ಎಲ್ಲಿ ಬೇಕಾದರೂ ಗಂಟೆ ಹೊಡೆದು ಉರುಳು ಸೇವೆ ಮಾಡಲು ರೆಡಿ: ಎಸ್.ಎಸ್. ಮಲ್ಲಕಾರ್ಜುನ್ ಹೀಗೆ ಹೇಳಿದ್ದೇಕೆ?
ದಾವಣಗೆರೆ, ಆಗಸ್ಟ್, 11: ನಾನು ಎಲ್ಲಿ ಬೇಕಾದರೂ ಗಂಟೆ ಹೊಡೆಯಲು ತಯಾರಿದ್ದೇನೆ. ಶೇಕಡಾ 40ರಷ್ಟು ಕಮಿಷನ್ ಪಡೆದವರು ಬರಲಿ. ನಾನು ಅವರ ಹೆಸರು ಹೇಳಲ್ಲ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ತೋಟಗಾರಿಕೆ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ದಾವಣಗೆರೆಯಲ್ಲಿ ಹೇಳಿದರು.
ಮಾಧ್ಯಮದವರ ಜೊತೆ ಮಾತನಾಡಿದ ಅವರು, ಯಾರಿಗೆ ಬೇಕಾದರೂ ಕರೆಯಿರಿ, ಉರುಳು ಸೇವೆ ಮಾಡೋಣ. ಅದನ್ನು ನೋಡೇ ಬಿಡೋಣ. ಈಗ ಕಮಿಷನ್ ಸಿಗುತ್ತಿಲ್ಲ. ಹಾಗಾಗಿ ವಿಲವಿಲ ಒದ್ದಾಡುತ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ವ್ಯಂಗ್ಯವಾಡಿದರು. ಬಿಲ್ಡಿಂಗ್ ಮೇಲೆ ಬಿಲ್ಡಿಂಗ್ ಕಟ್ಟುತ್ತಿರುವ ಬಿಜೆಪಿಯವರು ಕಮಿಷನ್ ಪಡೆದಿಲ್ಲ ಎಂದು ಎದೆ ಮುಟ್ಟಿಕೊಂಡು ಹೇಳಲಿ. ನಾವು ಸಹ ಎಲ್ಲದಕ್ಕೂ ರೆಡಿ ಇದ್ದೇವೆ ಎಂದು ತಿಳಿಸಿದರು.

ನಿಗಮ ಮಂಡಳಿ ನೇಮಕ ಸಂಬಂಧ ರಾಜ್ಯ ನಾಯಕರು ಹಾಗೂ ಪಕ್ಷದ ವರಿಷ್ಠರು ನಿರ್ಧಾರ ತೆಗೆದುಕೊಳ್ಳುತ್ತಾರೆ. ಪಕ್ಷಕ್ಕಾಗಿ ದುಡಿದವರಿಗೆ ಸ್ಥಾನ ಸಿಗಲಿದೆ. ಕಾಂಗ್ರೆಸ್ನ ಯಾವ ಶಾಸಕರು ಅಸಮಾಧಾನ ಹೊಂದಿಲ್ಲ. ಪಕ್ಷದ ವರಿಷ್ಠರು ಸಣ್ಣಪುಟ್ಟ ಸಮಸ್ಯೆಗಳನ್ನು ಪರಿಹರಿಸಲಿದ್ದಾರೆ ಎಂದು ಹೇಳಿದರು.
ಯಾರೋ ಹೇಳಿದರು ಅಂತಾ ಮಾಧ್ಯಮದವರು ಸುದ್ದಿ ಮಾಡುತ್ತಾರೆ. 5 ಗ್ಯಾರಂಟಿಗಳನ್ನು ಜಾರಿ ಮಾಡುತ್ತಿದ್ದೇವೆ. ಇದರಿಂದ ಬಡವರಿಗೆ ಅನುಕೂಲ ಆಗುತ್ತದೆ. ಗೃಹಲಕ್ಷ್ಮೀ, ಗೃಹಜ್ಯೋತಿ, ಶಕ್ತಿ ಯೋಜನೆ ಮಾಡಿ ನುಡಿದಂತೆ ನಡೆಯುತ್ತಿದ್ದೇವೆ. ವಿರೋಧ ಪಕ್ಷದವರು ಇದನ್ನು ತಡೆದುಕೊಳ್ಳದೇ ಮಾತನಾಡುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ಮಾಡಿದ ಕೆಲಸವನ್ನು ಬಸವಂತಪ್ಪ ಹೇಳಿದ್ದು, ಅದರಲ್ಲಿ ತಪ್ಪೇನಿದೆ. ಹರಿಹರ ಶಾಸಕ ಬಿ.ಪಿ. ಹರೀಶ್ ಆ ರೀತಿ ಮಾತನಾಡಬಾರದಿತ್ತು. ಲೋಕಸಭೆ ಚುನಾವಣೆ ಬರುತ್ತಿದೆ. ಅದಕ್ಕೆ ವಿನಾಕಾರಣ ಆರೋಪ ಮಾಡುತ್ತಿದ್ದಾರೆ ಎಂದು ಹೇಳಿದರು.
ಗುತ್ತಿಗೆದಾರರ ಸಂಘದವರು ಮಾಡಿದ ಆರೋಪದಲ್ಲಿ ಹುರುಳಿಲ್ಲ. ನಮ್ಮ ಸರ್ಕಾರದಲ್ಲಿ ಇದ್ಯಾವುದೂ ನಡೆಯುತ್ತಿಲ್ಲ. ಕೃಷಿ ಸಚಿವ ಚೆಲುವರಾಯಸ್ವಾಮಿ ವಿರುದ್ಧ ಸುಳ್ಳು ಆರೋಪ ಮಾಡಿದ್ದಾರೆ. ಬಿಜೆಪಿ, ಜೆಡಿಎಸ್ ಹತಾಶರಾಗಿ ಆರೋಪಿಸುತ್ತಿದ್ದಾರೆ. ಒಳ್ಳೆಯ ಕೆಲಸ ಮಾಡಲು ಬಂದಿದ್ದೇವೆ ಎಂದು ತಿಳಿಸಿದರು.
ಮಹಾನಗರ ಪಾಲಿಕೆಯಲ್ಲಿ ಬಿಜೆಪಿಯವರು ಕಾಂಗ್ರೆಸ್ಗೆ ಬಹುಮತ ಇದ್ದರೂ ಅಧಿಕಾರ ತಪ್ಪಿಸಿದ್ದರು. ವಿಧಾನಪರಿಷತ್ ಸದಸ್ಯರು, ರಾಜ್ಯಸಭೆ, ಲೋಕಸಭೆ ಸದಸ್ಯರೆಲ್ಲರ ಮತ ಹಾಕಿಸಿ ಗೆದ್ದ ಕೀರ್ತಿ ಬಿಜೆಪಿಗೆ ಸಲ್ಲುತ್ತದೆ. ಮಾಡಿದ್ದುಣ್ಣೋ ಮಹಾರಾಯ ಎಂಬಂತೆ ಈಗ ಕಾಂಗ್ರೆಸ್ಗೆ ಮಹಾನಗರ ಪಾಲಿಕೆಯ ನಾಲ್ಕು ಸ್ಥಾನಗಳು ಪಾಲಾಗಿವೆ ಎಂದರು.
ಕಾಂಗ್ರೆಸ್ ಎಂಎಲ್ಸಿ ಹೆಸರು ಒಡೆದು ಹಾಕಿದ್ದರು. ಎಲ್ಲರೂ ಒಮ್ಮತದಿಂದ ಕೆಲಸ ಮಾಡಿದ್ದಾರೆ. ಅಧ್ಯಕ್ಷರು ಒಳ್ಳೆಯ ಕೆಲಸ ಮಾಡುತ್ತಾರೆ. ಹೆಚ್ಚಿನ ಅನುದಾನ ತಂದು ಹೆಚ್ಚು ಸ್ವಚ್ಚತೆ ಹಾಗೂ ಕೆಲಸ ಕಾರ್ಯ ಮಾಡೋಣ. ನಾವೇನೂ ಆಪರೇಷನ್ ಮಾಡಿಲ್ಲ. ನಾವು ಏನಕ್ಕೆ ಮಾಡೋಣ. ಪಕ್ಷೇತರರು ನಮ್ಮ ಕಡೆ ಬಂದಿದ್ದಾರೆ ಎಂದು ಹೇಳಿದರು.












Click it and Unblock the Notifications