ಗುಲಾಬಿ ಹೂ ಅರಳಿತು, ಬೆಳೆದವರ ಬದುಕು ಬರಡಾಯ್ತು!
ದಾವಣಗೆರೆ, ಜೂನ್ 14; ಗುಲಾಬಿ ಹೂ ಎಂದರೆ ಯಾರಿಗೆ ಇಷ್ಟ ಆಗೋಲ್ಲ ಹೇಳಿ. ನೋಡಿದಾಕ್ಷಣ ಖುಷಿ ಆಗುತ್ತೆ. ಈ ಬಾರಿ ಹೂವು ಚೆನ್ನಾಗಿಯೇ ಅರಳಿದೆ. ಆದರೆ ಬೆಳೆದವರ ಬದುಕು ಮುದುಡಿದೆ. ಹೂವು ನಂಬಿಕೊಂಡಿದ್ದ ದಾವಣಗೆರೆ ಜಿಲ್ಲೆಯ ರೈತರ ಪರಿಸ್ಥಿತಿ ಇದು.
ದಾವಣಗೆರೆ ತಾಲೂಕಿನ ತುರ್ಚಘಟ್ಟ, ನ್ಯಾಮತಿ ತಾಲೂಕಿನ ಕುರುವ ಸೇರಿದಂತೆ ಕೆಲವೆಡೆ ಬೆಳೆದಿದ್ದ ಗುಲಾಬಿ ಹೂವು ಮಾರಾಟ ಆಗದೇ ರೈತರು ಕೋಟ್ಯಾಂತರ ರೂಪಾಯಿ ನಷ್ಟ ಅನುಭವಿಸುವಂತಾಗಿದೆ. ಹೂಡಿಕೆ ಮಾಡಿದ ಅಸಲು ಸಹ ಕೈಗೆ ಬರದೇ ರೈತರು ಕಂಗೆಟ್ಟಿದ್ದಾರೆ.
ಜಿಲ್ಲೆಯ ನ್ಯಾಮತಿ ತಾಲೂಕಿನ ಕುರುವ ಗ್ರಾಮದ ರಾಮ್ ಭಟ್ 2 ಎಕರೆ ಹೊಲದಲ್ಲಿ ಮಿರಾಬಲ್ ಹೂ ಬೆಳೆದಿದ್ದರು. ಫಸಲು ಚೆನ್ನಾಗಿಯೇ ಬಂದಿತ್ತು. ಇನ್ನೇನೂ ಲಾಭ ಸಿಗುತ್ತದೆ ಎಂಬ ಆಸೆ ಹೊಂದಿದ್ದರು. ಆದರೆ ಕೊರೊನಾ ಸೋಂಕು ಹರಡುವಿಕೆ ತಡೆಗೆ ಲಾಕ್ಡೌನ್ ಮಾಡಿರುವುದರಿಂದ ಮಾರಾಟ ಮಾಡಲು ಸಾಧ್ಯವಾಗದೇ ಕಂಗೆಟ್ಟಿದ್ದಾರೆ.

ಲಾಕ್ಡೌನ್ ಕಾರಣ ಸಭೆ, ಸಮಾರಂಭ, ಶುಭ ಸಮಾರಂಭಗಳಿಗೆ ನಿಷೇಧ ಹೇರಿರುವ ಕಾರಣ ಮಾರುಕಟ್ಟೆಗೆ ಹೂ ತೆಗೆದುಕೊಂಡು ಹೋಗಲು ಸಾಧ್ಯವಾಗಲಿಲ್ಲ. ಇದರಿಂದಾಗಿ ಬೆಳೆದ ಬೆಳೆಯೂ ಹೋಯ್ತು. ಸಾಲವೂ ಆಯ್ತು.
ಹೂ ಮಾರಾಟವಾಗದ ಹಿನ್ನೆಲೆಯಲ್ಲಿ ಕೈಯಿಂದ ಕೂಲಿ ಕೊಟ್ಟು ಹೂ ತೆಗೆಯಿಸಿ ಅಲ್ಲೇ ಎಸೆಯಲಾಗುತ್ತಿದೆ. ಒಂದು ಕೆಜಿಯೂ ಮಾರಾಟ ಮಾಡಲು ಆಗದೇ ಕೊನೆಗೆ ಜಮೀನಿಗೆ ಗೊಬ್ಬರ ಆಗಲಿ ಎಂಬ ಕಾರಣಕ್ಕೆ ಹೂವು ಕಿತ್ತು ಅಲ್ಲೇ ಹಾಕುತ್ತಿದ್ದಾರೆ. ರೈತರ ಬದುಕನ್ನು ಅರಳಿಸಬೇಕಿದ್ದ ಗುಲಾಬಿ ಕಣ್ಣೀರು ತರಿಸುತ್ತಿದೆ.
ಮಿರಾಬಲ್ ಹೂವು ಕೊರೊನಾಕ್ಕಿಂತ ಮುಂಚೆ ಕೆಜಿಗೆ 80 ರೂಪಾಯಿಗೆ ಮಾರಾಟವಾಗುತ್ತಿತ್ತು. ಈಗ ಅದನ್ನು ಕೇಳುವವರೇ ಇಲ್ಲವಾಗಿದೆ. ಎರಡು ವರ್ಷಗಳಿಂದ ಯಾವುದೇ ಆದಾಯವಿಲ್ಲದೇ ಹೂವು ಬೆಳೆಗಾರರು ನಷ್ಟ ಅನುಭವಿಸಿದ್ದಾರೆ.

"ಪ್ರತಿ ಹೆಕ್ಟರ್ಗೆ 25 ಸಾವಿರ ರೂಪಾಯಿ ಪರಿಹಾರವನ್ನು ರಾಜ್ಯ ಸರ್ಕಾರ ಘೋಷಣೆ ಮಾಡಿತ್ತು. ಆದರೆ ಆ ಪರಿಹಾರವೂ ಕೈ ಸೇರಿಲ್ಲ. ಈ ಬಾರಿಯೂ ಘೋಷಣೆ ಮಾಡಿದರೂ ಅದು ಯಾವಾಗ ಕೈ ಸೇರುತ್ತದೆಯೋ?" ಎನ್ನುತ್ತಾರೆ ರೈತ ರಾಮ್ ಭಟ್.
ಒಟ್ಟಿನಲ್ಲಿ ಕೊರೊನಾ ಹೆಮ್ಮಾರಿ ಹೂವು ಬೆಳೆಗಾರರ ಬದುಕು ಕಿತ್ತುಕೊಂಡಿದೆ. ಈಗಲಾದರೂ ಸರ್ಕಾರ ಬೆಳೆಗಾರರ ನೆರವಿಗೆ ಧಾವಿಸಬೇಕಿದೆ.












Click it and Unblock the Notifications