ದಾವಣಗೆರೆಯಲ್ಲಿ ಕೆಎಸ್ಆರ್ಟಿಸಿ ನೌಕರರ ಧರಣಿ ಸತ್ಯಾಗ್ರಹ: ಸರ್ಕಾರದ ಮುಂದಿಟ್ಟ ಬೇಡಿಕೆಗಳೇನು..?
ರಾಜ್ಯದಲ್ಲಿ ಸಾರಿಗೆ ನೌಕರರು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಆಗಾಗ ಪ್ರತಿಭಟನೆ ನಡೆಸುತ್ತಲೇ ಇದ್ದು, ಮಂಗಳವಾರ ದಾವಣಗೆರೆಯಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ದಾವಣಗೆರೆ, ಜನವರಿ 24: ಹತ್ತು ವರ್ಷಕ್ಕೊಮ್ಮೆ ಆಯ್ಕೆ ಶ್ರೇಣಿಯ ಬಡ್ತಿ ಸೇವಾವಧಿ ನೀಡಬೇಕು ಎನ್ನುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕೆಎಸ್ಆರ್ಟಿಸಿ ನೂತನ ಕಟ್ಟಡದ ಮುಂಭಾಗದಲ್ಲಿ ಸರ್ಕಾರಿ ನೌಕರರು ಧರಣಿ ಸತ್ಯಾಗ್ರಹ ನಡೆಸಿದರು.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಕೆಎಸ್ಆರ್ಟಿಸಿ ನೌಕರರು ಮೂಲ ವೇತನಕ್ಕೆ ಬಿಡಿಎ ಸಮ್ಮಿಳಿತಗೊಳಿಸಿ ಪರಿಷ್ಕೃತ ವೇತನ ಹೆಚ್ಚಳ ಮಾಡಿ ವೇತನ ಶ್ರೇಣಿ ಸಿದ್ಧಪಡಿಸಬೇಕು. ಮೂಲ ವೇತನಕ್ಕೆ ಬಿ.ಡಿ.ಎ ಸಮ್ಮಿಳಿತಗೊಳಿಸಿ ಪರಿಷ್ಕೃತ ಮೂಲ ವೇತನದ ಶೇ. 25 ರವನ್ನು ಹೆಚ್ಚಳ ಮಾಡಿ, ವೇತನ ಶ್ರೇಣಿಯನ್ನು ಸಿದ್ಧಪಡಿಸಬೇಕು. ಇನ್ಕ್ರಿಮೆಂಟ್ ದರ ಪರಿಷ್ಕೃತ ಮೂಲ ವೇತನದ ಶೇ.3 ಇರಬೇಕು. ಆಯ್ಕೆ ಶ್ರೇಣಿ ಹಾಗೂ ಉನ್ನತ ಶ್ರೇಣಿಗಳ ವೇತನ ಶ್ರೇಣಿಯನ್ನು ಸಿದ್ಧಪಡಿಸಬೇಕು ಎಂದು ಆಗ್ರಹಿಸಿದರು.
ದಾವಣಗೆರೆ: ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಜಾಗ ಹಸ್ತಾಂತರ ವಿಚಾರ; ಡಿಆರ್ಆರ್ ವಿದ್ಯಾರ್ಥಿಗಳ ಆಕ್ರೋಶ
ಚಾಲಕ, ನಿರ್ವಾಹಕರು, ತಾಂತ್ರಿಕ ಹಾಗೂ ಆಡಳಿತ ಸಿಬ್ಬಂದಿ, ಇತರ ಎಲ್ಲಾ ನೌಕರರಿಗೆ ಹಾಲಿ ಇರುವ ಬಾಟಾ, ಮಾಸಿಕ, ದೈನಂದಿನ ಭತ್ಯೆಗಳನ್ನು ಐದು ಪಟ್ಟು ಹೆಚ್ಚಿಸಬೇಕು. ಹೊಲಿಗೆ ಭತ್ಯೆ, ಶೂ, ಜೆರ್ಸಿ, ರೈನ್ ಕೋಟ್ ಇತ್ಯಾದಿಗಳಿಗೆ ಕೊಡಲಾಗುವ ಮೊತ್ತವನ್ನು ಮೂರು ಪಟ್ಟು ಹೆಚ್ಚಿಸಬೇಕು. ಎಲ್ಲಾ ನಿರ್ವಾಹಕರಿಗೆ ಕ್ಯಾಷಿಯರ್ಗಳಿಗೆ ಸಮಾನವಾದ ಕ್ಯಾಷ್ ಆಲೋವೆನ್ಸ್ ನೀಡಬೇಕು ಎಂದು ಒತ್ತಾಯಿಸಿದರು.
ಇ.ಎಸ್.ಐ ಮಾದರಿಯಲ್ಲಿ ಆಡಳಿತ ವರ್ಗದವರಿಂದ ನೌಕರರ ಮೂಲ ವೇತನದ ಶೇ. 35 ಹಾಗೂ ಕಾರ್ಮಿಕರಿಂದ ಶೇ. 0.5 ವಂತಿಗೆ ಸಂಗ್ರಹಿಸಿ ಟ್ರಸ್ಟ್ ರಚಿಸಿ ಆ ಮೂಲಕ ಸಾರಿಗೆ ನೌಕರರಿಗೆ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ನೀಡುವಂತೆ ಯೋಜನೆ ರೂಪಿಸಬೇಕು. ಈ ಸೌಲಭ್ಯವನ್ನು ನಿವೃತ್ತ ಕಾರ್ಮಿಕರಿಗೆ ಮತ್ತು ಅವರ ಪತಿ ಅಥವಾ ಪತ್ನಿಗೂ ನೀಡುವುದು ಸೇರಿದಂತೆ ಹಲವಾರು ಬೇಡಿಕೆಗಳನ್ನು ಈಡೇರಿಸಬೇಕೆಂದು ಮನವಿ ಮಾಡಿದರು.
ಧರಣಿ ಮುಷ್ಕರದಲ್ಲಿ ದಾವಣಗೆರೆ ಸಾರಿಗೆ ವಿಭಾಗದ ಅಧ್ಯಕ್ಷ ಹೆಚ್.ಜಿ.ಉಮೇಶ್, ಪ್ರಧಾನ ಕಾರ್ಯದರ್ಶಿ ಮಿರ್ಜಾ ರೆಹಮತ್ ಉಲ್ಲಾ, ಪ್ರಕಾಶ್, ಹೆಚ್.ಹನುಮಂತಪ್ಪ, ಉಮೇದ್ ಉಲ್ಲಾ, ಕರಿಗೌಡಪ್ಪ, ಆನಂದ ನಾಯ್ಕ, ಎಂ.ಎನ್.ಲೋಕಪ್ಪ, ವಸಂತ್, ರಾಜೇಶ್ವರಿ ಹಾಗೂ ಇತರ ಸಾರಿಗೆ ನೌಕರರು ಪಾಲ್ಗೊಂಡಿದ್ದರು.