ಕಾಂಗ್ರೆಸ್ನ ಕೆಲವರು ಸಿಎಂ ಆಗುತ್ತೇವೆ ಎಂದು ತಿರುಕನ ಕನಸು ಕಾಣುತ್ತಿದ್ದಾರೆ: ಜಗಳೂರಿನಲ್ಲಿ ಬಿಎಸ್ವೈ ವ್ಯಂಗ್ಯ
ದಾವಣಗೆರೆ, ನವೆಂಬರ್ 23: 2023ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 140ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲ್ಲಲಿದೆ. ಸೂರ್ಯ, ಚಂದ್ರ ಇರುವುದು ಎಷ್ಟೋ ಸತ್ಯವೋ ನಾವು ಅಧಿಕಾರಕ್ಕೆ ಬರುವುದು ಅಷ್ಟೇ ಸತ್ಯ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಜಗಳೂರಿನಲ್ಲಿ ವಿಶ್ವಾಸ ವ್ಯಕ್ತಪಡಿಸಿದರು.
ಜಗಳೂರು ಪಟ್ಟಣದಲ್ಲಿ ಬಿಜೆಪಿ ವತಿಯಿಂದ ಆಯೋಜಿಸಿದ್ದ ಜನಸಂಕಲ್ಪ ಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಾಂಗ್ರೆಸ್ನ ಕೆಲ ನಾಯಕರು ಸಿಎಂ ಆಗುತ್ತೇವೆ ಎಂದು ತಿರುಕನ ಕನಸು ಕಾಣುತ್ತಿದ್ದಾರೆ. ತಿರುಕನ ಕನಸು ಕನಸಾಗಿಯೇ ಉಳಿಯುತ್ತದೆ. ಅದು ಕಾರ್ಯರೂಪಕ್ಕೆ ಬರುವುದಿಲ್ಲ ಅನ್ನುವುದು ನನಗೂ ಹಾಗೂ ನಿಮಗೂ ಗೊತ್ತಿದೆ. ಕಾಂಗ್ರೆಸ್ ಹಣ, ಹೆಂಡ ಹಂಚಿ ತೋಳ್ಬಲದಿಂದ ಅಧಿಕಾರಕ್ಕೆ ಬಂದಿದೆ. ಜಾತಿ ವಿಷ ಬೀಜ ಬಿತ್ತಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುವ ಕನಸು ಕಾಣುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದೊಂಬರಾಟ ಮಾಡುತ್ತಿರುವ ಕಾಂಗ್ರೆಸ್ಗೆ ಪಾಠ ಕಲಿಸಬೇಕು ಎಂಬ ನಿರ್ಧಾರವನ್ನು ಜನರು ಈಗಾಗಲೇ ಮಾಡಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ ಸೇರಿದಂತೆ ಬಿಜೆಪಿ ವರಿಷ್ಠರು ರಾಜ್ಯದ ಉದ್ದಗಲಕ್ಕೂ ಪ್ರವಾಸ ಮಾಡುತ್ತಾರೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಹಾಗೂ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರದ ಅಭಿವೃದ್ಧಿ ಕಾರ್ಯಗಳು ಜನರಿಗೆ ಇಷ್ಟವಾಗಿದೆ. ಸಂಸದ ಜಿ.ಎಂ. ಸಿದ್ದೇಶ್ವರ್ ನೇತೃತ್ವದಲ್ಲಿ ದಾವಣಗೆರೆ ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲಿಯೂ ಬಿಜೆಪಿ ಅಭ್ಯರ್ಥಿಗಳು ಗೆಲ್ಲಬೇಕು. ಈ ನಿಟ್ಟಿನಲ್ಲಿ ಎಲ್ಲರೂ ಕೆಲಸ ಮಾಡಿ ಎಂದು ಹೇಳಿದರು.

ರಾಮಚಂದ್ರಪ್ಪ ಬಗ್ಗೆ ಬಿ.ಎಸ್.ವೈ ಹೇಳಿದ್ದೇನು?
ನನ್ನ ಹುಟ್ಟೂರು ಬೂಕನಕೆರೆಯಲ್ಲಿ ಪೂಜಾ ಕಾರ್ಯಕ್ರಮ ಇರುವ ಕಾರಣ ಬೇಗ ಹೋಗುತ್ತಿದ್ದೇನೆ. ಎಸ್.ವಿ. ರಾಮಚಂದ್ರ ನನ್ನ ಆತ್ಮೀಯ ಸ್ನೇಹಿತ. ಐದು ನಿಮಿಷವಾದರೂ ಬಂದು ಹೋಗಿ ಎಂದಿದ್ದರು. ಹಾಗಾಗಿ ನಾನು ಇಲ್ಲಿಗೆ ಬಂದಿದ್ದೇನೆ. ಜಗಳೂರು ತಾಲೂಕಿನಲ್ಲಿ ರಾಮಚಂದ್ರಪ್ಪ ಸುಮಾರು 3,500 ಕೋಟಿ ರೂಪಾಯಿಗೂ ಹೆಚ್ಚು ಅನುದಾನ ತಂದು ಅಭಿವೃದ್ಧಿ ಕೆಲಸ ಮಾಡಿದ್ದಾರೆ. 224 ಶಾಸಕರ ಪೈಕಿ ಹೆಚ್ಚು ಅನುದಾನವನ್ನು ಪಡೆದಿದ್ದಾರೆ. ನಾನು ಸಹ ಶಿಕಾರಿಪುರಕ್ಕೆ ಇಷ್ಟೊಂದು ಅನುದಾನ ತಂದು ಕೆಲಸ ಮಾಡಲು ಆಗಿಲ್ಲ. ಮುಂಬರುವ ಚುನಾವಣೆಯಲ್ಲಿ 50 ಸಾವಿರ ಮತಗಳ ಅಂತರದಿಂದ ರಾಮಚಂದ್ರರನ್ನು ಗೆಲ್ಲಿಸಿ ಎಂದು ಜನರಲ್ಲಿ ಮನವಿ ಮಾಡಿದರು.

ಕಾಂಗ್ರೆಸ್ ವಿರುದ್ಧ ರಾಮುಲು ಕಿಡಿ
ಇನ್ನು ಮಾತು ಆರಂಭಿಸಿದ ಯಡಿಯೂರಪ್ಪನವರು ಸಂಸದರಾದ ಶ್ರೀರಾಮುಲು ಅವರೇ ಎಂದು ಬಾಯಿ ತಪ್ಪಿ ಅಂದಿದ್ದಾರೆ. ಬಳಿಕ ತಪ್ಪು ಸರಿಪಡಿಸಿಕೊಂಡು ಸಚಿವ ಶ್ರೀರಾಮುಲು ಎಂದಿರುವುದು ಗಮನಾರ್ಹವಾಗಿದೆ. ನಂತರ ಸಚಿವ ಬಿ. ಶ್ರೀರಾಮುಲು ಮಾತನಾಡಿ, ಬಿಜೆಪಿ ಅಧಿಕಾರಕ್ಕೆ ಬಂದರೆ ಪರಿಶಿಷ್ಟ ವರ್ಗ, ವಾಲ್ಮೀಕಿ ಸಮುದಾಯದವರಿಗೆ ಮೀಸಲಾತಿ ಜಾಸ್ತಿ ಮಾಡಿಸುತ್ತೇವೆ ಎಂಬ ಮಾತನ್ನು ನೀಡಿದ್ದೆ. ಬಸವರಾಜ ಬೊಮ್ಮಾಯಿ ಅವರು ವಾಲ್ಮೀಕಿ ಸಮುದಾಯಕ್ಕೆ ಶೇಕಡಾ 3ರಿಂದ 7ರಷ್ಟು ಮೀಸಲಾತಿ ಜಾಸ್ತಿ ಮಾಡಿದ್ದಾರೆ. ಶೇಕಡಾ 24ರಷ್ಟು ಮೀಸಲಾತಿ ಪರಿಶಿಷ್ಟ ವರ್ಗ ಮತ್ತು ಪಂಗಡದವರಿಗೆ ಸಿಗುತ್ತಿದೆ.

ಎಸ್ಸಿ, ಎಸ್ಟಿಗೆ ಮೀಸಲಾತಿ ನೀಡಿದ್ದು ನಾವು
ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾದ ಮೇಲೆ ಮನಸ್ಸು ಮಾಡಿದ್ದರೆ ಮೀಸಲಾತಿ ಜಾಸ್ತಿ ಮಾಡಬಹುದಿತ್ತು. ಆದರೆ ಅವರು ಯಾಕೆ ಆ ಕೆಲಸವನ್ನು ಮಾಡಲಿಲ್ಲ. ಬಸವರಾಜ ಬೊಮ್ಮಾಯಿ ಅವರು ಲಿಂಗಾಯತ ಸಮುದಾಯಕ್ಕೆ ಸೇರಿದರೂ ಕೂಡ ನಮ್ಮ ಬೇಡಿಕೆಯನ್ನು ಈಡೇರಿಸಿದ್ದಾರೆ. ಕಾಂಗ್ರೆಸ್ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರ ಮೂಗಿಗೆ ತುಪ್ಪು ಸುರಿಯುವ ಕೆಲಸವನ್ನು ಮಾಡಿತ್ತು. ಜೇನುಗೂಡಿಗೆ ಕೈಹಾಕಿ ಮೀಸಲಾತಿ ನೀಡಿ ತುಪ್ಪ ತಿನ್ನಿಸುವ ಕೆಲಸ ಬಿಜೆಪಿ ಹಾಗೂ ಸಿಎಂ ಮಾಡಿದ್ದಾರೆ ಎಂದರು.

ಕಾಂಗ್ರೆಸ್ನವರು ಸಿಎಂ ಕನಸು ಕಾಣುತ್ತಿದ್ದಾರೆ
ಸಚಿವ ಗೋವಿಂದ ಕಾರಜೋಳ ಮಾತನಾಡಿ, ದೇಶ ವಿಭಜನೆಯಾಗಿದ್ದರೆ ರಾಹುಲ್ ಗಾಂಧಿ ತಾತಾ ಅವರಿಗೆ ಕೇಳಬೇಕು. 60 ವರ್ಷಗಳ ಕಾಲ ದೇಶದಲ್ಲಿ ಕಾಂಗ್ರೆಸ್ ಆಡಳಿತ ಮಾಡಿದೆ. ದೀನ ದಲಿತರು, ಅಲ್ಪಸಂಖ್ಯಾತರು, ಬಡವರ ಹೆಸರಿನ ಮೇಲೆ ರಾಜಕಾರಣ ಮಾಡಿದ್ದು, ಅವರು ಕಲ್ಯಾಣ ಮಾಡಲಿಲ್ಲ. ಆದ್ದರಿಂದ ಇನ್ನು ಕೇಂದ್ರ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ. ಸಿದ್ದರಾಮಯ್ಯ, ಡಿ. ಕೆ. ಶಿವಕುಮಾರ್ ಹಾಗೂ ಜಿ. ಪರಮೇಶ್ವರ್ ಸೇರಿದಂತೆ ನಾಲ್ವರು ಸಿಎಂ ಆಗುವ ಕನಸನ್ನು ಕಾಣುತ್ತಿದ್ದಾರೆ. ಸರ್ಕಾರದ ಮೇಲೆ ಸುಳ್ಳು ಆರೋಪ ಮಾಡಿ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಈ ಸಂದರ್ಭದಲ್ಲಿ ಸಂಸದ ಜಿ.ಎಂ. ಸಿದ್ದೇಶ್ವರ್, ಶಾಸಕರಾದ ಎಸ್.ವಿ. ರಾಮಚಂದ್ರ, ಮಾಡಾಳು ವಿರೂಪಾಕ್ಷಪ್ಪ, ಎಂ.ಪಿ. ರೇಣುಕಾಚಾರ್ಯ, ರವಿಕುಮಾರ್, ನವೀನ್ ಕುಮಾರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.












Click it and Unblock the Notifications