ಅನೈತಿಕ ಸಂಬಂಧಕ್ಕೆ ಅಡ್ಡಿ: ಪತಿ ಕೊಂದ ಪತ್ನಿ, ಪ್ರಿಯಕರ ಬಂಧನ
ದಾವಣಗೆರೆ, ಮಾರ್ಚ್ 29: ಜಿಲ್ಲೆಯ ಎಸ್.ಎಸ್ ಲೇಔಟ್ ಎ ಬ್ಲಾಕ್ ರಿಂಗ್ ರಸ್ತೆ ಗುಡ್ ಹೋಮ್ಸ್ ಫರ್ನಿಚರ್ ಅಂಗಡಿ ಪಕ್ಕದ ಖಾಲಿ ನಿವೇಶನದಲ್ಲಿ ಹತ್ಯೆಗೀಡಾಗಿದ್ದ ವ್ಯಕ್ತಿಯ ಸಾವಿನ ಪ್ರಕರಣಕ್ಕೆ ತಿರುವು ಸಿಕ್ಕಿದೆ. ಅನೈತಿಕ ಸಂಬಂಧಕ್ಕೆ ಅಡ್ಡಿಯಾದ ಕಾರಣಕ್ಕೆ ಪ್ರಿಯಕರನೊಂದಿಗೆ ಸೇರಿ ಪತ್ನಿಯೇ ಪತಿಯನ್ನು ಕೊಲೆ ಮಾಡಿರುವ ಸತ್ಯ ಬೆಳಕಿಗೆ ಬಂದಿದೆ.
ಕೊಲೆ ಪ್ರಕರಣದ ಆರೋಪಿಗಳನ್ನು ವಿದ್ಯಾನಗರ ಪೊಲೀಸರು ಬಂಧಿಸಿದ್ದಾರೆ. ಮೃತನ ಹೆಂಡತಿ ಶ್ವೇತಾ ಹಾಗೂ ಆಕೆಯ ಪ್ರಿಯಕರ ಬುದ್ದಬಸವ ನಗರ ಹಗೆದಿಬ್ಬ ಸರ್ಕಲ್ ಹತ್ತಿರ ವಾಸವಿದ್ದ ಚಂದ್ರಶೇಖರ್ ಅಲಿಯಾಸ್ ಚಂದ್ರ ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ.

ಬುದ್ಧ ಬಸವ ನಗರ ಹಗೇದಿಬ್ಬಾ ಸರ್ಕಲ್ ಹತ್ತಿರ ವಾಸವಿದ್ದ ಶ್ವೇತಾ ಹಾಗೂ ಹಾವೇರಿ ಜಿಲ್ಲೆಯ ಹಾನಗಲ್ ತೂಲಾಕಿನ ಬೈಚವಳ್ಳಿ ಗ್ರಾಮದ ಮಹಾಂತೇಶ್ ಚೌರದ ಎಂಬಾತನ ಜೊತೆ ವಿವಾಹವಾಗಿತ್ತು. ಮದ್ಯವ್ಯಸನಿಯಾಗಿದ್ದ ಮಹಾಂತೇಶ್ ಹಾಗೂ ಶ್ವೇತ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಪತ್ನಿ ನಡವಳಿಕೆ ಬಗ್ಗೆ ಅನುಮಾನ ಹೊಂದಿದ್ದ ಮಹಾಂತೇಶ್ ಪತ್ನಿ ಜೊತೆಗೆ ನಿತ್ಯವೂ ಗಲಾಟೆ ಮಾಡುತ್ತಿದ್ದ ಎನ್ನಲಾಗಿದೆ.
ಕೊಲೆ ಪ್ರಕರಣದ ಹಿನ್ನೆಲೆ
ಕಳೆದ 23 ರಂದು ಸುಮಾರು 35 ವರ್ಷದ ವ್ಯಕ್ತಿಯನ್ನು ಯಾರೋ ದುಷ್ಮರ್ಮಿಗಳು ಕಲ್ಲು ಎತ್ತಿ ಹಾಕಿ ಹೋಗಿದ್ದಾರೆ ಎಂದು ಸಾರ್ವಜನಿಕರಿಂದ ಹೊಯ್ಸಳ- 4ಕ್ಕೆ ದೂರು ಬಂದಿತ್ತು. ಕೂಡಲೇ ಹೊಯ್ಸಳ ಸಿಬ್ಬಂದಿ ಸ್ಥಳಕ್ಕೆ ಬಂದಾಗ ಆತ ಇನ್ನು ಜೀವಂತವಿದ್ದ. ಸಾವು ಬದುಕಿನ ಮಧ್ಯ ಹೋರಾಟ ನಡೆಸುತ್ತಿದ್ದ ಆತನನ್ನು ಕೂಡಲೇ ಆಂಬ್ಯುಲೆನ್ಸ್ ನಲ್ಲಿ ಸಿ.ಜಿ ಆಸ್ಪತ್ರೆಗೆ ಕರೆತರಲಾಯಿತು. ಸಿ. ಜೆ. ಆಸ್ಪತ್ರೆಯ ವೈದ್ಯರು ಪರೀಕ್ಷಿಸಿದಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ ಎಂದು ದೃಢೀಕರಿಸಿದ್ದರು. ಬಳಿಕ ಈ ಸಂಬಂಧ ಹೊಯ್ಸಳ ಸಿಬ್ಬಂದಿ ವಿದ್ಯಾನಗರ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದರು.

ಮೃತನ ಹೆಸರು, ವಿಳಾಸ ಹಾಗೂ ಕೊಲೆ ಮಾಡಿದ ಆರೋಪಿತರನ್ನು ಪತ್ತೆ ಮಾಡಲು ದಾವಣಗೆರೆ ನಗರ ಉಪ ವಿಭಾಗದ ಡಿವೈಎಸ್ಪಿ ಮಲ್ಲೇಶ್ ದೊಡ್ಡಮನಿ ಹಾಗೂ ಡಿ.ಸಿ.ಆರ್.ಬಿ ಡಿವೈಎಸ್ಪಿ ಸೈಯದ್ ರೋಷನ್ ಜಮೀರ್ ಎಸ್. ಮಾರ್ಗದರ್ಶನದಲ್ಲಿ ವಿದ್ಯಾನಗರ ಪೊಲೀಸ್ ಇನ್ ಸ್ಪೆಕ್ಟರ್ ಪ್ರಭಾವತಿ ಸಿ. ಶೇತಸನದಿ ನೇತೃತ್ವದಲ್ಲಿ ಡಿ.ಸಿ.ಆರ್.ಬಿ. ವಿಭಾಗದ ಸಿಬ್ಬಂದಿ ಹಾಗೂ ವಿದ್ಯಾನಗರ ಪೊಲೀಸ್ ಠಾಣೆ ಸಿಬ್ಬಂದಿಯನ್ನೊಳಗೊಂಡ ತಂಡ ರಚಿಸಲಾಗಿತ್ತು.
ಮೃತ ವ್ಯಕ್ತಿಯ ಬೆರಳು ಮುದ್ರೆಯ ಸಹಾಯದಿಂದ ಮೃತನ ಹೆಸರು ವಿಳಾಸ ಪತ್ತೆಯಾಗಿತ್ತು. ಮೃತನ ಹೆಸರು ಮಹಾಂತೇಶ್ ಪುಟ್ಟಪ್ಪ ಚೌರದ. ಆತ ಹಾನಗಲ್ ತಾಲೂಕಿನ ಬೈಚವಳ್ಳಿ ನಿವಾಸಿ ಎಂಬುದು ಗೊತ್ತಾಯಿತು. ಬಳಿಕ ಪತ್ನಿ ಮೇಲೆ ಅನುಮಾನಗೊಂಡು ವಿಚಾರಿಸಿದಾಗ ಸತ್ಯ ಹೊರಬಿದ್ದಿದೆ. ಆರೋಪಿಯು ಕೊಲೆ ಮಾಡಲು ಬಳಸಿದ್ದ ಸುಮಾರು 1 ಲಕ್ಷ ರೂ. ಮೌಲ್ಯದ 2 ದ್ವಿಚಕ್ರ ವಾಹನ, 2 ಮೊಬೈಲ್ ಫೋನ್, ಒಂದು ಚಾಕು, ಬಿಯರ್ ಬಾಟಲ್ಗಳು ಹಾಗೂ ಮಾತ್ರೆಗಳನ್ನು ಪೊಲೀಸರ ವಶಕ್ಕೆ ಪಡೆದಿದ್ದಾರೆ.
ಕೊಲೆ ಪ್ರಕರಣದ ಆರೋಪಿತರನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಪೊಲೀಸ್ ಅಧೀಕ್ಷಕ ಸಿ.ಬಿ ರಿಷ್ಯಂತ್, ಎಎಸ್ಪಿ ಆರ್.ಬಿ ಬಸರಗಿ ಅವರು ಶ್ಲಾಘಿಸಿದ್ದಾರೆ. ಡಿ.ಸಿ.ಆರ್.ಬಿ. ವಿಭಾಗದ ಸಿಬ್ಬಂದಿ ಹಾಗೂ ವಿದ್ಯಾನಗರ ಪೊಲೀಸ್ ಠಾಣೆ ಸಿಬ್ಬಂದಿಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.












Click it and Unblock the Notifications