ನಾನೇನೂ ಮಂತ್ರಿಗಿರಿ ಕೇಳಿಲ್ಲ, ಲಿಂಗಾಯತರಿಗೆ ಆಗಿರುವ ಅನ್ಯಾಯದ ಬಗ್ಗೆ ಧ್ವನಿ ಎತ್ತಿದ್ದೇನೆ ಅಷ್ಟೇ: ಶಾಮನೂರು ಶಿವಶಂಕರಪ್ಪ
ದಾವಣಗೆರೆ, ಅಕ್ಟೋಬರ್, 02: ನಾನು ಮಂತ್ರಿಗಿರಿ ಕೊಡು ಎಂದು ಮನವಿ ಮಾಡಿಲ್ಲ. ವೀರಶೈವ ಲಿಂಗಾಯತ ಸಮುದಾಯದ ಅಧಿಕಾರಿಗಳ ಮೂಲೆಗುಂಪು ಮಾಡಿರುವ ಕುರಿತಂತೆ ಮಾತನಾಡಿದ್ದೇನೆ. ಸಮುದಾಯದ 31 ಜಿಲ್ಲೆಗಳಲ್ಲಿ ನಮ್ಮ ಸಮಾಜದ ಜಿಲ್ಲಾಧಿಕಾರಿಗಳಿದ್ದಾರಾ? ಸಮಯ ಬಂದಾಗ ಎಲ್ಲಾ ಅಂಕಿ ಅಂಶಗಳನ್ನು ಮುಂದಿಟ್ಟು ಮಾತನಾಡುತ್ತೇನೆ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರಾಧ್ಯಕ್ಷ ಹಾಗೂ ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಆಕ್ರೋಶ ವ್ಯಕ್ತಪಡಿಸಿದರು.
ಮಾಧ್ಯಮದವರ ಜೊತೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ಮುಂದುವರೆಸಿದ್ದಾರೆ. ಸಿಎಂ ಸಿದ್ದರಾಮಯ್ಯ ಕರೆದಾಗ ಹೋಗಿ ಮಾತನಾಡುತ್ತೇನೆ. ಎಲ್ಲವನ್ನೂ ತೋರಿಸಿಕೊಡುತ್ತೇನೆ ಎಂದು ಹೇಳಿದರು.

31 ಜಿಲ್ಲೆಗಳಲ್ಲಿ ಒಬ್ಬರಾದರೂ ಲಿಂಗಾಯಿತ ಜಿಲ್ಲಾಧಿಕಾರಿಗಳು ಇಲ್ಲ. ಎಲ್ಲಾದರೂ ಇದ್ದರೆ ತೋರಿಸಿಕೊಡಿ. ಸಿಎಂ ಸಿದ್ದರಾಮಯ್ಯ ಏಳು ಮಂತ್ರಿ ಕೊಟ್ಟಿದ್ದೇವೆ ಎಂದಿದ್ದಾರೆ, ನಾವು ಮಂತ್ರಿ ಕೊಡು ಅಂತಾ ಎಲ್ಲೂ ಕೇಳಿಲ್ಲ, ನಾನು ಮಾತನಾಡಿದ್ದು ಅಧಿಕಾರಿಗಳನ್ನ ಮೂಲೆಗುಂಪು ಮಾಡಿರುವ ಕುರಿತಂತೆ. ಅಧಿಕಾರಿಗಳಿಗೆ ಸರಿಯಾದ ಸ್ಥಳ ಕೊಟ್ಟಿಲ್ಲ ಅನ್ನೋದು ನನ್ನ ಆರೋಪ. ಸಮಯ ಬಂದಾಗ ನಾವು ಎಲ್ಲವನ್ನೂ ತೋರಿಸಿಕೊಡುತ್ತೇವೆ. 31 ಜಿಲ್ಲೆಯಲ್ಲಿ ವೀರಶೈವ ಡಿಸಿಗಳು ಇದ್ದಾರ..? ಎಂದು ಪ್ರಶ್ನಿಸಿದರು.
ಮಾಜಿ ಸಚಿವ ಹೆಚ್.ವಿಶ್ವನಾಥ್ ವಿರುದ್ಧ ವಾಗ್ದಾಳಿ ನಡೆಸಿದ ಶಾಮನೂರು ಶಿವಶಂಕರಪ್ಪ ಅವರು, ಅವನ ರೀತಿಯಲ್ಲಿ ಬೆಣ್ಣೆ ಹೊಡೆದು, ಮಸಾಲೆ ಹೊಡೆದು, ಮಸ್ಕಾ ಹೊಡೆದು ಎಂಎಲ್ಸಿ ಆಗಿಲ್ಲ. ನಾನು 7 ಬಾರಿ ಜನರಿಂದ ಆಯ್ಕೆ ಆಗಿಬಂದಿದ್ದೇನೆ. ಅವನನ್ನು ಹುಚ್ಚಾಸ್ಪತ್ರೆಗೆ ಕಳುಹಿಸಬೇಕು ಎಂದು ಕಿಡಿಕಾರಿದರು.
ಸಿದ್ದರಾಮಯ್ಯ ಅವರಿಗೆ ತೋರಿಸುತ್ತೇನೆ ಎಲ್ಲೆಲ್ಲಿ ಏನೇನು ಕೊಟ್ಟಿದ್ದಾರೆ ಅಂತ, ಒಬ್ಬ ಡಿಸಿನೂ ಇಲ್ಲ ಏನು ಇಲ್ಲ ಸುಮ್ಮನೆ ಮಾತನಾಡುತ್ತಾರೆ. ದಾವಣಗೆರೆ ಡಿಸಿ ಲಿಂಗಾಯಿತರಾ ಎಂದು ಶಾಮನೂರು ಪ್ರಶ್ನಿಸಿದ್ದಾರೆ. ನನ್ನ ಹತ್ತಿರ ಎಲ್ಲ ರೆಕಾರ್ಡಿಂಗ್ ಇದೆ. ಸತ್ಯ ಹೇಳಿದರೆ ಹಾಗೆ ಆಗೋದು, ನಾವು ಸಚಿವ ಸ್ಥಾನ ಕೇಳಿಲ್ಲ. ನಮ್ಮ ವಿದ್ಯಾವಂತರಿಗೆ ಕೆಎಎಸ್, ಐಎಎಸ್, ಐಪಿಎಸ್ ಆದವರಿಗೆ ಸರಿಯಾದ ಜಾಗ ಕೊಟ್ಟಿಲ್ಲ. ಯಾರಿಗ್ ಒಳ್ಳೆಯ ಸೂಕ್ತ ಸ್ಥಾನಮಾನ ಕೊಟ್ಟಿದ್ದಾರೆ ತೋರಿಸಲಿ. ನಮ್ಮವರಿಗೆ ಕೀ ಪೋಸ್ಟ್ ಕೊಟ್ಟಿಲ್ಲ ಅಂತ ನಾವು ತೋರಿಸ್ತೀವಿ ಎಂದು ಸವಾಲು ಹಾಕಿದರು.












Click it and Unblock the Notifications