ಶಾಮನೂರು ಕುಟುಂಬಕ್ಕಿಲ್ಲ ದಾವಣಗೆರೆ ಟಿಕೆಟ್, 'ಕೈ' ಅಭ್ಯರ್ಥಿ ಯಾರು?
Recommended Video
ದಾವಣಗೆರೆ, ಮಾರ್ಚ್ 13 : ದಾವಣಗೆರೆ ಕ್ಷೇತ್ರದ ಲೋಕಸಭಾ ಚುನಾವಣೆ ಕುತೂಹಲಕ್ಕೆ ಕಾರಣವಾಗಿದೆ. ಮೊದಲ ಬಾರಿಗೆ ಶಾಮನೂರು ಶಿವಶಂಕರಪ್ಪ ಕುಟುಂಬದಿಂದ ಯಾರೂ ಚುನಾವಣಾ ಕಣಕ್ಕಿಳಿಯುತ್ತಿಲ್ಲ. ಅಚ್ಚರಿಯ ಅಭ್ಯರ್ಥಿಯನ್ನು ಕಣಕ್ಕಿಳಿಸಲು ನಿರ್ಧರಿಸಲಾಗಿದೆ.
ಕಾಂಗ್ರೆಸ್ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ, ಎಸ್.ಎಸ್.ಮಲ್ಲಿಕಾರ್ಜುನ ಅವರು ಚುನಾವಣಾ ಕಣಕ್ಕಿಳಿಯುತ್ತಿಲ್ಲ. ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಬಿ.ಮಂಜಪ್ಪ ಅವರು ಈ ಬಾರಿಯ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗುವ ಸಾಧ್ಯತೆ ಇದೆ.
ದಾವಣಗೆರೆ ಲೋಕಸಭಾ ಕ್ಷೇತ್ರದ ಪರಿಚಯ
2018ರ ವಿಧಾನಸಭೆ ಚುನಾವಣೆಯಲ್ಲಿ ಸೋತಿರುವ ಎಸ್.ಎಸ್.ಮಲ್ಲಿಕಾರ್ಜುನ ಅವರು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಉತ್ಸಾಹ ತೋರಿಸುತ್ತಿಲ್ಲ. ಕಾರ್ಯಕರ್ತರ ಸಭೆ, ಕ್ಷೇತ್ರದ ಭೇಟಿಯಿಂದ ಅವರು ದೂರವುಳಿದ್ದಾರೆ. ಶಾಮನೂರು ಶಿವಶಂಕರಪ್ಪ ಅವರು ಶಾಸಕರಾಗಿದ್ದು, ಅವರು ಲೋಕಸಭೆಗೆ ಸ್ಪರ್ಧೆ ಮಾಡುವುದಿಲ್ಲ.
ಮಾವ ಶಾಮನೂರು, ಅಳಿಯ ಜಿ ಎಂ ಸಿದ್ದೇಶ್ವರ ವೇದಿಕೆಯಲ್ಲೇ ಕಿತ್ತಾಡಿಕೊಂಡಾಗ!
ಬಿಜೆಪಿಯಿಂದ ಹಾಲಿ ಸಂಸದ ಜಿ.ಎಂ.ಸಿದ್ದೇಶ್ವರ ಅವರು ಅಭ್ಯರ್ಥಿಯಾಗುವುದು ಖಚಿತವಾಗಿದೆ. ಮೂರು ಚುನಾವಣೆಗಳಲ್ಲಿ ಜಯಗಳಿಸಿ ಹ್ಯಾಟ್ರಿಕ್ ಬಾರಿಸಿರುವ ಅವರು ನಾಲ್ಕನೇ ಚುನಾವಣೆಯಲ್ಲಿಯೂ ಜಯಗಳಿಸುವ ಉತ್ಸಾಹದಲ್ಲಿದ್ದಾರೆ. ಆದರೆ, ಅವರ ಎದುರಾಳಿಯಾಗಿ ಯಾರು ಕಣಕ್ಕಿಳಿಯಲಿದ್ದಾರೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ...
'ಬೆಳಗಾವಿಯೇ ಏಕೆ, ದಾವಣಗೆರೆ, ಕಲಬುರಗಿ ರಾಜಧಾನಿಯಾಗಲಿ'
ಸತತ ಸೋಲುಗಳು
ಎಸ್.ಎಸ್.ಮಲ್ಲಿಕಾರ್ಜುನ ಅವರು 2004, 2009, 2014ರ ಲೋಕಸಭಾ ಚುನಾವಣೆಯಲ್ಲಿ ದಾವಣಗೆರೆ ಕ್ಷೇತ್ರದಲ್ಲಿ ಸೋಲು ಕಂಡಿದ್ದಾರೆ. 2018ರ ವಿಧಾನಸಭೆ ಚುನಾವಣೆಯಲ್ಲಿಯೂ ಸೋತ ಬಳಿಕ ಈ ಬಾರಿಯ ಚುನಾವಣೆಗೆ ಸ್ಪರ್ಧಿಸುವ ಉತ್ಸಾಹ ಕಳೆದುಕೊಂಡಿದ್ದಾರೆ. ಆದರೆ, ಜಿಲ್ಲಾ ಘಟಕ ಅಭ್ಯರ್ಥಿಯಾಗಿ ಅವರ ಹೆಸರನ್ನು ಶಿಫಾರಸು ಮಾಡಿದೆ.
ಮೂವರ ಹೆಸರು ಚಾಲ್ತಿಯಲ್ಲಿ
ದಾವಣಗೆರೆ ಕ್ಷೇತ್ರದಿಂದ ಈ ಬಾರಿಯ ಚುನಾವಣೆಗೆ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಬಿ.ಮಂಜಪ್ಪ, ಎಸ್.ಎಸ್.ಮಲ್ಲಿಕಾರ್ಜುನ ಅವರ ಪತ್ನಿ ಪ್ರಭಾ ಮಲ್ಲಿಕಾರ್ಜುನ ಅವರ ಹೆಸರುಗಳು ಕೇಳಿ ಬರುತ್ತಿವೆ. ಶಾಮನೂರು ಕುಟುಂಬದವರೇ ಟಿಕೆಟ್ ಪಡೆಯಬೇಕು ಎಂಬ ಒತ್ತಾಯವನ್ನು ಕಾರ್ತಕರ್ತರು ಮಾಡುತ್ತಿದ್ದಾರೆ. ವಿಧಾನ ಪರಿಷತ್ ಸದಸ್ಯ ಎಚ್.ಎಂ.ರೇವಣ್ಣ ಅವರ ಹೆಸರು ಸಹ ಕೇಳಿಬರುತ್ತಿದೆ.
ಸೊಸೆಯನ್ನಾದರೂ ನಿಲ್ಲಿಸಿ
ಎಸ್.ಎಸ್.ಮಲ್ಲಿಕಾರ್ಜುನ ಅವರು ಸ್ಪರ್ಧೆ ಮಾಡದಿದ್ದರೆ ಸೊಸೆ ಪ್ರಭಾ ಮಲ್ಲಿಕಾರ್ಜುನ ಅವರನ್ನಾದರೂ ಕಣಕ್ಕಿಳಿಸಿ ಎಂದು ಕಾರ್ಯಕರ್ತರು ಒತ್ತಾಯ ಮಾಡುತ್ತಿದ್ದಾರೆ. ಪತಿಯ ಪರವಾಗಿ ಪ್ರಚಾರ ನಡೆಸಿದ ಅನುಭವ ಇರುವ ಪ್ರಭಾ ಅವರು ಜನರಿಗೆ ಸಹ ಪರಿಚಯವಿದ್ದಾರೆ. ಉತ್ತಮ ಮಾತುಗಾರಿಕೆಯನ್ನು ಹೊಂದಿದ್ದಾರೆ, ಅವರು ಸ್ಪರ್ಧಿಸಿದರೆ ಗೆಲುವು ಸಾಧಿಸಬಹುದು ಎಂಬುದು ಕಾರ್ಯಕರ್ತರ ಮಾತು.
ಎಚ್.ಬಿ.ಮಂಜಪ್ಪ ಹೆಸರು
ಶಾಮನೂರು ಶಿವಶಂಕರಪ್ಪ ಕುಟುಂಬದವರು ಟಿಕೆಟ್ ಪಡೆಯದಿದ್ದರೆ ಕುಟುಂಬಕ್ಕೆ ನಿಷ್ಠರಾದ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಬಿ.ಮಂಜಪ್ಪ ಅವರಿಗೆ ಟಿಕೆಟ್ ನೀಡಬೇಕು ಎಂಬುದು ಕಾರ್ಯಕರ್ತರ ಒತ್ತಾಯವಾಗಿದೆ. ಶಾಮನೂರು ಶಿವಶಂಕರಪ್ಪ ಮತ್ತು ಎಸ್.ಎಸ್.ಮಲ್ಲಿಕಾರ್ಜುನ ಅವರು ಇದಕ್ಕೆ ಒಪ್ಪಿಗೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಎಚ್.ಎಂ.ರೇವಣ್ಣ ಹೆಸರು
ವಿಧಾನ ಪರಿಷತ್ ಸದಸ್ಯ ಮತ್ತು ಕುರುಬ ಸಮುದಾಯದ ಎಚ್.ಎಂ.ರೇವಣ್ಣ ಅವರ ಹೆಸರು ಸಹ ಅಭ್ಯರ್ಥಿಗಳ ಪಟ್ಟಿಯಲ್ಲಿ ಕೇಳಿಬರುತ್ತಿದೆ. ಕೆಲವು ಸ್ವಾಮೀಜಿಗಳು ರೇವಣ್ಣ ಹೆಸರು ಪ್ರಸ್ತಾಪಿಸಿದ್ದಾರೆ ಎಂದು ತಿಳಿದುಬಂದಿದೆ. ಆದರೆ, ಶಾಮನೂರು ಕುಟುಂಬದವರು ಹೇಳಿದವರಿಗೆ ಮಾತ್ರ ಟಿಕೆಟ್ ಸಿಗಲಿಗೆ ಎಂಬುದು ಗುಟ್ಟಾಗಿ ಉಳಿದಿಲ್ಲ.