ಕುಂದುವಾಡ ಕೆರೆಗೆ ಇಂಜಿನಿಯರ್ ಭೇಟಿ, ತರಾಟೆಗೆ ತೆಗೆದುಕೊಂಡ ಜನ
ದಾವಣಗೆರೆ, ಮಾರ್ಚ್ 27; ದಾವಣಗೆರೆ ನಗರದ ಜನರಿಗೆ ಕುಡಿಯುವ ನೀರಿಗಾಗಿ ನಿರ್ಮಿಸಲಾಗಿದ್ದ ಕುಂದವಾಡ ಕೆರೆಯ ಕಾಮಗಾರಿ ಅವೈಜ್ಞಾನಿಕ ಮತ್ತು ಕಳಪೆಯಿಂದ ಕೂಡಿದೆ ಎಂಬ ಆರೋಪ ಕೇಳಿ ಬಂದ ಹಿನ್ನಲೆಯಲ್ಲಿ ಸ್ಮಾರ್ಟ್ ಸಿಟಿ ಇಂಜಿನಿಯರ್ಗಳು ಸ್ಥಳಕ್ಕೆ ಭೇಟಿ ನೀಡಿದರು. ಈ ವೇಳೆ ಸ್ಥಳೀಯರು ಮತ್ತು ವಾಯುವಿಹಾರಿಗಳು ತರಾಟೆಗೆ ತೆಗೆದುಕೊಂಡರು.
ಕೆರೆಯಲ್ಲಿನ ಹೂಳೆತ್ತುವ ಕಾಮಗಾರಿಯು ಸಮರ್ಪಕವಾಗಿ ನಡೆಯುತ್ತಿಲ್ಲ. ಹೂಳು ತೆಗೆದು ಕೆರೆಯಿಂದ ಹೊರ ಹಾಕುವ ಬದಲು ಅಲ್ಲಿಯೇ ಮಣ್ಣನ್ನು ಹಾಕಲಾಗುತ್ತಿದೆ. ಪಾರದರ್ಶಕವಾಗಿ ನಡೆಯುತ್ತಿಲ್ಲ. ಈ ಕಾಮಗಾರಿಯಲ್ಲಿ ಅವ್ಯವಹಾರ ನಡೆದಿದೆ ಎಂದು ಸ್ಥಳೀಯರು ಮೇಲಿಂದ ಮೇಲೆ ಆರೋಪ ಮಾಡಿದ್ದರು. ಜನರಿಂದ ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕ ಗಡಿಗುಡಾಳ್ ಮಂಜುನಾಥ್ ನೇತೃತ್ವದ ತಂಡ ಭೇಟಿ ನೀಡಿತ್ತು. ಆಗಲೂ ಸ್ಥಳೀಯರು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದರು.
ಎಸ್. ಎಸ್. ಮಲ್ಲಿಕಾರ್ಜುನ್ ಸಚಿವರಾಗಿದ್ದಾಗ ಕುಂದುವಾಡ ಕೆರೆ ಸುಂದರವಾಗಿತ್ತು. ಕೆರೆಯ ಅಭಿವೃದ್ಧಿಗೆ ಕ್ರಮ ಕೈಗೊಂಡಿದ್ದರು. ದಾವಣಗೆರೆ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಪರಿಹರಿಸುವ ಸಲುವಾಗಿ ಆದಷ್ಟು ವಿಶೇಷ ಆಸಕ್ತಿ ವಹಿಸಿದ್ದರು. ಈ ಕೆರೆಯಲ್ಲಿ ವಿಹಾರಕ್ಕೆ ಬರುತ್ತಿದ್ದ ವಾಯುವಿಹಾರಿಗಳು, ಸ್ಥಳೀಯರು ಹಾಗೂ ವೀಕೆಂಡ್ ಸಮಯದಲ್ಲಿ ಜನರು ಹೆಚ್ಚಾಗಿ ಬರುತ್ತಿದ್ದರು.

ಈಗ ಮಾಡುತ್ತಿರುವ ಕೆರೆ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕವಾಗಿದೆ. ಕಳಪೆ ಕೆಲಸ ಆಗುತ್ತಿದೆ, ಹೊಸ ಪರಿಕರ ಬಳಕೆ ಮಾಡದೇ ಹಳೆಯದ್ದನ್ನೇ ಬಳಸಲಾಗುತ್ತಿದೆ. ವಾಕಿಂಗ್ ಮಾಡುವವರು ನಿತ್ಯವೂ ಸ್ಮಾರ್ಟ್ ಸಿಟಿ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಮಳೆಗಾಲ ಸದ್ಯದಲ್ಲಿ ಬರಲಿದೆ. ಕಾಮಗಾರಿಯನ್ನು ಆದಷ್ಟು ಬೇಗ ಪೂರ್ಣಗೊಳಿಸಬೇಕು. ಕಾಮಗಾರಿ ಪಾರದರ್ಶಕವಾಗಿ ಆಗಬೇಕು. ಜನರಿಂದ ಯಾವುದೇ ಆರೋಪ ಬಾರದಂತೆ ಗುಣಮಟ್ಟದ ಕಾಮಗಾರಿ ನಡೆಸಬೇಕು ಎಂದು ಪಾಲಿಕೆಯ ವಿರೋಧ ಪಕ್ಷದ ನಾಯಕ ಜಿ. ಎಸ್. ಗಡಿಗುಡಾಳ್ ಮಂಜುನಾಥ್ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಜೂನ್ ಅಂತ್ಯಕ್ಕೆ ಕೆರೆಯಲ್ಲಿ ಕೈಗೊಳ್ಳಲಾಗಿರುವ ಅಭಿವೃದ್ಧಿ ಕಾಮಗಾರಿ ಪೂರ್ಣಗೊಳಿಸುವುದಾಗಿ ಸ್ಮಾರ್ಟ್ ಸಿಟಿ ಅಧಿಕಾರಿಗಳು ಹೇಳುತ್ತಿದ್ದಾರೆ. ಈಗ ನಡೆಯುತ್ತಿರುವ ವೇಗ ಗಮನಿಸಿದರೆ ಕಷ್ಟ ಸಾಧ್ಯ. ಬಂಡ್ ಮೇಲಿನ ಕೆಲಸ ಮುಗಿಸಿ ಮೇ ತಿಂಗಳಿನಲ್ಲಿ ನೀರು ತುಂಬಿಸುವ ಗುರಿ ಹೊಂದಿರುವುದಾಗಿ ಹೇಳುತ್ತಾರೆ. ಹೂವಿನ ಹಾಸಿಗೆಗಳ ನಿರ್ಮಾಣ, ಫೆನ್ಸಿಂಗ್, ಕಲ್ಲಿನ ಆಸನಗಳು, ಇತರೆ ಅಲಂಕಾರಿಕಾ ಅಭಿವೃದ್ಧಿ, ಗಿಡ ನೆಡುವ ಕಾರ್ಯ ಆಗಬೇಕಿದೆ. ಇವೆಲ್ಲವೂ ಎರಡು ತಿಂಗಳಲ್ಲಿ ಆಗುವ ಸಾಧ್ಯತೆಯೂ ಕಡಿಮೆ. ಅಧಿಕಾರಿಗಳು ಬಾಯಿ ಮಾತಿನಲ್ಲಿ ಹೇಳುವ ಬದಲು ಕಾರ್ಯರೂಪಕ್ಕೆ ತರಬೇಕು ಎಂದು ಆಗ್ರಹಿಸಿದರು.

15 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಕಾಮಗಾರಿ ನಡೆಸಲಾಗುತ್ತಿದೆಯಾದರೂ, ಈ ಕೆರೆ 265 ಎಕರೆ ಭೂ ವಿಸ್ತೀರ್ಣ ಹೊಂದಿದೆ. 4.9 ಕಿಲೋಮೀಟರ್ ಸುತ್ತಳತೆಯುಳ್ಳ ಈ ಕೆರೆಯ ಏರಿ ಎತ್ತರಿಸುವುದು,ಕೆರೆಯ ವಿಸ್ತೀರ್ಣ ಹೆಚ್ಚಿಸುವುದು ಈ ಕಾಮಗಾರಿಯ ಪ್ರಮುಖ ಉದ್ದೇಶವಾಗಿದೆಯಾದರೂ ಇದು ಕಾರ್ಯರೂಪಕ್ಕೆ ಬರುವ ಲಕ್ಷಣ ಗೋಚರಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಕಾಂಗ್ರೆಸ್ ಮುಖಂಡರು, ಸ್ಥಳೀಯರು, ವಾಯುವಿಹಾರಿಗಳು ಸಹ ಸ್ಮಾರ್ಟ್ ಸಿಟಿ ಅಧಿಕಾರಿಗಳಿಗೆ ಕೆರೆಯ ದುಃಸ್ಥಿತಿ, ಕಳಪೆ ಕಾಮಗಾರಿಯ ಬಗ್ಗೆ ಮಾಹಿತಿ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸ್ಮಾರ್ಟ್ ಸಿಟಿ ಇಂಜಿನಿಯರ್ಗಳು ಗುಣಮಟ್ಟದ ಕಾಮಗಾರಿ ನಡೆಸುತ್ತೇವೆ. ಜನರ ಸಲಹೆ ಪಡೆಯುತ್ತೇವೆ. ಆರೋಪಗಳ ಬಗ್ಗೆ ಪರಿಶೀಲನೆ ನಡೆಸುತ್ತೇವೆ ಎಂಬ ಉತ್ತರ ನೀಡಿದರು.












Click it and Unblock the Notifications