ಪಾಲಿಕೆ ಮಾಡದ ಕೆಲಸವನ್ನು ತಾವೇ ಮಾಡಿ ಮುಗಿಸಿದ ಸ್ಥಳೀಯರು
ದಾವಣಗೆರೆ, ಸೆಪ್ಟೆಂಬರ್ 12: ರಸ್ತೆ ದುರಸ್ತಿಪಡಿಸುವಂತೆ ಹಲವು ಬಾರಿ ಪಾಲಿಕೆ ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗದ ಹಿನ್ನೆಲೆಯಲ್ಲಿ ದಾವಣಗೆರೆಯಲ್ಲಿ ಸ್ಥಳೀಯರು ತಾವೇ ರಸ್ತೆ ಕಾಮಗಾರಿ ನಡೆಸಿದ್ದಾರೆ.
ನಗರದ ಬಿಪಿ ರಸ್ತೆಯ ವಾಣಿ ಹೋಂಡಾ ಶೋರೂಂ ಹಿಂಭಾಂಗದಲ್ಲಿ ಇರುವ ಶಂಕರ್ ವಿಹಾರ್ ಲೇಔಟ್ ನಲ್ಲಿ ಮಳೆ ಬಂದು ರಸ್ತೆಗಳು ಕೆಸರಿನ ಗುಂಡಿಗಳಾಗಿದ್ದವು. ಇಲ್ಲಿ ಓಡಾಡಲು ಸಾಧ್ಯವಾಗದೇ ಇಲ್ಲಿನ ನಿವಾಸಿಗಳು ಪಾಲಿಕೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಮಾಡಿದರು.

ಎಷ್ಟೇ ಪ್ರಯತ್ನ ಪಟ್ಟರೂ ಯಾವುದೇ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಸ್ಥಳೀಯರೇ ರಸ್ತೆ ದುರಸ್ತಿಗೆ ಮುಂದಾಗಿದ್ದಾರೆ. ತಾವೇ ಹಣವನ್ನು ಒಟ್ಟುಗೂಡಿಸಿ ಮಣ್ಣು ಹಾಗೂ ಗ್ರಾವೆಲ್ ಗಳನ್ನು ತಂದು ರಸ್ತೆ ರಿಪೇರಿಗೊಳಿಸಿದ್ದಾರೆ.

"ಪಾಲಿಕೆ ಅಧಿಕಾರಿಗಳು ಕೇವಲ ತೆರಿಗೆ ಕಟ್ಟಿಸಿಕೊಂಡು ಹೋಗುತ್ತಾರೆ ವಿನಃ ಸಮಸ್ಯೆಗಳನ್ನು ಮಾತ್ರ ಬಗೆಹರಿಸುವುದಿಲ್ಲ. ಈ ಕುರಿತು ಜನ ಪ್ರತಿನಿಧಿಗಳಿಗೂ ಮನವಿ ಮಾಡಲಾಯಿತು. ಆದರೆ ಪ್ರಯೋಜನವಾಗುವಂತೆ ಕಾಣುತ್ತಿಲ್ಲ. ಮಳೆ ಬಂದರೆ ರಸ್ತೆ ಸ್ಥಿತಿಯನ್ನು ನೋಡಲೂ ಸಾಧ್ಯವಿಲ್ಲ. ಓಡಾಡುವುದೇ ಸಾಹಸ. ಹೀಗೇ ದೂರು ನೀಡುತ್ತಾ ಕೂರುವ ಬದಲು ನಾವೇ ನಮ್ಮ ರಸ್ತೆಯನ್ನು ಸರಿ ಮಾಡಿಕೊಳ್ಳಬೇಕು ಎಂದು ಎಲ್ಲರೂ ಕೈಜೋಡಿಸಿ ರಸ್ತೆ ಕಾಮಗಾರಿ ನಡೆಸುತ್ತಿದ್ದೇವೆ" ಎಂದು ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸಿದರು.












Click it and Unblock the Notifications