ದಾವಣಗೆರೆ; ಜೋಡೆತ್ತುಗಳ ನಡುವೆ ಯಾವುದೇ ಗೊಂದಲವಿಲ್ಲ!
ದಾವಣಗೆರೆ, ಜುಲೈ 08; "ನಾನು ಹಾಗೂ ಮಹಾನಗರ ಪಾಲಿಕೆಯ ಮೇಯರ್ ಎಸ್. ಟಿ. ವೀರೇಶ್ ಜೋಡೆತ್ತು. ನಮ್ಮ ನಡುವೆ ಗೊಂದಲ ಇಲ್ಲ. ಇಬ್ಬರು ಹೋರಾಟದ ಮೂಲಕವೇ ಬಂದವರು. ಜೊತೆಯಾಗಿಯೇ ಅಧಿಕಾರಕ್ಕೆ ಬಂದವರು'' ಎಂದು ದಾವಣಗೆರೆ- ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್ ಹೇಳಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, "ಮೊದಲಿನಿಂದಲೂ ನಾವು ಜೊತೆಯಾಗಿಯೇ ಇರುವವರು. ಎಲ್ಲಾ ಹಂತದಲ್ಲಿಯೂ ಒಟ್ಟಿಗೆ ಹೋರಾಟ ಮಾಡಿದವರು. ನಮ್ಮಿಬ್ಬರ ನಡುವೆ ಯಾವುದೇ ಗೊಂದಲ ಇಲ್ಲ. ಸಂಬಂಧ ಉತ್ತಮವಾಗಿಯೇ ಇದೆ" ಎಂದು ಸ್ಪಷ್ಟನೆ ನೀಡಿದರು.
"ನಗರದ ನಿಜಲಿಂಗಪ್ಪ ಬಡಾವಣೆಯಲ್ಲಿ "ಅಮರ್ ಜವಾನ್'' ಹುತಾತ್ಮ ಯೋಧರ ಉದ್ಯಾನವನ ಅನಾವರಣಗೊಳಿಸುವ ಕಾರ್ಯಕ್ರಮಕ್ಕೆ ಮಹಾನಗರ ಪಾಲಿಕೆಯ ಮೇಯರ್ ಎಸ್. ಟಿ. ವೀರೇಶ್ರನ್ನು ಆಹ್ವಾನಿಸುವ ವಿಚಾರದಲ್ಲಿ ಸಣ್ಣಪುಟ್ಟ ವ್ಯತ್ಯಾಸ ಆಗಿದೆ. ಅದನ್ನು ಒಪ್ಪಿಕೊಳ್ಳುತ್ತೇನೆ" ಎಂದು ತಿಳಿಸಿದರು.

ಕಾರ್ಯಕ್ರಮಕ್ಕೆ ಆಹ್ವಾನಿಸುವ ವಿಚಾರದಲ್ಲಿ ಶಿಷ್ಟಾಚಾರ ಪಾಲನೆ ಆಗಿಲ್ಲ ಎಂದು ಮೇಯರ್ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಿದ ರಾಜನಹಳ್ಳಿ ಶಿವಕುಮಾರ್, "ನಾನು ಮತ್ತು ಎಸ್. ಟಿ. ವೀರೇಶ್ ಜೊತೆಯಾಗಿ ಹೋರಾಟ ಮಾಡಿಕೊಂಡು ಬಂದವರು. ಜೊತೆಯಾಗಿಯೇ ಅಧಿಕಾರ ಹಿಡಿದವರು. ನಾನು ದೂಡಾ ಅಧ್ಯಕ್ಷರಾದರೆ, ಅವರು ಮೇಯರ್ ಆದರು. ಹಾಗಾಗಿ ನಮ್ಮಿಬ್ಬರ ನಡುವೆ ಯಾವುದೇ ಅಸಮಾಧಾನ ಇಲ್ಲ" ಎಂದು ಸಮಜಾಯಿಷಿ ನೀಡುವ ಪ್ರಯತ್ನ ಮಾಡಿದರು.
"ಅಧಿಕಾರಿಗಳು ಮಾಡಿದ ಯಡವಟ್ಟು ಇದು. ಕರೆ ಮಾಡಿ ಅಧಿಕಾರಿಗಳು ಹಾಗೂ ನಾನು ಆಹ್ವಾನ ನೀಡಿದ್ದೆವು. ಬೆಳಗ್ಗೆ 10 ಗಂಟೆ ಸುಮಾರಿಗೆ ಕರೆ ಮಾಡಿ ಆಹ್ವಾನಿಸಿದ್ದೆ. ಈ ಉದ್ಯಾನವನ ನಿರ್ಮಾಣಕ್ಕೆ ವೀರೇಶ್ ಸಾಕಷ್ಟು ಪ್ರಯತ್ನ ಮಾಡಿದ್ದರು. ಅಧಿಕಾರದಲ್ಲಿ ಇಲ್ಲದಿರುವಾಗಲೇ 5 ವರ್ಷ ನಾನು ಸಹ ಜಾಗ ಪಡೆಯಲು ಪ್ರಯತ್ನ ಪಟ್ಟಿದ್ದೆ" ಎಂದರು.
"ಈಗ ಲೋಪ ಆಗಿದೆ. ಇದನ್ನೇ ದೊಡ್ಡದು ಮಾಡುವ ಇಚ್ಛೆ ಇಲ್ಲ. ಕಾಂಗ್ರೆಸ್ನವರು ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಾರೆ. ಮೇಯರ್ ಹಾಗೂ ನನ್ನ ನಡುವಿನ ಸಂಬಂಧ ಉತ್ತಮವಾಗಿಯೇ" ಇದೆ ಎಂದು ಸ್ಪಷ್ಟಪಡಿಸಿದರು.












Click it and Unblock the Notifications