ದಂಡ ಕಟ್ಟಿದ ರಶೀದಿ ಕೇಳಿದ್ದಕ್ಕೆ ಮಾಜಿ ಸೈನಿಕನಿಗೆ ಪೊಲೀಸರ ಥಳಿತ!
ದಾವಣಗೆರೆ, ಏಪ್ರಿಲ್ 30; ಮಾಸ್ಕ್ ಹಾಕಿಲ್ಲ ಎಂಬ ಕಾರಣಕ್ಕೆ ದಂಡ ವಿಧಿಸಿದ ಪೊಲೀಸರು ರಶೀದಿ ಕೇಳಿದಕ್ಕೆ ನಿವೃತ್ತ ಸೈನಿಕನ ಮೇಲೆ ಹಲ್ಲೆ ನಡೆಸಿದ ಘಟನೆ ದಾವಣಗೆರೆಯಲ್ಲಿ ನಡೆದಿದೆ. ಗ್ರಾಮಾಂತರ ಪೊಲೀಸ್ ಠಾಣೆಯ ನಾಲ್ವರು ಕಾನ್ಸ್ಟೇಬಲ್ಗಳು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಬಿ. ಎಸ್. ವೀರಪ್ಪ ಹಲ್ಲೆಗೊಳಗಾದ ನಿವೃತ್ತ ಸೈನಿಕ. 1996 ರಿಂದ 2018ರವರೆಗೆ ಬರೋಬ್ಬರಿ 22 ವರ್ಷ ಸೇವೆ ಸಲ್ಲಿಸಿ ನಿವೃತ್ತಿಯಾದ ಬಳಿಕ ದಾವಣಗೆರೆಯಲ್ಲಿ ವಾಸವಾಗಿದ್ದಾರೆ. ಕಳೆದ ಸೋಮವಾರ ರಾತ್ರಿ 8 ಗಂಟೆಯ ಸುಮಾರಿಗೆ ಆನಗೋಡು ಬಳಿ ತನ್ನ ಪತ್ನಿ ಜೊತೆ ಬೈಕ್ ನಲ್ಲಿ ಊರಿಗೆ ತೆರಳುತ್ತಿದ್ದರು.
ಈ ವೇಳೆ ಗಸ್ತಿನಲ್ಲಿದ್ದ ಪೊಲೀಸರು ತಡೆದಿದ್ದಾರೆ. ಗ್ರಾಮಾಂತರ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್ ಸ್ಪೆಕ್ಟರ್
ನಿಂಗನಗೌಡ ನೆಗಳೂರು ಮತ್ತು ನಾಲ್ವರು ಪೊಲೀಸ್ ಕಾನ್ಸ್ ಸ್ಟೇಬಲ್ ಗಳು ಈ ವೇಳೆ ಅಲ್ಲಿದ್ದರು. ವೀರಪ್ಪರನ್ನು ತಡೆದು ಮಾಸ್ಕ್ ಹಾಕದಿದ್ದಕ್ಕೆ ದಂಡವನ್ನು ವಿಧಿಸಿದ್ದಾರೆ.

ಬಳಿಕ ರಶೀದಿ ನೀಡುವಂತೆ ವೀರಪ್ಪ ಕೇಳಿದ್ದಾರೆ. ಇದಕ್ಕೆ ಆಕ್ರೋಶಗೊಂಡ ನಾಲ್ವರು ಪೊಲೀಸ್ ಕಾನ್ಸ್ ಸ್ಟೇಬಲ್ ಗಳು ಜೋರು ಮಾಡಿದ್ದಾರೆ. ಆಗ ನಿವೃತ್ತ ಸೈನಿಕ ಎಂದು ಹೇಳಿದರೂ ಕೇಳದೇ ಮನಬಂದಂತೆ ಬೈದಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ, ಹಲ್ಲೆ ಮಾಡಿದ್ದಾರೆ.
ವೀರಪ್ಪ ದಾವಣಗೆರೆಯ ಚಿಗಟೇರಿ ಜಿಲ್ಲಾಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದಿದ್ದಾರೆ. ವೀರಪ್ಪ ಅವರ ಬಲಗೈ ಭುಜ, ಕೈ ಹಾಗೂ ಎಡಕಾಲಿನ ಹೆಬ್ಬೆರಳು ಊದಿಕೊಂಡಿದೆ. ಕೈ ದಪ್ಪಗಾಗುವಂತೆ ಥಳಿಸಿದ್ದು, ಸುಧಾರಿಸಿಕೊಳ್ಳಲು ಇನ್ನು ಕೆಲವೇ ತಿಂಗಳುಗಳು ಬೇಕು. ಮಾಜಿ ಸೈನಿಕ ಅಂದರೂ ಈ ರೀತಿ ಥಳಿಸುವುದು ಎಷ್ಟರ ಮಟ್ಟಿಗೆ ಸರಿ
ಎಂಬುದು ವೀರಪ್ಪ ಪ್ರಶ್ನಿಸಿದ್ದಾರೆ.
ಈ ವಿಚಾರ ತಿಳಿಯುತ್ತಿದ್ದಂತೆ ಜಿಲ್ಲಾ ಮಾಜಿ ಸೈನಿಕರ ವಿವಿಧೋದ್ದೇಶ ಸಂಘ ವೀರಪ್ಪರ ಬೆಂಬಲಕ್ಕೆ ನಿಂತಿದೆ. ಪೊಲೀಸರ ದುರ್ವರ್ತನೆ ಖಂಡಿಸಿ ಎಸ್ಪಿ ಹನುಮಂತರಾಯ ಹಾಗೂ ಐಜಿ ಅವರನ್ನು ಭೇಟಿ ಮಾಡಲು ಸಮಯ ಕೇಳಿದ್ದರೂ ನೀಡಿಲ್ಲ. ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಲು ಹೋದರೆ, ಹಲ್ಲೆಗೊಳಗಾದವರ ಮೇಲೆ ಆರೋಪ ಹೊರಿಸಲು ಮುಂದಾಗಿದ್ದಾರೆ.
ಈ ಹಿನ್ನೆಲೆಯಲ್ಲಿ ನ್ಯಾಯಾಲಯದ ಮೂಲಕ ಎಫ್ ಐಆರ್ ದಾಖಲಿಸಿ ಕಾನೂನು ಹೋರಾಟ ನಡೆಸುತ್ತೇವೆ. ಈಗಲಾದರೂ ಪ್ರಕರಣ ಸಂಬಂಧ ಸತ್ಯಾಸತ್ಯತೆ ಹೊರಬರಬೇಕು. ಈ ಬಗ್ಗೆ ತನಿಖೆ ನಡೆಸಬೇಕು
ಎಂದು ಮಾಜಿ ಸೈನಿಕರು ಒತ್ತಾಯಿಸಿದ್ದಾರೆ.
"ನನ್ನ ಮೊಬೈಲ್ ಕೆಳಗಡೆ ಬಿತ್ತು ಎಂದು ತೆಗೆದುಕೊಳ್ಳಲು ಮುಂದಾದೆ. ಆಗ ನಮ್ಮ ಮೇಲೆ ಬರುತ್ತೀಯಾ ಎಂದುಕೊಂಡು ನಾಲ್ವರು ಪೊಲೀಸ್ ಕಾನ್ಸ್ ಸ್ಟೇಬಲ್ ಗಳು ಮನಸ್ಸಿಗೆ ಬಂದಂತೆ ಹೊಡೆದಿದ್ದು, ಇದರಿಂದ ನನ್ನ ಪತ್ನಿ ಕುಗ್ಗಿ ಹೋಗಿದ್ದಾಳೆ. ಪೊಲೀಸರು ಮಾಜಿ ಸೈನಿಕರಿಗೆ ನೀಡುವ ಗೌರವ ಇದೆಯಾ?" ಎಂದು ವೀರಪ್ಪ ಪ್ರಶ್ನಿಸಿದ್ದಾರೆ.












Click it and Unblock the Notifications