ದಾವಣಗೆರೆಯಲ್ಲಿ ರೋಡಿಗಿಳಿಯುವಂತಿಲ್ಲ ಡೀಸೆಲ್, ಪೆಟ್ರೋಲ್ ಚಾಲಿತ ಆಟೋರಿಕ್ಷಾ
ದಾವಣಗೆರೆ, ಜನವರಿ 8: ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಸ್ಮಾರ್ಟ್ ಆಗುವ ನಿಟ್ಟಿನಲ್ಲಿ ದಾವಣಗೆರೆಯಲ್ಲಿ ಹಲವು ಕಾಮಗಾರಿಗಳು ನಡೆಯುತ್ತಿವೆ. ಅದರಲ್ಲಿ ಪರಿಸರ ಮಾಲಿನ್ಯ ತಡೆಯೂ ಒಂದಾಗಿದ್ದು, ಈ ಉದ್ದೇಶದಲ್ಲಿ ಆಲೋಚನೆಯೊಂದು ಗರಿಗೆದರಿದೆ. ಸ್ಮಾರ್ಟ್ ಸಿಟಿ ಯೋಜನೆಯಡಿ ಪೆಟ್ರೋಲ್ ಹಾಗೂ ಡೀಸೆಲ್ ಆಟೋರಿಕ್ಷಾಗಳನ್ನು ಬ್ಯಾನ್ ಮಾಡುವ ಆಲೋಚನೆಯಿದೆ.
ದಾವಣಗೆರೆಯಲ್ಲಿ 12 ಸಾವಿರಕ್ಕೂ ಹೆಚ್ಚು ಆಟೋ ರಿಕ್ಷಾಗಳು ಸಾರ್ವಜನಿಕ ಸೇವೆ ನೀಡುತ್ತಿವೆ. ಎಷ್ಟೋ ಕುಟುಂಬಗಳಿಗೂ ಈ ಆಟೋ ರಿಕ್ಷಾಗಳೇ ಜೀವನಾಧಾರವಾಗಿವೆ. ಬಹುತೇಕವು ಗ್ಯಾಸ್ ಚಾಲಿತ ವಾಹನಗಳಾಗಿ ಪರಿವರ್ತನೆಗೊಂಡಿವೆ. ಉಳಿದ ಸಾವಿರಾರು ಆಟೋರಿಕ್ಷಾಗಳು ಪೆಟ್ರೋಲ್ ಹಾಗೂ ಡೀಸೆಲ್ ನಿಂದಲೇ ಓಡುತ್ತಿವೆ.
ಆದರೆ ಈಗ ಸ್ಮಾರ್ಟಿ ಸಿಟಿ ಯೋಜನೆಯಡಿ ಪೆಟ್ರೋಲ್ ಹಾಗೂ ಡಿಸೇಲ್ ಆಟೋರಿಕ್ಷಾಗಳ ಚಾಲನೆಯನ್ನು ರದ್ದುಪಡಿಸುವ ಆಲೋಚನೆ ವ್ಯಕ್ತಗೊಂಡಿದ್ದು, ರಿಕ್ಷಾ ಚಾಲಕರಿಗೆ ಆತಂಕ ತಂದಿದೆ. ಈಗಿರುವ ಆಟೋರಿಕ್ಷಾಗಳನ್ನು ಗ್ಯಾಸ್ ಚಾಲಿತ ವಾಹನಗಳಾಗಿ ಪರಿವರ್ತಿಸುವ ಆಯ್ಕೆಯೊಂದಿದ್ದು, ಇದು ಸಾಧ್ಯವಾಗದಿದ್ದರೆ ನಗರದಲ್ಲಿ ಚಲಾಯಿಸುವ ಅವಕಾಶ ರದ್ದುಪಡಿಸುವ ಸಾಧ್ಯತೆಗಳು ಹೆಚ್ಚಾಗಿವೆ.

ಸ್ಮಾರ್ಟಿ ಸಿಟಿ ಯೋಜನೆಯಲ್ಲಿ ಎಲೆಕ್ಟ್ರಾನಿಕ್ ಆಟೋಗಳು ಬಿಡುಗಡೆಯಾಗಿದ್ದು, ಅವುಗಳನ್ನೇ ಚಲಾಯಿಸುವ ಹಾಗೆಯೇ ಅವುಗಳನ್ನು ರಿಯಾಯಿತಿ ದರದಲ್ಲಿ ನೀಡುವ ಆಯ್ಕೆಯೂ ಇದೆ. ಈಗಾಗಲೇ ಡೀಸೆಲ್ ಚಾಲಿತ ಆಟೋರಿಕ್ಷಾಗಳ ನೋಂದಣಿಯನ್ನು ರದ್ದುಗೊಳಿಸಲಾಗಿದೆ.
ನಗರದಲ್ಲಿ ಕೇವಲ ಸಿಎನ್ ಜಿ ಅಥವಾ ಎಲ್ಪಿಜಿ ಗ್ಯಾಸ್, ವಿದ್ಯುತ್ ಚಾಲಿತ ಆಟೋರಿಕ್ಷಾಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ಪರಿವರ್ತನೆಯಾಗದ ಡೀಸೆಲ್ ಆಟೋರಿಕ್ಷಾಗಳನ್ನು ದಾವಣಗೆರೆ ಕಾರ್ಪೊರೇಷನ್ ವ್ಯಾಪ್ತಿಯಿಂದ ಹೊರಗೆ ಹಾಕಲಾಗುವುದು ಎಂದು ತಿಳಿಸಲಾಗಿದೆ.

ಆದರೆ ಆಟೋರಿಕ್ಷಾವನ್ನೇ ನಂಬಿಕೊಂಡು ಜೀವನ ನಡೆಸುತ್ತಿರುವವರಿಗೆ ಈ ಯೋಜನೆಯ ಉದ್ದೇಶ ಹೊರೆಯಾಗಲಿದ್ದು, ಬಡ ಆಟೋ ಚಾಲಕರಿಗೆ ನೆರವಾಗುವಂತೆ ಯೋಜನೆ ರೂಪಿಸಬೇಕು ಎಂಬ ಮಾತುಗಳೂ ಕೇಳಿಬಂದಿವೆ.












Click it and Unblock the Notifications