ಬೆಣ್ಣೆನಗರಿಯಲ್ಲಿ ಸಿಎಂ ಡಿ. ಕೆ. ಶಿವಕುಮಾರ್ ಎಂಬ ಜೈಕಾರ!
ದಾವಣಗೆರೆ, ಜುಲೈ 15; 'ಮುಂದಿನ ಸಿಎಂ ಡಿ. ಕೆ. ಶಿವಕುಮಾರ್ಗೆ ಜೈ' ಎಂಬ ಘೋಷಣೆ ಮತ್ತೆ ಮೊಳಗಿದೆ. ಮುಂದಿನ ಸಿಎಂ ಯಾರಾಗಬೇಕೆಂಬ ಬಗ್ಗೆ ಸಿದ್ದರಾಮಯ್ಯ ಹಾಗೂ ಶಿವಕುಮಾರ್ ಅಭಿಮಾನಿಗಳ ಜೈಕಾರದ ಕುರಿತು ಈಗಾಗಲೇ ಚರ್ಚೆಗಳು ನಡೆಯುತ್ತಿವೆ.
ಗುರುವಾರ ನ್ಯಾಮತಿ ತಾಲೂಕಿನ ಸೂರಗೊಂಡನಕೊಪ್ಪಕ್ಕೆ ತೆರಳುವ ಮಾರ್ಗ ಮಧ್ಯೆ ಬಾಡಾ ಕ್ರಾಸ್ ಬಳಿ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ಗೆ ಸ್ವಾಗತ ಕೋರಲಾಯಿತು. ಆಗ ಮುಂದಿನ ಸಿಎಂ ಡಿ. ಕೆ. ಶಿವಕುಮಾರ್ ಗೆ ಜೈ ಎಂಬ ಘೋಷಣೆ ಮೊಳಗಿದೆ.
13 ದಿನಗಳ ಹಿಂದೆ ದಾವಣಗೆರೆಯ ಹರಿಹರಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಆಗಮಿಸಿದ್ದಾಗಲೂ ಕಾಂಗ್ರೆಸ್ ಕಾರ್ಯಕರ್ತರು ಮುಂದಿನ ಸಿಎಂ ಸಿದ್ದರಾಮಯ್ಯ ಎಂಬ ಘೋಷಣೆ ಕೂಗಿದ್ದರು.

ಮುಂದಿನ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ಗೆ ಜೈ. ಶಾಮನೂರು ಶಿವಶಂಕರಪ್ಪ, ಎಸ್. ಎಸ್. ಮಲ್ಲಿಕಾರ್ಜುನ್, ಕಾಂಗ್ರೆಸ್ ಕಿಸಾನ್ ಘಟಕದ ಅಧ್ಯಕ್ಷ ಶಿವಗಂಗಾ ಬಸವರಾಜ್ ಪರ ಘೋಷಣೆ ಇಂದು ಕೇಳಿ ಬಂದವು. ಆದರೆ ಸ್ಥಳದಲ್ಲಿದ್ದ ಯಾವ ನಾಯಕರು, ಕಾರ್ಯಕರ್ತರು ಸಿದ್ದರಾಮಯ್ಯರಿಗೆ ಜೈ ಎಂದು ಹೇಳಲಿಲ್ಲ.
ಮಾಜಿ ಸಿಎಂ ಸಿದ್ದರಾಮಯ್ಯ ಹರಿಹರಕ್ಕೆ ಶಾಸಕ ರಾಮಪ್ಪರ ಪುತ್ರಿ ವಿವಾಹದಲ್ಲಿ ಪಾಲ್ಗೊಳ್ಳಲು ಕಲ್ಯಾಣ ಮಂಟಪಕ್ಕೆ ಬರುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರು ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಿದ್ದರಾಮಯ್ಯರಿಗೆ ಜೈ ಜೈ ಘೋಷಣೆ ಹಾಕಿದ್ದರು. ಕೇವಲ ಹದಿಮೂರು ದಿನಗಳ ಅಂತರದಲ್ಲಿ ಮತ್ತೆ ಡಿಕೆಶಿ ಮುಂದಿನ ಮುಖ್ಯಮಂತ್ರಿ ಎಂಬ ಘೋಷಣೆ ದಾವಣಗೆರೆಯಲ್ಲಿ ಕೇಳಿ ಬಂದಿದೆ.
ಡಿ. ಕೆ. ಶಿವಕುಮಾರ್ ಕಾರು ಬರುತ್ತಿದ್ದಂತೆ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಮುಗಿಬಿದ್ದರು. ಈ ವೇಳೆ ಸಾಮಾಜಿಕ ಅಂತರ ಮಾಯವಾಗಿತ್ತು. ಇನ್ನು ಕೆಲವರು ಮಾಸ್ಕ್ ಧರಿಸಿರಲಿಲ್ಲ. ಕೋವಿಡ್ ಮಾರ್ಗಸೂಚಿ ಉಲ್ಲಂಘನೆಯಾಗಿದ್ದರೂ ಯಾರೂ ತಲೆಕೆಡಿಸಿಕೊಳ್ಳಲೇ ಇಲ್ಲ.
ಕಾದು ಕಾದು ಸುಸ್ತಾದ 'ಕೈ' ಕಲಿಗಳು; ಶಿವಕುಮಾರ್ ಬರಮಾಡಿಕೊಳ್ಳಲು ಬೆಳಗ್ಗೆಯಿಂದಲೇ ಕಾಂಗ್ರೆಸ್ ಕಾರ್ಯಕರ್ತರು ಕಾದಿದ್ದರು. ಬೆಳಗ್ಗೆ10.15ಕ್ಕೆ ಬಾಡಾ ಕ್ರಾಸ್ಗೆ ಬರುತ್ತಾರೆ ಎಂಬ ಮಾಹಿತಿ ನೀಡಲಾಗಿತ್ತು. ಆಮೇಲೆ 11 ಗಂಟೆಗೆ ಬರುತ್ತಾರೆಂದು ಹೇಳಲಾಯಿತು. ಆದರೂ ಶಿವಕುಮಾರ್ ಬರಲಿಲ್ಲ. ಮಳೆಯಿಂದ ತಪ್ಪಿಸಿಕೊಳ್ಳಲು ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಕೆಲ ಹೊತ್ತು ಪರದಾಡಿದ ಪ್ರಸಂಗವೂ ಜರುಗಿತು.
ಕಾಂಗ್ರೆಸ್ ಕಿಸಾನ್ ಜಿಲ್ಲಾ ಘಟಕದ ಅಧ್ಯಕ್ಷ ಶಿವಗಂಗಾ ಬಸವರಾಜ್, ಕಾಂಗ್ರೆಸ್ ಮುಖಂಡರಾದ ಗಡಿ ಗುಡಾಳ್ ಮಂಜುನಾಥ್, ಮುದ್ದೇಗೌಡ ಗಿರೀಶ್, ಕೆಪಿಸಿಸಿ ವಕ್ತಾರ ಡಿ. ಬಸವರಾಜ್ ಸೇರಿದಂತೆ ಹಲವು ಮುಖಂಡರು ಹಾಗೂ ಕಾರ್ಯಕರ್ತರು ಗಂಟೆಗಟ್ಟಲೇ ಕಾದರು.
ಸುಮಾರು 12ಗಂಟೆಗೆ ಶಿವಕುಮಾರ್ ಆಗಮಿಸಿದರು. ಅತ್ತ ನ್ಯಾಮತಿ ತಾಲೂಕಿನ ಸೂರಗೊಂಡನಕೊಪ್ಪದಲ್ಲಿಯೂ ಕಾಂಗ್ರೆಸ್ ಮುಖಂಡರು, ಲಂಬಾಣಿ ಸಮಾಜದ ಮುಖಂಡರು ಕಾಯುವಂತಾಯಿತು.
ಅದ್ಧೂರಿ ಸ್ವಾಗತ; ದಾವಣಗೆರೆ ಗಡಿಭಾಗವಾದ ಲಕ್ಕಮುತ್ತನಹಳ್ಳಿ ಗ್ರಾಮದ ಬಳಿ ತಾಳ ವಾದ್ಯಗಳೊಂದಿಗೆ ಶಿವಕುಮಾರ್ಗೆ ಅದ್ಧೂರಿ ಸ್ವಾಗತ ಕೋರಲಾಯಿತು. ಮಾಯಕೊಂಡ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಕೆ. ಎಸ್. ಬಸವಂತಪ್ಪ ನೇತೃತ್ವದಲ್ಲಿ ಕಾರ್ಯಕರ್ತರು, ಮುಖಂಡರು ಹಾಗೂ ಅಭಿಮಾನಿಗಳು ಕೆಪಿಸಿಸಿ ಸಾರಥಿಯನ್ನು ನೋಡಲು ತಂಡೋಪತಂಡವಾಗಿ ಆಗಮಿಸಿದ್ದರು.
ಲಕ್ಕಮುತ್ತನಹಳ್ಳಿಗೆ ಶಿವಕುಮಾರ್ ಆಗಮಿಸಿದಾಗ ಕಾರ್ಯಕರ್ತರ ಘೋಷಣೆ ಮುಗಿಲು ಮುಟ್ಟಿತ್ತು. ಸ್ವಾಗತಿಸುವಾಗ ಕಾರ್ಯಕರ್ತರು, ಮುಖಂಡರು ಮುಗಿಬಿದ್ದ ಘಟನೆಯೂ ನಡೆಯಿತು.












Click it and Unblock the Notifications