ಹರಿಹರ: ಕಾಂಗ್ರೆಸ್ ಅಸಹಕಾರದ ನಡುವೆಯೂ ಹಠಬಿಡದೇ ರೈತರ ಸಾಲ ಮನ್ನಾ ಮಾಡಿದ್ದೆ: ಎಚ್.ಡಿ.ಕುಮಾರಸ್ವಾಮಿ
ಜೆಡಿಎಸ್ ಸರ್ಕಾರವ ಅಧಿಕಾರಕ್ಕೆ ಬಂದರೆ ಜನಪರ ಯೋಜನೆಗಳನ್ನು ಜಾರಿಗೆ ತರಾಲಾಗುವುದು ಎಂದು ಎಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದರು. ಹಾಗಾದರೆ ಎಚ್.ಡಿ. ಕುಮಾರಸ್ವಾಮಿ ವಿವರಿಸಿದ ಯೋಜನೆಗಳ ವಿವರ ಇಲ್ಲಿದೆ.
ದಾವಣಗೆರೆ, ಜನವರಿ, 31: 2008ರಲ್ಲಿ ನಾನು ಸಿಎಂ ಆದೆ. ಕಾಂಗ್ರೆಸ್ ಅಸಹಕಾರದ ನಡುವೆಯೂ ಹಠಬಿಡದೇ ರೈತರ ಸಾಲ ಮನ್ನಾ ಮಾಡಿದ್ದೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಕೊಂಡಜ್ಜಿಯಲ್ಲಿ ವಾಗ್ದಾಳಿ ನಡೆಸಿದರು. ಹರಿಹರ ವಿಧಾನಸಭೆ ಕ್ಷೇತ್ರದ ಕೊಂಡಜ್ಜಿ ಗ್ರಾಮದಲ್ಲಿ 59ನೇ ದಿನದ ಪಂಚರತ್ನ ರಥಯಾತ್ರೆ ಆಗಮಿಸಿದ ವೇಳೆ ಜನರನ್ನುದ್ದೇಶಿಸಿ ಮಾತನಾಡಿದ ಅವರು, 2018ರಲ್ಲಿ ಅನಿವಾರ್ಯವಾಗಿ ಕಾಂಗ್ರೆಸ್ ಜೊತೆ ಜೆಡಿಎಸ್ ಅಧಿಕಾರಕ್ಕೆ ಬಂದಿತ್ತು. ಆಗ ನಾನು 25,000 ಕೋಟಿ ರೂಪಾಯಿ ಸಾಲ ಮನ್ನಾ ಮಾಡಿದೆ. ಸಾಲ ಮನ್ನಾ ಮಾಡಲು ಕಾಂಗ್ರೆಸ್ ಜೊತೆ ಮೈತ್ರಿ ಸರ್ಕಾರ ಮಾಡಿದೆ. ಆದರೆ, ಕಾಂಗ್ರೆಸ್ ಪಕ್ಷ ಸಹಕಾರ ಕೊಡಲಿಲ್ಲ ಎಂದು ಆರೋಪಿಸಿದರು. ಹಾಗೆಯೇ ಜೆಡಿಎಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಹಲವು ಯೋಜನೆಗಳನ್ನು ಜಾರಿಗೆ ತರಲಾಗುವುದು ಎಂದು ಭರವಸೆ ನೀಡಿದರು. ಯೋಜನೆಗಳ ವಿವರ ಇಲ್ಲಿದೆ ನೋಡಿ.
ಹಠ ಬಿಡದೆ ರೈತರ ಸಾಲ ಮನ್ನಾ ಮಾಡಿದೆ
ಆದರೂ ಹಠ ಬಿಡದೆ ಸಾಲ ಮನ್ನಾ ಮಾಡಿದೆ. ಕೊಂಡಜ್ಜಿ ಗ್ರಾಮ ಒಂದರಲ್ಲೇ 85 ಲಕ್ಷ ರೂಪಾಯಿ ಸಾಲ ಮನ್ನಾ ಆಗಿದೆ. ಬಿಜೆಪಿ ಸರ್ಕಾರ ಬಂದ ಮೇಲೆ ಎರಡು ಲಕ್ಷ ಕುಟುಂಬಗಳಿಗೆ ಸಾಲ ಮನ್ನಾ ಆಗಲು ಬಿಡಲಿಲ್ಲ. ಸುಮಾರು 7,000 ಕೋಟಿ ರೂಪಾಯಿಯನ್ನು ಬಿಜೆಪಿ ಸರ್ಕಾರ ಬೇರೆಡೆಗೆ ವರ್ಗಾಯಿಸಿಕೊಂಡಿತು. ಈ ಮೂಲಕ ಎರಡು ಲಕ್ಷ ಕುಟುಂಬಗಳಿಗೆ ಬಿಜೆಪಿ ಸರ್ಕಾರ ಅನ್ಯಾಯ ಮಾಡಿದೆ ಎಂದು ಆರೋಪಿಸಿದರು.
ಹಾಗೆಯೇ ಜೆಡಿಎಸ್ ಸರ್ಕಾರ ಅಧಿಕಾರಕ್ಕೆ ಬಂದರೆ ವಿಧವಾ ತಾಯಂದಿರ ಮಾಶಾಸನವನ್ನು 800 ರೂಪಾಯಿಗಳಿಂದ 2,000 ರೂಪಾಯಿಗಳಿಗೆ ಹೆಚ್ಚಳ ಮಾಡುವೆ. 60 ವರ್ಷ ಮೀರಿದ ಹಿರಿಯರಿಗೆ ಮಾಸಿಕ 5,000 ಮಾಸಾಶನ ಕೊಡುವೆ. ವಿಕಲಚೇತನರಿಗೆ ಮಾಸಿಕ 1,200 ಮಾಶಾಸನ ಇದ್ದು, ಅದನ್ನು 2,500ಕ್ಕೆ ಹೆಚ್ಚಿಸುತ್ತೇನೆ. ಹಾಗೆಯೇ ಮಹಿಳಾ ಸ್ವಸಹಾಯ ಸಂಘಗಳ ಸಾಲ ಮನ್ನಾ ಮಾಡುತ್ತೇನೆ. ಅಧಿಕಾರಕ್ಕೆ ಬಂದ 24 ಗಂಟೆಯೊಳಗೆ ಈ ಸಾಲ ಮನ್ನಾ ಮಾಡುತ್ತೇನೆ ಎಂದು ಘೋಷಿಸಿದರು.

ಯೋಜನೆಗಳ ಬಗ್ಗೆ ವಿವರಿಸಿದ ಎಚ್ಡಿಕೆ
ತೆಲಂಗಾಣ ಮಾದರಿಯ ರೈತಬಂಧು ಕಾರ್ಯಕ್ರಮ ಜಾರಿ ಮಾಡುತ್ತೇನೆ. ಬಿತ್ತನೆ ಮಾಡುವ ಕಾಲಕ್ಕೆ ಸರಿಯಾಗಿ ಪ್ರತಿ ವರ್ಷ ಹೆಕ್ಟೇರ್ಗೆ 10,000 ರೂಪಾಯಿ ಕೊಡಲಾಗುವುದು. ಹತ್ತು ಹೆಕ್ಟೇರ್ ಇದ್ದರೆ ಹತ್ತು ಲಕ್ಷ ಕೊಡಲಾಗುವುದು. ಬಿತ್ತನೆ ಬೀಜ, ರಸಗೊಬ್ಬರಕ್ಕಾಗಿ ರೈತರು ಖಾಸಗಿ ಮಂದಿ ಬಳಿ ಸಾಲ ಮಾಡಬಾರದು. ಐದು ಲಕ್ಷ ರೂಪಾಯಿ ಮೊತ್ತದ ಉಚಿತ ಮನೆ, ಒಂದರಿಂದ ದ್ವಿತೀಯ ಪಿಯುಸಿವರೆಗೆ ಉಚಿತ ಶಿಕ್ಷಣ, ರೈತರಿಗೆ ನಿತ್ಯ 24 ಗಂಟೆಯೂ ಉಚಿತ ವಿದ್ಯುತ್ ನೀಡಲಾಗುವುದು. ಪಂಚರತ್ನ ಯೋಜನೆಗಳನ್ನು ಜಾರಿ ಮಾಡುವುದು ನನ್ನ ಗುರಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಹರಿಹರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಶಿವಶಂಕರ್, ವಿಧಾನ ಪರಿಷತ್ ಸದಸ್ಯ ಭೋಜೇಗೌಡ, ಮಾಜಿ ಸದಸ್ಯ ಎಚ್. ಎಂ. ರಮೇಶ್ ಗೌಡ ಹಾಗೂ ಸ್ಥಳೀಯ ನಾಯಕರು ಉಪಸ್ಥಿತರಿದ್ದರು.












Click it and Unblock the Notifications