ದಾವಣಗೆರೆ; ಬಹಿರಂಗವಾಗಿ ಕ್ಷಮೆಯಾಚಿದ ಶಾಸಕ ರೇಣುಕಾಚಾರ್ಯ

ದಾವಣಗೆರೆ, ಜನವರಿ 10; "ಮಾತು ಸಾಧನೆ ಅಲ್ಲ, ಸಾಧನೆ ಮಾತಾಡುತ್ತೆ. ಕೋವಿಡ್ ಸಂಕಷ್ಟದ ವೇಳೆ ನಾನು ಮಾಡಿದ್ದ ಎಲ್ಲಾ ಕೆಲಸಗಳಿಗೂ ಮೆಚ್ಚುಗೆ ವ್ಯಕ್ತವಾಗಿದೆ. ಬಲಗುರಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ಖಳನಾಯಕನ ರೀತಿ ತೋರಿಸಲಾಗುತ್ತಿದೆ. ನನ್ನದು ತಪ್ಪಿದೆ, ಕ್ಷಮಿಸಿ ಎಂದು ವಿನಂತಿ ಮಾಡುತ್ತೇನೆ" ಎಂದು ಹೊನ್ನಾಳಿಯ ಬಿಜೆಪಿ ಶಾಸಕ ಎಂ. ಪಿ. ರೇಣುಕಾಚಾರ್ಯ ಹೇಳಿದರು.

"ಸಿಎಂ ಬಸವರಾಜ ಬೊಮ್ಮಾಯಿ ಅವರೂ ಸಹ ಕೋವಿಡ್ ನಿಯಂತ್ರಣಕ್ಕೆ ಶ್ರಮಿಸುತ್ತಿದ್ದಾರೆ. ಅದೇ ರೀತಿಯಲ್ಲಿ ಇಡೀ ಸರ್ಕಾರವೇ ಈ ಬಗ್ಗೆ ಕ್ರಮ ಕೈಗೊಳ್ಳುತ್ತಿದೆ. ಇನ್ನು ಮುಂದೆ ಈ ರೀತಿಯಾಗದಂತೆ ಎಚ್ಚರ ವಹಿಸೋಣ. ಹೋರಿ ಸ್ಪರ್ಧೆಯಲ್ಲಿ ಯುವಕರ ಒತ್ತಾಯದ ಮೇರೆಗೆ ಪಾಲ್ಗೊಂಡಿದ್ದೆ" ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ. ಪಿ. ರೇಣುಕಾಚಾರ್ಯ ತಿಳಿಸಿದರು.

"ನಾಡಿನ ಸಮಸ್ತ ಜನತೆ ಮತ್ತು ಮಾಧ್ಯಮದವರಲ್ಲಿ ಬಹಿರಂಗವಾಗಿ ಕ್ಷಮೆಯಾಚಿಸುತ್ತೇನೆ. ಕೋವಿಡ್ ನಿಯಮಾವಳಿ ಉಲ್ಲಂಘನೆ ಮಾಡಿದ್ದೇನೆ. ನಾನು ಈ ರೀತಿ ನಡೆದುಕೊಳ್ಳಬಾರದಿತ್ತು. ನನ್ನನ್ನು ಕ್ಷಮಿಸಿ" ಎಂದು ವಿಡಿಯೋ ಮೂಲಕ ಮನವಿ ಮಾಡಿದ್ದಾರೆ.

MLA Renukacharya Apologises For Participate In Hori Bedarisuva Spardhe

ಹೊನ್ನಾಳಿ ತಾಲೂಕಿನ ಬಲಗುರಿ ಗ್ರಾಮದ ದುರ್ಗಾಂಬಿಕೆ ದೇವಿ ಮಹೋತ್ಸವದ ಅಂಗವಾಗಿ ಏರ್ಪಡಿಸಿದ್ದ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಮಾತ್ರವಲ್ಲ, ಕೋವಿಡ್ ನಿಯಮಾವಳಿ ಉಲ್ಲಂಘಿಸಿದ್ದರು. ಸಾವಿರಾರು ಯುವಕರು ರೇಣುಕಾಚಾರ್ಯ ಹೊತ್ತು ಮೆರವಣಿಗೆ ನಡೆಸಿದ್ದರು. ಇದು ಸಾಕಷ್ಟು ವಿರೋಧಕ್ಕೂ ಕಾರಣವಾಗಿತ್ತು.

ಈ ಬಗ್ಗೆ ರೇಣುಕಾಚಾರ್ಯ ವಿಡಿಯೋ ಮೂಲಕ ಸ್ಪಷ್ಟನೆ ನೀಡಿದ್ದಾರೆ. "ಹೊನ್ನಾಳಿ ತಾಲೂಕಿನ ಬಲಗುರಿ ಗ್ರಾಮದಲ್ಲಿ ಹೋರಿ ಬೆದರಿಸುವ ದೊಡ್ಡ ಕಾರ್ಯಕ್ರಮವನ್ನು ಯುವಕರು ಸಂಘಟಿಸಿದ್ದರು. ಕಳೆದ 15 ದಿನಗಳ ಹಿಂದೆ ಕಾರ್ಯಕ್ರಮ ನಿಗದಿ ಆಗಿತ್ತು. ಆಗ ಕೋವಿಡ್ ಕಡಿಮೆ ಇತ್ತು. ಕಳೆದ ಶುಕ್ರವಾರ ಮುಂದೂಡುವಂತೆ ಹೇಳಿದ್ದೆ. ಶನಿವಾರ ನೂರಾರು ಯುವಕರು ಮನೆಗೆ ಬಂದರು. ಕಾರ್ಯಕ್ರಮ ಮುಂದೂಡಿದರೆ ಬಹಳ ಖರ್ಚಾಗಲಿದೆ. ತುಂಬಾ ಸಮಸ್ಯೆ ಆಗುತ್ತದೆ. ಈಗಾಗಲೇ ಒಂದು ಲಕ್ಷ ರೂಪಾಯಿ ಖರ್ಚಾಗಿದೆ. ನೀವು ಉದ್ಘಾಟನೆ ಮಾಡಲು ಬರಬೇಕು. ರದ್ದು ಮಾಡಲು ಆಗಲ್ಲ ಎಂದಿದ್ದರು. ಯುವಕರ ಒತ್ತಾಯ ಮತ್ತು ಅಪೇಕ್ಷೆ ಮೇರೆಗೆ ಪಾಲ್ಗೊಂಡಿದ್ದೆ" ಎಂದು ಹೇಳಿದರು.

"ಮೊದಲ ಹಾಗೂ ಎರಡನೇ ಅಲೆ ಬಂದಾಗ ನಾಡಿನ ಜನರು, ಅನೇಕ ಸಂಘಟನೆಯವರು, ಪಕ್ಷದವರು, ದೇಶ, ವಿದೇಶಗಳಿಂದ ಕರೆ ಮಾಡಿ ಕೋವಿಡ್ ವೇಳೆ ನಾನು ಜನರ ಜೊತೆಗಿದ್ದು ಮಾಡಿದ್ದ ಕೆಲಸಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದರು. ಯೋಗಾಸನ, ಕೋವಿಡ್ ಕೇರ್ ಸೆಂಟರ್‌ನಲ್ಲಿ ವಾಸ್ತವ್ಯ, ಮನರಂಜನೆ ಕಾರ್ಯಕ್ರಮ ನಡೆಸುವ ಮೂಲಕ ಕೋವಿಡ್ ಸೋಂಕಿತರಲ್ಲಿ ಧೈರ್ಯ ತುಂಬುವ ಕೆಲಸ ಮಾಡಿದ್ದೆ. ಎಲ್ಲರೂ ಹೊಗಳಿದ್ದರು. ಅನಿವಾರ್ಯವಾಗಿ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದೆ. ಇದು ಈಗ ಮುಜುಗರಕ್ಕೂ ಕಾರಣವಾಗಿದೆ" ಎಂದರು.

"ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಸಹಸ್ರಾರು ಜನರು ಸೇರುತ್ತಾರೆ. ಕಾರ್ಯಕ್ರಮ ಉದ್ಘಾಟನೆಗೆ ಬಂದರೆ ರೇಣುಕಾಚಾರ್ಯ ಸರ್ಕಾರದ ಪಾಲುದಾರರಾಗಿ ಕೋವಿಡ್ ನಿಯಮಾವಳಿ ಉಲ್ಲಂಘನೆ ಮಾಡಿದರು ಎಂಬ ಸಂದೇಶ ರವಾನೆಯಾಗುತ್ತದೆ ಎಂದರೂ ಯುವಕರು ಕೇಳಲಿಲ್ಲ. ಈ ಕಾರ್ಯಕ್ರಮ ನಡೆಯಬೇಕು, ನೀವು ಬರಬೇಕು ಎಂದಿದ್ದಕ್ಕೆ ಹೋಗಿದ್ದೆ" ಎಂದು ತಿಳಿಸಿದರು.

"ಮೇಕೆದಾಟು ಯೋಜನೆ ಜಾರಿಗೆ ಒತ್ತಾಯಿಸಿ ಕಾಂಗ್ರೆಸ್ ನವರು ನಡೆಸುತ್ತಿರುವ ಪಾದಯಾತ್ರೆ ಬಗ್ಗೆ ಟೀಕೆ ಮಾಡಲು ಹೋಗಲ್ಲ. ದಿನೇ ದಿನೇ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿವೆ. ಕಾಂಗ್ರೆಸ್‌ನವರು ಕೋವಿಡ್ ನಿಯಮಾವಳಿ ಉಲ್ಲಂಘಿಸಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಈ ಹಿಂದೆ ಕಾಂಗ್ರೆಸ್ ಪಾದಯಾತ್ರೆ ಬಗ್ಗೆ ಟೀಕಿಸಿದ್ದೆ. ಆದರೆ ಈಗ ಟೀಕೆ ಮಾಡುವ ನೈತಿಕತೆ ಮತ್ತು ಶಕ್ತಿ ಕಳೆದುಕೊಂಡಿದ್ದೇನೆ. ಈ ಬಗ್ಗೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಲು ಹೋಗುವುದಿಲ್ಲ" ಎಂದು ರೇಣುಕಾಚಾರ್ಯ ಹೇಳಿದ್ದಾರೆ.

"ಜವಾಬ್ದಾರಿಯುತ ಸ್ಥಾನದಲ್ಲಿದ್ದವನು ನಾನು. ಕುರಿ ಕಾಳಗ ಇದ್ದು, ಮುಂದುವರಿಸಬೇಕು. ಕೋವಿಡ್ ನಿಯಮಾವಳಿ ಪಾಲಿಸಿ. ಹೆಚ್ಚಿನ ಜನರು ಸೇರಬೇಡಿ. ಮಾಸ್ಕ್ ಧರಿಸಿ, ಕೋವಿಡ್ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಆದೇಶಿಸಿರುವ ಕೋವಿಡ್ ನಿಯಮಾವಳಿಗಳನ್ನು ಪಾಲಿಸಿ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕೋವಿಡ್ ವಿರುದ್ಧದ ಹೋರಾಟದಲ್ಲಿ ಪಾಲ್ಗೊಳ್ಳೋಣ" ಎಂದು ರೇಣುಕಾಚಾರ್ಯ ಮನವಿ ಮಾಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+