ದಾವಣಗೆರೆ: ಏಪ್ರಿಲ್ನಲ್ಲಿ ಆರಂಭವಾಗಲಿದೆ ಸಾಫ್ಟ್ವೇರ್ ಪಾರ್ಕ್
ದಾವಣಗೆರೆ, ಜನವರಿ 27; ಇದು ದಾವಣಗೆರೆ ಜಿಲ್ಲೆಯ ಜನರಿಗೆ ಖುಷಿ ಸುದ್ದಿ. ಸದ್ಯದಲ್ಲಿಯೇ ದಾವಣಗೆರೆಯಲ್ಲಿ ಸಾಫ್ಟ್ ವೇರ್ ಟೆಕ್ನಾಲಜಿಸ್ ಪಾರ್ಕ್ ಆಫ್ ಇಂಡಿಯಾ ಪ್ರಾರಂಭಗೊಳ್ಳಲಿದೆ. ಇದಕ್ಕಾಗಿ ಸಿದ್ಧತೆಗಳು ಪ್ರಾರಂಭವಾಗಿದೆ. ಜಿಲ್ಲೆಯ ಜನರಿಗೆ ಏಪ್ರಿಲ್ ಮೊದಲ ವಾರದೊಳಗೆ ಉಪಕೇಂದ್ರವು ಉದ್ಘಾಟನೆಗೆ ಲಭ್ಯವಾಗುವಂತೆ ಮಾಡುವ ಪ್ರಯತ್ನಗಳೂ ಮುಂದುವರಿದಿವೆ.
ಕೋವಿಡ್ ಪಾಸಿಟಿವ್ ಆದ ಕಾರಣ ಜಿಎಂಐಟಿ ಅತಿಥಿ ಗೃಹದಲ್ಲಿ ಐಸೋಲೇಷನ್ನಲ್ಲಿರುವ ಸಂಸದರು, ದಾವಣಗೆರೆ ಜೆ. ಹೆಚ್. ಪಟೇಲ್ ನಗರದಲ್ಲಿನ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ ಕ್ಯಾಂಪಸ್ನಲ್ಲಿ ಸಿದ್ಧವಾಗುತ್ತಿರುವ ಎಸ್ಟಿಪಿಐ ಉಪಕೇಂದ್ರದ ಕುರಿತು ಅಧಿಕಾರಿಗಳೊಂದಿಗೆ ಮಾಹಿತಿ ಪಡೆದುಕೊಂಡರು.
ದಾವಣಗೆರೆ: ಬಸ್ ಡಿಕ್ಕಿ ಹೊಡೆದರೂ ಹೆಲ್ಮೆಟ್ ಉಳಿಸಿತು ಪ್ರಾಣ; CCTVಯಲ್ಲಿ ದೃಶ್ಯ ಸೆರೆ!
ಬಳಿಕ ಮಾತನಾಡಿದ ಸಂಸದ ಸಿದ್ದೇಶ್ವರ್, "ದಾವಣಗೆರೆ ಜಿಲ್ಲೆಯಲ್ಲಿ ಎಸ್ಟಿಪಿಐ ಉಪಕೇಂದ್ರ ಪ್ರಾರಂಭ ಆಗಬೇಕು ಎಂಬುದು ಜಿಲ್ಲೆಯ ಜನರ ಬಹುದಿನಗಳ ಕನಸು. ಇದೀಗ ನನಸಾಗುವ ಹಂತಕ್ಕೆ ಬಂದಿರುವುದು ಸಂತಸ ತಂದಿದೆ. ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ ಕ್ಯಾಂಪಸ್ನಲ್ಲಿ ತಾತ್ಕಾಲಿಕವಾಗಿ ಎಸ್ಟಿಪಿಐ ಉಪಕೇಂದ್ರದ ಪ್ರಾರಂಭಕ್ಕೆ ಸಿದ್ಧತಾ ಕಾರ್ಯ ಭರದಿಂದ ಸಾಗಿದೆ" ಎಂದರು.
ದಾವಣಗೆರೆ ಏರ್ಪೋರ್ಟ್ ಬೇಡಿಕೆಗೆ ಮನ್ನಣೆ, ಅಧಿಕಾರಿಗಳ ಭೇಟಿ
"ಸಂಸತ್ ಅಧಿವೇಶನ ಮುಗಿದ ಕೂಡಲೇ ಅಂದರೆ ಏಪ್ರಿಲ್ ಮೊದಲ ವಾರದಲ್ಲಿ ಉದ್ಘಾಟನೆಗೆ ಎಸ್ಟಿಪಿಐ ಉಪಕೇಂದ್ರ ಲಭ್ಯವಾಗಬೇಕು. ಈ ನಿಟ್ಟಿನಲ್ಲಿ ಸಿದ್ದತೆಗಳನ್ನು ಸಮರೋಪಾದಿಯಲ್ಲಿ ಕೈಗೊಳ್ಳಬೇಕು. ಎಸ್ಟಿಪಿಐ ಕೇಂದ್ರ ಪ್ರಾರಂಭವಾದಲ್ಲಿ, ಹಲವು ಸಾಫ್ಟ್ ವೇರ್ ಕಂಪನಿಗಳು, ಆ್ಯಪ್ ಮೂಲಕ ಕಾರ್ಯ ನಿರ್ವಹಿಸುವ ಕಂಪನಿಗಳು ಜಿಲ್ಲೆಯತ್ತ ಮುಖಮಾಡಲಿವೆ. ಜಿಲ್ಲೆಯಲ್ಲಿ ಐಟಿ ಉದ್ಯಮ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆಗಳಾಗಲಿವೆ" ಎಂದು ಹೇಳಿದರು.
ದಾವಣಗೆರೆ; ಇಬ್ಬರು ಶಾಸಕರ ಯಡವಟ್ಟು, ಬಿಜೆಪಿಗೆ ಇಕ್ಕಟ್ಟು!
ದಾವಣಗೆರೆಗೆ ಸೆಂಟರ್ ಆಫ್ ಎಕ್ಸಲೆನ್ಸ್ ಕೇಂದ್ರ
"ಕೇಂದ್ರ ಸರ್ಕಾರದ ಎಲೆಕ್ಟ್ರಾನಿಕ್ಸ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವಾಲಯದ ವತಿಯಿಂದ ದಾವಣಗೆರೆಗೆ ಸೆಂಟರ್ ಆಫ್ ಎಕ್ಸಲೆನ್ಸ್ ಕೇಂದ್ರ ತರಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ. ಈಗಾಗಲೇ ಸಾಫ್ಟ್ ವೇರ್ ಟೆಕ್ನಾಲಜಿ ಪಾರ್ಕ್ ಆಫ್ ಇಂಡಿಯಾದ ಉಪಕೇಂದ್ರ ಏಪ್ರಿಲ್ ತಿಂಗಳಲ್ಲಿ ಉದ್ಘಾಟನೆಯಾಗಿ ಕಾರ್ಯ ಪ್ರಾರಂಭ ಮಾಡಲಿದೆ. ಇದರ ಜೊತೆಗೆ ಸೆಂಟರ್ ಆಫ್ ಎಕ್ಸಲೆನ್ಸ್ ಕೇಂದ್ರವನ್ನೂ ಸಹ ತರಲು ಪ್ರಸ್ಥಾವನೆ ಸಿದ್ದಪಡಿಸಲು ಸೂಚನೆ ನೀಡಿದ್ದೇನೆ. ಎಸ್.ಟಿ.ಪಿ.ಐ. ಬೆಂಗಳೂರಿನ ಹಿರಿಯ ನಿರ್ದೇಶಕರಾದ ಶೈಲೇಂದ್ರ ತ್ಯಾಗಿಯವರು ಪ್ರಸ್ಥಾವನೆ ಸಿದ್ದಪಡಿಸಲು ಸಹಮತ ವ್ಯಕ್ತಪಡಿಸಿದ್ದಾರೆ. ಉದಯೋನ್ಮುಖ ಸ್ಟಾರ್ಟ್ ಅಪ್ ಗಳಿಗೆ ಮೂಲಸೌಕರ್ಯ, ಸಂಪನ್ಮೂಲಗಳು, ತರಬೇತಿ, ಮಾರ್ಗದರ್ಶನ, ತಂತ್ರಜ್ಞಾನ ಬೆಂಬಲ ಮತ್ತು ಧನಸಹಾಯವನ್ನು ಒದಗಿಸುವ ಗುರಿಯೊಂದಿಗೆ ಸೆಂಟರ್ ಆಪ್ ಎಕ್ಸಲೆನ್ಸ್ ಸ್ಥಾಪನೆ ಮಾಡುವ ಉದ್ದೇಶವಿದೆ" ಎಂದು ಸಂಸದ ಜಿ. ಎಂ. ಸಿದ್ದೇಶ್ವರ್ ಹೇಳಿದರು.
2.62 ಕೋಟಿ ರೂ. ವಿನಿಯೋಗ
ಸಾಫ್ಟ್ ವೇರ್ ಟೆಕ್ನಾಲಜಿಸ್ ಪಾರ್ಕ್ ಆಫ್ ಇಂಡಿಯಾದ ಬೆಂಗಳೂರಿನ ಹಿರಿಯ ನಿರ್ದೇಶಕ ಶೈಲೇಂದ್ರ ತ್ಯಾಗಿ ಅವರು ಎಸ್ಟಿಪಿಐ ಉಪಕೇಂದ್ರದ ಕುರಿತು ಮಾಹಿತಿ ನೀಡಿ, "ದಾವಣಗೆರೆಯಲ್ಲಿ ಉಪಕೇಂದ್ರ ಪ್ರಾರಂಭಿಸಲು ಎಸ್ಟಿಪಿಐ 2.62 ಕೋಟಿ ರೂ. ಅನುದಾನ ವಿನಿಯೋಗಿಸುತ್ತಿದೆ. ರಾಜ್ಯದಲ್ಲಿ ಮೈಸೂರು, ಮಂಗಳೂರು ಮತ್ತು ಹುಬ್ಬಳ್ಳಿಯಲ್ಲಿ ಎಸ್ಟಿಪಿಐ ಉಪಕೇಂದ್ರಗಳಿದ್ದು, ದಾವಣಗೆರೆಯಲ್ಲಿ 4ನೇ ಉಪಕೇಂದ್ರ ಪ್ರಾರಂಭವಾಗಲಿದೆ. ರಾಜ್ಯದ ಮಧ್ಯಭಾಗದಲ್ಲಿರುವ ದಾವಣಗೆರೆ ಜಿಲ್ಲೆ ಸ್ವಚ್ಛ, ಸುಂದರ ನಗರವಾಗಿದ್ದು, ವಿವಿಧ ಐಟಿ ಕಂಪನಿಗಳಿಗೆ, ದಾವಣಗೆರೆಯಲ್ಲಿ ಸಾರ್ಟ್ಅಪ್ ಕಂಪನಿಗಳು, ಆ್ಯಪ್ ಕಂಪನಿಗಳಿಗೆ ಇದರಿಂದ ಬಹಳಷ್ಟು ಅನುಕೂಲವಾಗಲಿದೆ" ಎಂದರು.
"ಉಪಕೇಂದ್ರದಲ್ಲಿ 200 ಸೀಟಿಂಗ್ ಸಾಮರ್ಥ್ಯದ ಪ್ಲಗ್ ಅಂಡ್ ಪ್ಲೇ ಸೌಲಭ್ಯ ಒದಗಿಸಲಾಗುವುದು, ಅಲ್ಲದೆ ಹೈಸ್ಪೀಡ್ ಡಾಟಾ ಟ್ರಾನ್ಸಫರ್, ಸಾರ್ಟ್ಅಪ್ ಇನ್ಕ್ಯೂಬೇಷನ್ ಸೆಂಟರ್ ವ್ಯವಸ್ಥೆ ದೊರಕಿಸಲಾಗುವುದು. ಇದು ದಾವಣಗೆರೆ ಸೇರಿದಂತೆ ಅಕ್ಕಪಕ್ಕದ ಜಿಲ್ಲೆಗಳಲ್ಲಿ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ಲಭ್ಯವಾಗಲು ನೆರವಾಗಲಿದೆ" ಎಂದು ಮಾಹಿತಿ ನೀಡಿದರು.
ಡಿಸೆಂಬರ್ನಿಂದಲೇ ಸಿದ್ಧತೆ
ದಾವಣಗೆರೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮಾತನಾಡಿ, "ದಾವಣಗೆರೆಯಲ್ಲಿ ಎಸ್ಟಿಪಿಐ ಉಪಕೇಂದ್ರ ಪ್ರಾರಂಭಕ್ಕೆ ಕಳೆದ ಡಿಸೆಂಬರ್ ತಿಂಗಳಿನಿಂದಲೇ ಸಿದ್ಧತೆ ಪ್ರಾರಂಭಿಸಲಾಗಿತ್ತು. ಆದರೆ ಮುಕ್ತ ವಿವಿ ಯವರೊಂದಿಗೆ ಒಡಂಬಡಿಕೆ ಮಾಡಿಕೊಳ್ಳುವ ವಿಷಯದಲ್ಲಿ ಸ್ವಲ್ಪ ವಿಳಂಬವಾಯಿತು. ಈಗಾಗಲೇ ಕಾಮಗಾರಿ ಸಮಾರೋಪಾದಿಯಲ್ಲಿ ನಡೆದಿದೆ. ಮಾರ್ಚ್ ಒಳಗಾಗಿ ಎಲ್ಲ ಪ್ರಮುಖ ಸಿದ್ಧತೆಗಳು ಆಗಲಿವೆ. ಐಟಿ ಕಂಪನಿಗಳು ಹಾಗೂ ಸ್ಟಾರ್ಟ್ಅಪ್ ಕಂಪನಿಗಳಿಗೆ ಎಸ್ಟಿಪಿಐ ಉಪಕೇಂದ್ರವು ಉತ್ತಮ ವೇದಿಕೆಯಾಗಲಿದೆ. ಜಿಲ್ಲಾಡಳಿತವು ಇವುಗಳಿಗೆ ಸಂಪರ್ಕ ಸೇತುವೆಯಂತೆ ಕೆಲಸ ಮಾಡಿಕೊಡಲಿದೆ. ಎಸ್ಟಿಪಿಐ ಹಿರಿಯ ನಿರ್ದೇಶಕರಾದ ಶೈಲೇಂದ್ರ ತ್ಯಾಗಿ ದಾವಣಗೆರೆಯಲ್ಲಿ ಗುಜರಾತ್ನ ಗಾಂಧಿನಗರಕ್ಕೆ ಹೋಲಿಕೆ ಮಾಡಿ, ನಗರವು ಸ್ವಚ್ಛ ಹಾಗೂ ಸುಂದರವಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ನಗರವನ್ನು ಇನ್ನಷ್ಟು ಸ್ವಚ್ಛವಾಗಿಸಲು ಶ್ರಮಿಸಲಾಗುವುದು. ವೈದ್ಯಕೀಯ ಶಿಕ್ಷಣ, ಇಂಜಿನಿಯರಿಂಗ್, ಸ್ನಾತಕೋತ್ತರ ಶಿಕ್ಷಣ, ವಿಶ್ವವಿದ್ಯಾಲಯ ಸೇರಿದಂತೆ ಶೈಕ್ಷಣಿಕ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ದಾವಣಗೆರೆ ಜಿಲ್ಲೆಗೆ ಎಸ್ಟಿಪಿಐ ಉಪಕೇಂದ್ರವು ಇನ್ನಷ್ಟು ಗರಿಮೆ ಮೂಡಿಸಲಿದೆ" ಎಂದರು.
ಕಾಮಗಾರಿ ಪರಿಶೀಲನೆ
"ವಾರಕ್ಕೊಮ್ಮೆ ಇಲ್ಲಿನ ಕೇಂದ್ರಕ್ಕೆ ಭೇಟಿ ನೀಡಿ, ಕಾಮಗಾರಿ ಪರಿಶೀಲನೆ ನಡೆಸಲಾಗುವುದು. ಸಂಸದರ ಮಾರ್ಗದರ್ಶನದಲ್ಲಿ ಎಸ್ಟಿಪಿಐ ಉಪಕೇಂದ್ರವನ್ನು ಆದಷ್ಟು ಶೀಘ್ರ ಸಿದ್ಧಪಡಿಸಲು ಎಲ್ಲ ಅಗತ್ಯ ಕ್ರಮ ಕೈಗೊಳ್ಳಲಾಗುವುದು" ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಎಸ್ಟಿಪಿಐ ಹಿರಿಯ ನಿರ್ದೇಶಕ ಶೈಲೇಂದ್ರ ತ್ಯಾಗಿ, ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು ದಾವಣಗೆರೆಯ ಜೆ.ಹೆಚ್.ಪಟೇಲ್ ನಗರದಲ್ಲಿನ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ ಕ್ಯಾಂಪಸ್ ಗೆ ಭೇಟಿ ನೀಡಿ, ಸಿದ್ಧವಾಗುತ್ತಿರುವ ಎಸ್ಟಿಪಿಐ ಉಪಕೇಂದ್ರದ ಕಾಮಗಾರಿ ಪರಿಶೀಲನೆ ನಡೆಸಿದರು.
ದೂಡಾ ಅಧ್ಯಕ್ಷ ದೇವರಮನಿ ಶಿವಕುಮಾರ್, ಹುಬ್ಬಳ್ಳಿ ಎಸ್ಟಿಪಿಐ ಕೇಂದ್ರದ ಜಂಟಿನಿರ್ದೇಶಕ ಸಸಿಕುಮಾರ್, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿನಿರ್ದೇಶಕರು ಹಾಗೂ ಜಿಪಂ ಉಪಕಾರ್ಯದರ್ಶಿ ಆನಂದ್, ಪ್ರಸನ್ನ, ಯಶವಂತ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
Recommended Video