ದುಬಾರಿ ವೈದ್ಯಕೀಯ ಶಿಕ್ಷಣಕ್ಕೆ ಕಡಿವಾಣ; ಬಸವರಾಜ ಬೊಮ್ಮಾಯಿ
ದಾವಣಗೆರೆ, ಮಾರ್ಚ್ 21: "ಉಕ್ರೇನ್ನಿಂದ ವಾಪಸ್ಸಾಗಿರುವ ವೈದ್ಯಕೀಯ ವಿದ್ಯಾರ್ಥಿಗಳ ಶಿಕ್ಷಣ ಅಪೂರ್ಣವಾಗಿದ್ದು, ಪರ್ಯಾಯ ಕ್ರಮಗಳ ಬಗ್ಗೆ ಕೇಂದ್ರ ಗಂಭೀರ ಚಿಂತನೆ ಮಾಡುತ್ತಿದೆ" ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಹಾವೇರಿಯಲ್ಲಿ ನವೀನ್ ಮೃತದೇಹಕ್ಕೆ ಅಂತಿಮ ನಮನ ಸಲ್ಲಿಸಲು ತೆರಳುವ ಸಂದರ್ಭದಲ್ಲಿ ಅವರು ಸೋಮವಾರ ದಾವಣಗೆರೆಯ ಜಿಎಂಐಟಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. "ಉಕ್ರೇನ್ನಲ್ಲಿ ಕೋರ್ಸ್ಗಳು ಹಾಗೂ ರಾಜ್ಯದಲ್ಲಿನ ಮೆಡಿಕಲ್ ಕೋರ್ಸ್ಗಳೂ ಭಿನ್ನವಾಗಿವೆ. ಎಲ್ಲಾ ರಾಜ್ಯಗಳ ವಿದ್ಯಾರ್ಥಿಗಳು ಇರುವುದರಿಂದ ಈ ಕುರಿತು ಕೇಂದ್ರ ಗಂಭೀರವಾಗಿ ಚಿಂತನೆ ನಡೆಸಿದೆ" ಎಂದರು.
ದೇಶದ ವೈದ್ಯಕೀಯ ಕಾಲೇಜು ಪ್ರವೇಶಕ್ಕೆ ಅನುಮತಿಸಲು ಉಕ್ರೇನ್ನಿಂದ ಬಂದ ವಿದ್ಯಾರ್ಥಿಗಳ ಮನವಿ
"ಸರ್ಕಾರದ ಶುಲ್ಕ ಕಡಿಮೆಯಿದ್ದರೂ, ವೈದ್ಯಕೀಯ ಶಿಕ್ಷಣದ ವೆಚ್ಚ ಖಾಸಗಿ ವಲಯದಲ್ಲಿ ಹೆಚ್ಚಾಗುತ್ತಿದೆ. ಶೇ 90-95 ಅಂಕ ಪಡೆದ ವಿದ್ಯಾರ್ಥಿಗಳಿಗೆ ನೀಟ್ನಲ್ಲಿ ಉತ್ತೀರ್ಣರಾಗಲು ಆಗುತ್ತಿಲ್ಲ. ಹೀಗಾಗಿ ಮ್ಯಾನೇಜ್ಮೆಂಟ್ ಹಾಗೂ ಎನ್.ಆರ್.ಐ ಸೀಟುಗಳನ್ನು ಪಡೆಯಲು ದುಬಾರಿಯಾಗಿರುವುದರಿಂದ ಪರ್ಯಾಯ ಮಾರ್ಗ ಹುಡುಕುತ್ತಿದ್ದಾರೆ. ನಮ್ಮ ರಾಜ್ಯದಲ್ಲಿ ಶುಲ್ಕ ಕಡಿಮೆ ಮಾಡಲು ಎ, ಬಿ, ಸಿ ವರ್ಗಗಳನ್ನು ಮಾಡುವ ಬಗ್ಗೆ ಚರ್ಚೆಯಾಗುತ್ತಿದೆ. ವೈದ್ಯಕೀಯ ಕೋರ್ಸು ರಾಷ್ಟ್ರೀಯ ವೈದ್ಯಕೀಯ ಮಂಡಳಿ ನಿರ್ಧರಿಸುತ್ತದೆ. ಈ ಬಗ್ಗೆ ಪುನರ್ ಪರಿಶೀಲನೆ ನಡೆದಿದೆ" ಎಂದು ತಿಳಿಸಿದರು.
ವಿದೇಶದಲ್ಲಿ ವೈದ್ಯಕೀಯ ಪದವಿ ಪಡೆಯುವರ ಸಂಖ್ಯೆ ಮೂರು ಪಟ್ಟು ಹೆಚ್ಚಳ
"ರಾಜ್ಯದಲ್ಲಿ ಖಾಸಗಿ ಮೆಡಿಕಲ್ ಕಾಲೇಜುಗಳ ಶುಲ್ಕ ಜಾಸ್ತಿಯಾಗಿದೆ. ಕಡಿಮೆಗೊಳಿಸುವ ಸಂಬಂಧ ಈಗಾಗಲೇ ಚರ್ಚೆ ನಡೆಸಲಾಗಿದೆ. ಈ ಸಂಬಂಧ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿ ನಿರ್ಧಾರ ತೆಗೆದುಕೊಳ್ಳಲಾಗುವುದು" ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದರು.
ನೀಟ್ ವಿಳಂಬ: ಕೋರ್ಸ್ ಬಿಟ್ಟ ವಿದ್ಯಾರ್ಥಿಗಳಿಗೆ ಶುಲ್ಕ ವಾಪಸ್
"ಮೆಡಿಕಲ್ ಕಾಲೇಜುಗಳ ಶುಲ್ಕ ಹೆಚ್ಚಾಗಿರುವುದು ಗಮನಕ್ಕೆ ಬಂದಿದೆ. ಸರ್ಕಾರಿ ಮೆಡಿಕಲ್ ಕಾಲೇಜು ಸೀಟುಗಳು ಕಡಿಮೆ ಇವೆ. ಖಾಸಗಿ ಮೆಡಿಕಲ್ ಕಾಲೇಜಿನಲ್ಲಿ ಶುಲ್ಕ ಹೆಚ್ಚಳ ಹಿನ್ನಲೆಯಲ್ಲಿ ವಿದ್ಯಾರ್ಥಿಗಳು, ಪೋಷಕರು ಮ್ಯಾನೇಜ್ಮೆಂಟ್ ಹಾಗೂ ಎನ್.ಆರ್.ಐ ಕೋಟಾದಡಿ ಸೀಟು ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಶುಲ್ಕ ಜಾಸ್ತಿಯಾಗಿ ಬೇಡಿಕೆ ಹೆಚ್ಚಿದೆ" ಎಂದರು.
"ನರೇಂದ್ರ ಮೋದಿಯವರ ವರ್ಚಸ್ಸು ವಿಶ್ವಾದ್ಯಂತ ಇದೆ. ಸಾಮಾನ್ಯವಾಗಿ ಯುದ್ಧಭೂಮಿಯಲ್ಲಿ ಸೈನಿಕರ ಮೃತದೇಹ ತರುವುದೇ ಕಷ್ಟ. ಅಂತಹುದರಲ್ಲಿ ಯುದ್ಧ ಭೂಮಿಯಿಂದ ನವೀನ್ ಮೃತದೇಹ ತರಲು ಮೋದಿಯವರ ಭಗೀರಥ ಪ್ರಯತ್ನವೇ ಕಾರಣ. ಯುದ್ಧ ಈಗಲೂ ನಡೆಯುತ್ತಿದೆ. ಇಂಥ ಸಂದರ್ಭದಲ್ಲಿ ನವೀನ್ ಒಬ್ಬನೇ ನಮ್ಮ ರಾಜ್ಯದ ವಿದ್ಯಾರ್ಥಿ ಮೃತಪಟ್ಟಿರುವುದು" ಎಂದು ತಿಳಿಸಿದರು.
"ಆಪರೇಷನ್ ಗಂಗಾ ಆರಂಭವಾಗುವ ಮುನ್ನ 62 ಜನರು ಬಂದಿದ್ದರು. ಅಮೆರಿಕಾ ಕೂಡ ತನ್ನ ದೇಶದ ನಾಗರಿಕರನ್ನು ಬಿಟ್ಟಿದೆ. ಉಕ್ರೇನ್, ರಷ್ಯಾ ನಡುವೆ ಯುದ್ಧ ನಡೆದರೂ ನಿರಂತರವಾಗಿ ಮಕ್ಕಳನ್ನು ಕರೆತರಲು ಎಲ್ಲಾ ರೀತಿಯ ಪ್ರಯತ್ನವನ್ನು ಕೇಂದ್ರ ಸರ್ಕಾರ ಮಾಡಿದೆ. ಉಕ್ರೇನ್ನಿಂದ ಗಡಿ ಪ್ರದೇಶದಲ್ಲಿದ್ದ ಭಾರತೀಯ ವಿದ್ಯಾರ್ಥಿಗಳಿಗೆ ಅತಿ ಹೆಚ್ಚಿನ ಪ್ರಾಶಸ್ತ್ಯ ನೀಡಿ ಕಳುಹಿಸಿದ್ದಾರೆ. ಇದು ಮೋದಿಯವರ ಶಕ್ತಿಗೆ ನಿದರ್ಶನ" ಎಂದು ಬಣ್ಣಿಸಿದರು.
"ನವೀನ್ ಸಾವನ್ನಪ್ಪಿದಾಗ ಪ್ರಧಾನಿ ನರೇಂದ್ರ ಮೋದಿ ಕರೆ ಮಾಡಿದ್ದರು. ನವೀನ್ ಪೋಷಕರಿಗೂ ಕರೆ ಮಾಡಿ ಮಾತನಾಡಿದ್ದಾರೆ. ನಾನೂ ಸಹ ಮಾತನಾಡಿದ್ದೇನೆ. ಭಾರತೀಯ ರಾಯಭಾರಿಗಳು ಅಲ್ಲಿನ ಸರ್ಕಾರದ ಜೊತೆಗೆ ಮಾತನಾಡಿ ಮೃತದೇಹ ತರಲು ಸಹಕರಿಸಿದ್ದಾರೆ. ಮೃತದೇಹ ಸ್ವಗ್ರಾಮಕ್ಕೆ ಬರಲು ಎಲ್ಲಾ ವಿಮಾನ ನಿಲ್ದಾಣದಲ್ಲಿ ಸಹಕಾರ ನೀಡಿದ್ದಾರೆ. ವಿದೇಶಾಂಗ ಇಲಾಖೆಯು ಸಹಕಾರ ನೀಡಿದೆ. ವಿದೇಶಾಂಗ ಸಚಿವರ ಜೊತೆ ಮಾತನಾಡಿದ್ದೆ. ನಿರಂತರ ಸಂಪರ್ಕದಲ್ಲಿದ್ದೆವು. ವಿಶೇಷವಾಗಿ ವಿದೇಶಾಂಗ ಸಚಿವರು ಸಂಬಂಧಪಟ್ಟ ಅಧಿಕಾರಿಗಳ ಜೊತೆ ಮಾತನಾಡಿ ಮೃತದೇಹ ರಕ್ಷಣೆ ಮಾಡಿಟ್ಟಿದ್ದರು" ಎಂದರು.
Recommended Video