ಜನವರಿ 6ರಂದು ತೆರೆಗೆ ಅಪ್ಪಳಿಸಲಿದೆ ಫೋಟೋಗ್ರಾಫರ್ಗಳ ಜೀವನದ ಕಥೆ ಹೇಳುವ ಸಿನಿಮಾ
ದಾವಣಗೆರೆ, ಜನವರಿ 02: ಶ್ರೀ ಬಾಲಾಜಿ ಫೋಟೋ ಸ್ಟುಡಿಯೋ ಸಿನಿಮಾ ಜನವರಿ 6ಕ್ಕೆ ರಾಜ್ಯಾದ್ಯಂತ ತೆರೆ ಕಾಣಲಿದ್ದು, ಸುಮಾರು 100 ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ. ಇದು ಛಾಯಾಗ್ರಾಹಕರ ಬದುಕಿನ ಬಗ್ಗೆ ಬೆಳಕು ಚೆಲ್ಲುವ ಕಥಾ ಹಂದರ ಹೊಂದಿರುವ ಸಿನಿಮಾ ಆಗಿದೆ. ಹಾಸ್ಯದ ಜೊತೆಗೆ ಕೌಟುಂಬಿಕ ವಿಚಾರಗಳೂ ಸಹ ಈ ಚಿತ್ರದಲ್ಲಿವೆ ಎಂದು ನಿರ್ದೇಶಕ, ನಟ, ಅಗ್ನಿ ನಕ್ಷತ್ರ ಧಾರಾವಾಹಿ ಖ್ಯಾತಿಯ ರಾಜೇಶ್ ಧ್ರುವ ದಾವಣಗೆರೆಯಲ್ಲಿ ತಿಳಿಸಿದರು.
ಬೆಣ್ಣೆನಗರಿಯಲ್ಲಿ ವೈಕುಂಠ ಏಕಾದಶಿ ಸಡಗರ: ವೆಂಕಟೇಶ್ವರ ಸನ್ನಿಧಾನದಲ್ಲಿ ನೆರೆದ ಭಕ್ತಗಣ
ಫೋಟೋಗ್ರಾಫರ್ಗಳ ಜೀವನದ ಸಿನಿಮಾ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫೋಟೋಗ್ರಾಫರ್ಗಳ ಕಾಯಕ, ನೋವು, ಅವರದೇ ಆದ ವ್ಯಥೆಗಳ ಕುರಿತು ಈ ಚಿತ್ರದಲ್ಲಿ ತೆರೆದಿಡಲಾಗಿದೆ. ಹಳ್ಳಿಯಲ್ಲಿ ಇದ್ದರೆ ಜೀವನದಲ್ಲಿ ಮುಂದೆ ಬರಲು ಆಗದು. ಅದೇ ನಗರಕ್ಕೆ ಹೋದರೆ ಕೈತುಂಬಾ ಹಣ ದುಡಿಯಬಹುದು. ಉತ್ತಮ ಸಾಧನೆ ಮಾಡಬಹುದು ಎಂಬ ಕನಸು ಹೊತ್ತ ಫೋಟೋಗ್ರಾಫರ್ ಕುರಿತಾದ ಸಿನಿಮಾ ಇದಾಗಿದೆ. ಆತ ಕೊನೆಗೆ ಬದುಕಿನ ಯುದ್ಧದಲ್ಲಿ ಗೆಲ್ಲುತ್ತಾನೆಯೋ ಅಥವಾ ಸೋಲುತ್ತಾನೆಯೋ ಎಂಬುದು ಸಸ್ಪೆನ್ಸ್ ಎಂದು ಹೇಳಿದರು.
ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಆದ್ಯತೆ
ಹೊಸ ವರ್ಷದಲ್ಲಿ ತೆರೆ ಕಾಣುತ್ತಿರುವ ಈ ಸಿನಿಮಾದಲ್ಲಿ ನಟಿಸಿರುವವರೆಲ್ಲರೂ ಹೊಸ ಕಲಾವಿದರೇ ಆಗಿದ್ದಾರೆ. ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಉತ್ತರ ಕನ್ನಡ ಭಾಷೆಯನ್ನು ಮೊದಲ ಬಾರಿಗೆ ಬಳಸಿಕೊಳ್ಳಲಾಗಿದೆ. ಚಿತ್ರದ "ಪುಕ್ಸಟ್ಟೆ" ಹಾಡು ಈಗಾಗಲೇ ಟ್ರೆಂಡ್ ಸೃಷ್ಟಿಸಿದೆ. ಚಿತ್ರದಲ್ಲಿ 5 ಹಾಡುಗಳಿದ್ದು, ಸಂಗೀತ ನಿರ್ದೇಶನ ಶ್ರೀರಾಮ್ ಗಂಧರ್ವ ಅವರದ್ದಾಗಿದೆ. ಹಾಡುಗಳಿಗೆ ಉತ್ತಮ ಸ್ಪಂದನೆ ಸಿಕ್ಕಿದೆ ಎಂದರು.
ಚಿತ್ರದಲ್ಲಿ ಇರುವ ಪಾತ್ರಗಳ ವಿವರ
ತಾರಾಗಣದಲ್ಲಿ ಪ್ರಮುಖ ಪಾತ್ರದಲ್ಲಿ ಸಂಪತ್ ಜಯರಾಮ್, ರವಿ ಸಾಲಿಯಾನ್, ರಾಧಿಕಾ ಅಚ್ಯುತ್ ರಾವ್, ಶುಭಲಕ್ಷ್ಮೀ ಸೇರಿದದಂತೆ ಇತರರು ಇದ್ದಾರೆ. ದಾವಣಗೆರೆ ಸಿನಿ ಸ್ಟುಡಿಯೋದ ಮನೋಜ್ ಛಾಯಾಗ್ರಹಣದ ಹೊಣೆಯನ್ನು ಹೊತ್ತಿದ್ದಾರೆ. ಆದ್ದರಿಂದ ಸಿನಿಮಾ ವೀಕ್ಷಿಸುವ ಮೂಲಕ ಹೊಸಬರಿಗೆ ಪ್ರೋತ್ಸಾಹ ನೀಡುವಂತೆ ಮನವಿ ಮಾಡಿದರು. ನಂತರ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿರುವ ಸಂಪತ್ ಜಯರಾಂ ಮಾತನಾಡಿ, ಹೊಸ ವರ್ಷಕ್ಕೆ ಹೊಸ ತಂಡದೊಂದಿಗೆ ಶ್ರೀ ಬಾಲಾಜಿ ಫೋಟೋ ಸ್ಟುಡಿಯೋ ತೆರೆಕಾಣುತ್ತಿದೆ. ಎಲ್ಲರೂ ಚಿತ್ರ ವೀಕ್ಷಿಸಿ ಹಾರೈಸಿ ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ, ನಟರಾದ ರವಿ ಸಾಲಿಯಾನ್, ಶರತ್, ದಾವಣಗೆರೆ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಅಧ್ಯಕ್ಷ ಹೆಚ್.ಕೆ.ಸಿ. ರಾಜು, ಪ್ರಧಾನ ಕಾರ್ಯದರ್ಶಿ ವಿಜಯ್ ಜಾಧವ್, ಪದಾಧಿಕಾರಿಗಳಾದ ತಿಪ್ಪೇಶ್, ಶಶಿ, ನವೀನ್ ಸೇರಿದಂತೆ ಮತ್ತಿತರರು ಹಾಜರಿದ್ದರು.