ದಾವಣಗೆರೆಯಲ್ಲಿ ಪಿಎಫ್ಐ ಜಿಲ್ಲಾಧ್ಯಕ್ಷ ಸೇರಿ ಇಬ್ಬರು ಎನ್ಐಎ ವಶಕ್ಕೆ
ದಾವಣಗೆರೆ, ಸೆಪ್ಟೆಂಬರ್ 22: ಶಿವಮೊಗ್ಗದಲ್ಲಿ ಬಂಧಿತರಾದ ಶಂಕಿತ ಉಗ್ರರ ಬೆನ್ನಲ್ಲೇ ರಾಷ್ಟ್ರೀಯ ತನಿಖಾ ದಳ ತನಿಖೆ ಚುರುಕುಗೊಳಿಸಿದೆ. ದಾವಣಗೆರೆಯ ಪಾಪುಲರ್ ಫ್ರಂಟ್ ಆಫ್ ಇಂಡಿಯಾ ಜಿಲ್ಲಾಧ್ಯಕ್ಷ ಹಾಗೂ ಕಾರ್ಯಕರ್ತನನ್ನು ಎನ್ಐಎ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ನಗರದ ಎಂಸಿಸಿ ಎ ಬ್ಲಾಕ್ನ ಇಮಾದುದ್ದೀನ್ ಮನೆ ಮೇಲೆ ಗುರುವಾರ ಬೆಳ್ಳಂಬೆಳಿಗ್ಗೆ 4 ಗಂಟೆಗೆ ದಾಳಿ ನಡೆಸಿರುವ ರಾಷ್ಟ್ರೀಯ ತನಿಖಾ ದಳ ಅಧಿಕಾರಿಗಳು ಆತನನ್ನು ವಶಕ್ಕೆ ಪಡೆದಿದ್ದಾರೆ. ಇನ್ನು ಹರಿಹರದ ಕಾರ್ಯಕರ್ತ ಅಬು ತಾಹೀರ್ ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ವಿದ್ಯಾನಗರ ಪೊಲೀಸ್ ಠಾಣೆಗೆ ಕರೆದೊಯ್ಯುವುದಾಗಿ ಹೇಳಿ ಅಜ್ಞಾತ ಸ್ಥಳದಲ್ಲಿ ವಿಚಾರಣೆ ಮುಂದುವರಿಸಿದ್ದಾರೆ ಎಂದು ಎನ್ಐಎ ಉನ್ನತ ಮೂಲಗಳು ತಿಳಿಸಿವೆ.
ಇಮಾದುದ್ದೀನ್ ಮೇಲೆ ಮೂರು ಪ್ರಕರಣಗಳು ದಾಖಲಾಗಿದ್ದವು. ಅದೇ ರೀತಿಯಲ್ಲಿ ಶಿವಮೊಗ್ಗದಲ್ಲಿ ಕೋಮುಭಾವನೆ ಕೆರಳಿಸುವಂಥ ಪೋಸ್ಟರ್ ಅಂಟಿಸಿದ್ದ ಎಂಬ ಆರೋಪ ಕೂಡ ಇದೆ. ಜೊತೆಗೆ ಶಾಂತಿಗೆ ಭಂಗ ತಂದ ಆರೋಪ ಹಾಗೂ ಶಿವಮೊಗ್ಗದಲ್ಲಿ ಬಂಧಿತರಾಗಿರುವ ಶಂಕಿತ ಉಗ್ರರ ಜೊತೆ ಸಂಪರ್ಕ ಇದ್ದ ಅನುಮಾನದ ಮೇರೆಗೆ ದಾಳಿ ನಡೆಸಲಾಗಿದೆ. ದಾಳಿ ವೇಳೆ ಕೆಲ ಮಾಹಿತಿ ಲಭ್ಯವಾಗಿದೆ ಎನ್ನಲಾಗುತ್ತಿದೆ.

ರಾಜ್ಯದ ವಿವಿಧೆಡೆ ಎನ್ಐಎ ದಾಳಿ:
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾಗೆ ಸಂಬಂಧಿಸಿರುವ ಕಚೇರಿಗಳ ಮೇಲೆ ಗುರುವಾರ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಮತ್ತು ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ದಾಳಿ ನಡೆಸಿದೆ. ಮೂಲಗಳ ಪ್ರಕಾರ ರಾಜ್ಯದಲ್ಲಿ 20 ಪಿಎಫ್ಐ ಕಾರ್ಯಕರ್ತರನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದುಬಂದಿದೆ.
ರಾಜ್ಯದಲ್ಲಿ ಬೆಂಗಳೂರು ಶಿವಮೊಗ್ಗ, ಮಂಗಳೂರು, ಉತ್ತರ ಕನ್ನಡ , ಕೊಪ್ಪಳ, ಉತ್ತರ ಕನ್ನಡ ಹಾಗೂ ಕಲಬುರಗಿಯಲ್ಲಿ ಪಿಎಫ್ಐ ಮುಖಂಡರ ಕಚೇರಿಗಳ ಮೇಲೆ ದಾಳಿ ಮಾಡಲಾಗಿದೆ.
ಕಲಬುರಗಿಯಲ್ಲಿ ಒಟ್ಟು ಎರಡು ಕಡೆ ದಾಳಿಯಾಗಿದೆ. ಕಲಬುರಗಿ ನಗರದ ಟಿಪ್ಪು ಸುಲ್ತಾನ್ ನಗರದಲ್ಲಿ ಪಿಎಫ್ಐ ಜಿಲ್ಲಾಧ್ಯಕ್ಷ ಅಧ್ಯಕ್ಷ ಎಜಾಜ್ ಹುಸೇನ್, ಶಿರಸಿಯಲ್ಲಿ ಅಜೀಜ್ ಅಬ್ದುಲ್ ಶುಕುರ್ ಹೊನ್ನಾವರ್ ಹಾಗೂ ಮಂಗಳೂರಿನಲ್ಲಿ ಮೂವರನ್ನು ಬಂಧಿಸಲಾಗಿದೆ ಎನ್ನಲಾಗಿದೆಯಾದರೂ, ಬಂಧಿತರ ವಿವರ ತಿಳಿದುಬಂದಿಲ್ಲ. ಒಟ್ಟಾರೆ ದೇಶದಲ್ಲಿ ಹಲವು ಕಡೆ ದಾಳಿ ನಡೆದಿದ್ದು, 100ಕ್ಕೂ ಹೆಚ್ಚು ಪಿಎಫ್ಐ ಮುಖಂಡರ ಬಂಧನವಾಗಿದೆ.












Click it and Unblock the Notifications