ದಾವಣಗೆರೆಯಲ್ಲಿ ಮುಂದುವರೆದ ಅನಗತ್ಯ ಸಂಚಾರ: ಆಟೋ ವಶ
ದಾವಣಗೆರೆ, ಏಪ್ರಿಲ್ 29: ಸತತ 37 ದಿನಗಳ ನಂತರ ಲಾಕ್ ಡೌನ್ ಸಡಿಲಿಕೆ ಮಾಡಿರುವ ಹಿನ್ನೆಲೆಯಲ್ಲಿ ದಾವಣಗೆರೆ ನಗರದಲ್ಲಿಂದು ವ್ಯಾಪಾರ ವಹಿವಾಟು ಆರಂಭಗೊಂಡಿತ್ತು. ನಗರದ ಪ್ರಮುಖ ವ್ಯಾಪಾರದ ಸ್ಥಳಗಳಲ್ಲಿರುವ ಅಂಗಡಿ ಮುಂಗಟ್ಟುಗಳು ಇಂದಿನಿಂದ ತೆರೆದಿವೆ.
ತಿಂಗಳಿಗೂ ಹೆಚ್ಚುಕಾಲ ಬಂದ್ ಆಗಿದ್ದ ಅಂಗಡಿಗಳಲ್ಲಿ ವ್ಯಾಪಾರ ಸ್ವಲ್ಪಮಟ್ಟಿಗೆ ಮಾತ್ರ ಪ್ರಾರಂಭಗೊಂಡಿದೆ. ಜನರು ಅಷ್ಟಾಗಿ ಆಗಮಿಸದ ಕಾರಣ ಮಧ್ಯಾಹ್ನವೇ ಕೆಲ ಅಂಗಡಿಗಳು ಬಂದ್ ಆಗಿದ್ದವು. ಆದರೆ ಲಾಕ್ ಡೌನ್ ಸಡಿಲಿಕೆ ಮಾಡಿದ್ದರಿಂದ ನಗರದಲ್ಲಿ ಅನಗತ್ಯವಾಗಿ ಜನರು ರಸ್ತೆಗಳಲ್ಲಿ ಸಂಚಾರ ಮಾಡುತ್ತಿದ್ದರು.
ದಾವಣಗೆರೆ ಜಿಲ್ಲೆ ಗ್ರೀನ್ ಝೋನ್ ನಲ್ಲಿರುವುದರಿಂದ ಲಾಕ್ ಡೌನ್ ಸಡಿಲಿಕೆಯಾಗಿದೆ. ಇದರಿಂದ ಜನ ಸಂಚಾರವೂ ಮುಕ್ತವಾಗಿತ್ತು. ಕೆಲವೆಡೆ ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಸಂಚರಿಸುತ್ತಿದ್ದರು. ಜಿಲ್ಲಾ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ವಹಿಸಿದ್ದರೂ ಸಹ ಜನರು ಮಾತ್ರ ಯಾವುದಕ್ಕೂ ತಲೆಕೆಡಿಸಿಕೊಳ್ಳದೇ ತಮ್ಮಷ್ಟಕ್ಕೆ ತಾವು ಸಂಚಾರ ಮಾಡುತ್ತಿದ್ದರು.
ಇದರಿಂದಾಗಿ ನಗರದಲ್ಲಿ ವಾಹನ ಸಂಚಾರ ದಟ್ಟಣೆ ಹೆಚ್ಚಾಗಿತ್ತು. ನಗರದ ಮುಖ್ಯ ವೃತ್ತಗಳಲ್ಲಿ ಅನಾವಶ್ಯಕವಾಗಿ ಸಂಚರಿಸುವ ವಾಹನ ಸವಾರರನ್ನು ತಪಾಸಣೆ ಮಾಡಿ ಪೊಲೀಸರು ವಶಕ್ಕೆ ಪಡೆದರು. ಅಗತ್ಯ ವಸ್ತುಗಳ ಸರಬರಾಜು ಮಾಡಲು ಜಿಲ್ಲಾಡಳಿತ ನೀಡಿರುವ ಪಾಸ್ ಇಲ್ಲದೆ ಅನಗತ್ಯವಾಗಿ ಬಂದ ವಾಹನಗಳನ್ನು ವಶಕ್ಕೆ ತೆಗೆದುಕೊಂಡರು.
ಆಟೋಗಳು ರಸ್ತೆಗಿಳಿದಿದ್ದರಿಂದ ಸುಮಾರು 29 ಕ್ಕೂ ಹೆಚ್ಚು ಆಟೋಗಳನ್ನು ವಶಕ್ಕೆ ಪಡೆಯಲಾಗಿದೆ. ಇದಲ್ಲದೇ ಬೈಕ್ ನಲ್ಲಿ ಒಬ್ಬರು ಹಾಗೂ ಕಾರಿನಲ್ಲಿ ಇಬ್ಬರು ಮಾತ್ರ ಪ್ರಯಾಣಿಸುವಂತೆ ಪೊಲೀಸರು ಮನವಿ ಮಾಡುತ್ತಿದ್ದಾರೆ.
""ಲಾಕ್ ಡೌನ್ ಸಡಿಲವಾಗಿರುವ ಹಿನ್ನೆಲೆಯಲ್ಲಿ ಜನ ಸಂಚಾರ ಹೆಚ್ಚಾಗಿದೆ. ವ್ಯಾಪಾರಕ್ಕೂ ಸಹ ಅನುಮತಿ ನೀಡಿರುವುದರಿಂದ ಜನದಟ್ಟಣೆಯಿದೆ. ಆದರೆ ಪಾಸ್ ಇದ್ದವರು ಮಾತ್ರ ಸಂಚಾರ ಮಾಡಬೇಕು. ಇಂದು ಆಟೋಗಳು ಸಹ ಸಂಚರಿಸುತ್ತಿರುವುದು ಕಂಡುಬಂದಿದೆ.''
""ಸುಮಾರು 29 ಕ್ಕೂ ಹೆಚ್ಚು ಆಟೋಗಳನ್ನು ವಶಕ್ಕೆ ಪಡೆದಿದ್ದೇವೆ. ಬೈಕ್ ಗಳಲ್ಲಿ ಒಬ್ಬರು ಹಾಗೂ ಕಾರಿನಲ್ಲಿ ಇಬ್ಬರಿಗೆ ಮಾತ್ರ ಸಂಚರಿಸಲು ಅವಕಾಶವಿದೆ ಅದೂ ಸಹ ಅಗತ್ಯ ವಸ್ತುಗಳಿಗೆ, ಸರಬರಾಜು ಮಾಡುವವರಿಗೆ ಹಾಗೂ ಜಿಲ್ಲಾಡಳಿತದಿಂದ ಪಾಸ್ ಪಡೆದವರಿಗೆ ಮಾತ್ರ ಸಂಚರಿಸಲು ಅವಕಾಶ ಒದಗಿಸಲಾಗಿದೆ. ಲಾಕ್ ಡೌನ್ ಸಡಿಲವಾಗಿದೆ ಎಂದು ಅನಗತ್ಯವಾಗಿ ಯಾರು ಸಂಚರಿಸಬಾರದು'' ಎಂದು ಎಎಸ್ಪಿ ಎಂ.ಪಾಜೀವ್ ಹೇಳಿದರು.