಳೆ ಸುರಿದಿದ್ದು, ರೈತರಿಗೆ ಆಘಾತವನ್ನು ಉಂಟು ಮಾಡಿದೆ.
ಚನ್ನಗಿರಿ ತಾಲೂಕಿನಲ್ಲಿ 599 ಮನೆಗಳು ಮಳೆಯಿಂದ ಹಾನಿಗೊಳಗಾಗಿದ್ದು, ಅದರಲ್ಲಿ 540 ಮನೆಗಳಿಗೆ ಪರಿಹಾರ ಮಂಜೂರಾತಿ ಬಾಕಿ ಇದೆ. ರುದ್ರಾಪುರ ಗ್ರಾಮದಲ್ಲಿ ಸಂತ್ರಸ್ತರಿಗಾಗಿ ಕಾಳಜಿ ಕೇಂದ್ರ ತೆರೆಯಲಾಗಿದೆ. ಕಳೆದ ಹದಿನಾಲ್ಕು ದಿನಗಳಿಂದ ಜಿಲ್ಲೆಯಲ್ಲಿ ವರುಣ ಆರ್ಭಟ ಶುರು ಮಾಡಿದ್ದಾನೆ. ಜಿಲ್ಲೆಯಲ್ಲಿ 144 ಮಿಲಿ ಮೀಟರ್ಗೂ ಹೆಚ್ಚು ಮಳೆ ದಾಖಲಾಗಿದೆ. ಜಿಲ್ಲೆಯಾದ್ಯಂತ ಒಟ್ಟು 13,608 ಹೆಕ್ಟೇರ್ನಲ್ಲಿ ಬೆಳೆ ಹಾನಿ ಆಗಿದೆ. ಈಗಾಗಲೇ ಪರಿಹಾರ ಮಂಜೂರಾತಿಗಾಗಿ ಜಿಲ್ಲಾಡಳಿತವು ಸರ್ಕಾರಕ್ಕೆ ಪ್ರಸ್ತಾವನೆವನ್ನು ಸಲ್ಲಿಸಿದೆ.
ದಾವಣಗೆರೆ: ಮಳೆ, ಪ್ರವಾಹದಿಂದ ಎಲ್ಲೆಲ್ಲಿ ಎಷ್ಟು ಹಾನಿಯಾಗಿದೆ?
ಜಿಲ್ಲಾಡಳಿತ ನೀಡಿರುವ ಮಾಹಿತಿ ಪ್ರಕಾರ ಇದುವರೆಗೂ 956 ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿ ಆಗಿದೆ. ಹೊಸದಾಗಿ 27.32 ಹೆಕ್ಟೇರ್ ಬೆಳೆ ಹಾನಿ ಸಮೀಕ್ಷೆ ನಡೆಸಲಾಗುತ್ತಿದೆ. ಸಮೀಕ್ಷೆ ಪೂರ್ಣಗೊಂಡ ನಂತರ ವರದಿ ತಯಾರಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಮಳೆ ಆರ್ಭಟಕ್ಕೆ ಬೆಣ್ಣೆ ನಗರಿ ಜನರು ತತ್ತರ
ಜಿಲ್ಲೆಯಾದ್ಯಂತ ಸುರಿಯುತ್ತಿರುವ ಮಳೆಯಿಂದಾಗಿ ಹಲವೆಡೆ ಮನೆಗಳು ಹಾನಿಗೊಳಗಾಗಿವೆ. ಅನೇಕರು ಮನೆಗಳನ್ನು ಕಳೆದುಕೊಂಡಿದ್ದಾರೆ. ಅಲ್ಲದೇ ಪರ್ಯಾಯ ವ್ಯವಸ್ಥೆ ಇಲ್ಲದೇ ಸಂಕಷ್ಟ ಅನುಭವಿಸುತ್ತಿದ್ದಾರೆ. ಜಿಲ್ಲಾಡಳಿತವು ಪರಿಹಾರ, ಕಾಳಜಿ ಕೇಂದ್ರ ತೆರೆಯುವ ಭರವಸೆ ನೀಡಿದ್ದರೂ ಯಾವುದೇ ಪ್ರಯೋಜನ ಆಗಿಲ್ಲ. ಮತ್ತೆ ಮಳೆ ಆರ್ಭಟ ಶುರು ಮಾಡಿದ್ದು ಹಳ್ಳ ಕೊಳ್ಳಗಳು, ನದಿಗಳು ಅಪಾಯದ ಮಟ್ಟದಲ್ಲಿ ಉಕ್ಕಿ ಹರಿಯುತ್ತಿವೆ. ಬೆಳೆಗಳು ಕಳೆದುಕೊಂಡ ರೈತ ಆತಂಕಕ್ಕೆ ಒಳಗಾಗಿದ್ದಾರೆ. ಮುಂಗಾರು ಮಳೆ ಆರ್ಭಟದ ಬಳಿಕ ಹಿಂಗಾರು ಮಳೆಯೂ ಹೆಚ್ಚಾಗಿ ಸುರಿಯುತ್ತಿದ್ದು, ವಾಡಿಕೆಗಿಂತ ಹೆಚ್ಚಾಗಿ ಮಳೆ ಆಗಿರುವುದರಿಂದ ಪ್ರವಾಹ ಭೀತಿಯು ಜಾಸ್ತಿಯಾಗಿದೆ.
ಬೆಳೆ ಹಾನಿ ಆದ ರೈತರಿಗೆ ಕೃಷಿ ಇಲಾಖೆಯವರು ಯಾವುದೇ ಅನ್ಯಾಯ ಆಗದಂತೆ ಪರಿಹಾರ ಒದಗಿಸಲು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ವಿಶೇಷವಾಗಿ ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳು ಮಳೆಯಿಂದ ಹಾನಿಗೊಳಗಾದ ಬೆಳೆಗಳ ಸರ್ವೇ ನಡೆಸಿ ವರದಿ ತಯಾರಿಸಬೇಕು. ಸರ್ಕಾರಕ್ಕೆ ಈ ಬಗ್ಗೆ ಪ್ರಸ್ತಾವನೆ ಸಲ್ಲಿಸುವಂತೆ ಆಯಾ ತಾಲೂಕು ತಹಶೀಲ್ದಾರ್ ಸೇರಿದಂತೆ ಇತರೆ ಅಧಿಕಾರಿಗಳಿಗೆ ಜಿಲ್ಲಾಡಳಿತ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಬೇಗ ಕಾಮಗಾರಿ ಪೂರ್ಣಗೊಳಿಸಲು ಸೂಚನೆ
ಇನ್ನು ದಾವಣಗೆರೆ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಒತ್ತುವರಿ ಮಾಡಿಕೊಂಡಿರುವುದರಿಂದ ನೀರು ರಸ್ತೆ ಮೇಲೆ ಚರಂಡಿಯಂತೆ ಹರಿಯುತ್ತಿದೆ. ಈ ಹಿನ್ನೆಲೆಯಲ್ಲಿ ಚರಂಡಿ, ರಾಜಕಾಲುವೆಗಳನ್ನು ತೆರವುಗೊಳಿಸಬೇಕು. ಸ್ಮಾರ್ಟ್ ಸಿಟಿ ವತಿಯಿಂದ ಕೈಗೊಂಡ ಬಸ್ ಸ್ಟ್ಯಾಂಡ್, ರಸ್ತೆ ಸೇರಿದಂತೆ ವಿವಿಧ ಕಾಮಗಾರಿಗಳನ್ನು ಮುಂದಿನ ಏಪ್ರಿಲ್ ತಿಂಗಳೊಳಗೆ ಪೂರ್ಣಗೊಳಿಸಬೇಕು ಎಂದು ಸೂಚನೆ ನೀಡಲಾಗಿದೆ.
ಪರಿಹಾರ ಪಡೆದುಕೊಂಡ ಹಳ್ಳಿಗಳು
ದಾವಣಗೆರೆ ತಾಲೂಕಿನ ವ್ಯಾಪ್ತಿಯಲ್ಲಿ ಒಟ್ಟು 168 ಮನೆಗಳಿಗೆ ಹಾನಿ ಆಗಿದ್ದು, ಇವುಗಳಲ್ಲಿ ಎ.ಬಿ.ಸಿ ವರ್ಗವಾರು 131 ಮನೆಗಳಿಗೆ ಪರಿಹಾರ ಮಂಜೂರು ಮಾಡಲಾಗಿದೆ. ಇನ್ನು 37 ಮನೆಗಳಿಗೆ ಪರಿಹಾರ ಒದಗಿಸಬೇಕಾಗಿದೆ. ಹರಿಹರ ತಾಲೂಕಿನಲ್ಲಿ ಒಟ್ಟು 106 ಮನೆಗಳು ಹಾನಿಗೊಳಗಾಗಿವೆ. ಈ ಪೈಕಿ 103 ಮನೆಗಳಿಗೆ ಪರಿಹಾರ ಒದಗಿಸಲಾಗಿದ್ದು, ಇನ್ನು 3 ಮನೆಗಳಿಗೆ ಪರಿಹಾರ ಒದಗಿಸುವ ಕಾರ್ಯ ಬಾಕಿ ಉಳಿದಿದೆ. ಈಗಾಗಲೇ ಜಗಳೂರು ತಾಲೂಕಿನಲ್ಲಿ ಹಾನಿಗೊಳಗಾಗಿದ್ದ ಎಲ್ಲಾ 48 ಮನೆಗಳಿಗೂ ಪರಿಹಾರ ಒದಗಿಸುವ ಕಾರ್ಯ ಪೂರ್ಣಗೊಂಡಿದೆ.
ಶಾಶ್ವತ ಪರಿಹಾರ ಕಲ್ಪಿಸುವಂತೆ ಜನರ ಒತ್ತಾಯ
ಹರಿಹರದ ಗಂಗಾ ನಗರ ಹಾಗೂ ಹೊನ್ನಾಳಿ ಪಟ್ಟಣದ ಬಾಲರಾಜ್ ಘಾಟ್ ಬಳಿ ಪ್ರತಿ ಬಾರಿಯಂತೆ ಈ ಬಾರಿಯೂ ಹೊಳೆ ನೀರು ಹರಿಯುತ್ತಿದ್ದು, ಇಲ್ಲಿನ ಪ್ರದೇಶದ ಮನೆಗಳು ಜಲಾವೃತವಾಗಿವೆ. ಸೂಕ್ತ ಸೂರು ಕಲ್ಪಿಸುವಂತೆ ಜನರು ಒತ್ತಾಯಿಸುತ್ತಾ ಬಂದಿದ್ದರೂ ಬೇಡಿಕೆ ಮಾತ್ರ ಇದುವರೆಗೂ ಈಡೇರಿಲ್ಲ. ಈಗ ಲಭ್ಯವಿರುವ ಕಡೆ ತಕ್ಷಣ ಜಾಗ ಗುರುತಿಸಿ ನಿವೇಶನ ನೀಡಿ ಮನೆ ಕಟ್ಟಿಕೊಳ್ಳಲು ಕ್ರಮವಹಿಸಿ. ಎಷ್ಟು ದಿನ ಹೀಗೆಯೇ ಪರಿಹಾರ ಕೊಟ್ಟು ಕೂರುತ್ತೀರಿ. ಈ ಸಮಸ್ಯೆ ಇಲ್ಲಿಗೆ ಮುಗಿಯಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ್ ಹೇಳಿದ್ದರು. ಈ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯೋನ್ಮುಖ ಆಗಿದ್ದರೂ ಕೆಲಸ ವೇಗವಾಗಿ ನಡೆಯುತ್ತಿಲ್ಲ ಎಂದು ಮಳೆ ಹಾನಿಗೊಳಗಾದವರು ಅಳಲು ತೋಡಿಕೊಂಡಿದ್ದಾರೆ.