ಸ್ವಾಮೀಜಿಗಳು ಮದುವೆಯಾಗಿ ಮಠ ನಡೆಸಿದರೆ ಮಠದ ಪರಂಪರೆಗೆ ಧಕ್ಕೆ ಬರಲ್ಲ: ಪ್ರಣವಾನಂದ ಸ್ವಾಮೀಜಿ
ದಾವಣಗೆರೆ, ಸೆಪ್ಟೆಂಬರ್ 12: ಲೈಂಗಿಕ ದೌರ್ಜನ್ಯ ಆರೋಪದ ಮೇರೆಗೆ ಮುರುಘಾ ಶರಣರು ಬಂಧನವಾದ ಬಳಿಕ ಸ್ವಾಮೀಜಿಗಳ ಬಗ್ಗೆ ವಿಭಿನ್ನ ಪ್ರತಿಕ್ರಿಯೆಯೂ ವ್ಯಕ್ತವಾಗುತ್ತಿದೆ. ಆದರೆ, ಚಿತ್ತಾಪುರ ತಾಲೂಕಿನ ಕರದಾಳ್ನ ಬ್ರಹ್ಮಶ್ರೀ ನಾರಾಯಣ ಗುರುಗಳ ಶಕ್ತಿಪೀಠದ ಪ್ರಣವಾನಂದ ಸ್ವಾಮೀಜಿ, ಮದುವೆಯಾಗಿ ಮಠ ನಡೆಸಲಿ, ಅದನ್ನು ಬಿಟ್ಟು ಅದರ ಪಾವಿತ್ರ್ಯತೆಗೆ ಧಕ್ಕೆ ತಾರದಂತೆ ನೋಡಿಕೊಳ್ಳಬೇಕು" ಎಂಬ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ದಾವಣಗೆರೆಯಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಪ್ರತಿಯೊಂದು ಮಠಕ್ಕೂ ಇತಿಹಾಸ, ಪರಂಪರೆ, ನಂಬಿಕೆ ಇರುತ್ತದೆ. ಭಕ್ತರು ಅದನ್ನು ಪಾಲಿಸಿಕೊಂಡು ಬರುತ್ತಿದ್ದಾರೆ. ಮದ, ಕಾಮ, ಕ್ರೋಧ, ಮತ್ಸರ ಜಯಿಸದವರು ವಿವಾಹವಾದ ಬಳಿಕ ಸ್ವಾಮೀಜಿಯಾಗಲಿ. ಎಲ್ಲವನ್ನೂ ಗೆದ್ದವರು ಸನ್ಯಾಸಿಯಾಗಿ ಮಠ ಮುನ್ನೆಡಸಲಿ ಎಂದು ಹೇಳಿದರು.
ಕೆಲ ಮಠಾಧೀಶರ ಕೈಯಲ್ಲಿ 2 ಲಕ್ಷ ರೂಪಾಯಿ ಬೆಲೆಬಾಳುವ ಮೊಬೈಲ್ ಇರುತ್ತದೆ. ದುಬಾರಿ ಮೊಬೈಲ್ ಹಿಡಿದುಕೊಂಡು ಬ್ರಹ್ಮಚರ್ಯ ಪಾಲಿಸಲು ಆಗುತ್ತದೆಯೇ? ನಾನು ಸಹ ಮದುವೆಯಾಗಿದ್ದೇನೆ. ಸ್ವಾಮೀಜಿಗಳಿಗೆ ವೈವಾಹಿಕ ಜೀವನವೂ ಇರುವುದಿಲ್ಲ. ಮತ್ತೊಂದಡೆ ಸನ್ಯಾಸವೂ ಇಲ್ಲದಂತೆ ಇರುವುದಕ್ಕಿಂತ ಮದುವೆ ಆದರೆ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಎಂಬುದು ನನ್ನ ಭಾವನೆ. ಭಾರತ ದೇಶ ಸನಾತನ ಹಿಂದೂ ಧರ್ಮದ ಪರಂಪರೆ ಹೊಂದಿದೆ. ಈ ಧರ್ಮದಲ್ಲಿ ಸಪ್ತಋಷಿಗಳು, ವೇದವ್ಯಾಸರು, ಬಸವಣ್ಣನವರೂ ಮದುವೆಯಾಗಿ ಆಶ್ರಮ ನಡೆಸಿದ್ದಾರೆ. ಈ ಆಧುನಿಕ ಕಾಲದಲ್ಲಿಯೂ ಸ್ವಾಮೀಜಿಗಳು ಮದುವೆಯಾಗಿ, ಮಠ ನಡೆಸುವುದು ಸೂಕ್ತ ಎಂದು ಹೇಳಿದರು.

ಸರ್ಕಾರ ಮಟ್ಟದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 168 ನೇ ಜಯಂತಿ ಆಚರಣೆ ಮಾಡದೇ ಪಕ್ಷದ ಕಾರ್ಯಕ್ರಮದಲ್ಲಿ ಶ್ರೀಗಳ ಜಯಂತಿ ಆಚರಣೆ ಮಾಡಲಾಗಿದೆ. ಇದು ನಿಜಕ್ಕೂ ಖಂಡನೀಯ. ಸಿಎಂ ಬಸವರಾಜ ಬೊಮ್ಮಾಯಿ ಸರಕಾರಿ ಕಾರ್ಯಕ್ರಮವನ್ನು ಆಯೋಜಿಸಿ ಜಗತ್ತಿಗೆ ಸಮಾನತೆಯನ್ನು ಸಾರಿರುವ ವಿಶ್ವಗುರು ಬ್ರಹ್ಮಶ್ರೀ ನಾರಾಯಣ ಗುರುಗಳಿಗೆ ಪೂಜೆ ಸಲ್ಲಿಸದೇ ಇರುವುದು ರಾಜ್ಯದಲ್ಲಿರುವ 70 ಲಕ್ಷ ಈಡಿಗ, ಬಿಲ್ಲವ, ನಾಮಧಾರಿ ಸಮಾಜಕ್ಕೆ ಮಾಡಿರುವ ಅನ್ಯಾಯ ಹಾಗೂ ನೋವುಂಟು ಮಾಡಿದೆ. ಈ ಸಮಾಜಕ್ಕೆ ಅಗೌರವ ತೋರಿಸಿದ್ದು ಸರಿಯಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಬಹಶ್ರೀ ನಾರಾಯಣ ಗುರುಗಳಿಗೆ ಉದ್ದೇಶ ಪೂರ್ವಕವಾಗಿ ಅಪಮಾನ ಮಾಡುವುದು ನಿರಂತರವಾಗಿ ಕಂಡು ಬರುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾ ಕಚೇರಿಗಳಲ್ಲಿ ಜಿಲ್ಲಾಧಿಕಾರಿಗಳೂ ಕೂಡ ನಾರಾಯಣ ಗುರುಗಳ ಕಾರ್ಯಕ್ರಮಕ್ಕೆ ಗೈರು ಹಾಜರಿ ಆಗಿರುವುದು ಕಂಡು ಬಂದಿದೆ . ಇವೆಲ್ಲವನ್ನು ಸಮಾಜ ಗಂಭೀರವಾಗಿ ತೆಗೆದುಕೊಂಡಿದೆ. ಪ್ರತಿ ಬಾರಿಯೂ ಶ್ರೀ ಗುರುಗಳ ಜಯಂತಿ ದಿನ ವಿಧಾನಸಭೆಯ ಸಭಾಭವನದಲ್ಲಿ ಗುರುಗಳ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ರಾಜ್ಯದ ಮುಖ್ಯಮಂತ್ರಿಗಳು ಕೂಡಾ ಪೂಜೆ ಮಾಡುವುದು ಒಂದು ಪದ್ಧತಿ. ಇದು ಕೂಡ ಆಗಿಲ್ಲ . ಗುರುಗಳ ಜಯಂತಿ ಬೆಂಗಳೂರಿನಿಂದ ತೆಗೆದು ಮಂಗಳೂರಿಲ್ಲಿ ಮಾಡಿದ್ದಾರೆ. ಆ ಕಾರ್ಯಕ್ರಮದಲ್ಲಿಯೂ ಕೂಡಾ ಮುಖ್ಯಮಂತ್ರಿ ಭಾಗವಹಿಸಿಲ್ಲ ಮತ್ತು ಗುರುಗಳ ಜಯಂತಿ ದಿನ ಬ್ರಹ್ಮಶ್ರೀ ನಾರಾಯಣ ಗುರುಗಳ ಅಭಿವೃದ್ಧಿ ನಿಗಮ ಹಾಗೂ ಕುಲ ಕಸುಬಿಗೆ ಅನುಮತಿಯನ್ನು ನೀಡುವ ಬಗ್ಗೆ ಘೋಷಣೆ ಮಾಡುತ್ತೇವೆ ಎಂದು ಮಂತ್ರಿ ಹೇಳಿದ್ದರು, ಇದುವರೆಗೆ ಸಾಕಾರಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈಡಿಗ, ಬಿಲ್ಲವ ನಾಮಧಾರಿ ಸಮಾಜವನ್ನು ಸರ್ಕಾರ ಸಂಪೂರ್ಣ ಕಡೆಗಣಿಸಿದೆ. ಇದನ್ನು ಗಮನಿಸಿದ ಸಮಾಜದ ಸ್ವಾಮೀಜಿಗಳು, ಸಮಾಜದ ಮುಖಂಡರುಗಳು ಮಂಗಳೂರಿನಲ್ಲಿ ಸಭೆ ಸೇರಿ ಮುಂದಿನ ಹೋರಾಟಕ್ಕೆ ಕರೆ ನೀಡಲಾಗುವುದು ಎಂದು ತಿಳಿಸಿದರು.












Click it and Unblock the Notifications